ಮನದುಂಬಿದ ಧನ್ಯವಾದಗಳು - ಶತಾವಧಾನಿ ಡಾ| ರಾ. ಗಣೇಶ್


ಓಂಕಾರ ವೇದಿಕೆಯ ಗಳೆಯರಿಗೆ ಹಾರ್ದಿಕ ನಮಸ್ಕಾರ,

ನಿಮ್ಮೆಲ್ಲರ ಆಸ್ಥೆ-ಅಕ್ಕರೆಗಳ ಪರಿಣಾಮವಾಗಿ ನಾನು ನಿಮ್ಮ ಊರಿಗೆ ಬರುವಂತಾಗಿ ಅಲ್ಲಿ ಮರೆಯಲಾಗದ ಸುಂದರಾನುಭವನ್ನು ಪಡೆದುದಕ್ಕಾಗಿ ಮೊತ್ತಮೊದಲಿಗೆ ನನ್ನ ಮನದುಂಬಿದ ಧನ್ಯವಾದಗಳನ್ನು ಈ ಮೂಲಕ ತಿಳಿಸುತ್ತಿದ್ದೇನೆ. ಈ ಬರಿಯ ಒಣಮಾತಿನ ಮೂಲಕ ಹೇಳುವ ಧನ್ಯವಾದಕ್ಕೆ ಯಾವ ಪರಿಣಾಮವೂ ಇರದಾದರೂ ತಾವೆಲ್ಲ ನನ್ನ ಪ್ರಾಮಾಣಿಕ ಭಾವನೆಗಳನ್ನು ಅರಿಯಬಲ್ಲಿರೆಂದೇ ಈ ನುಡಿಗಳನ್ನಾಡುವ ಸಾಹಸ ಮಾಡಿದ್ದೇನೆ. ಈ ಮೂರು ದಿನಗಳು ನಿಜಕ್ಕೂ ಮೂರು ಕ್ಷಣಗಳ ಹಾಗೆ ತೇಲಿಹೋದವು. ತಾವೆಲ್ಲ ಆಯೋಜನೆಯ ಹಂತದಿಂದ ನಾನಿಲ್ಲಿ ಮರಳಿ ಬರುವವರೆಗೆ ತೋರಿದ ಕಾಳಜಿ, ಮಾಡಿದ ವ್ಯವಸ್ಥೆ ಹಾಗೂ ನೀಡಿದ ಪ್ರೀತಿಗಾಗಿ ಏನು ಪಡಿ ಎರೆದೇನು? "ಅಂಜಲಿಃ ಪರಮಾ ಮುದ್ರಾ" ಕೃತಜ್ಞತೆಯಿಂದ ಕೈ ಮುಗಿಯುವುದೊಂದೇ ನನ್ನ ಪ್ರತಿಕ್ರಿಯೆ. ಈ ನನ್ನ ಬಡತನಕ್ಕಾಗಿ ಮನ್ನಿಸಿರಿ.

ಮುಖ್ಯವಾಗಿ ಅಲ್ಲಿಯ ನೆಲ-ಬಾನುಗಳನ್ನು, ಕಡಲು-ಗುಡ್ಡಗಳನ್ನು, ಆ ನಾಡಿನಲ್ಲಿ ನೆಲಸಿ ನಮ್ಮ ದೇಶಕ್ಕೂ ಆ ದೇಶಕ್ಕೂ ನೆಮ್ಮದಿಯನ್ನು ತರುತ್ತಿರುವ ನಮ್ಮ ಜನರ ಒಲವು-ನಿಲವುಗಳನ್ನು ಅರಿಯುವಲ್ಲಿ ತಾವೆಲ್ಲ ನನಗಿತ್ತ ಈ ಸದವಕಾಶಕ್ಕಾಗಿ ಮತ್ತೆ ಮತ್ತೆ ಧನ್ಯವಾದಗಳು. ಹಾಗೆ ನೋಡಿದರೆ ನಾನು ನನ್ನ ಕೆಲಸವನ್ನು ಅಲ್ಲಿ ಯುಕ್ತವಾಗಿ ನಿರ್ವಹಿಸಿದೆನೇ ಇಲ್ಲವೇ ಎಂಬುದನ್ನು ದಾಕ್ಷಿಣ್ಯವಿಲ್ಲದೆ ತಾವುಗಳೇ ಹೇಳಬೇಕು.ನನ್ನ ರೀತಿಯೇನಿದ್ದರೂ ಬಸವಣ್ಣನವರು ಹೇಳಿದಂತೆ "ಆನು ಒಲಿದಂತೆ ಹಾಡುವೆ". ಆದುದರಿಂದಲೇ ನನ್ನ ನಿಸ್ಸಂಕೋಚದ, ನಿರ್ದಾಕ್ಷಿಣ್ಯದ ವರ್ತನೆ ತಮಗಾಗಲಿ ತಮ್ಮ ಬಳಗದ ಸದಸ್ಯರಿಗಾಗಲಿ ಮುಜುಗರವನ್ನೋ ನೋವನ್ನೋ ತಂದಿದಲ್ಲಿ ಮನ್ನಿಸಬೇಕು.

