ಅಕ್ಷಯ ತೃತೀಯ - ೨೦೧೪


ವೈಶಾಖ ಶುಕ್ಲ ತೃತೀಯದಂದು ಅಕ್ಷಯ ತೃತೀಯಾ ಎಂದು ಹೆಸರು. ಇದು ವರ್ಷದ ಮೂರೂವರೇ ಪುಣ್ಯ ಮುಹೂರ್ತಗಳಲ್ಲಿ ಒಂದಾಗಿದೆ. ಈ ದಿನ ಹತ್ತು ಹಲವು ಹೊಸ-ಹೊಸ ಕಾರ್ಯಕ್ರಮಗಳನ್ನು ಆರಂಭಿಸುತ್ತಾರೆ.

ಹಿಂದುಗಳಿಗೆ ಪವಿತ್ರವಾದ ಮೂರೂವರೆ ಶುಭ ಮುಹೂರ್ತಗಳೆಂದರೆ ಯುಗಾದಿ, ಅಕ್ಷಯ ತೃತೀಯಾ, ವಿಜಯ ದಶಮಿ ಮತ್ತು ಬಲಿಪಾಡ್ಯಮಿ. ಈ ದಿವಸ ಮಾಡುವ ಶುಭಕಾರ್ಯಗಳಿಗೆ ಪಂಚಾಂಗ ಅಥವಾ ಮುಹೂರ್ತ ನೋಡುವ ಅವಶ್ಯಕತೆ ಇರುವುದಿಲ್ಲ. ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯನ್ನು ಅಕ್ಷಯ ತೃತೀಯ ಎನ್ನುತ್ತಾರೆ. ಈ ದಿವಸ ಸೂರ್ಯ ಮತ್ತು ಚಂದ್ರ ತಮ್ಮ ಗರಿಷ್ಠ ಮಟ್ಟದ ಕಾಂತಿಯನ್ನು ಹೊಂದುವುದರಿಂದ ಈ ದಿನವಿಡೀ ಶುಭದಾಯಕ ಆಗಿರುತ್ತದೆ. ಈ ದಿವಸ ಸೂರ್ಯೋದಯಕ್ಕೆ ತೃಥಿಯ ತಿಥಿಯಿದ್ದು ಜತೆಗೆ ರೋಹಿಣಿ ನಕ್ಷತ್ರವಿದ್ದರೆ ಉತ್ತಮ. ಅಲ್ಲದೇ ಅಂದು ಬುಧವಾರವಾಗಿದ್ದರೆ ಅತ್ಯಂತ ಶುಭವಾಗಿರುತ್ತದೆ. ನಮ್ಮ ರೈತರು ಹೊಲದಲ್ಲಿ ಮೊಟ್ಟ ಮೊದಲು ಉತ್ತು-ಬಿತ್ತುವುದಕ್ಕೂ ಅಕ್ಷಯ ತದಿಗೆ ಪುಣ್ಯ ಮುಹೂರ್ತ. ಈ ದಿನದಂದು ಯಾವುದೇ ಕೆಲಸ ಪ್ರಾರಂಭ ಮಾಡಿದರೂ ಅಥವಾ ಹೊಸದನ್ನು ಖರೀದಿಸಿದರೆ ಅದು ಅಕ್ಷಯವಾಗುತ್ತದೆ ಎಂದು ನಂಬಿಕೆ.

ವೈಶಾಖೇ ಶುಕ್ಲ ಪಕ್ಷೇತು ತೃತೀಯಾ ರೋಹಿಣೀಯುತಾ
ವಿನಾಪಿ ರೋಹಿಣೀ ಯೋಗಾತ್ ಪುಣ್ಯಕೋಟಿಪ್ರದಾ ಸದಾ
ಎಂಬ ನಿರ್ಣಯ ಸಿಂಧುವಿನ ಮಾತು ಗಮನಾರ್ಹ.

ಈ ದಿನದಂದು ಜನರು ಚಿನ್ನಾಭರಣಗಳನ್ನು, ವಾಹನಗಳನ್ನು ಹಾಗೂ ಬೆಲೆಬಾಳುವ ವಸ್ತುಗಳನ್ನು ಖರೀದಿಸುವುದು ಸಂಪ್ರದಾಯ. ಈ ದಿನ ನಾವು ಏನೇ ಖರೀದಿಸಿದರೂ ಅದು ನಮಗೆ ಬಹಳ ಅದೃಷ್ಟ ಹಾಗೂ ಮತ್ತಷ್ಟು ಖರೀದಿಸುವ ಯೋಗ ಹಾಗೂ ಅವಕಾಶವನ್ನು ತರುತ್ತದೆ. ಈ ದಿನವು ಗೃಹ ಪ್ರವೇಶಕ್ಕೆ ಬಹಳ ಸೂಕ್ತವಾಗಿದೆ. ಈ ಮುಹೂರ್ತದಲ್ಲಿ ಮದುವೆಯಾದರೆ ಅದು ಸಂಸಾರದಲ್ಲಿ ಒಳ್ಳೆಯ ಹೊಂದಾಣಿಕೆ ಹಾಗೂ ಅದೃಷ್ಟವನ್ನು ತರುತ್ತದೆ.

ಭಾರತೀಯರು ಆಚರಿಸುವ ಹಿಂದೂ ಹಬ್ಬಗಳಲ್ಲಿ ಯುಗಾದಿ ನಂತರದ ಸ್ಥಾನ ಅಕ್ಷಯ ತೃತೀಯಕ್ಕೆ ಸಲ್ಲುತ್ತದೆ. ಅಕ್ಷಯ ತೃತೀಯ ದಿವಸ ಶುಭ ಮುಹೂರ್ತಗಳೇ ತುಂಬಿಕೊಂಡಿರುವ, ಜೀವನದ ಅಭಿವೃದ್ಧಿ ಕುರಿತು ಸಂಕಲ್ಪಗಳೆಲ್ಲವನ್ನೂ ಸಾಕಾರಗೊಳಿಸುವ ಮಹಾ ಸುದಿನವಾಗಿದೆ. 

ಅಕ್ಷಯವೆಂದರೆ ಕ್ಷಯವಿಲ್ಲದ್ದು, ಕಡಿಮೆಯಿಲ್ಲದ್ದು, ಕ್ಷೀಣವಾಗದ್ದು, ಕೊನೆಯಿಲ್ಲದ್ದು, ನ್ಯೂನತೆಯಿಲ್ಲದ್ದು, ಸಮೃದ್ಧಿಯ ಸಂಕೇತ, ಶುಭಾರಂಭದ ದ್ಯೋತಕ, ನಿರಂತರೆಯ ಪ್ರತೀಕ ಎಂಬೆಲ್ಲ ಅರ್ಥಗಳಿವೆ. ಆದ್ದರಿಂದಲೇ ಈ ದಿನವಸ ಹೊಸ ಶುಭಕಾರ್ಯಗಳ ಪ್ರಾರಂಭ, ಗೃಹಪ್ರವೇಶ, ಅಕ್ಷರಾಭ್ಯಾಸ, ಹೊಸ ಉದ್ಯಮ, ವ್ಯಾಪಾರ, ವ್ಯವಹಾರಗಳ ಪ್ರಾರಂಭ ಉಪನಯನ, ವಿವಾಹ, ಹಣ ಹೂಡಿಕೆ, ಬಂಗಾರದ ಖರೀದಿ, ದಾನಕಾರ್ಯ, ಪೂಜೆ, ಪುನಸ್ಕಾರಗಳಿಗೆ ಅತ್ಯಂತ ಶ್ರೇಷ್ಠವಾಗಿದೆ.

ಈ ದಿವಸ ಮಾಡಿದ ಯಾವುದೇ ಸತ್ಕಾರ್ಯ, ಸಮಾರಂಭ, ಖರೀದಿಸಿದ ಬಂಗಾರ, ಆಚರಿಸಿದ ಪೂಜೆ-ಪುನಸ್ಕಾರ, ಜಪ-ತಪ, ದಾನ-ಧರ್ಮಗಳಿಗೆ ಅಕ್ಷಯಫಲ ಪ್ರಾಪ್ತಿ ಎಂದು ಹೇಳಲಾಗಿದೆ. ಅಂದು ಹೊಸ ಉದ್ಯೋಗಗಳನ್ನು ಪ್ರಾರಂಭಿಸುವುದು ಶುಭಕರ. ಈ ತೃತೀಯಾ ತಿಥಿಯ ಜತೆಗೆ ರೋಹಿಣಿ ನಕ್ಷತ್ರವಿದ್ದರೆ ಮಹಾ ಪುಣ್ಯಕರ ಎಂದು ಶಾಸ್ತ್ರಗಳು ಹೇಳುತ್ತವೆ.

ಸನಾತನ ಸಂಸ್ಕೃತಿಯಲ್ಲಿ ಧರ್ಮ, ಅರ್ಥ, ಕಾಮ, ಮೋಕ್ಷ ಈ ನಾಲ್ಕು ಪುರುಷಾರ್ಥಗಳಿಗೆ ಬಹಳ ಮಹತ್ವವಿದೆ. ಧರ್ಮವು ಕರ್ತವ್ಯ, ಆಧ್ಯಾತ್ಮಿಕತೆಯನ್ನು, ಅರ್ಥವು ಸಂಪತ್ತನ್ನು, ಕಾಮವು ಭೌತಿಕ ಸಂತೋಷ, ಆಕಾಂಕ್ಷೆಗಳನ್ನು, ಮೋಕ್ಷ ಈ ಭೌಮ ಬಂಧನದಿಂದ ಮುಕ್ತನಾಗಿ ಏಕತ್ವದಲ್ಲಿ ಲೀನವಾಗುವುದರ ಸಂಕೇತವಾಗಿದೆ. ಈ ನಾಲ್ಕು ಪುರುಷಾರ್ಥಗಳ ಪೈಕಿ ಯಾವುದಾದರೂ ಒಂದರ ಪ್ರಾರಂಭ ಮಾಡುವುದಿದ್ದರೂ ಅದಕ್ಕೆ ಎಲ್ಲಾ ರೀತಿಯಿಂದಲೂ ಅನುಕೂಲಕರವಾದ ಶುಭದಿವಸ ಈ ಅಕ್ಷಯ ತೃತೀಯ.
ನಾಲ್ಕು ಪುರುಷಾರ್ಥಗಳಲ್ಲಿ ಅರ್ಥ ಪುರುಷಾರ್ಥವನ್ನು ಅಂದರೆ ಸಂಪತ್ತು, ಕೀರ್ತಿ ಪಡೆಯಲು ಈ ದಿವಸ ಕುಬೇರ ಹಾಗೂ ಲಕ್ಷ್ಮಿ ಇವರುಗಳ ಪೂಜೆ ಮಾಡಲಾಗುತ್ತದೆ. ಮಹಾಲಕ್ಷ್ಮಿ ಅನುಷ್ಠಾನ ಮಾಡಿದರೆ ಇಡೀವರ್ಷ ಉತ್ತಮ ಫಲ ದೊರೆಯುತ್ತದೆ. ಈ ಅಕ್ಷಯ ತೃತೀಯ ದಿವಸ ಚಿನ್ನ, ಬೆಳ್ಳಿ, ವಜ್ರ, ರತ್ನಾಭರಣ, ಭೂಮಿ ಇವುಗಳ ಖರೀದಿ, ಆಸ್ತಿಯಲ್ಲಿ ಹೂಡಿಕೆಗೆ ಪ್ರಶಸ್ತವೆನಿಸಿದೆ ಹಾಗು ಸಮೃದ್ಧಿ ದೊರೆಯುತ್ತದೆಂದೂ ನಂಬಿಕೆ ಇದೆ. ಆದ್ದರಿಂದಲೇ ಅಕ್ಷಯ ತೃತೀಯ ಕುರಿತು ಇರುವ ಪವಿತ್ರ ಭಾವನೆ, ಉಳಿತಾಯದ ಮತ್ತು ಸಂಪತ್ತಿನ ಸದುಪಯೋಗ ಹಾಗೂ ಪೂರ್ಣಫಲ ದೊರೆಯಬೇಕೆಂಬ ಸದ್ಭಾವನೆಯಿಂದಲೇ ಆ ಕುರಿತು ಖರೀದಿ ಹೂಡಿಕೆಗಳು ಭರದಿಂದ ನಡೆಯುತ್ತದೆ.

ಅಕ್ಷಯ ತದಿಗೆ ಸ್ತ್ರೀಯರಿಗೆ ಮಹತ್ವದ್ದಾಗಿದೆ. ಸ್ತ್ರೀಯರು ಚೈತ್ರದಲ್ಲಿ ಕೂರಿಸಿದ ಚೈತ್ರ ಗೌರಿಯನ್ನು ಈ ದಿನ ವಿಸರ್ಜನೆ ಮಾಡುತ್ತಾರೆ. ಇದರ ಪ್ರಯುಕ್ತ ಅರಿಶಿನ-ಕುಂಕುಮ ನೀಡುವ ಕಾರ್ಯಕ್ರಮವನ್ನೂ ಮಾಡುತ್ತಾರೆ.


ಅಕ್ಷಯ ತದಿಗೆಯ ದಿನ ಮಾಡಿದ ದಾನದಿಂದ ಬಹಳಷ್ಟು ಪುಣ್ಯ ಸಿಗುತ್ತದೆ. ಬಹಳಷ್ಟು ಪುಣ್ಯವು ಲಭಿಸುವುದರಿಂದ ವ್ಯಕ್ತಿಯ ಪುಣ್ಯದ ಸಂಗ್ರಹವು ಹೆಚ್ಚಾಗುತ್ತದೆ. ಯಾವುದಾದರೊಂದು ಜೀವದ ಹಿಂದಿನ ಕರ್ಮಗಳು ಒಳ್ಳೆಯದಾಗಿದ್ದರೆ ಅವನ ಪುಣ್ಯದ ಸಂಗ್ರಹವು ಹೆಚ್ಚಾಗುತ್ತದೆ. ಇದರಿಂದ ಅವನಿಗೆ ಸ್ವರ್ಗಪ್ರಾಪ್ತಿಯಾಗಬಹುದು. ಎಲ್ಲಿ ಅಧ್ಯಾತ್ಮದ ಪ್ರಸಾರದ ಜತೆಗೆ ರಾಷ್ಟ್ರ ಮತ್ತು ಧರ್ಮಗಳಿಗಾಗಿ ಕಾರ್ಯ ಮಾಡಲಾಗುತ್ತದೆಯೋ, ಇಂತಹ ಸತ್ಕಾರ್ಯಗಳಿಗೆ ದಾನ ಮಾಡುವುದೆಂದರೆ ಸತ್ಪಾತ್ರೇ ದಾನ. ಸತ್ಪಾತ್ರರಿಗೆ ದಾನ ಮಾಡುವುದರಿಂದ ದಾನ ಮಾಡುವವನಿಗೆ ಪುಣ್ಯವು ಸಿಗದೆ ದಾನದ ಕರ್ಮವು ಅಕರ್ಮ ಕರ್ಮವಾಗುತ್ತದೆ. ಇದರಿಂದ ಅವನ ಆಧ್ಯಾತ್ಮಿಕ ಉನ್ನತಿಯಾಗುತ್ತದೆ. ಆಧ್ಯಾತ್ಮಿಕ ಉನ್ನತಿಯಾಗುವುದರಿಂದ ಸಾಧಕನು ಸ್ವರ್ಗಲೋಕಕ್ಕೆ ಹೋಗದೆ ಉಚ್ಚಲೋಕಕ್ಕೆ ಹೋಗುತ್ತಾನೆ. ಅಕ್ಷಯ ತದಿಗೆಯು ಮೂರೂವರೆ ಮುಹೂರ್ತಗಳಲ್ಲಿ ಒಂದಾಗಿದೆ.