ಮುಖ್ಯವಾಗಿ ಬಹುಕಾಲದ ನಚ್ಚಿನ ಮಿತ್ರರಾದ ಶ್ರೀ ಶಶಿಧರ ಮತ್ತು ಶ್ರೀಮತಿ ಸುಮನಾ ಅವರ ವಿಶ್ವಾಸವು ನನ್ನನ್ನು ತಮ್ಮ ಕರೆಗೆ ಒಲಿಯುವ ಹಾಗೆ ಮಾಡಿತು. ಅಲ್ಲದೆ ಅವರು ಮೊದಲ ದಿನ ತಮ್ಮ ಮನೆಯಲ್ಲಿಯೇ ನಡಸಿದ ಸ್ನೇಹಾದರಪ್ಲಾವಿತವಾದ ಸಮೃದ್ಧ ಆತಿಥ್ಯವು ನನಗೆ ಪರಸ್ಥಳದ ಮುಜುಗರವಿಲ್ಲದಂತೆ ಮಾಡಿತು. ಶ್ರೀಮಹೇಶರಂತೂ ಮತ್ತೆ ಮತ್ತೆ ದೂರವಾಣಿ-ಮಿಂಚೆ-ಮುಖತಃ ಭೇಟಿಗಳ ಮೂಲಕ ಗಟ್ಟಿಗೊಳಿಸಿದ ವಿಶ್ವಾಸವು ಅವಿಸ್ಮಾರ್ಯ. ಎರಡನೆಯ ದಿನದಿಂದ ಶ್ರೀಯೋಗಾನಂದರು ನನಗೆ ಸರ್ವಾತ್ಮನಾ ಊರೆಗೋಲಾದರು. ಅವರ ಹಾಗೂ ಶ್ರೀಮತಿ ಇಂದಿರಾ ಅವರ ಅಕ್ಕರೆ ಮರೆಯಲಾದೀತೇ? ಮೂರನೆಯ ದಿನದ ಆತಿಥೇಯರಾದ ಶ್ರೀ ರವಿ ಮತ್ತು ಶ್ರೀಮತಿ ಪದ್ಮಿನಿಯವರ ಪ್ರೀತಿ-ವಿಶ್ವಾಸಗಳು ಕೂಡ ಹೊಸಹೊಸ ಆಯಾಮಗಳನ್ನು ತೋರಿದುವು. ನನ್ನ ಪಾಲಿನ ಅನ್ನಪೂರ್ಣೆಯರಾದ ಸುಮನಾ ಅವರ ತುಪ್ಪದ ದೋಸೆ-ಮಲ್ಲಿಗೆ ಇಡಲಿ-ಪುಳಿಯೋಗರೆ-ಉಪ್ಪಿಟ್ಟು, ಇಂದಿರಾ ಅವರ ಕೋಸಂಬರಿ-ಪುಳಿಯೋಗರೆ-ಪಲ್ಯ-ಸಾರು, ಕವಿತಾ ಅವರ ಜಾಮೂನು-ಸಂಡಿಗೆ-ಖಾರಾಭಾತು, ಮಂಜುಳಾ ಅವರ ಹೋಳಿಗೆ - ಹೆಸರುಬೇಳೆಯ ದೋಸೆ, ಗಿರಿಜಾ ಅವರ ಅಪ್ಪಟ ಕೇಸರೀಭಾತು-ಖಾರಾಭಾತು, ಪದ್ಮಿನಿಯವರ ಚಿತ್ರಾನ್ನ-ಸೊಪ್ಪಿನಪಲ್ಯ-ಬಗೆಬಗೆಯ ರೊಟ್ಟಿ-ಪೊಂಗಲ್ ಇತ್ಯಾದಿಗಳನ್ನೆಲ್ಲ ನನ್ನ ಅನ್ನಬ್ರಹ್ಮಭಕ್ತಿಯ ಮನಸ್ಸು ಮರೆಯಲಾರದು. ಅಂತೆಯೇ ಆತಿಥೇಯರಾದ ಶ್ರೀ ರವಿಕುಮಾರ್, ಶ್ರೀ ರಾಮಕೃಷ್ಣ, ಶ್ರೀ ರಮೇಶ್ (ಇವರಂತೂ ಬೆಂಗಳೂರಿನಿಂದಲೇ ನನಗೆ ಜೊತೆಯಾಗಿ ಬಂದು ನೆರವಾದರು), ಅನಿರೀಕ್ಷಿತವಾಗಿ ಅಲ್ಲಿ ಕಾಲೇಜಿನ ದಿನಗಳ ಸವಿನೆನಪನ್ನು ಮರುಕಳಿಸಿದ ನನ್ನ ಹಳೆಯ ಸಹಪಾಠಿ ಶ್ರೀ ಬಾಲಕೃಷ್ಣ ಮುಂತಾದವರೆಲ್ಲರ ವಿಶ್ವಾಸವೇ ನನ್ನ ಶ್ವಾಸವನ್ನು ಅಲ್ಲಿ ನಿರಾಳವಾಗಿಸಿತೆಂದರೆ ಅತಿಶಯವಲ್ಲ. ಇವರಲ್ಲದೆ ನಿಮ್ಮ ಬಳಗದ ಮತ್ತೂ ಅನೇಕಸದಸ್ಯರು ತೋರಿದ ನಲ್ಮೆಗಾಗಿ ನನ್ನ ನೆನಕೆಗಳು. ಹೆಚ್ಚೇನು, ನನ್ನಂಥ ಭಾವಜೀವಿಯ ಬದುಕೇ ಈ ಬಗೆಯ ಸ್ನೇಹ-ಸೌಜನ್ಯಧನ್ಯತೆಯ ಋಣಗಣಪರಿಣಾಮ.