ಮಹತ್ವ
ಅಸ್ಯಾಂ ತಿಥೌ ಕ್ಷಯಮುರ್ಪತಿ ಹುತಂ ನ ದತ್ತಂ|
ತೇನಾಕ್ಷಯೇತಿ ಕಥಿತಾ ಮುನಿಭಿಸ್ತ ತೀಯಾ|
ಉದ್ದಿಶ್ಯ ದೈವತಪಿತೃನ್ಕ್ರಿಯತೇ ಮನುಷ್ಯೈಃ|
ತತ್ ಚ ಅಕ್ಷಯಂ ಭವತಿ ಭಾರತ ಸರ್ವಮೇವ||

- ಮದನರತ್ನ ಅರ್ಥ: (ಶ್ರೀಕೃಷ್ಣನು ಹೇಳುತ್ತಾನೆ)

ಎಲೈ ಯುಧಿಷ್ಠಿರನೇ, ಈ ತಿಥಿಗೆ ಮಾಡಿದ ದಾನ ಮತ್ತು ಹವನ ಕ್ಷಯವಾಗುವುದಿಲ್ಲ. ಆದುದರಿಂದ ಋಷಿಗಳು ಇದನ್ನು ಅಕ್ಷಯ ತೃತೀಯಾ ಎಂದಿದ್ದಾರೆ. ಈ ತಿಥಿಯಂದು ದೇವರು ಮತ್ತು ಪಿತೃಗಳನ್ನುದ್ದೇಶಿಸಿ ಮಾಡಿದ ಕೃತಿಯು ಅಕ್ಷಯ (ಅವಿನಾಶೀ)ವಾಗುತ್ತದೆ. ಅಕ್ಷಯ ತೃತೀಯಾ ಮೂರೂವರೆ ಮುಹೂರ್ತಗಳಲ್ಲಿ ಒಂದಾಗಿದೆ. ಕೆಲವರ ಅಭಿಪ್ರಾಯದಂತೆ ಅಕ್ಷಯ ತೃತೀಯಾ ಕೃತಯುಗ ಅಥವಾ ತ್ರೇತಾಯುಗದ ಆರಂಭದ ದಿನವಾಗಿದೆ. 

ಹಬ್ಬವನ್ನು ಆಚರಿಸುವ ಪದ್ಧತಿ.
ಸ್ನಾನದಾನಾದಿ ಧರ್ಮಕಾರ್ಯಗಳು: ಕಾಲವಿಭಾಗದ ಪ್ರಾರಂಭದ ದಿನವು ಭಾರತೀಯರಿಗೆ ಪವಿತ್ರವಾಗಿದೆ. ಆದುದರಿಂದ ಇಂತಹ ತಿಥಿಯಂದು ಸ್ನಾನದಾನಾದಿ ಧರ್ಮಕಾರ್ಯಗಳನ್ನು ಹೇಳಲಾಗಿದೆ. ಈ ದಿನದ ವಿಧಿಯೆಂದರೆ ಪವಿತ್ರ ನೀರಿನಲ್ಲಿ ಸ್ನಾನ, ಶ್ರೀವಿಷ್ಣುವಿನ ಪೂಜೆ, ಜಪ, ಹೋಮ, ದಾನ ಮತ್ತು ಪಿತೃತರ್ಪಣ. ಈ ದಿನ ಅಪಿಂಡಕ ಶ್ರಾದ್ಧವನ್ನು ಮಾಡಬೇಕು, ಅದು ಸಾಧ್ಯವಿಲ್ಲದಿದ್ದರೆ ಕಡಿಮೆ ಪಕ್ಷ ಎಳ್ಳಿನ ತರ್ಪಣವನ್ನಾದರೂ ಕೊಡಬೇಕು. ದಾನವು ಸತ್ಪಾತ್ರೇ ದಾನವಾಗಿರಬೇಕು. ಸಂತರಿಗೆ ಅಥವಾ ಸಮಾಜದಲ್ಲಿ ಧರ್ಮಪ್ರಸಾರವನ್ನು ಮಾಡುವ ಆಧ್ಯಾತ್ಮಿಕ ಸಂಸ್ಥೆಗಳಿಗೆ ಮಾಡಿದ ದಾನವು ಸತ್ಪಾತ್ರೇ ದಾನವಾಗಿದೆ. ಸತ್ಪಾತ್ರೇ ದಾನವನ್ನು ಮಾಡುವುದರಿಂದ ದಾನದ ಕರ್ಮವು ಅಕರ್ಮಕರ್ಮವಾಗುತ್ತದೆ. ಅಕರ್ಮ ಕರ್ಮವೆಂದರೆ ಪಾಪ-ಪುಣ್ಯಗಳ ಲೆಕ್ಕಾಚಾರವು ತಗಲದಿರುವುದು. ಇದರಿಂದ ದಾನವನ್ನು ನೀಡುವವನು ಯಾವುದೇ ಬಂಧನದಲ್ಲಿ ಸಿಲುಕದೇ, ಅವನ ಆಧ್ಯಾತ್ಮಿಕ ಉನ್ನತಿಯಾಗಲು ಸಹಾಯವಾಗುತ್ತದೆ.

ಅಕ್ಷಯ ತದಿಗೆಯ ದಿನ ಎಳ್ಳು ತರ್ಪಣೆಯನ್ನು ಏಕೆ ಮಾಡುತ್ತಾರೆ?
ಪೂರ್ವಜರಿಗೆ ಗತಿ ಸಿಗುವುದು ಮಹತ್ವ: ಅಕ್ಷಯ ತದಿಗೆಯ ದಿನ ಉಚ್ಚಲೋಕದಿಂದ ಸಾತ್ತ್ವಿಕತೆಯು ಬರುತ್ತಿರುತ್ತದೆ. ಈ ಸಾತ್ತ್ವಿಕತೆಯನ್ನು ಗ್ರಹಣ ಮಾಡಲು ಭೂಲೋಕದಲ್ಲಿನ ಅನೇಕ ಜೀವಗಳು (ಲಿಂಗದೇಹಗಳು) ಪೃಥ್ವಿಯ ಸಮೀಪಕ್ಕೆ ಬರುತ್ತವೆ. ಭೂಲೋಕದಲ್ಲಿರುವ ಬಹುತೇಕ ಜೀವಗಳು ಮನುಷ್ಯರ ಪೂರ್ವಜರಾಗಿರುತ್ತಾರೆ ಮತ್ತು ಅವರು ಪೃಥ್ವಿಯ ಸಮೀಪ ಬರುವುದರಿಂದ ಮನುಷ್ಯರಿಗೆ ತೊಂದರೆಯಾಗುವ ಸಾಧ್ಯತೆಯಿರುತ್ತದೆ. ಪೂರ್ವಜರ ಋಣವೂ ಮನುಷ್ಯರ ಮೇಲೆ ಬಹಳಷ್ಟು ಇರುತ್ತದೆ. ಈ ಋಣವನ್ನು ತೀರಿಸಲು ಮನುಷ್ಯನು ಪ್ರಯತ್ನ ಮಾಡುವುದು ಈಶ್ವರನಿಗೆ ಅಪೇಕ್ಷಿತವಾಗಿದೆ. ಪೂರ್ವಜರಿಗೆ ಗತಿ ಸಿಗಬೇಕೆಂದು ಅಕ್ಷಯ ತದಿಗೆಯ ದಿನ ಎಳ್ಳು ತರ್ಪಣೆಯನ್ನು ಮಾಡುತ್ತಾರೆ.

ಎಳ್ಳು ತರ್ಪಣೆ ಮಾಡುವ ಪದ್ಧತಿ:
ಒಂದು ತಟ್ಟೆಯನ್ನು ತೆಗೆದುಕೊಂಡು ತಟ್ಟೆಯಲ್ಲಿ ಶ್ರೀವಿಷ್ಣು, ಬ್ರಹ್ಮ ಅಥವಾ ದತ್ತನ ಆವಾಹನೆಯನ್ನು ಮಾಡಬೇಕು. ಆಮೇಲೆ ದೇವತೆಗಳು ಸೂಕ್ಷ್ಮದಲ್ಲಿ ಆ ತಟ್ಟೆಯಲ್ಲಿ ಬಂದಿದ್ದಾರೆಂದು ಭಾವವನ್ನಿಟ್ಟು ಕೈಯಲ್ಲಿ ಎಳ್ಳನ್ನು ತೆಗೆದುಕೊಂಡು ಅವರ ಚರಣಗಳ ಮೇಲೆ ಅರ್ಪಿಸಬೇಕು. ಇನ್ನೊಂದು ತಟ್ಟೆಯನ್ನು ತೆಗೆದುಕೊಂಡು ನಮ್ಮ ಪೂರ್ವಜರ ಆವಾಹನೆಯನ್ನು ಮಾಡಬೇಕು. ಆಮೇಲೆ ಪೂರ್ವಜರು ತಟ್ಟೆಯಲ್ಲಿ ಬಂದಿದ್ದಾರೆಂದು ಭಾವವನ್ನಿಟ್ಟು ದೇವತೆಗಳ ತತ್ತ್ವದಿಂದ ಭರಿತವಾದ ಎಳ್ಳನ್ನು ಅವರಿಗೆ ಅರ್ಪಿಸಬೇಕು, ಅಂದರೆ ಸಾತ್ತ್ವಿಕವಾಗಿರುವ ಈ ಎಳ್ಳನ್ನು ಕೈಯಲ್ಲಿ ತೆಗೆದುಕೊಂಡು ಅದರ ಮೇಲಿನಿಂದ ತಟ್ಟೆಯಲ್ಲಿ ನಿಧಾನವಾಗಿ ನೀರನ್ನು ಬಿಡಬೇಕು ಮತ್ತು ಆ ಸಮಯದಲ್ಲಿ ಬ್ರಹ್ಮ, ಶ್ರೀವಿಷ್ಣು ಅಥವಾ ಇವರಿಬ್ಬರ ಅಂಶವಿರುವ ದತ್ತನಿಗೆ ಪೂರ್ವಜರಿಗೆ ಗತಿ ನೀಡಬೇಕೆಂದು ಪ್ರಾರ್ಥನೆಯನ್ನು ಮಾಡಬೇಕು.

ಅಕ್ಷಯತೃತೀಯಾ ಪರಮ ಮಂಗಳಕರವಾದ ದಿನ.

ವೈಶಾಖ ಮಾಸ ಶುಕ್ಲ ಪಕ್ಷದ ತೃತೀಯಾ ದಿವಸ ಅಕ್ಷಯ ತೃತೀಯಾ. ಈದಿನದಲ್ಲಿ ಮಾಡುವ ಪುಣ್ಯಕೆಲಸಗಳೆಲ್ಲ ಹೆಚ್ಚು ಫಲ ಕೊಡುತ್ತವೆ. ಅನಂತ ಕೋಟಿ ಬ್ರಹ್ಮಾಂಡದೊಡೆಯ ಶ್ರೀ ಕೃಷ್ಣನಿಗೆ ಗಂಧಲೇಪನ ಮಾಡಿದರೆ ದರ್ಶನ ಮಾಡಿದರೆ ಅನಂತಕೋಟಿ ಪುಣ್ಯ ಅಕ್ಷಯವಾಗುತ್ತದೆ. ಪಾಪ ಕಾರ್ಯ ಮಾಡಿದರೆ ಬರುವ ಪಾಪವೂ ಅಕ್ಷಯವಾಗುತ್ತದೆ. ವಾಸ್ತವಿಕವಾಗಿ ಚೈತ್ರ ಹಾಗೂ ಭಾದ್ರಪದ ಮಾಸಗಳ ಶುದ್ಧ ತೃತೀಯಗಳೂ ಕೂಡಾ ಅಕ್ಷಯ ತೃತೀಯಾಗಳೇ.

ಚೈತ್ರ-ವೈಶಾಖ-ಮಾಘಾನಾಂ ಶುಕ್ಲ ಭಾದ್ರಪದಸ್ಯ ಚ|
ತೃತೀಯಾ ತು ಭವೇತ್ಪುಷ್ಯಾ ದತ್ತಕ್ಷಯ್ಯಫಲಪ್ರದಾ||
ಬುಧವಾರೋ ಯದಾಸ್ಯಾಂ ಸ್ಯಾತು ರೋಹಿಣ್ಯಾ ಶ್ರವಣೇನ ವಾ|
ಯುಕ್ತಾ ಭೂರೀಫಲಃ ಪ್ರೋಕ್ತಃ ಪರ್ವಕಾಲಃ ಸುಯೋಗಜಃ||

ಎಂಬಂತೆ ಚೈತ್ರ ವೈಶಾಖ ಮಾಘ ಭಾದ್ರಪದ ಮಾಸಗಳ ಶುದ್ಧ ತೃತೀಯಾ ತಿಥಿಗಳು ಅಕ್ಷಯ ತೃತೀಯಾ ಎನಿಸಿ ಅಕ್ಷಯ ಫಲವನ್ನು ಕೊಡುತ್ತವಾದರೂ ಬುಧವಾರ, ಶ್ರವಣಾ, ರೋಹಿಣಿ ನಕ್ಷತ್ರ ಇದ್ದ ದಿನದಲ್ಲಿ ಬರುವ ತೃತೀಯಾ ತಿಥಿ ಪರ್ವಕಾಲ ಎನಿಸುತ್ತದೆ. ಈ ದಿನದಲ್ಲಿ ಮಾಡುವ ಸ್ನಾನದಾನಾದಿಗಳು ಅಕ್ಷಯ ಫಲ ಕೊಡುತ್ತವೆ. ಸರ್ವೇಸಾಮಾನ್ಯವಾಗಿ ವೈಶಾಖ ಶುದ್ಧ ತೃತೀಯಾ ತಿಥಿಯು ರೋಹಿಣಿ ಯಾ ಶ್ರವಣಾದಲ್ಲಿ ಬರುವುದರಿಂದ ಹಾಗೂ ಬೇಸಿಗೆಯಲ್ಲಿ ಗಂಧಲೇಪನ ವಿಹಿತವಾದ್ದರಿಂದ ಈ ಮಾಸದ ಅಕ್ಷಯ ತದಿಗೆ ಹೆಚ್ಚು ಜನಪ್ರಿಯವಾಗಿದೆ. ಅಲ್ಲದೇ ವೈಶಾಖ ಅಕ್ಷಯ ತದಿಗೆಯ ದಿನದಲ್ಲಿ ಉತ್ತಮ ಕಾರ್ಯಮಾಡಿ ಅನಂತ ಫಲ ಪಡೆದುಕೊಂಡ ಸಾಕಷ್ಟು ನಿದರ್ಶನಗಳು ಪುರಾಣಗಳಲ್ಲಿ ಉಲ್ಲೇಖಗೊಂಡಿವೆಯಾದ್ದರಿಂದ ಇದಕ್ಕೆ ಪ್ರಾಶಸ್ತ್ಯ.

ಇಂದ್ರ ಉವಾಚ

ಪರಸ್ತ್ರೀಸಂಗದೋಷೇಣ ಬಲಂ ವೀರ್ಯಂ ಯಶೋ ಮಮ|
ಅಭವಂ ನಷ್ಟವೀರ್ಯೋಽಹಂ ತೋಷ್ಣಿ ತೇನ ವಸಾಮ್ಯಹಮ್|
ಭವಿಷ್ಯತಿ ಚ ಸಾ ಶಕ್ತಿರ್ವಿದ್ಯಾಯಾಂ ಮಂತ್ರ ಶಾಸ್ತ್ರಯೋಃ|
ಬಲಂ ಧೈರ್ಯಂ ಯಶಶ್ಚೈವ ಯಥಾ ಪೂರ್ವಂ ಭವಿಷ್ಯತಿ||
ತೃತೀಯಾಯಾಶ್ಚ ಮಾಹಾತ್ಯಾತ್ ಭಾಗ್ಯಯುಕ್ತೋಽಮರಾವತೀಮ್|
ವಿವೇಶ ವಿಭವೈಃ ಸಾರ್ಧಂ ಶಂಖತೂರ್ಯಾದಿ ನಿಸ್ವನೈಃ||

ಹೀಗೆ ಸ್ವರ್ಗಾಧಿಪತಿಯಾದ ಸಾಕ್ಷಾತ್ ಇಂದ್ರದೇವರೇ ಕಳೆದು ಕೊಂಡ ತನ್ನ ಇಂದ್ರಪದವಿ ಮತ್ತೆಲ್ಲಾ ವೈಬೋಗಗಳನ್ನು ವೈಶಾಖಾ ಶುದ್ಧ ತೃತೀಯಾದಿವಸ ಪಡೆದುಕೊಂಡು ನನ್ನ ರಾಜಧಾನಿಯಾದ ಅಮರಾವತಿಯನ್ನು ಪ್ರವೇಶಿಸಿದೆ ಎಂಬುದಾಗಿ ಹೇಳಿದ್ದಾರೆ. ವೈಶಾಖ ಮಾಸ ಮಹಾತ್ಮೆಯಲ್ಲಿ ಹೇಳಿರುವ ಹಾಗೆ,

ಸರ್ವಾಶ್ಚ ತಿಥಯಃ ಪುಣ್ಯಾಃ ಮಾಸೇಸ್ಮಿನ್ ಮಾಧವ ಪ್ರಿಯೇ|
ತತ್ರಾಪಿ ಚ ಸಿತೇ ಪಕ್ಷೇ ತೃತೀಯಾ ಚಾಕ್ಷಯಾಹ್ವಯಾ||
ಯಸ್ತಸ್ಯಾಂ ಸ್ನಾನದಾನಾದಿ ಶ್ರದ್ಧಯಾ ಚ ಕರೋತಿ ಚ
ತಸ್ಯ ಪಾಪಸಹಸ್ರಾಣಿ ನಶ್ಯಂತ್ಯೇವ ನ ಸಂಶಯಃ
ಯಸ್ಯಾಂ ಸ್ನಾನಂ ಜಪೋಹೋಮಃ ಸ್ವಾಧ್ಯಾಯಃ ಪಿತೃತರ್ಪಣಂ|
ದಾನಂ ಚ ಕ್ರಿಯತೇ ಕಿಂಚಿತ್ ತತ್ಸರ್ವಂ ಸ್ಯಾದಿಹಾಕ್ಷಯಂ||
ಯಃ ಪಶ್ಯತಿ ತೃತಿಯಾಯಾಂ ಕೃಷ್ಣಂ ಚಂದನಭೂಷಿತಂ |
ವೈಶಾಖಸ್ಯ ಸಿತೇ ಪಕ್ಷೇ ಸಯಾತ್ಯಚ್ಯುತ ಮಂದಿರಮ್ ||
ಗಂಗಾತೋಯೈಃ ನರಃ ಸ್ನಾತ್ವಾ ಮುಚ್ಯತೇ ಸರಕಿಲ್ಬಿಷೈಃ ||

ಹೀಗೆ ಅಕ್ಷಯ ತೃತೀಯಾ ದಿನದಂದು ಮಾಡುವ ಪುಣ್ಯಕಾರ್ಯ, ಸ್ನಾನದಾನಾದಿಗಳು ಅನಂತ ಫಲದಾಯಕವಷ್ಟೇ ಅಲ್ಲದೇ ವಿಷ್ಣುಪ್ರೀತ್ಯರ್ಥವಾಗಿ ಜಪತಪಾದಿ ಹೋಮಗಳಲ್ಲಿ ಯಾವುದಾದರೊಂದನ್ನು ಮಾಡದೇ ಇದ್ದರೂ ಸಹ ಪಾಪ ಸಹಸ್ರಪಟ್ಟು ಹೆಚ್ಚಾಗುವುದರಲ್ಲಿ ಸಂಶಯವಿಲ್ಲ. ಪರ್ವಕಾಲವಾದ್ದರಿಂದ ಪಿತೃಗಳ ಪ್ರೀತ್ಯರ್ಥವಾಗಿ ತಿಲತರ್ಪಣವನ್ನು ಕೊಡುವದರಿಂದ ಪಿತೃಗಳ ಮೋಕ್ಷಕ್ಕೆ ಕಾರಣವಾಗುತ್ತೇವೆ. ವೈಶಾಖ ಮಾಸ ಪರ್ಯಂತರವೂ ಶಾಲಿಗ್ರಾಮಾದಿ ಪರಮಾತ್ಮನ ಪ್ರತಿಮೆಗಳಿಗೆ ಗಂಧಲೇಪನವನ್ನು ಮಾಡಬೇಕು, ಇದು ಸಾಧ್ಯವಾಗದಿದ್ದರೂ ಸಹ ಅಕ್ಷಯ ತೃತೀಯಾದಂದು ಪರಮಾತ್ಮನಿಗೆ ಗಂಧಲೇಪನ ಮಾಡುವುದು ಅಕ್ಷಯವಾಗುವುದು.

ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲೇಖನಗಳನ್ನು ಓದಿ


ಮರ್ಯಾದಾ ಪುರುಷೋತ್ತಮ ಶ್ರೀರಾಮ ಜನ್ಮೋತ್ಸವ

ವಸಂತ ಋತುವಿನ ಆಗಮನದೊಂದಿಗೆ ಆರಂಭವಾಗುವ ಚೈತ್ರ ನವರಾತ್ರಿ ಅಥವಾ ವಸಂತೋತ್ಸವ 9 ದಿನಗಳ ಹಬ್ಬ. ಶ್ರೀರಾಮ ನವರಾತ್ರಿ ಅಥವಾ ರಾಮೋತ್ಸವ ಎಂದೇ ಇದು ಪ್ರಸಿದ್ಧಿ. ಚೈತ್ರ ಶುಕ್ಲಪಕ್ಷ ಪಾಡ್ಯ ಯುಗಾದಿಯಿಂದ ಆರಂಭಗೊಳ್ಳುವ ಹಬ್ಬದ ಆಚರಣೆ ರಾಮನವಮಿಯಂದು ಮುಕ್ತಾಯಗೊಳ್ಳುತ್ತದೆ. ರಾಮನವಮಿ, ಆದರ್ಶ ಪುರುಷೋತ್ತಮ ಶ್ರೀರಾಮಚಂದ್ರನ ಜನುಮದಿನ.

ಶ್ರೀರಾಮನ ಅವತಾರ, ಮಹಾವಿಷ್ಣುವಿನ ದಶಾವತಾರಗಳ ಪೈಕಿ 7ನೆಯದು ಎನ್ನುತ್ತವೆ ಪುರಾಣ ಗ್ರಂಥಗಳು. ರಘುವಂಶದ ರಾಜ ದಶರಥನಿಗೆ ಮೂವರು ಪತ್ನಿಯರಿದ್ದರೂ ಮಕ್ಕಳಿರಲಿಲ್ಲ. ಪುತ್ರಪ್ರಾಪ್ತಿಗಾಗಿ ಪುತ್ರಕಾಮೇಷ್ಠಿಯಾಗ ಮಾಡುವಂತೆ ಋಷಿ ವಸಿಷ್ಠರು ಸಲಹೆ ನೀಡಿದರು. ಅವರ ಸಲಹೆಯಂತೆ ರಾಜ ಯಾಗ ಮಾಡಿದ. ಯಾಗದಿಂದ ಸಂಪ್ರೀತನಾದ ಸೂರ್ಯದೇವ ಪ್ರತ್ಯಕ್ಷನಾಗಿ ಪಾಯಸವನ್ನು ಪ್ರಸಾದವನ್ನಾಗಿ ನೀಡಿದ. ಈ ಪ್ರಸಾದ ಸ್ವೀಕರಿಸಿದ ದಶರಥನ ಮಡದಿಯರು ನಾಲ್ವರು ಪುತ್ರರಿಗೆ ಜನ್ಮ ನೀಡಿದರು. ಕೌಸಲ್ಯೆಯ ಜ್ಯೇಷ್ಠ ಪುತ್ರನಾಗಿ ಶ್ರೀರಾಮ ಜನಿಸಿದ. ಚೈತ್ರ ಶುಕ್ಲಪಕ್ಷದ ನವಮಿಯಂದು ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀರಾಮನ ಜನನವಾಯಿತು ಎನ್ನುತ್ತದೆ ರಾಮಾಯಣ. ಹಾಗಾಗಿ, ರಾಮನ ಜನ್ಮದಿನವನ್ನಾಗಿ ರಾಮನವಮಿಯನ್ನು ಆಚರಿಸುವ ಪದ್ಧತಿ ಬೆಳೆದು ಬಂದಿದೆ.

ರಾಮ ಬೆಳಕಿನ, ಜ್ಞಾನದ ಸಂಕೇತ. ರಾಮನ ಮೊದಲ ಅಕ್ಷರ 'ರಾ'ಗೂ ಸೂರ್ಯನಿಗೂ ಅವಿನಾಭಾವ ಸಂಬಂಧವಿದೆ. ರಾಮ ಎಂಬ ಪದ ಸೂರ್ಯನ ಸಾಕ್ಷಾತ್ ರೂಪ ಎನ್ನುವ ಮಾತಿದೆ. ರಾಮನ ವಂಶ ಸೂರ್ಯವಂಶ ಅಂದರೆ ರಘುವಂಶ ಎಂಬುದು ಈ ವಾದಕ್ಕೆ ಪೂರಕ. ಕಾಕತಾಳೀಯವೆಂಬಂತೆ ಸೂರ್ಯ ಉತ್ತರ ಧ್ರುವದತ್ತ ತನ್ನ ಚಲನೆ ಆರಂಭಿಸಿದ ಫಲವಾಗಿ ಆರಂಭವಾಗುವ ಬೇಸಿಗೆ ಕಾಲದಲ್ಲಿಯೇ ರಾಮೋತ್ಸವ ಜರುಗುತ್ತದೆ. ಹಲವು ಭಾಷೆಗಳಲ್ಲಿ 'ರಾ' ಅಕ್ಷರ ಬೆಳಕು ಎಂಬರ್ಥದಲ್ಲಿ ಬಳಕೆಯಾಗುತ್ತಿದೆ. ಪುರಾತನ ಈಜೀಪ್ತಿಯನ್ನರು ಸೂರ್ಯನನ್ನು 'ಅಮೋನ್ ರಾ' ಅಥವಾ 'ರಾ' ಎಂದು ಸಂಬೋಧಿಸುತ್ತಿದ್ದರು. ಲ್ಯಾಟಿನ್ನಲ್ಲಿ 'ರಾ' ಎಂಬುದು ಬೆಳಕಿಗೆ ಪರ್ಯಾಯ ಪದ. ಇಂಗ್ಲೀಷ್ನಲ್ಲಿ ರೇಡಿಯನ್ಸ್, ರೇ, ರೇಡಿಯಂ ಎಂಬ ಪದಗಳು ಬೆಳಕಿನ ಕಿರಣದ ಹೊರಸೂಸುವಿಕೆ ಎಂಬರ್ಥ ನೀಡುತ್ತವೆ. 'ರಾಬಿ' ಎನ್ನುವುದಕ್ಕೆ ಸಂಸ್ಕೃತದಲ್ಲಿ ಸೂರ್ಯ ಎಂಬ ಅರ್ಥವಿದೆ.

ಅಯೋಧ್ಯೆಯಲ್ಲಿ ಭಕ್ತರ ಸಡಗರ, ಸಂಭ್ರಮ:
ಹಬ್ಬದ ದಿನ ಮನೆಗಳನ್ನು ಸ್ವಚ್ಛಗೊಳಿಸಿ, ತಳಿರು-ತೋರಣಗಳಿಂದ ಶೃಂಗರಿಸುವುದು ಸಾಮಾನ್ಯ. ಮನೆಯ ಹಿರಿಯರು ಬೆಳಗ್ಗೆಯೇ ಸ್ನಾನ ಮಾಡಿ, ದೇವರ ಪೂಜೆ ನೆರವೇರಿಸಿದರೆ, ಕಿರಿಯರು ಹೊಸ ಬಟ್ಟೆ ತೊಟ್ಟು ಸಂಭ್ರಮಿಸುತ್ತಾರೆ. ನೀರು ಮಜ್ಜಿಗೆ, ಕೋಸಂಬರಿ ಪಾನಕಗಳನ್ನು ರಾಮನಿಗೆ ನೈವೇದ್ಯ ಮಾಡಿ, ಪ್ರಸಾದವಾಗಿ ವಿತರಿಸುವುದು ಹಬ್ಬದ ಆಚರಣೆಗಳಲ್ಲೊಂದು. ಕೆಲವೆಡೆ ಹೋಳಿಗೆ, ಗುಳಪಾಟಿಗಳನ್ನೂ ಖಾದ್ಯವಾಗಿ ತಯಾರಿಸುತ್ತಾರೆ. 

ರಾಮಭಕ್ತರಿಗಿದು ಪರ್ವಕಾಲ. ಒಂಬತ್ತು ದಿನಗಳ ಕಾಲ 'ರಾಮಚರಿತಮಾನಸ'ದ ಪಠಣ, ರಾಮ ನಾಮ ಜಪ, ರಾಮನ ಕುರಿತಾದ ಭಜನೆ, ಪೂಜೆಗಳ ಮೂಲಕ ರಾಮನ ಅನುಗ್ರಹಕ್ಕೆ ಮೊರೆ ಹೋಗುತ್ತಾರೆ. ರಾಮನವಮಿಯಂದು ಶ್ರೀರಾಮನ ದೇವಾಲಯಗಳಿಗೆ ತೆರಳುವ ಭಕ್ತರು ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಿ ಕೃತಾರ್ಥರಾಗುತ್ತಾರೆ. ಕೆಲವೆಡೆ ರಾಮ, ಸೀತೆ, ಲಕ್ಷ್ಮಣ ಹಾಗೂ ರಾಮಭಕ್ತ ಹನುಮನ ಶೋಭಾಯಾತ್ರೆಯೂ ಜರುಗುತ್ತದೆ.

ಶ್ರೀರಾಮ ಜನಿಸಿದನೆನ್ನಲಾದ ಅಯೋಧ್ಯೆಯಲ್ಲಿ ಈ ದಿನ ಭಕ್ತರ ಸಡಗರ, ಸಂಭ್ರಮ ಎಲ್ಲೆ ಮೀರಿರುತ್ತದೆ. ಇಲ್ಲಿನ ಪವಿತ್ರ ಸರಯೂ ನದಿಯಲ್ಲಿ ಸ್ನಾನ ಮಾಡುವ ಭಕ್ತರು, ಶ್ರೀರಾಮನ ದರ್ಶನ ಮಾಡಿ ಪುನೀತರಾಗುತ್ತಾರೆ. ಆಂಧ್ರದ ಭದ್ರಾಚಲಂನಲ್ಲಿ ರಾಮನವಮಿಯಂದು ನಡೆಯುವ 'ಸೀತಾಕಲ್ಯಾಣ ಉತ್ಸವ' ಜಗದ್ವಿಖ್ಯಾತ. ರಾಮ-ಸೀತೆಯರ ವಿವಾಹ ವಾರ್ಷಿಕೋತ್ಸವ ನಿಮಿತ್ತ ಇಲ್ಲಿ ಉತ್ಸವ ಜರುಗುತ್ತದೆ. ಆದರೆ, ಮಿಥಿಲಾ ಹಾಗೂ ಅಯೋಧ್ಯೆಯಲ್ಲಿ 'ಸೀತಾಕಲ್ಯಾಣ ಮಹೋತ್ಸವ' ಜರುಗುವುದು ವಿವಾಹ ಪಂಚಮಿಯಂದು. ಅಂದರೆ ಮಾರ್ಗಶೀರ್ಷ ಶುಕ್ಲ ಪಂಚಮಿಯಂದು. ವಾಲ್ಮೀಕಿ ರಾಮಾಯಣದ ಪ್ರಕಾರ ಸೀತಾ-ರಾಮರ ವಿವಾಹ ನಡೆದುದು ವಿವಾಹ ಪಂಚಮಿಯಂದು ಎಂಬುದು ಇದಕ್ಕೆ ಆಧಾರ.