ಎಲ್ಲರಿಗಮೀಗ ನಮೋ; ಬಂಧುಗಳೆ ಭಾಗಿಗಳೆ, ಉಲ್ಲಾಸವಿತ್ತವರೆ, ಮನವ ತೊಳೆದವರೇ!! ಎಂದು ವಿರಮಿಸುತ್ತೇನೆ.. ..ಮತ್ತೆ ತಮ್ಮನ್ನ್ನೆಲ್ಲ ಇಲ್ಲಿಯೋ ಅಲ್ಲಿಯೋ ಎಲ್ಲೆಯೋ ಎಲ್ಲೆಲ್ಲಿಯೋ ಕಾಣುವ ಕಂಡು ಕೊಂಡಾಡುವ ಅವಕಾಶ ಬರಲಿ.

ಇತಿ ಭವದೀಯ

ರಾಗ
(ರಾ. ಗಣೇಶ್)

ಗಣೇಶ ಹಬ್ಬದ ವಿಶೇಷಾಂಕ

ಸ್ವಾತಂತ್ರ್ಯ ಪೂರ್ವದಲ್ಲಿ ಗಣೇಶನ ಹಬ್ಬ ಕೇವಲ ಕುಟುಂಬದ ಆಚರಣೆಯಾಗಿತ್ತು. 1893ರಲ್ಲಿ ಸಮಾಜ ಸುಧಾರಕ ಮತ್ತು ಸ್ವಾತಂತ್ರ್ಯ ಯೋಧ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅದಕ್ಕೆ ಸಾರ್ವಜನಿಕ ಸ್ವರೂಪ ನೀಡಿದರು. ಸಾಂಪ್ರದಾಯಿಕ ರೀತಿಯಲ್ಲಿ ಕುಟುಂಬದ ಆಚರಣೆಯಾಗಿದ್ದ ಗಣೇಶ ಉತ್ಸವ ಸಾರ್ವಜನಿಕ ಉತ್ಸವವಾಗಿ ಪರಿವರ್ತನೆಯಾಯಿತು. ಲೋಕಮಾನ್ಯ ತಿಲಕರು ಗಣೇಶ ಮ‌ೂರ್ತಿಯ ಸಾಂಸ್ಕೃತಿಕ ಮಹತ್ವವನ್ನು ಅರಿತಿದ್ದರು. ಜನರ ನಡುವಿನ ಅಂತರವನ್ನು ತುಂಬಲು, ಅವರ ನಡುವೆ ಕೆಳಹಂತದಲ್ಲಿ ಐಕ್ಯತೆ ಮ‌ೂಡಿಸುವುದಕ್ಕೆ ಸೂಕ್ತ ಸಂದರ್ಭವಾಗಿ ಗಣೇಶೋತ್ಸವದ ಆಚರಣೆಯನ್ನು ರಾಷ್ಟ್ರೀಯ ಹಬ್ಬವಾಗಿ ತಿಲಕರು ಮಾರ್ಪಡಿಸಿದರು. ತಿಲಕರು ಬ್ರಿಟಿಷರ ವಿರುದ್ಧ ಭಾರತದ ಪ್ರತಿಭಟನೆಗೆ ಗಣೇಶನನ್ನು ಕೇಂದ್ರಬಿಂದುವಾಗಿ ಬಳಸಿಕೊಂಡರು. ಏಕೆಂದರೆ ಗಣೇಶ ಪ್ರತಿಯೊಬ್ಬರ ಪಾಲಿಗೂ ದೇವಸ್ವರೂಪಿಯಾಗಿದ್ದ. 

ಗಣೇಶನ ಪೂಜೆ 
ಗಣೇಶ ಚತುರ್ಥಿಯಂದು ಮನೆ, ಮನೆಯಲ್ಲೂ ಸಂಭ್ರಮ ಕಳೆಗಟ್ಟುತ್ತದೆ. ವರ್ಣರಂಜಿತವಾಗಿ ಅಲಂಕೃತವಾದ ಮನೆಗಳಲ್ಲಿ ತಾತ್ಕಾಲಿಕ ಮಂಟಪಗಳಲ್ಲಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸುವುದರೊಂದಿಗೆ ಗಣೇಶ ಚತುರ್ಥಿ ಆರಂಭವಾಗುತ್ತದೆ. ಗಣೇಶನ ಸಾರ್ವಜನಿಕ ಉತ್ಸವಕ್ಕೆ ದೇಣಿಗೆ ಮ‌ೂಲಕ ಹಣ ಸಂಗ್ರಹಿಸಿ ಪೆಂಡಾಲ್‌ಗಳನ್ನು ನಿರ್ಮಿಸಲಾಗುತ್ತದೆ. ಮಂಟಪಗಳು ಹೂವಿನ ಹಾರ, ಝಗಮಗಿಸುವ ದೀಪಗಳಿಂದ ಅಲಂಕೃತಗೊಳ್ಳುತ್ತವೆ. ಕೆಂಪು ರೇಷ್ಮೆ ದೋತಿ ಮತ್ತು ಶಾಲನ್ನು ಹೊದ್ದ ಅರ್ಚಕ ಮಂತ್ರಗಳ ಪಠಣದೊಂದಿಗೆ ನಿರ್ಜೀವ ಮ‌ೂರ್ತಿಗೆ ಜೀವ ತುಂಬುತ್ತಾರೆ.