ರಜಪೂತರಿಂದ ಶಸ್ತ್ರಾಸ್ತ್ರ ಪೂಜೆ:
ರಾವಣನ ವಿರುದ್ಧ ರಾಮ ಜಯ ಸಾಧಿಸಿದ ಕುರುಹಾಗಿ ರಜಪೂತರು ರಾಮನವಮಿಯಂದು ಯುದ್ಧಕ್ಕೆ ಬಳಸುವ ಶಸ್ತ್ರಾಸ್ತ್ರಗಳ ಪೂಜೆ ಮಾಡುತ್ತಾರೆ. ಯುದ್ಧದಲ್ಲಿ ಬಳಸಲಾಗುವ ಕುದುರೆಗಳು, ಆನೆಗಳ ಪೂಜೆಯೂ ನಡೆಯುತ್ತದೆ. ಚೈತ್ರ ನವರಾತ್ರಿ ಎಂಬ ಹೆಸರಿನಿಂದ ಆಚರಿಸಲ್ಪಡುವ ಮಹಾರಾಷ್ಟ್ರದಲ್ಲಿ ಈ ದಿನ ದೇವಿಯ ವಿಶೇಷ ಆರಾಧನೆ ಕೂಡ ನಡೆಯುತ್ತದೆ. ಕಾಂಗ್ರಾ ಜಿಲ್ಲೆಯಲ್ಲಿ ರಾಮನವಮಿ ದಿನ 'ರಾಲಿ ಮೇಳ' ಅಥವಾ 'ರಾಲಿ-ಕಾ-ಮೇಳ' ಎಂಬ ಹೆಸರಿನಲ್ಲಿ ವಿಶೇಷ ಆಚರಣೆ ನಡೆಯುತ್ತದೆ. ಜೇಡಿಮಣ್ಣಿನಿಂದ 'ರಾಲಿ' ಪ್ರತಿಮೆ ತಯಾರಿಸಿ, ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಲಾಗುತ್ತದೆ. ಮದುವೆಯಾಗದ ಹೆಣ್ಣು ಮಕ್ಕಳು ಅನುರೂಪ ವರನಿಗಾಗಿ ರಾಮನಲ್ಲಿ ಪ್ರಾರ್ಥಿಸುತ್ತಾರೆ. ಉಜ್ಜಯಿನಿ, ರಾಮೇಶ್ವರದ ರಾಮನಾಥಸ್ವಾಮಿ ದೇವಾಲಯಗಳಲ್ಲಿ ಭಕ್ತರು ಈ ದಿನ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಬಿಹಾರ, ಉತ್ತರ ಪ್ರದೇಶಗಳಲ್ಲಿ ಭಕ್ತರು ಸತ್ಸಂಗಗಳಲ್ಲಿ ಪಾಲ್ಗೊಳ್ಳುತ್ತಾರೆ. 

ಮೈಸೂರಿನ ಸಿದ್ಧರಾಮನ ಹುಂಡಿಯಲ್ಲಿ ಊರಿನ ಪ್ರತಿ ಮನೆಯ ಮುಂದೆ ಗ್ರಾಮಸ್ಥರು ಓಕುಳಿಯಾಟ ಆಡುತ್ತಾರೆ. ಈ ಊರಿನಲ್ಲಿ 9 ಬುಡಕಟ್ಟು ಜನಾಂಗಗಳಿದ್ದು, ರಾಮನವಮಿ ಉತ್ಸವದ ಒಂದೊಂದು ದಿನ ಒಂದೊಂದು ಜನಾಂಗದ ಸದಸ್ಯರು ಪೂಜೆಯ ಉಸ್ತುವಾರಿ ವಹಿಸಿಕೊಳ್ಳುತ್ತಾರೆ. ಹಬ್ಬದ ದಿನ ಊರಿನಾಚೆ 2 ಕಿ.ಮೀ. ದೂರವಿರುವ ನದಿಯಿಂದ ನಾಲ್ವರು ಬಾಲಕರು ಮಡಿ ನೀರು ತರುತ್ತಾರೆ. ಇವರಿಗೆ ರಾಮ, ಸೀತೆ, ಲಕ್ಷ್ಮಣ ಹಾಗೂ ಹನುಮನ ವೇಷ ಹಾಕಲಾಗುತ್ತದೆ. ಈ ನೀರಿನಿಂದಲೇ ಊರಿನ ಶ್ರೀರಾಮನಿಗೆ ಅಭಿಷೇಕ ಮಾಡಲಾಗುತ್ತದೆ.

ರಾಮನವಮಿ ಪ್ರಯುಕ್ತ ನಾಡಿನ ವಿವಿಧೆಡೆ ಸಂಗೀತೋತ್ಸವಗಳು ಜರುಗುವುದು ಮತ್ತೊಂದು ವಿಶೇಷ. ಬೆಂಗಳೂರಿನ ಚಾಮರಾಜಪೇಟೆಯ ಕೋಟೆ ಪ್ರೌಢಶಾಲಾ ಆವರಣದಲ್ಲಿ ಪ್ರತಿವರ್ಷ ನಡೆಯುವ 'ರಾಮನವಮಿ ಸಂಗೀತೋತ್ಸವ' ಸಂಗೀತಾಸಕ್ತರ ಪಾಲಿಗೆ ರಸದೂಟವಿದ್ದಂತೆ. ಈ ಉತ್ಸವದಲ್ಲಿ ಪಾಲ್ಗೊಳ್ಳುವುದು ಖ್ಯಾತ ಕಲಾವಿದರಿಗೂ ಪ್ರತಿಷ್ಠೆಯ ಸಂಕೇತ. 

ಆದರ್ಶ ಪುರುಷೋತ್ತಮ ಎಂದೇ ಬಿಂಬಿತನಾಗಿರುವ ಶ್ರೀರಾಮ, ಏಕಪತ್ನಿ ವ್ರತಸ್ಥ. ಪಿತೃವಾಕ್ಯ ಪರಿಪಾಲಕ. ತಂದೆಯ ವಚನ ಪಾಲನೆಗಾಗಿ ಒಲಿದು ಬಂದಿದ್ದ ರಾಜ್ಯವನ್ನೇ ತೊರೆದು, ವನವಾಸಗೈದ ಆದರ್ಶ ವ್ಯಕ್ತಿ. ಪತ್ನಿಯ ಶೀಲದ ಬಗ್ಗೆ ಅಪನಿಂದೆ ಕೇಳಿ ಬಂದಾಗ ಕೈಹಿಡಿದ ಪತ್ನಿಯನ್ನು ತುಂಬು ಗರ್ಭಿಣಿಯಿದ್ದಾಗಲೇ ಕಾಡಿಗೆ ಕಳುಹಿಸಿದ ಮಾನವಂತ. ಪ್ರಜೆಗಳನ್ನು ತನ್ನ ಮಕ್ಕಳಂತೆ ಪರಿಪಾಲಿಸಿದ ರಾಜಧರ್ಮ ಪರಿಪಾಲಕ. ಮಾನವೀಯ, ಕೌಟುಂಬಿಕ ಮೌಲ್ಯಗಳು ನಶಿಸುತ್ತಿರುವ ಇಂದಿನ ದಿನಗಳಲ್ಲಿ ಆತನ ಆದರ್ಶ ಅನುಕರಣೀಯ. 

ಸುಖ, ಸಂಪತ್ತು, ನೆಮ್ಮದಿಗಳಿಂದ ಕೂಡಿದ್ದ ರಾಮರಾಜ್ಯ ಧರ್ಮದ ಬೀಡಾಗಿತ್ತು ಎನ್ನುತ್ತದೆ ವಾಲ್ಮೀಕಿ ವಿರಚಿತ ರಾಮಾಯಣ ಗ್ರಂಥ. ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ಮಹಾತ್ಮಾ ಗಾಂಧೀಜಿ ಕೂಡ ರಾಮರಾಜ್ಯದ ಕನಸು ಕಂಡಿದ್ದರು. ಶಾಂತಿ, ಸೌಹಾರ್ದತೆಯ ಬೀಜ ಬಿತ್ತಿದ್ದರು. ಗಾಂಧೀಜಿಯ ರಾಮರಾಜ್ಯದ ಕನಸು ನನಸಾಗಲಿ, ನಾಡು ಸುಭೀಕ್ಷವಾಗಲಿ ಎಂದು ಆಶಿಸೋಣ.

ಯುಗಾದಿ ಹೊಸ ವರುಷ ಹೊಸ ಹರುಷ

ಭಾರತೀಯ ಸನಾತನ ಪರಂಪರೆಯಲ್ಲಿ ಧಾರ್ಮಿಕ ಆಚರಣೆಗಳಿಗೆ ಅನಾದಿಕಾಲದಿಂದಲೂ ಪ್ರಾಮುಖ್ಯತೆ ಹೊಂದಿದೆ. ಸಂತಸ, ನೆಮ್ಮದಿಯ ಜೊತೆಗೆ ಸಡಗರ ತರುವ ಹಬ್ಬಗಳ ಆಚರಣೆ, ನಮ್ಮ ಬದುಕಿನ ಜೊತೆ ಅವಿನಾಭಾವ ಸಂಭಂದ ಹೊಂದಿದೆ. ಇಂತಹ ಹಬ್ಬಗಳಲ್ಲಿ ಹಿಂದೂ ಸಂಪ್ರದಾಯದ ಮೊದಲ ಹಬ್ಬ ಹೊಸ ಸಂವತ್ಸರದ ಹಬ್ಬವೇ ಯುಗಾದಿ.

ಯುಗವೆಂದರೆ ಸೃಷ್ಟಿಯ ಕಾಲಮಾನ ಅಥವಾ ಹೊಸವರ್ಷ ಆದಿ ಎಂದರೆ ವರ್ಷದ ಪ್ರಾರಂಭ ದಿನ. ಅಂದರೆ ಹೊಸ ವರ್ಷದ ಪ್ರಾರಂಭ ದಿನವೇ ಯುಗಾದಿ. ನಮ್ಮಲ್ಲಿ ಯುಗಾದಿ ಹಬ್ಬವನ್ನು ಎರಡು ರೀತಿಯಿಂದ ಆಚರಿಸುವ ಪದ್ಧತಿಯಿದೆ. ಚಾಂದ್ರಮಾನ ಯುಗಾದಿ ಮತ್ತು ಸೌರಮಾನ ಯುಗಾದಿ. ಚಂದ್ರನ ಚಲನೆಯನ್ನು ಆಧರಿಸಿ, ಅಮಾವಾಸ್ಯೆ ಹುಣ್ಣಿಮೆಗಳ ಆಧಾರದ ಮೇಲೆ ಮಾಸ ಗಣನೆ ಮಾಡುವ ಪದ್ಧತಿಗೆ ಚಾಂದ್ರಮಾನ ಎಂದು ಹೆಸರು ಬಂದಿದೆ. ಚಂದ್ರನ ಚಲನೆಯಲ್ಲಿ ವ್ಯತ್ಯಾಸವಾಗುವುದರಿಂದ ಚಾಂದ್ರಮಾನ ಯುಗಾದಿ ನಿಗದಿತ ಸಮಯದಲ್ಲಿ ಬರುವುದಿಲ್ಲ. ಮೇಷರಾಶಿಗೆ ಸೂರ್ಯನು ಪ್ರವೇಶಿಸುವ ದಿವಸ ಸೌರಮಾನ ಯುಗಾದಿಯನ್ನು ಆಚರಿಸಲಾಗುತ್ತಿದೆ. ಭೂಮಿಯ ಚಲನೆಯಲ್ಲಿ ಹೆಚ್ಚಿನ ವ್ಯತ್ಯಾಸ ಬರುವುದಿಲ್ಲವಾದ್ದರಿಂದ ಸಾಮಾನ್ಯವಾಗಿ ನಿಗದಿತ ಸಮಯದಲ್ಲಿ ಅಂದರೆ ಏಪ್ರಿಲ್-14ರಂದು ಸೌರಮಾನ ಯುಗಾದಿ ಬರುತ್ತದೆ.

ಯುಗಾದಿಯೆಂದರೆ ಹೊಸವರ್ಷದ ಆರಂಭದ ದಿನವಾದರೂ ಭಾರತದಲ್ಲಿ ಈ ದಿನವನ್ನು ನಿರ್ಧರಿಸುವ ರೀತಿ ಹಲವಾರಿವೆ. ಮುಖ್ಯವಾಗಿ ಚಂದ್ರಮಾನ ಹಾಗೂ ಸೌರಮಾನ ಎಂಬ ಎರಡು ಪ್ರಭೇದಗಳಿದ್ದು, ಹಿಂದೂ ಧರ್ಮದ ವೇದಾಂಗ ಜ್ಯೋತಿಷ್ಯ ಶಾಸ್ತ್ರದಿಂದ ನಿರ್ಣಯಗೊಳ್ಳುತ್ತವೆ. ಚಂದ್ರನ ಚಲನೆಯನ್ನಾಧರಿಸಿ, ದಿನಗಣನೆ ಮಾಡುವುದನ್ನು ಚಂದ್ರಮಾನ ಹಾಗೂ ಸೂರ್ಯನ ಚಲನೆಯಿಂದ ಎಣಿಕೆ ಮಾಡುವುದನ್ನು ಸೌರಮಾನ ಎನ್ನುತ್ತಾರೆ. 

ಕರ್ನಾಟಕದಲ್ಲಿ ಚಾಂದ್ರಮಾನ ಪದ್ಧತಿ ಮೊದಲಿನಿಂದ ರೂಢಿಯಲ್ಲಿದೆ. ವೇದಾಂಗ ಜ್ಯೋತಿಷದಂತೆ, ಮೊದಲ ನಕ್ಷತ್ರ ಅಶ್ವಿನಿ - ಅಂದರೆ ಮೇಷ ರಾಶಿಯ 00-ಭಾಗ (ಡಿಗ್ರಿ)ಯಲ್ಲಿ ಸೂರ್ಯ ಬಂದಾಗ ಭೂಮಿಯ ಉತ್ತರಾರ್ಧಗೋಳದಲ್ಲಿ ಸಸ್ಯಗಳಲ್ಲಿ ಚಿಗುರು ಕಾಣುತ್ತದೆ; ಅಂದರೆ ಹೊಸಹುಟ್ಟು. ಆದ್ದರಿಂದ ಅಶ್ವಿನಿ ನಕ್ಷತ್ರಕ್ಕೆ ರವಿಯು ಪ್ರವೇಶಿಸುವ ಕಾಲವನ್ನು ಹೊಸವರ್ಷ ಎಂದು ಪರಿಗಣಿಸುತ್ತಾರೆ. ಇದೇ ಸೌರಮಾನ ಯುಗಾದಿ. ಸಾಮಾನ್ಯವಾಗಿ ಈಗ ಇದು ಏಪ್ರಿಲ್ 14 ಅಥವಾ 15ನೇ ತಾರೀಖಿಗೆ ಬರುತ್ತಿರುತ್ತದೆ. ಆದರೆ ಚಂದ್ರನ ಚಲನೆ ಅತಿವೇಗವಾದ್ದರಿಂದ ಪ್ರತಿ ಪ್ರದಕ್ಷಿಣೆಗೂ ಒಂದೊಂದು ತಿಂಗಳಾಗಿ, ಹನ್ನೆರಡು ಪ್ರದಕ್ಷಿಣೆಗಳಿಗೆ ಸರಿಯಾಗಿ ಒಂದು ಚಂದ್ರಮಾನ ಸಂವತ್ಸರವಾಗುತ್ತದೆ.

ಈ ಸೃಷ್ಟಿಯು ಜನಿಸಿ ಇಂದಿಗೆ 1,95,58,85113 ವರ್ಷಗಳು ಮುಗಿದಿದೆ. ಚತುರ್ದಶ ಮನುಗಳಲ್ಲಿ ಸ್ವಯಂಭುವ, ಸ್ವಾರೋಚಿಷ, ಉತ್ತಮ, ತಾಮಸ, ರೈವತ, ಚಾಕ್ಷುಷ ಎಂಬ ಆರು ಮನ್ವಂತರಗಳು ಕಳೆದಿದ್ದು, ಏಳನೇ ವೈವಸ್ವತ ಮನ್ವಂತರಗಳಲ್ಲಿ, ಇಪ್ಪತ್ತೇಳು ಮಹಾ ಯುಗಗಳು ಕಳೆದು, ಇಪ್ಪತ್ತೆಂಟನೇ ಮಹಾಯುಗಗಳಲ್ಲಿ ಕೃತಯುಗ, ತ್ರೇತಾಯುಗ, ದ್ವಾಪರಾಯುಗ ಕಳೆದು ಕಲಿಯುಗ ಪ್ರಾರಂಭವಾಗಿದೆ. ಈ ಕಲಿಯುಗ 4,32,000 ವರ್ಷಗಳಲ್ಲಿ 5113 ವರ್ಷಗಳು ಕಳೆದು, 5114 ನೆಯ ವರ್ಷ ಆರಂಭವಾಗುತ್ತದೆ. ಶಾಲಿವಾಹನಶಕ 1934 ಕಳೆದು 1935 ಪ್ರಾರಂಭವಾಗುತ್ತದೆ. 60 ಸಂವತ್ಸರಗಳಲ್ಲಿ 26ನೇಯ ನಂದನ ಸಂವತ್ಸರದ ಪ್ರಾರಂಭ.

ಈ ಯುಗಾದಿಯಂದು ಶಾಲಿವಾಹನ ಶಕೆ 1934 ಮುಗಿಯುತ್ತದೆ. ಈ ಶಾಲಿವಾಹನ ಶಕೆ 1934 ಕ್ಕೆ 12 ಸಂಖ್ಯೆ ಕೂಡಿಸಿ, 60 ಸಂಖ್ಯೆಯಿಂದ ಭಾಗಿಸಿದಾಗ ಉಳಿಯುವ ಶೇಷವೇ 26. ಪ್ರಭವ ಸಂವತ್ಸರದಿಂಧ 26 ನೇ ಸಂವತ್ಸರವೇ ನಂದನ ಸಂವತ್ಸರ. ಇದೇ ರೀತಿ ಪ್ರತಿ ವರ್ಷದ ಸಂವತ್ಸರವನ್ನು ಕಂಡು ಹಿಡಿಯಬಹುದು. ಕ್ರೈಸ್ತ ವರ್ಷಕ್ಕೂ ಶಾಲಿವಾಹನ ಶಕೆ ವರ್ಷಕ್ಕೂ 78 ವರ್ಷಗಳ ವ್ಯತ್ಯಾಸವಿದೆ. ಶಾಲಿವಾಹನ ಶಕೆ ವರ್ಷಕ್ಕೆ 78 ವರ್ಷ ಕೂಡಿದರೆ ಕ್ರೈಸ್ತವರ್ಷ ಬರುತ್ತದೆ. (1934 + 78 = 2012)

ವರ್ಷದ ಮೂರೂವರೆ ಶುಭ ಮುಹೂರ್ತಗಳು, ಯುಗಾದಿ, ಅಕ್ಷಯ ತೃತೀಯ, ವಿಜಯದಶಮಿ ಮತ್ತು ಬಲಿಪಾಡ್ಯಮಿಯ ಅರ್ಧದಿವಸ, ಈ ಮೂರೂವರೆ ಶುಭ ಮುಹೂರ್ತಗಳಲ್ಲಿ ನಮಗೆ ಯುಗಾದಿಯೇ ವರ್ಷದ ಪ್ರಾರಂಭ ಅತ್ಯಂತ ಶುಭ ದಿವಸವಾಗಿದೆ. ಈ ದಿವಸ ಉತ್ಸವಗಳು ವರ್ಷದುದ್ದಕ್ಕೂ ಬಾಳಿನ ಬೆಂಬಲ, ಮುಂಬಲವಾಗಿ ಬರುತ್ತಿವೆ ಎಂದು ನಂಬಿಕೆ. ಕೆಲವರು ಈ ಶುಭ ಮುಹೂರ್ತದಲ್ಲಿ ಹೊಸ ಹೊಸ ಜೀವನೋಪಾಯಗಳನ್ನೂ ಹೊಸ ಹೊಸ ಉದ್ಯಮಗಳನ್ನು ಪ್ರಾರಂಭಿಸುವರು. ಏಕೆಂದರೆ ಯುಗ ಯುಗಗಳಿಂದಲೂ ಅತ್ಯಂತ ಮಹತ್ವದ ಕಾರ್ಯಗಳು ಈ ಶುಭ ದಿವಸವೇ ನಡೆದುವೆಂದು ಶಾಸ್ತ್ರ ಪುರಾಣಗಳು ಹೇಳಿವೆ.

ಯುಗಾದಿಯು ಹಲವು ಪರಂಪರೆಗಳ ಪ್ರಾರಂಭ ದಿನ. ಬ್ರಹ್ಮನು ಈ ಜಗತ್ತನ್ನು ಚೈತ್ರ ಶುಕ್ಲ ಪ್ರತಿಪದೆಯಂದು, ಸೂರ್ಯೋದಯ ಕಾಲಕ್ಕೆ ಸೃಷ್ಟಿಸಿದನು. ಅಂದೇ ಗ್ರಹ, ನಕ್ಷತ್ರ, ಮಾಸ, ಋತು, ವರ್ಷಾಧಿಪತಿಯನ್ನು ಸೃಷ್ಟಿಸಿ, ಕಾಲಗಣನೆ ಆರಂಭಿಸಿದನೆಂದು ಪುರಾಣದಲ್ಲಿದೆ. ಶ್ರೀ ರಾಮನು, ರಾವಣನನ್ನು ಸಂಹರಿಸಿ, ಅಯೋಧ್ಯೆಗೆ ಬಂದು ರಾಮರಾಜ್ಯವಾಳಲು ಪ್ರಾರಂಭಿಸಿದ್ದು, ಈ ಯುಗಾದಿ ದಿವಸವೇ. ವಿಷ್ಣು ಮತ್ಸ್ಯಾವತಾರವನ್ನು ತಳೆದದ್ದೆಂದೂ, ಶಾಲಿವಾಹನ, ವಿಕ್ರಮಾದಿತ್ಯನನ್ನು ಜಯಸಿದ್ದರಿಂದ ಶಾಲಿವಾಹನ ಶಕೆ ಪ್ರಾರಂಭವಾಗಿದ್ದು, ಯುಗಾದಿ ದಿವಸವೆ. ವೇದವ್ಯಾಸರು ಕಲಿಯುಗ ಪ್ರಾರಂಭವಾಗಿದ್ದು ಯುಗಾದಿಯಂದೆ ಎಂದು ತಮ್ಮ ಗ್ರಂಥದಲ್ಲಿ ವಿವರಿಸಿದ್ದಾರೆ. ಯುಗಾದಿ ದಿನದಿಂದ ಹೊಸವರ್ಷ ಪ್ರಾರಂಭವಾಗುವುದರಿಂದ ಹಿಂದೂ ಪಂಚಾಂಗ ಮತ್ತು ಕ್ಯಾಲೆಂಡರ್ ಸಹಾ ಇಂದಿನಿಂದಲೇ ಪ್ರಾರಂಭವಾಗುತ್ತದೆ.

ಯುಗಾದಿ ದಿವಸ ಬೆಳಗಿನ ಜಾವ, ಬೇಗ ಎದ್ದು, ಮಂಗಳ ಸ್ನಾನ ಮಾಡಿ (ತೈಲಾಭ್ಯಂಗ) ಹೊಸ ಬಟ್ಟೆ ಧರಿಸಿಕೊಂಡು ಮನೆಯನ್ನೆಲ್ಲಾ ಮಾವು-ಬೇವು ಎಲೆಗಳಿಂದ ಶೃಂಗರಿಸಿ, ಹೊಸ ವರ್ಷವನ್ನು ಬರಮಾಡಿಕೊಂಡು, ವಿಶೇಷವಾಗಿ ವರ್ಷವೆಲ್ಲಾ ಹರ್ಷದಾಯಕವಾಗಲಿ, ಸಿಹಿಯೊಂದಿಗೆ ಕಹಿಯನ್ನು ಬರಮಾಡಿಕೊಂಡು, ಇದನ್ನು ಸಹಿಸುವ ಶಕ್ತಿ ಬರಲಿ ಎಂದು ಬೇವು-ಬೆಲ್ಲ ಸವಿಯಲಾಗುತ್ತದೆ. ಬೇವು-ಬೆಲ್ಲ ನಮ್ಮ ಜೀವನದುದ್ದಕ್ಕೂ ಕಾಣುವ ಸುಖ-ದುಃಖ, ಹಗಲು-ರಾತ್ರಿ, ನೋವು-ನಲಿವು, ಪ್ರೀತಿ-ದ್ವೇಷ, ಲಾಭ-ನಷ್ಟ ಇವುಗಳನ್ನು ಸಮಾನ ಮನೋಭಾವದಿಂದ ಸ್ವೀಕರಿಸಿ ವರ್ಷವೀಡೀ ಸಮರಸವಾಗಿರಲಿ ಎಂಬುದೇ ಇದರ ಐತಿಹ್ಯ. ಬೇವು-ಬೆಲ್ಲವನ್ನು ಸೇವಿಸುವಾಗ ಹೇಳುವ ಶ್ಲೋಕ ಹೀಗಿದೆ. 

ಶಿಶತಾಯುಃ ವಜ್ರದೇಹಾಯ ಸರ್ವ ಸಂಪತ್ಕರಾಯಚ |
ಸರ್ವಾರಿಷ್ಟ ವಿನಾಶಯ ನಿಂಬಕಂದಳ ಭಕ್ಷಣಂ||

ಅಂದರೆ ನೂರು ವರ್ಷಗಳ ಆಯುಷ್ಯ ಸದೃಢ ಆರೋಗ್ಯ ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು-ಬೆಲ್ಲ ಸೇವನೆ ಮಾಡುತ್ತೇನೆ.

ಯುಗಾದಿಯಂದು ಜ್ಯೋತಿಷಿಗಳಿಂದ ಹೊಸವರ್ಷದ ಫಲಗಳನ್ನು ಕೇಳುವುದು ರೂಢಿಯಲ್ಲಿದೆ. ವರ್ಷದ ಫಲ ತಿಳಿದುಕೊಳ್ಳಬೇಕೆಂದು ಧರ್ಮಸಿಂಧವಿನಲ್ಲಿ ಪ್ರತಿಗೃಹಂ, ಧ್ವಜಾರೋಹಣಂ, ನಿಂಬಪತ್ರಾಶನಂ, ವತ್ಸರಾಧಿಫಲ ಶ್ರವಣಂ, ನವರಾತ್ರಾರಂಭಃ ತೈಲ ಅಭ್ಯುಂಗಾದಿಶ್ಚ ಶುದ್ಧಮಾಸ ಪ್ರತಿಪದೆ ಕಾರ್ಯಃ ಅಂದರೆ ಮನೆಯನ್ನೆಲ್ಲಾ ಮಾವು, ಬೇವು, ತಳಿರು-ತೋರಣಗಳಿಂದ ಅಲಂಕರಿಸಿ, ಧ್ವಜಾರೋಹಣ ಬೇವು-ಬೆಲ್ಲ ಸೇವಿಸುವುದು, ಪಂಚಾಂಗ ಶ್ರವಣದಲ್ಲಿ, ಯುಗಾದಿ ದಿವಸ ಸಂವತ್ಸರದ ಫಲವನ್ನು ಶ್ರವಣ ಮಾಡಬೇಕು. 

ಸೂರ್ಯನಿಂದ ಆರೋಗ್ಯವನ್ನು ಚಂದ್ರನಿಂದ ಕೀರ್ತಿಯನ್ನು ಮಂಗಳನಿಂದ ಐಶ್ವರ್ಯ, ಬುಧನಿಂದ ಬುದ್ದಿ, ಗುರುವಿನಿಂದ ಗೌರವ, ಶುಕ್ರನಿಂದ ಶುಭವಾಣಿ, ಶನಿಯಿಂದ ಸಂತೋಷ, ರಾಹುವಿನಿಂದ ಶಕ್ತಿ, ಕೇತುವಿನಿಂದ ಕುಲೋನ್ನತಿ ಉಂಟಾಗುತ್ತದೆ. ವಾರದ ಶ್ರವಣದಿಂದ ದೀರ್ಘಾಯುಷ್ಯ ಉಂಟಾಗುತ್ತದೆ. ನಕ್ಷತ್ರ ಶ್ರವಣದಿಂದ ಎಲ್ಲಾ ದೋಷಗಳು ನಿವಾರಣೆಯಾಗುತ್ತದೆ. ಯೋಗ ಶ್ರವಣದಿಂದ ವಿಯೋಗನಾಶವಾಗುತ್ತದೆ. ಕರಣ ಶ್ರವಣದಿಂದ ಎಲ್ಲಾ ಇಷ್ಟಗಳು ಫಲಿಸುತ್ತವೆ. ಇಷ್ಟದೇವತಾ ಪೂಜೆಯ ಜೊತೆಗೆ ಸೃಷ್ಟಿಕರ್ತನಾದ ಬ್ರಹ್ಮದೇವನ, ಕಾಲ ಪುರುಷನ ಹಾಗೂ ವರ್ಷಾಧಿಪತಿಯ ಆರಾಧನೆ. ಚಂದ್ರದರ್ಶನ ಇವು ಯುಗಾದಿಯ ವೈಶಿಷ್ಟ್ಯ.

ಮಹಾ ಶಿವರಾತ್ರಿ, ರುದ್ರನ ಮಂಗಳಕರ ರಾತ್ರಿ

ಮಾಘ ಮಾಸ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುವ ಶಿವರಾತ್ರಿ, ಶಿವ ಭಕ್ತರ ಪಾಲಿಗೆ ಮಂಗಳಕರ ರಾತ್ರಿ. ಹಗಲು ಉಪವಾಸವಿದ್ದು, ರಾತ್ರಿ ವೇಳೆ ಜಾಗರಣೆ ಮಾಡಿ, ಶಿವಧ್ಯಾನ ಮಾಡಿ ಶಿವನ ಕೃಪೆಗೆ ಪಾತ್ರವಾಗುವ ಶುಭ ದಿನ. ಈ ದಿನ ಶಿವನನ್ನು ಭಕ್ತಿಯಿಂದ ಪೂಜಿಸಿದರೆ, ತಾವು ಮಾಡಿದ ಪಾಪಗಳೆಲ್ಲವೂ ಪರಿಹಾರವಾಗಿ, ಮೋಕ್ಷ ಪ್ರಾಪ್ತವಾಗುತ್ತದೆ ಎಂಬುದು ಭಕ್ತರ ಬಲವಾದ ನಂಬಿಕೆ. ಮದುವೆಯಾಗದ ಹೆಣ್ಣುಮಕ್ಕಳು ಶಿವಗುಣರೂಪಿಯಾದ ಅನುರೂಪ ಪತಿಗಾಗಿ ಪ್ರಾರ್ಥಿಸಿದರೆ, ಮುತ್ತೈದೆಯರು ಪತಿಯ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸುವುದು ಸಂಪ್ರದಾಯ. ಶಿವರಾತ್ರಿಯಂದು ಶಿವನನ್ನು ಪೂಜಿಸಿದರೆ, ಸುಖ, ಶಾಂತಿ, ಸಮೃದ್ಧಿ ದೊರೆಯುವುದೆಂಬ ನಂಬಿಕೆ ಆಸ್ತಿಕರದು.

ಶಿವರಾತ್ರಿಯ ಮಹಿಮೆ:
ಕೈಲಾಸವಾಸಿ ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನ. ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುವುದಾಗಿ ಸ್ವತ: ಶಿವನೇ ಪಾರ್ವತಿಯಲ್ಲಿ ಅರುಹಿದ್ದಾನೆ ಎನ್ನುತ್ತದೆ ಶಿವಪುರಾಣ. ಶಿವ-ಪಾರ್ವತಿಯರ ವಿವಾಹ ಮಹೋತ್ಸವದ ದಿನವಿದು ಎಂಬುದು ವಿಶೇಷ. ಹಿಮವಂತನ ಮಗಳು ಪಾರ್ವತಿ ಈ ದಿನದಂದು ರಾತ್ರಿಯಿಡಿ ಶಿವನಾಮ ಪಠಿಸುತ್ತಾ, ತಪಸ್ಸು ಮಾಡಿ, ಶಿವನನ್ನು ಮೆಚ್ಚಿಸಿ, ವಿವಾಹವಾದಳೆಂಬುದು ಪ್ರತೀತಿ. ಶಿವ ರುದ್ರತಾಂಡವನಾಡಿದ ರಾತ್ರಿಯೂ ಇಂದೇ ಎನ್ನಲಾಗುತ್ತದೆ. ದೇವತೆಗಳು ಹಾಗೂ ಅಸುರರ ನಡುವೆ ಸಮುದ್ರ ಮಂಥನ ನಡೆದು ವಿಷ ಉದ್ಭವವಾದಾಗ, ಅದನ್ನು ಶಿವ ಕುಡಿದ. ವಿಷ ಗಂಟಲೊಳಗಿಂದ ಇಳಿಯದಂತೆ ಪಾರ್ವತಿ ಇಡೀ ರಾತ್ರಿ ತಡೆದಳು ಎನ್ನುತ್ತದೆ ಶಿವಪುರಾಣದ ಇನ್ನೊಂದು ಮಹಿಮೆ. ಹಾಗಾಗಿ, ಭಕ್ತರು ಇಡೀ ರಾತ್ರಿ ಎಚ್ಚರವಿದ್ದು, ನೀಲಕಂಠನನ್ನು ಸ್ತುತಿಸುತ್ತಾರೆ. ಭಗೀರಥನ ತಪಸ್ಸಿಗೆ ಮೆಚ್ಚಿ ಇಳೆಗೆ ಇಳಿದು ಬಂದ ಗಂಗೆಯನ್ನು ಶಿವ ತನ್ನ ಜಡೆಯಲ್ಲಿ ತುಂಬಿಸಿಕೊಂಡಿದ್ದ. ಇದರಿಂದ ವಿಚಲಿತನಾದ ಭಗೀರಥ ಗಂಗೆಯನ್ನು ಭೂಮಿಗೆ ಹರಿಸುವಂತೆ ಶಿವನನ್ನು ಪ್ರಾರ್ಥಿಸಿದ. ಆತನ ಭಕ್ತಿಗೆ ಮೆಚ್ಚಿ ಶಿವ ಗಂಗೆಯನ್ನು ಹರಿಯಬಿಟ್ಟಿದ್ದು ಇದೇ ದಿನ ಎನ್ನುತ್ತದೆ ಪುರಾಣ. ಲಿಂಗಪುರಾಣದ ಪ್ರಕಾರ, ಲಿಂಗ ರೂಪಿಯಾಗಿ ಭಕ್ತರಿಗೆ ಅನುಗ್ರಹ ನೀಡಿದ ದಿನವಿದು. ಶಿವನ ಆದಿ ಮತ್ತು ಅಂತ್ಯ ಹುಡುಕಲು ಹೊರಟ ವಿಷ್ಣು ಹಾಗೂ ಬ್ರಹ್ಮನಿಗೆ, ಶಿವರಾತ್ರಿಯಂದು ಶಿವ ಲಿಂಗರೂಪಿಯಾಗಿ ದರ್ಶನ ನೀಡಿದ ಎಂಬುದು ಪ್ರತೀತಿ.

ಬೇಡನ ಶಿವಭಕ್ತಿ: 
ಶಿವರಾತ್ರಿ ಆಚರಣೆಯ ಕುರಿತಾಗಿ ಪ್ರಚಲಿತದಲ್ಲಿರುವ ಕಥೆಯಿದು. ಹಿಂದೆ ಬೇಡನೊಬ್ಬ ಕಾಡಿನಲ್ಲಿ ಬೇಟೆಗಾಗಿ ತೆರಳಿದ್ದ. ದಿನವಿಡಿ ಅಲೆದರೂ ಆತನಿಗೆ ಯಾವುದೇ ಬೇಟೆ ಸಿಗಲಿಲ್ಲ. ಬೇಟೆ ಅರಸಿ ಹೊರಟ ಬೇಡ ದಾರಿ ತಪ್ಪಿ ಅರಣ್ಯದಲ್ಲೇ ಅಲೆಯತೊಡಗಿದ. ಅದಾಗಲೇ ಸಂಜೆಯಾಗಿತ್ತು. ಕ್ರೂರ ಪ್ರಾಣಿಗಳು ಆತನನ್ನು ಸುತ್ತುವರಿಯತೊಡಗಿದವು. ಭಯಗ್ರಸ್ತನಾದ ಬೇಡ ಮರವೇರಿದ. ಮನದಲ್ಲೇ ಶಿವನನ್ನು ಧ್ಯಾನಿಸುತ್ತಾ ಮರದ ಎಲೆಗಳನ್ನು ಕಿತ್ತು ಕೆಳಗಡೆ ಹಾಕತೊಡಗಿದ. ಆ ಎಲೆಗಳು ಅವನಿಗರಿವಿಲ್ಲದಂತೆಯೇ ಕೆಳಗಡೆಯಿದ್ದ ಶಿವಲಿಂಗದ ಮೇಲೆ ಬೀಳತೊಡಗಿದವು. ಕಾಕತಾಳೀಯವೆಂದರೆ ಆತ ಏರಿದ್ದ ಮರ ಬಿಲ್ವಮರವಾಗಿತ್ತು. ಶಿವರಾತ್ರಿಯಂದು ಪೂರ್ತಿ ಜಾಗರಣೆಯಿದ್ದು, ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸಿದ ಬೇಡನಿಗೆ ಶಿವ ಅಭಯ ನೀಡಿದ. ಶಿವನೇ ಆತನನ್ನು ರಕ್ಷಿಸಿದ ಎಂಬ ಸುದ್ದಿ ಹರಡಿ ಭಕ್ತರು ಶಿವರಾತ್ರಿಯಂದು ಶಿವನನ್ನು ಪೂಜಿಸಲು ಆರಂಭಿಸಿದರು. ಪುಣ್ಯದ ಲವಾಗಿ ಬೇಡ ಮುಂದಿನ ಜನ್ಮದಲ್ಲಿ ರಾಜಾ ಚಿತ್ರಭಾನುವಾಗಿ ಜನಿಸಿದ ಎಂಬುದು ಕಥೆ. ಮಹಾಭಾರತದಲ್ಲಿ ಬರುವ ಈ ಕಥೆಯನ್ನು ಮರಣಶಯ್ಯೆಯಲ್ಲಿ ಮಲಗಿದ್ದ ಭೀಷ್ಮ ಹೇಳಿದನೆಂಬುದು ಪ್ರತೀತಿ.

ಶಿವರಾತ್ರಿ ಆಚರಣೆ ಹಿನ್ನೆಲೆ:
೧. ಪ್ರತಿ ಸಂವತ್ಸರದಲ್ಲಿ.. ಶಿಶಿರ ಋತುವಿನ ಮಾಘ ಮಾಸದ ಕೃಷ್ಣಪಕ್ಷ ಚತುರ್ದಶಿಯಂದು... ರಾತ್ರಿ ಸಮಯದಲ್ಲಿ ಶಿವ ಪಾರ್ವತಿ ಜೊತೆಯಲ್ಲಿ ಭೂಮಿಗೆ ಬರುತ್ತಾನೆ.. ಭೂಮಿಯಲ್ಲಿ ಸಂಚರಿಸುತ್ತ ಎಲ್ಲ ಸ್ಥಾವರ ಜಂಗಮ ಲಿಂಗಗಳಲ್ಲಿ ಸಂಕ್ರಮಣ ಗೊಳ್ಳುತ್ತಾನೆ.. ಆ ಸಮಯದಲ್ಲಿ ಅಂದ್ರೆ ಶಿವರಾತ್ರಿ ರಾತ್ರಿ ವೇಳೆಯಲ್ಲಿ ತನ್ನನ್ನು ಯಾರು ಪೂಜಿಸುವರೋ ಅವರ ಪಾಪಗಳು ಪರಿಹಾರವಾಗುತ್ತವೆ ಎಂದು ಸ್ವತಃ ಶಿವನೇ ತಿಳಿಸಿದ್ದಾನೆ ಎಂಬುದರ ಬಗ್ಗೆ ಶಾಸ್ತ್ರೋಕ್ತಿ ಯೂ ಇದೆ.

೨. ಸ್ಕಂದ ಪುರಾಣ ದಲ್ಲಿ ಶಿವರಾತ್ರಿ ಹಬ್ಬದ ಬಗ್ಗೆ ಉಲ್ಲೇಖವಿದೆ.. ಶಿವರಾತ್ರಿಯು ಸಮಯ ಪೂಜೆಗೆ ಬಹು ಪ್ರಾಶಸ್ತ್ಯವಾದ ಸಮಯ... ಆ ದಿನ ರಾತ್ರಿಯಲ್ಲಿ ಮೋಡಗಳಿಲ್ಲದ ಶುಭ್ರ ಆಕಾಶ, ಮಂಗಳಕರ ನಾದ ಶುಭ್ರ ಚಂದ್ರ ಸ್ಪೂರ್ತಿ ಹುಟ್ಟಿಸುವ ಸಂವೇದನಾಶೀಲ ವಾತಾವರಣವನ್ನು ಕಾಣಬಹುದು.. ಈ ಪರ್ವಕಾಲವು ಪೂಜೆಗೆ ಪ್ರಶಸ್ತವಾದ ಕಾಲವಾಗಿದ್ದು ಶಿವನ ಆರಾಧನೆ ಮಾಡಿದರೆ ಪಾಪ ಕರ್ಮಗಳನ್ನು ಕಳೆಯುತ್ತಾನೆ ಎಂಬ ಪ್ರತೀತಿ ಇದೆ.

೩. ತ್ರಯೋದಶಿಯು ಶಕ್ತಿರೂಪವಾದರೆ,, ಚತುರ್ದಶಿಯು ಶಿವರೂಪ. ತ್ರಯೋದಶಿಯು ಚತುರ್ದಶಿಯಲ್ಲಿ ಅಂತರ್ಗತ ವಾಗಿದ್ದರೆ ಅದು ಶಿವಶಕ್ತಿಯೋಗ ವಾಗುತ್ತದೆ. ಅದೆ ಶಿವರಾತ್ರಿಯ ಸಮಯವೆಂದು ಉಕ್ತಿಯೊಂದರಲ್ಲಿ ಉಲ್ಲೇಖವಿದೆ. ಈ ಶುಭ ಪುಣ್ಯದಿನದಂದು ಬ್ರಹ್ಮ ವಿಷ್ಣು ಆದಿಯಾಗಿ ಶಿವನನ್ನು ಪೂಜಿಸಿದ್ದು ಶಿವನೆ ತನಗೆ ಶಿವರಾತ್ರಿ ಪ್ರಿಯವಾದ ದಿನವೆಂದು ಹೇಳಿರುವನೆಂದು ಪ್ರತೀತಿ ಇದೆ. 

೪. 'ಶಿವ ಪುರಾಣ ' ದಲ್ಲಿ ಬರುವ ಬೇಡರ ಕಣ್ಣಪ್ಪನ ಕಥೆ....., ' ಸ್ಕಂದ ಪುರಾಣ 'ದ ಬೇಡ ಚಂದನನ ಕಥೆ..., ' ಗರುಡ ಮತ್ತು ಅಗ್ನಿ ಪುರಾಣ ' ಗಳ ಬೇಡ ಸುಂದರ ಸೇನನ ಕಥೆ... ಈ ಎಲ್ಲ ಕಥೆಗಳಲ್ಲೂ ಒಂದು ವಿಶೆಷವಾದ ಸಾಮ್ಯತೆಯನ್ನು ಕಾಣಬಹುದು.. ಮಹಾ ಶಿವರಾತ್ರಿಯಂದು ಉಪವಾಸ ಮಾಡಿ ಶಿವನಿಗೆ ಅಭಿಷೇಕ ಮಾಡಿ ಬಿಲ್ವ ಪತ್ರೆಗಳನ್ನು ಅರ್ಪಿಸಿದ್ದರಿಂದ ಅವರೆಲ್ಲರಿಗೂ ಸದ್ಗತಿ ಪ್ರಾಪ್ತವಾಯಿತು. ಇದು ಶಿವರಾತ್ರಿ ಪೂಜೆಯ ಫಲದ ಮಹಿಮೆಯನ್ನು ಎತ್ತಿ ತೋರಿಸುತ್ತದೆ.

೫. ದೇವತೆಗಳು ಮತ್ತು ಅಸುರು ಅಮೃತಕ್ಕಾಗಿ ಸಮುದ್ರ ಮಂಥನ ಮಾಡ್ತಿರಬೇಕಾದ್ರೆ ಮೊದ್ಲು ಮಡಿಕೆ ತುಂಬ ಹಾಲಾಹಲ ಉತ್ಪತ್ತಿಯಾಯಿತು.. ಆದ್ರೆ ದೇವತೆಗಳು... ಅಸುರರು ಯಾರೂ ಆ ಹಾಲಾಹಲವನ್ನು ಕುಡಿಯೋಕೆ ಮುಂದಗಲಿಲ್ಲ.. ಆ ಹಾಲಾಹಲ ಇಡೀ ನಭೋಮಂಡಲವನ್ನೇ ನಾಶಮಾಡಬಲ್ಲ ಸಾಮರ್ಥ್ಯವನ್ನು ಹೊಂದಿತ್ತು.. ಹೀಗಾಗಿ ಲೋಕ ಕಲ್ಯಾಣಕ್ಕಾಗಿ ಪರಶಿವನೇ ಆ ಹಾಲಾಹಲವನ್ನು ಕುಡಿದುಬಿಟ್ಟ.. ಅದೇ ಸಮಯಕ್ಕೆ ಪತ್ನಿ ಪಾರ್ವತಿ ದೇವಿ ಬಂದು ಆ ವಿಷ ಶಿವನ ಹೊಟ್ಟೆ ಸೇರದಂತೆ ಗಂಟಲಲ್ಲೇ ತಡೆ ಹಿಡಿದಳು... ವ್ಯಕ್ತಿಗಳು ನಿದ್ರಿಸುತ್ತಿದ್ದರೆ ವಿಷವು ಬೇಗನೆ ದೇಹದ ತುಂಬ ಹರಡುತ್ತದೆ.. ಹೀಗಾಗಿ ದೇವತೆಗಳೆಲ್ಲರೂ ಶಿವನ ಭಜನೆ ಮಾಡಿ ಶಿವನನ್ನು ಎಚ್ಚರವಿರಿಸಿದರು.. ಹೀಗಾಗಿ ಈ ಪವಿತ್ರ ದಿನವನ್ನು ಶಿವರಾತ್ರಿ ಎಂದು ಆಚರಿಸಲಾಗುತ್ತದೆ.