ಈ ಆಚರಣೆಗೆ ಪ್ರಾಣಪ್ರತಿಷ್ಠ ಎನ್ನುತ್ತಾರೆ. ಇದಾದ ಬಳಿಕ ಶೋಡಶೋಪಚಾರ(16 ವಿಧಗಳ ಅರ್ಪಣೆ) ಆಚರಣೆ ಆರಂಭವಾಗುತ್ತದೆ. ತೆಂಗಿನಕಾಯಿ, ಬೆಲ್ಲ, 21 ಮೋದಕಗಳು, 21 ದುರ್ವ ಹುಲ್ಲು ಮತ್ತು ಕೆಂಪು ಹೂವುಗಳನ್ನು ಗಣೇಶನಿಗೆ ಅರ್ಪಿಸಲಾಗುತ್ತದೆ. ಸಮಾರಂಭವುದ್ದಕ್ಕೂ ಋಗ್‌ವೇದ, ಗಣಪತಿ ಅಥರ್ವಾ ಶಿರ್ಶಾ ಉಪನಿಷದ್ ಮತ್ತು ನಾರದ ಪುರಾಣದ ಗಣೇಶ ಸ್ತೋತ್ರದಿಂದ ಆಯ್ದ ವೇದಮಂತ್ರಗಳನ್ನು ಪಠಣಮಾಡಲಾಗುತ್ತದೆ. 10 ದಿನಗಳವರೆಗೆ ಭಾದ್ರಪದ ಶುದ್ಧ ಚತುರ್ಥಿಯಿಂದ ಅನಂತ ಚತುರ್ದಶಿವರೆಗೆ ಗಣೇಶನ ಪೂಜೆ ನೆರವೇರಿಸಲಾಗುತ್ತದೆ. ಆದರೆ ಕೆಲವರು ಅವರವರ ಸಂಪ್ರದಾಯದ ಪ್ರಕಾರ ಒಂದು ದಿನ, ಮೂರು ದಿನ, ಐದು ದಿನ, ಏಳು ದಿನ ಹಾಗೂ ಒಂಬತ್ತು ದಿನಗಳವರೆಗೆ ಗಣೇಶನನ್ನು ಕೂರಿಸುತ್ತಾರೆ.

11ನೇ ದಿನ ವಿಗ್ರಹವನ್ನು ಮೆರವಣಿಗೆ ಮ‌ೂಲಕ ನೃತ್ಯ, ಹಾಡು ಮತ್ತಿತರ ಬಾಜಾಬಜಂತ್ರಿಯೊಂದಿಗೆ ಬೀದಿಗಳಲ್ಲಿ ಕೊಂಡೊಯ್ದು ನದಿ, ಕೆರೆ ಅಥವಾ ಸಮುದ್ರದಲ್ಲಿ ವಿಸರ್ಜಿಸಲಾಗುತ್ತದೆ. ಗಣೇಶ ವಿಸರ್ಜನೆಯು ಗಣೇಶನ ನೆಲೆವೀಡಾದ ಕೈಲಾಸದ ಪ್ರಯಾಣದಲ್ಲಿ ಭಕ್ತಜನಕೋಟಿಯ ದುರಾದೃಷ್ಟಗಳನ್ನು ತನ್ನ ಜತೆ ಒಯ್ಯುವುದರ ಸಂಕೇತವಾಗಿದೆ. ಗಣೇಶನಿಗೆ ಅರ್ಪಿಸುವ ಸಿಹಿತಿಂಡಿ ಮೋದಕ ಅಕ್ಕಿ ಹಿಟ್ಟು ಮತ್ತು ಗೋಧಿ ಹಿಟ್ಟಿನಿಂದ ತಯಾರಿಸಿ, ಒಣತೆಂಗು, ಬೆಲ್ಲ, ಒಣಹಣ್ಣುಗಳು ಮತ್ತಿತರ ಪದಾರ್ಥಗಳನ್ನು ಬೆರೆಸಿ ಉಗಿಯಿಂದ ಬೇಯಿಸಲಾಗುತ್ತದೆ ಅಥವಾ ಕರಿಯಲಾಗುತ್ತದೆ. ಇನ್ನೊಂದು ಜನಪ್ರಿಯ ತಿಂಡಿ ಕರಂಜಿ ಅಥವಾ ಕನ್ನಡದಲ್ಲಿ ಕರ್ಜಿಕಾಯಿ ಎನ್ನಲಾಗುವ ಇದು ರುಚಿಯಲ್ಲಿ ಮೋದಕದಂತೆಯೇ ಇರುತ್ತದೆ.

ಶ್ರೀ ಗಣೇಶ ಸಹಸ್ರನಾಮಕ್ಕೆ ಇಲ್ಲಿ ಕ್ಲಿಕ್ ಮಾಡಿ
ಶ್ರೀ ಗಣೇಶ ಅಷ್ಟೋತ್ತರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ
ಶ್ರೀ ಗಣೇಶ ಭಜನೆಗಾಗಿ ಇಲ್ಲಿ ಕ್ಲಿಕ್ ಮಾಡಿ

ಗೌರಿ ಹಬ್ಬದ ವಿಶೇಷಾಂಕ


ಪ್ರತಿ ವರ್ಷ ಗಣೇಶ ಚತುರ್ಥಿಯ ಮುನ್ನಾ ದಿನ ಬರುವ ಗೌರಿ ಹಬ್ಬ ಮುತ್ತೈದೆಯರಿಗೆಲ್ಲಾ ಸಕಲ ಸೌಭಾಗ್ಯ ನೀಡುವ ಹಬ್ಬವಾಗಿದೆ. ಈ ಗೌರಿ ಹಬ್ಬ ಭಾದ್ರಪದ ಶುದ್ಧ ತದಿಗೆ ದಿನ ಬರುತ್ತದೆ. ಗಣೇಶ ಹಬ್ಬದ ರೀತಿಯಲ್ಲಿ ವಿಜೃಂಭಣೆಯಿಂದ ಆಚರಿಸದಿದ್ದರೂ ಸರಳವಾಗಿ ಭಕ್ತಿಯಿಂದ ಆಚರಿಸಲಾಗುತ್ತದೆ. ಈ ಗೌರಿ ಹಬ್ಬವನ್ನು ಕರ್ನಾಟಕದ ದಕ್ಷಿಣ ಭಾಗದಲ್ಲಿ ವಿಜೃಂಭಣೆಯಿಂದ ಆಚರಿಸುತ್ತಾರೆ. 

ಗೌರಿ ಎಂಬ ಪದ ಪಾರ್ವತೀದೇವಿಗೆ ಪರ್ಯಾಯವಾದ ಪದ. ಆಕೆಯು ಸೃಷ್ಟಿ, ಸ್ಥಿತಿ, ಲಯ ಕಾರ್ಯಗಳಲ್ಲಿ ಕೊನೆಯದನ್ನು ತನ್ನ ಅಧಿಕಾರದಲ್ಲಿ ಪ್ರಧಾನವಾಗಿ ಹೊಂದಿರುವ ಮಹಾದೇವನ ಅರ್ಧಾಂಗಿ, ಮಹಾದೇವಿ. ಆಕೆಯು ಸಂಹಾರ ಮಾಡುವಾಗ ಕೃಷ್ಣವರ್ಣವನ್ನು ಅಲಂಕರಿಸಿರುವ ಕಾಳೀ ಮಾತೆ, ವಿದ್ಯಾಪ್ರದಾನ ಮಾಡುವಾಗ ಶ್ಯಾಮಲ ವರ್ಣದ ಶ್ಯಾಮಲಾಂಬಿಕೆಯಂತೆ, ಸೌಮಂಗಲ್ಯ, ಸೌಭಾಗ್ಯ ಸಂಪತ್ತನ್ನು ಅನುಗ್ರಹಿಸುವಾಗ ಸಂಪಿಗೆ ಹೂವಿನ ಬಣದಿಂದ ಮತ್ತು ಕೆಲವೊಮ್ಮೆ ಹಿಮ ಶುಭ್ರ ವರ್ಣದಿಂದ ಕಂಗೊಳಿಸುವ ಗೌರೀಮಾತೆ. ಗೌರಿದೇವಿಯು ಪರ್ವತ ಸಾರ್ವಭೌಮನಾದ ಹಿಮವಂತನ ಮಗಳು. ವರುಷಕ್ಕೊಮ್ಮೆ ತವರಿಗೆ ಬರುವ ಅವಳಿಗಾಗಿ ಹಬ್ಬವನ್ನು ಮಾಡುವುದು. 