ಮಹಾಶಿವರಾತ್ರಿಯ ಉಪವಾಸ ಮತ್ತು ಜಾಗರಣೆಯ ಮಹತ್ವ
೧. ಶಿವನನ್ನು ಪೂಜಿಸುವುದರಿಂದ ಕರುಣಾಮಯಿಯಾದ ಶಿವನು ಸರ್ವರನ್ನು ಅನುಗ್ರಹಿಸುತ್ತಾನೆ ಎಂಬ ಪ್ರತೀತಿ ಇದೆ.. ಬೇಡರ ಕಣ್ಣಪ್ಪನು ಶಿವನನ್ನು ಪೂಜಿಸಿದ್ದರಿಂದ ಅವನನ್ನು ನುಗ್ರಹಿಸಿ ಮುಕ್ತಿ ಮಾರ್ಗ ತೋರಿಸಿದನು.. ' ಸ್ಕಂದ ಪುರಾಣ 'ದ ಪ್ರಕಾರ ಬೇಡ ಚಂದನನಿಗೂ ಶಿವನು ಅನುಗ್ರ ನೀಡಿದ್ದಾನೆ... ' ಗರುಡ ಮತ್ತು ಅಗ್ನಿ ಪುರಾಣ ' ಗಳಲ್ಲಿ ಉಲ್ಲೇಖವಿರುವಂತೆ, ಬೇಡ ಸುಂದರ ಸೇನನಿಗೂ ಶಿವನು ಆಶೀರ್ವಾದಿಸಿದ್ದಾನೆ.. ಹೀಗಾಗಿ ಮಹಾ ಶಿವರಾತ್ರಿಯಂದು ಉಪವಾಸ ಮಾಡಿ ಶಿವನಿಗೆ ಅಭಿಷೇಕ ಮಾಡಿ, ಬಿಲ್ವ ಪತ್ರೆಗಳನ್ನು ಅರ್ಪಿಸುವುದರಿಂದ ಎಲ್ಲರಿಗೂ ಸದ್ಗತಿ ಪ್ರಾಪ್ತವಾಯಿತು. 

೨. ಪ್ರತಿ ವರ್ಷದ ಶಿವರಾತ್ರಿಯ ಸಮಯದಲ್ಲಿ ಶಿವನು, ಪಾರ್ವತಿಯ ಜೊತೆಯಲ್ಲಿ ಭೂಮಿಗೆ ಆಗಮಿಸುತ್ತಾನೆ.. ಭೂ-ಸಂಚಾರ ಮಾಡುತ್ತಾನೆ.. ಎಲ್ಲ ಸ್ಥಾವರ ಜಂಗಮ ಲಿಂಗಗಳಲ್ಲಿ ಸಂಕ್ರಮಣಗೊಳ್ಳುತ್ತಾನೆ.. ಹೀಗಾಗಿ ಶಿವರಾತ್ರಿಯ ಶಿವನನ್ನು ಯಾರು ಪೂಜಿಸುವರೋ ಅವರ ಪಾಪಗಳು ಪರಿಹಾರವಾಗುತ್ತವೆ ಎಂದು ಸ್ವತಃ ಶಿವನೇ ತಿಳಿಸಿದ್ದಾನೆ ಎಂಬುದರ ಬಗ್ಗೆ ಶಾಸ್ತ್ರೋಕ್ತಿ ಇದೆ.

೩. ಮದುವೆಯಾಗದ ಹೆಣ್ಣುಮಕ್ಕಳು ಶಿವಗುಣರೂಪಿಯಾದ ಅನುರೂಪ ಪತಿಗಾಗಿ ಪ್ರಾರ್ಥಿಸಿದರೆ, ಮುತ್ತೈದೆಯರು ಪತಿಯ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸುವುದು ಸಂಪ್ರದಾಯ. ಶಿವರಾತ್ರಿಯಂದು ಶಿವನನ್ನು ಪೂಜಿಸಿದರೆ, ಸುಖ, ಶಾಂತಿ, ಸಮೃದ್ಧಿ ದೊರೆಯುವುದೆಂಬ ನಂಬಿಕೆ ಆಸ್ತಿಕರದು.

೪. ಕರುಣಾಮಯಿಯಾದ ಶಿವನನ್ನು ಭಕ್ತಿ ಪೂರಕವಾಗಿ ಯಾರೇ ಪೂಜಿಸಿದರೂ ಅವರನ್ನು ಅನುಗ್ರಹಿಸುತ್ತಾನೆ.. ಹಿಂದು ಮುಂದು ನೋಡದೇ ಅವರಿಗೆ ಬೇಡಿದ ವರಗಳನ್ನು ನೀಡುತ್ತಾನೆ.. ಭಕ್ತಿಗೆ ಮರುಳಾಗುವ ಶಿವನು ಹೀಗೆ ತನ್ನ ಭಕ್ತರಿಗೆ ಬೇಡಿದ ವರವನ್ನು ನೀಡುವುದರ ಮೂಲಕ ಎಷ್ಟೋ ಸಲ ಸಂಕಟಕ್ಕೆ ಸಿಲುಕಿದ್ದೂ ಇದೆ.. ಆದರೆ ಎಂಥದ್ದೇ ಸಂಕಟವಿದ್ದರೂ ಶಿವನು ಭಕ್ತರನ್ನು ಸದಾ ಅನುಗ್ರಹಿಸುತ್ತಲೇ ಇರುತ್ತಾನೆ.. ಅದಕ್ಕೆ “ಶಿವ ಭಕ್ತನಿಗೆ ನರಕಾ ಇಲ್ಲ” ಅನ್ನೋ ಮಾತಿದೆ.

೫. ಶಿವರಾತ್ರಿಯ ಮತ್ತೊಂದು ವಿಶೆಷವೆಂದರೆ, ಶಿವನು ಪಾರ್ವತಿ ಹಿಮವಂತನ ಮಗಳಾದ ಗಿರಿಜೆಯನ್ನು ಅಂದರೆ ಪಾರ್ವತಿ ದೇವಿಯನ್ನು ವಿವಹವಾಗಿದ್ದು ಶಿವರಾತ್ರಿಯ ದಿನವೇ.. ಪಾರ್ವತಿ ದೇವಿಯು ಶಿವರಾತ್ರಿಯ ಸಮಯದಲ್ಲಿ ಶಿವನನ್ನು ಪ್ರಾರ್ಥಿಸಿ..ಶಿವನ ಜಪ ಮಾಡಿ ಶಿವನನ್ನು ವಲಿಸಿಕೊಂಡು ವಿವಾಹಳಾದಳು... ಅಷ್ಟೇ ಅಲ್ಲ, ಶಿವನು ಸಮುದ್ರ ಮಂಥನದಿಂದ ಉದ್ಭವಿಸಿದ ವಿಷವನ್ನು ಸೇವಿಸಿ, ಜಗತ್ತನ್ನು ವಿನಾಶದಿಂದ ಪಾರು ಮಾಡಿದ್ದು ಕೂಡ ಇದೇ ಸಮಯದಲ್ಲಿ.. ಹೀಗೆ ಹಿಂದೂ ಪುರಾಣಗಳಲ್ಲಿ ಶಿವರಾತ್ರಿಗೆ ಮಹತ್ವದ ಹಿನ್ನೆಲೆ ಇದೆ..

ವೈಜ್ಞಾನಿಕವಾಗಿ ಶಿವರಾತ್ರಿಯ ಆಚರಣೆ
ಸೂರ್ಯ ಮತ್ತು ಚಂದ್ರರ ಚಲನೆಯಿಂದಾಗುವ ಎಲ್ಲಾ ಕಾಲ ವ್ಯತ್ಯಾಸಕ್ಕೆ ಈ ನಮ್ಮ ದೇಹ ಹೊಂದಿಕೊಳ್ಳ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಈ ಹಬ್ಬದ ಆಚರಣೆ ಬಹು ಮುಖ್ಯ. ಈ ಸಮಯದಲ್ಲಿ ಛಳಿಗಾಲವು ಮುಗಿದು ಬೇಸಗೆಕಾಲವು ಪ್ರಾರಂಭಗೊಳ್ಳುವುದು. ಅಂದರೆ ಈ ದಿನದಂದು ಚಳಿಗಾಲ ಉತ್ತುಂಗದಲ್ಲಿದ್ದು ಅಂದು ಕೃಷ್ಣ ಪಕ್ಷದ ಕೊನೆಯ ದಿನವೂ ಆಗಿರುತ್ತದೆ. ಈ ದಿನದಲ್ಲಿ ಸೂರ್ಯನ ಶಾಖ ಕಡಿಮೆಯಾಗಿರುತ್ತದೆ ಮತ್ತು ಚಂದ್ರನ ಪ್ರಕಾಶವೂ ಕ್ಷೀಣಿಸಿರುತ್ತದೆ. ನಮ್ಮ ಪೂರ್ವಜರು ಇದನ್ನೆಲ್ಲಾ ಅರಿತೇ ಹಬ್ಬ ಹರಿದಿನಗಳನ್ನು ಆಚರಿಸುತ್ತಿದ್ದರು. ಈ ವ್ಯತ್ಯಯದ ಸಮಯದಲ್ಲಿ ನಮ್ಮ ದೇಹದಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತವೆ. ಈ ಕಾಲ ವ್ಯತ್ಯಾಸದ ಸಮಯದಲ್ಲಿ ನಮ್ಮಲ್ಲಿ ಉಸಿರಾಟದ ತೊಂದರೆ (ನೆಗಡಿ, ಕೆಮ್ಮು, ಶೀತ ಮತ್ತಿತರೆ) ಬರುವುದು. ಈ ದಿನದಂದು ನಾವು ಮಾಡುವ ಶಿವನ ಪೂಜೆ, ಉಪವಾಸಗಳು ನಮಗೆ ತುಂಬಾ ಉಪಯುಕ್ತ. ಅಂದು ಪರಶಿವನಿಗೆ ನೀರಿನ ಅಭಿಷೇಕ ಮತ್ತು ಬಿಲ್ವ ಪತ್ರೆಯ ಪೂಜೆ. ಬಿಲ್ವ ಪತ್ರೆಯಲ್ಲಿ ಉಸಿರಾಟದ ತೊಂದರೆ ನಿವಾರಿಸುವ ಗುಣವಿದೆ. ಬಿಲ್ವವನ್ನು ಲಿಂಗದ ಮೇಲೆ ಹಾಕುವಾಗ ಅದರ ವಾಸನೆ ನಮ್ಮ ದೇಹದ ಒಳಗೆ ಹೋಗುವುದು. ಬಿಲ್ವವನ್ನು ಮೂಸಿ ಎಸೆಯುವುದು ಸರಿಯಾದ ವಿಧಾನ. ಶಿವನ ಲಿಂಗವು ಕಲ್ಲಿನದಾಗಿದ್ದು ಅದರ ಮೇಲೆ ನೀರನ್ನು ಸುರಿಯುವುದರಿಂದ ಬಹಳಷ್ಟು ಶಕ್ತಿ ಹೊರಹೊಮ್ಮುತ್ತದೆ. ಅದೊಂದು ವಿಶಿಷ್ಟ ಕಲ್ಲಿನಿಂದ ಮಾಡಿದ ಲಿಂಗವಾಗಿರುತ್ತದೆ. 

ಪೂಜಿಸುವ ದೇಗುಲವನ್ನು ವಾಸ್ತುವಿನ ಪ್ರಕಾರ ಕಟ್ಟಿರುತ್ತಾರೆ. ಈ ಕ್ಷೇತ್ರದಲ್ಲಿ ಹೆಚ್ಚಿನ ಗುರುತ್ವಾಕರ್ಷಣವಿದ್ದು ಅದನ್ನು ಶಿವ ಶಕ್ತಿಯೆಂದೂ ಕರೆಯುವರು. ಇಲ್ಲಿ ಮಂತ್ರಗಳನ್ನು ಪಠಿಸುತ್ತಾ ವಿಶಿಷ್ಟ ಕಲ್ಲಿನಿಂದ ಕೆತ್ತಿರುವ ಲಿಂಗಕ್ಕೆ ನೀರಿನ ಅಭಿಷೇಕ ಮಾಡುವುದರಿಂದ ಸುತ್ತ ಮುತ್ತಲಿಗೆಲ್ಲಾ ಹೆಚ್ಚಿನ ಶಕ್ತಿ ಬರುವುದೆಂಬ ನಂಬಿಕೆ ಇದೆ. ಈ ಹಿಂದೆ ನಾನು ಬರೆದ ಪೂಜಾವಿಧಾನದಂತೆ ಷೋಡಶಾಂಗ ಪೂಜೆ ಮಾಡುವುದು ವಾಡಿಕೆ. 

ವೇದೋಕ್ತ ಪೂಜೆ ಮತ್ತು ಆಚರಣೆ
ಬಿಲ್ವದ ಎಲೆ ಹೃದಯವನ್ನು ಹೋಲುತ್ತದೆ ಮತ್ತು ಲಿಂಗ ಪರಮಾತ್ಮನ ಪ್ರತೀಕ. ಆದ್ದರಿಂದ ಇವೆರಡರ ಜೊತೆಗೂಡಿಕೆ ಆತ್ಮ ಪರಮಾತ್ಮಗಳ ಮಿಲನ. ರಾತ್ರಿಯು ಅಜ್ಞಾನದ ಸಂಕೇತ ಮತ್ತು ಆ ವೇಳೆಯಲ್ಲಿ ನಿದ್ರೆ ಮಾಡದೇ ಎಚ್ಚರವಾಗಿರುವುದು ತಿಳುವಳಿಕೆಯ ಕಡೆಗೆ ಹೋಗುತ್ತಿರುವ ಸಂಕೇತ. ಹೀಗೆ ಶಿವರಾತ್ರಿಯ ರಾತ್ರಿ ಜಾಗರಣೆ ಮಾಡುವುದು ಮೋಕ್ಷದ ಕಡೆಗೆ ಹೊಗುವುದು ಎಂದು ತತ್ವಗಳು ತಿಳಿಸುತ್ತವೆ. 

ಉಪವಾಸ ಮಾಡುವುದು ಎಂದರೆ, ದೇವರಿಗೆ ಹತ್ತಿರವಾಗಿರುವುದು/ದೇವರ ಬಗ್ಗೆ ಚಿಂತಿಸುತ್ತಿರುವುದು ಎಂದು ಅರ್ಥ. ಹೀಗೆ ಆತನ ಧ್ಯಾನದಲ್ಲಿ ಇರುವಾಗ ಊಟ/ತಿಂಡಿಯ ಕಡೆ ಗಮನ ಹೋಗುವುದಿಲ್ಲ.