ಗೌರಿ ಪೂಜಾ ವಿಧಾನ ಉದಾಹರಣೆ (ಅವರವರ ಸಂಪ್ರದಾಯಕ್ಕೆ ತಕ್ಕಂತೆ ಬೇರೆ ಇರಬಹುದು):
ಗೌರೀ ದೇವಿಯನ್ನು ಹೃದಯದಲ್ಲಿ ಧ್ಯಾನ ಮಾಡಿ ಅನಂತರ ಮಾತೆಗೆ ಬಾಹ್ಯಪೂಜೆ ಅರ್ಪಿಸಬೇಕು. ಗೌರಿದೇವಿಯ ಪ್ರತಿಮೆಯನ್ನು ಸುವರ್ಣ ರೂಪದಲ್ಲಿ, ಕಲಶ ರೂಪದಲ್ಲಿ, ಅರಿಶಿನ ರೂಪದಲ್ಲಿ ಅಥವಾ ಮಣ್ಣಿನ ರೂಪದಲ್ಲಿ ನಿರ್ಮಿಸಿ ಪೂಜೆ ಸಲ್ಲಿಸಬೇಕು. ಮರಳಿನಲ್ಲೂ ಗೌರಿಯನ್ನು ಆವಾಹಿಸಿ ಪೂಜಿಸುವ ಸಂಪ್ರದಾಯವಿದೆ. ನದಿತಟದಲ್ಲಿರುವ ಮರಳನ್ನು ಅರಿಶಿನದ ಬಟ್ಟೆಯಲ್ಲಿ ಇರಿಸಿ ಗಂಟು ಹಾಕಿ ಷೋಡಶೋಪಚಾರ ಪೂಜೆಯನ್ನು ಅರ್ಪಿಸಿ, ಮನೆಗೆ ಅಥವಾ ದೇಗುಲಕ್ಕೆ ತಂದು ಪೂಜಿಸುವರು. ಆಚಮನ, ಸಂಕಲ್ಪ, ಕಳಸ ಪೂಜೆಯ ನಂತರ ಮಹಾಗಣಪತಿಗೆ ಪೂಜಿಸಿ, ಸ್ವರ್ಣಗೌರಿಯನ್ನು ಪ್ರತಿಷ್ಠಾಪಿಸಬೇಕು. 

ಪುಷ್ಪಾಕ್ಷತೆಯಿಂದ ಆವಾಹಿಸಿ, ರತ್ನಸಿಂಹಾಸನವನ್ನು ಸಮರ್ಪಿಸಬೇಕು. ಹೊಸದಾದ ಹದಿನಾರು ಗಂಟುಗಳ ದಾರವನ್ನೂ ದೇವಿಯೊಂದಿಗೆ ಪೂಜೆಗಿಡಬೇಕು. ಯಥಾವತ್ ಪಾದ್ಯ, ಅರ್ಘ್ಯ, ಆಚಮನ, ಮಧುಪರ್ಕ, ಪಂಚಾಮೃತ ಸ್ನಾನ, ಶುದ್ಧೋದಕ ಸ್ನಾನ, ವಸ್ತ್ರ, ಆಭರಣ, ಯಜ್ಞೋಪವೀತ, ಗಂಧ, ಅಕ್ಷತೆ, ಅರಿಶಿನ, ಕುಂಕುಮ ಮತ್ತಿತರೇ ಸೌಭಾಗ್ಯ ದ್ರವ್ಯಗಳನ್ನು ದೇವಿಗೆ ಅರ್ಪಿಸಬೇಕು. ಆಭರಣವೆಂದು ಹತ್ತಿಯಿಂದ ಮಾಡಿದ ಗೆಜ್ಜೆವಸ್ತ್ರವನ್ನು ಅರ್ಪಿಸುವುದು ಈಗಿನ ರೂಢಿ. ಹದಿನಾರು ಗಂಟುಗಳ ದಾರಕ್ಕೆ (ದೋರ) ಸ್ವರ್ಣಗೌರಿ, ಮಹಾಗೌರಿ, ಕಾತ್ಯಾಯಿನಿ, ಕೌವರಿ, ಭದ್ರಾ, ವಿಷ್ಣು ಸೋದರೀ, ಮಂಗಳ ದೇವತಾ, ರಾಕೇಂದುವದನಾ, ಚಂದ್ರಶೇಖರಪ್ರಿಯಾ, ವಿಶ್ವೇಶ್ವರಪತ್ನೀ, ದಾಕ್ಷಾಯಣೀ, ಕೃಷ್ಣವೇಣೀ, ಭವಾನೀ, ಲೋಲೇಕ್ಷಣಾ, ಮೇನಕಾತ್ಮಜಾ, ಸ್ವರ್ಣಗೌರೀ ಎಂಬ ಹದಿನಾರು ಹೆಸರುಗಳಿಂದ ಪೂಜಿಸಬೇಕು. ನಂತರ ದೇವಿಗೆ ಅಷ್ಟೋತ್ತರ ಶತನಾಮಾವಳಿ ಪೂರ್ವಕ ಕುಂಕುಮಾರ್ಚನೆ ಮಾಡಿ, ಧೂಪ, ದೀಪ, ನೈವೇದ್ಯ, ತಾಂಬೂಲ, ದಕ್ಷಿಣೆ, ಅರ್ಘ್ಯ, ನೀರಾಜನ, ಪುಷ್ಪಾಂಜಲಿ ಮತ್ತು ಪ್ರದಕ್ಷಿಣೆ ನಮಸ್ಕಾರಗಳನ್ನು ಸಲ್ಲಿಸಬೇಕು. ಅಂದು ವಿಶೇಷವಾದ ಅನ್ನ ಹೆಸರುಬೇಳೆಯಿಂದ ತಯಾರಿಸಿದ ಹುಗ್ಗಿಯನ್ನು ನೈವೇದ್ಯವಾಗಿ ಅರ್ಪಿಸುವುದೂ ವಾಡಿಕೆ.

ಈ ಸ್ವರ್ಣಗೌರಿ ಹಬ್ಬದಲ್ಲಿ ಬಾಗಿನ ಕೊಡುವುದು ಒಂದು ವಿಶೇಷ. ಅಂದರೆ ಗೌರವಪೂರ್ಣವಾಗಿ ಕೊಡುವ ದಾನ ಅಥವಾ ಸತ್ಕಾರವೆಂದು ಕರೆಯುತ್ತಾರೆ. ಅಕ್ಕ ತಂಗಿಯರಿಗೆ ಸಹೋದರನು ಬಾಗಿನ ಕೊಡಬೇಕಾಗುತ್ತದೆ. ಈ ಬಾಗಿನವನ್ನು ಪಡೆಯುವುದರಿಂದ ಮುತ್ತೈದೆಯರು ಸೌಭಾಗ್ಯವನ್ನು ಪಡೆಯುತ್ತಾರೆ ಎನ್ನುವ ನಂಬಿಕೆ ಇದೆ. ಗೌರಿಯನ್ನು ಕೂರಿಸಿ ಪೂಜೆ ಮಾಡುವ ಪದ್ಧತಿ ಎಲ್ಲರ ಮನೆಯಲ್ಲಿ ಇರುವುದಿಲ್ಲ. ಆದ್ದರಿಂದ ಸುಮಂಗಲಿಯರು ಗೌರಿಯನ್ನು ಪೂಜಿಸುವವರ ಮನೆಗೆ ಹೋಗಿ ಪೂಜೆ ಸಲ್ಲಿಸಿ ಬರುತ್ತಾರೆ. 

ಮುತ್ತೈದೆಯರು ಸ್ವರ್ಣಗೌರಿ ವ್ರತವನ್ನು ನಿಷ್ಠೆಯಿಂದ ಆಚರಿಸಿದಲ್ಲಿ ಖಂಡಿತವಾಗಿ ಸಂತಾನ ಪ್ರಾಪ್ತಿ, ಅವಿವಾಹಿತರಿಗೆ ವಿವಾಹಯೋಗ ಮತ್ತು ವಿದ್ಯಾರ್ಥಿಗಳಿಗೆ ಜ್ಞಾನ ದೊರೆಯುತ್ತದೆ ಎನ್ನುವುದು ಪುರಾಣ ಕಥೆಗಳಲ್ಲಿ ಹೇಳಲಾಗಿದೆ.

ಈಗಿನ ಆಧುನಿಕ ಯುಗದಲ್ಲಿ ಗೌರಿ ಮತ್ತು ಗಣೇಶನ ಮೂರ್ತಿಗಳನ್ನು ವಿವಿಧ ರೂಪದಲ್ಲಿ ತಯಾರಿಸಿದರೂ ಬಣ್ಣ ರಹಿತವಾದ ಮೂರ್ತಿಗಳು ಪೂಜೆಗೆ ಶ್ರೇಷ್ಠ ಎನ್ನುವುದು ನಂಬಿಕೆ. ಸ್ವರ್ಣಗೌರಿ ಹಬ್ಬದ ದಿನ ಈ ಕೆಳಗಿನ ಶ್ಲೋಕವನ್ನು 108 ಬಾರಿ ಶ್ರದ್ಧಾ ಭಕ್ತಿಯಿಂದ ಆಚರಿಸಿದಲ್ಲಿ, ಜಪಿಸಿದಲ್ಲಿ ತಮ್ಮ ಬೇಡಿಕೆಗಳು ಪೂರೈಸುತ್ತವೆ ಎನ್ನುವ ನಂಬಿಕೆ ಇದೆ.


"ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ
ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣೀ ನಮೋಸ್ತುತೇ".