ಜಾಗರಣೆ ಎಂದರೆ, ಜಾಗೃತರಾಗಿರೋದು ಎಂದು. ರಾತ್ರಿಯಲ್ಲಿ ಜಾಗರಣೆ ಮಾಡುವುದರ ಅರ್ಥವೇನು? ರಾತ್ರಿ ಎನ್ನುವುದು ತಮೋ ಗುಣದ ಪ್ರತೀಕ. ಆಲಸ್ಯ, ನಿದ್ರೆ, ಅಹಂಕಾರ, ಅಜ್ಞಾನಗಳ ದ್ಯೋತಕ ನಿಶೆ. ಆ ಸಮಯದಲ್ಲಿ ಜಾಗೃತರಾಗಿರಬೆಕು ಎಂದರೆ, ಅವುಗಳಿಂದ ಜಾಗೃತರಾಗಿರಬೇಕು ಎಂಬರ್ಥ. ಹಾಗೆ ಜಾಗೃತರಾಗಿರುವುದಕ್ಕೆ ನಮಗೆ ಸಹಾಯವನ್ನು ಮಾಡುವವನು ದೇವರು. ಆ ದೇವರನ್ನು ಸ್ಮರಿಸುತ್ತ ಈ ತಮೋ ಗುಣಗಳಿಂದ ಜಾಗೃತರಾಗಿರಬೇಕು ಎನ್ನುವುದರ ಪ್ರತೀಕ ಶಿವರಾತ್ರಿಯ ಜಾಗರಣೆ.

ಆ ದಿನ ಬೆಳಗ್ಗೆ ಬೇಗ ಎದ್ದು ಅಭ್ಯಂಜನ ಮಾಡಿ ಶಿವನಿಗೆ ಅಭಿಷೇಕ ಮಾಡುವುದು ರೂಢಿ. ಇಲ್ಲಿ ದಿನವನ್ನು ಮೂರು ಭಾಗಗಳನ್ನಾಗಿ ಮಾಡಿ ರುದ್ರಾಭಿಷೇಕಯುಕ್ತ ಪೂಜೆಯನ್ನು ಮಾಡುವುದು ವಾಡಿಕೆ. ರುದ್ರ ನಮಕ ಚಮಕಗಳನ್ನು ಉಚ್ಚರಿಸುವುದರಿಂದ ಉಸಿರಾಟಕ್ಕೂ ಹೆಚ್ಚಿನ ಶಕ್ತಿ ಬರುವುದು ಮತ್ತು ಬಾಯಿಯಿಂದ ಹೊರ ಹೊಮ್ಮುವ ತರಂಗಗಳಿಂದ ಸುತ್ತ ಮುತ್ತಲಿನ ಪರಿಸರ ಶಕ್ತಿಯುತವಾಗುವುದು. 

ಮೊದಲಿಗೆ ಶಿವಲಿಂಗಕ್ಕೆ ಪಂಚಾಮೃತ ಅಭಿಷೇಕವನ್ನೂ ಮಾಡುವರು. ಇದಕ್ಕೆಂದೇ ಮಹಾನ್ಯಾಸವೆಂಬ ಪ್ರಕಾರವಿದೆ. ನಂತರ ನೀರಿನ ಅಭಿಷೇಕವನ್ನು ನಿರಂತರವಾಗಿ ಮಾಡುವರು. ಅಭಿಷೇಕ್ಕಾಗಿಯೇ ಪ್ರತ್ಯೇಕವಾದ ಪಾತ್ರೆ ಇರುವುದು. ಅದರ ತಳಭಾಗದಲ್ಲಿ ರಂದ್ರವಿದ್ದು ಅದನ್ನು ಲಿಂಗದ ಮೇಲೆ ತೂಗು ಬಿಟ್ಟಿರುವರು. ಅದರೊಳಗೆ ನೀರು ತುಂಬಿಸಿದರೆ, ಸಣ್ಣದಾಗಿ ನೀರು ಲಿಂಗದ ಮೇಲೆ ಬೀಳುವುದು. ಕೃಷ್ಣ ಯಜುರ್ವೇದದ ಪ್ರಕಾರವಾದ ರುದ್ರ ನಮಕ ಮತ್ತು ಚಮಕಗಳನ್ನು ಅಭಿಷೇಕದ ಸಂದರ್ಭದಲ್ಲಿ ಪಠಿಸುತ್ತಾರೆ. ಹನ್ನೊಂದು ಬಾರಿ ನಮಕ ಚಮಕಗಳನ್ನು ಹನ್ನೊಂದು ಜನ ಋತ್ವಿಕರು ಪಠಣ ಮಾಡುವುದಕ್ಕೆ ಏಕಾದಶವಾರ ರುದ್ರಾಭಿಷೇಕ ಎಂದು ಕರೆಯುವರು. ಮೊದಲಿಗೆ ಚಮಕದ ಮೂರನೆಯ ಭಾಗವನ್ನು ಉಚ್ಚರಿಸಿ, ನಂತರ ಒಂದು ನಮಕದ ಭಾಗವನ್ನೂ ನಂತರ ಹನ್ನೊಂದು ಚಮಕ ಭಾಗಗಳನ್ನೂ ಪಠಿಸುವರು. ತದನಂತರ ಎರಡನೆಯ ನಮಕದ ಭಾಗವನ್ನೂ ಮತ್ತು ಹನ್ನೊಂದು ಚಮಕ ಭಾಗಗಳನ್ನೂ ಪಠಿಸುವರು. ಹೀಗೆ ನಮಕಗಳ ಹನ್ನೊಂದೂ ಭಾಗವನ್ನು ಪಠಿಸಿ ಅಭಿಷೇಕ ಮಾಡುವರು. ಇದಕ್ಕೆ ಒಂದು ರುದ್ರವೆಂದು ಕರೆಯುವರು. ಬೆಳಗ್ಗೆ, ಸಂಜೆ ಮತ್ತು ರಾತ್ರೆ ಹೀಗೆ ೨೪ ಘಂಟೆಗಳು ಭಗವನ್ನಾಮಸ್ಮರಣೆ ಮಾಡುತ್ತಾ ಜಾಗರಣೆ ಮಾಡುವುದು ಪರಿಪಾಠ. ಅಂದು ಊಟ ಮಾಡದೆ ಅಲ್ಪಾಹಾರ ಸೇವನೆ ಮಾಡುವರು.

ಜಾಗರಣೆ, ಹಬ್ಬದ ವಿಶೇಷ ಆಚರಣೆ:
ಕಾಶಿ ವಿಶ್ವನಾಥ, ಗೋಕರ್ಣದ ಮಹಾಬಲೇಶ್ವರ, ರಾಮೇಶ್ವರದ ರಾಮೇಶ್ವರ ಸೇರಿದಂತೆ ರಾಜ್ಯ, ದೇಶ, ವಿದೇಶಗಳ ಶಿವದೇವಾಲಯಗಳಲ್ಲಿ ಅಂದು ವಿಶೇಷ ಪೂಜೆ ನಡೆಯುತ್ತದೆ. ಬಿಲ್ವಾರ್ಚನೆ, ರುದ್ರಾಭಿಷೇಕ, ಶಿವನಾಮ ಧ್ಯಾನಗಳ ಮೂಲಕ ಶಿವನನ್ನು ಆರಾಸಲಾಗುತ್ತದೆ. ಇಡೀ ರಾತ್ರಿ ಶಿವದೇವಾಲಯಗಳಲ್ಲಿ ರುದ್ರಪಠಣದ ಜೊತೆ ಜಾಗರಣೆ ನಡೆಯುತ್ತದೆ.

ಶಿವರಾತ್ರಿಯಂದು ಬೆಳಗ್ಗೆ ಬೇಗನೆ ಏಳುವ ಭಕ್ತರು, ಸ್ವಾನ ಮಾಡಿ, ಶುಚಿರ್ಭೂತರಾಗಿ ಶಿವದೇವಾಲಯಕ್ಕೆ ತೆರಳುತ್ತಾರೆ. ಕೆಲವರು ಕೈಲಾಸಯಂತ್ರ ರಚಿಸಿ, ಮನೆಯಲ್ಲಿಯೇ ಶಿವನಿಗೆ ವಿಶೇಷ ಪೂಜೆ ನಡೆಸುತ್ತಾರೆ. ಗಂಗಾ, ಬ್ರಹ್ಮಪುತ್ರ, ಕೃಷ್ಣ, ಕಾವೇರಿ, ತ್ರಿವೇಣಿ ಸಂಗಮ ಸೇರಿದಂತೆ ಪುಣ್ಯನದಿಗಳಲ್ಲಿ ಭಕ್ತರು ಸ್ನಾನ ಮಾಡುತ್ತಾರೆ. ಕೆಲವರು ಹಾಲು, ಹಣ್ಣು ಸೇವಿಸಿ ಲಘು ಉಪಹಾರ ಸೇವಿಸಿದರೆ, ಕೆಲವು ಭಕ್ತರು ದಿನವಿಡಿ ಏನನ್ನೂ ತಿನ್ನದೆ, ನೀರನ್ನೂ ಕುಡಿಯದೆ ಉಪವಾಸ ಇರುತ್ತಾರೆ. ಭಸ್ಮ ಲೇಪಿಸಿಕೊಂಡು, ಬಿಲ್ವಾರ್ಚನೆ ಮೂಲಕ ರುದ್ರ ಪಠಣ ಹಬ್ಬದ ಆಚರಣೆಯ ವಿಶೇಷ.

ಅಭಿಷೇಕಪ್ರಿಯ ಎಂದೇ ಖ್ಯಾತನಾದ ಶಿವನಿಗೆ ದಿನವಿಡಿ ಹಾಲು, ಜೇನುತುಪ್ಪ ಹಾಗೂ ನೀರಿನ ಅಭಿಷೇಕ ನಡೆಯುತ್ತದೆ. ಪ್ರತಿ 3 ಗಂಟೆಗೊಮ್ಮೆ ಶಿವಲಿಂಗಕ್ಕೆ ಅಭಿಷೇಕ ಮಾಡಲಾಗುತ್ತದೆ. ಬಿಲ್ವಪತ್ರೆ, ತುಳಸಿ, ಶ್ರೀ ಗಂಧ, ಹಾಲು, ಜೇನುತುಪ್ಪಗಳಿಂದ ಅಭಿಷೇಕ ನಡೆಯುತ್ತದೆ. ಶಿವ ಪಂಚಾಕ್ಷರಿ ಮಂತ್ರ "ಓಂ ನಮ: ಶಿವಾಯ", ಹರ ಹರ ಮಹಾದೇವ, ಶಂಭೋ ಶಂಕರ...ಶಿವದೇವಾಲಯಗಳಲ್ಲಿ ಮಾರ್ದನಿಸುತ್ತದೆ. ನಾಲ್ಕು ಆಯಾಮಗಳ ರುದ್ರಪಠಣ, ಶಿವರಾತ್ರಿ ಪೂಜೆಯ ವಿಶೇಷ. ಶಿವಪುರಾಣದ ಪ್ರಕಾರ ರುದ್ರ ಹಾಗೂ ಚಮೆಗಳ ಪಠಣ ಶಿವನಿಗೆ ಅಚ್ಚುಮೆಚ್ಚು. ದೇವಾಲಯಗಳಲ್ಲಿ ಸಂಜೆ 6 ಗಂಟೆಯಿಂದ ಮೊದಲ್ಗೊಂಡು ಮುಂಜಾನೆ 6 ಗಂಟೆಯವರೆಗೆ ರುದ್ರಪಠಣದ ಮೂಲಕ ಶಿವ ಸ್ತುತಿ, ಜಾಗರಣೆ ನಡೆಯುತ್ತದೆ. ಪ್ರತಿ 3 ಗಂಟೆಗೊಮ್ಮೆ ಮಂಗಳಾರತಿ ಮಾಡಲಾಗುತ್ತದೆ. ಬೆಳಗ್ಗೆ 6 ಗಂಟೆಗೆ ಮಹಾಮಂಗಳಾರತಿ ಆಚರಣೆ ಮೂಲಕ ಜಾಗರಣೆ ಮುಕ್ತಾಯಗೊಳ್ಳುತ್ತದೆ. ಮೊದಲನೆಯ ಆಯಾಮದಲ್ಲಿ ಹಾಲು, ಎರಡನೆಯ ಆಯಾಮದಲ್ಲಿ ಮೊಸರು, ಮೂರನೆಯ ಆಯಾಮದಲ್ಲಿ ತುಪ್ಪ ಹಾಗೂ ನಾಲ್ಕನೆಯ ಆಯಾಮದಲ್ಲಿ ಜೇನುತುಪ್ಪಗಳಿಂದ ಶಿವನಿಗೆ ಅಭಿಷೇಕ ಮಾಡುವ ಪದ್ಧತಿಯೂ ಕೆಲವೆಡೆ ಇದೆ.

ರಥಸಪ್ತಮಿ ವಿಶೇಷಾಂಕ

ಮಾಘಮಾಸ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು ಸೂರ್ಯನ ಜನ್ಮದಿನ. ಅಲ್ಲದೆ ಸಪ್ತಮಿ ತಿಥಿಯ ಅದಿದೇವತೆಯು ಸೂರ್ಯ ಆಗಿರುವುದರಿಂದ, ಇಂದು ಸೂರ್ಯ ಆರಾಧನೆಯ 'ರಥ ಸಪ್ತಮಿ' ದಿನವೆಂದು ಆಚರಿಸಲಾಗುತ್ತದೆ. ನಿಯಮಬದ್ಧವಾದ ಉದಯ ಹಾಗೂ ಅಸ್ತಗಳ ಮೂಲಕ ನಮಗೆ ಶಿಸ್ತು ಬದ್ಧವಾದ ಕರ್ತವ್ಯ ಪ್ರಜ್ಞೆ, ಚೈತನ್ಯವನ್ನು ತುಂಬುವ ಸೂರ್ಯನ ಪೂಜೆಯೇ ಈ ದಿವಸದ ಮುಖ್ಯ ಆಚರಣೆಯಾಗಿದೆ. ಈ ದಿನದಲ್ಲಿ ನಡೆಯುವ ಕೆಲಸ ಕಾರ್ಯಗಳು, ಕೋರಿಕೆಗಳು ಫಲಪ್ರದವಾಗಿರುತ್ತವೆ. ಸೂರ್ಯನ ಪ್ರಕಾಶ ಹೆಚ್ಚುತ್ತಿರುವುದರಿಂದ ಚಳಿಗಾಲದ ಚಳಿ ಮುದುಡಿಕೊಂಡು ಮೈಯಲ್ಲಿ ನವಚೇತನ ತುಂಬಿದಂತೆ ಅನಿಸುತ್ತದೆ. ಅಂಗಾಂಗಗಳಲ್ಲಿ ಕಾರ್ಯಕ್ಷಮವಾಗುತ್ತಿವೆ. ಈ ಉಪಕಾರಕ್ಕಾಗಿ ಸೂರ್ಯನನ್ನು ಪೂಜಿಸುವುದು ರೂಢಿಯಲ್ಲಿದೆ. ಆಹಾರಕ್ಕಾಗಿ, ರೋಗ ನಿವಾರಣೆಗಾಗಿ ಸೂರ್ಯೋಪಾಸನೆ ಮಾಡಬೇಕೆಂದು ಸ್ಕಂದ, ವರಾಹ ಪುರಾಣಗಳಲ್ಲಿ ಹೇಳಿವೆ.

ವೈವಸ್ವತ ಮನ್ವಂತರದ ಆರಂಭದ ದಿನ. ಸೂರ್ಯನು ಉತ್ತರಾಯಣನಾಗಿ ಸಪ್ತಾಶ್ವಗಳ ರಥವನ್ನೇರಿ, ಉತ್ತರದಿಕ್ಕಿನ ಮಾರ್ಗದಲ್ಲಿ ಹೊರಟ ದಿನ.

ರಥ ಸಪ್ತಮಿ ದಿವಸ ರೋಗ ನಿವಾರಣೆ, ದೇಹದಾರ್ಡ್ಯ ಹಾಗೂ ಉತ್ತಮ ಆರೋಗ್ಯವನ್ನು ಬಯಸುವವರು ಸೂರ್ಯನ ಆರಾಧನೆ ಮಾಡಬೇಕೆಂಬ ನಿಯಮವಿದೆ. ರೋಗಾಣುಗಳನ್ನು ನಾಶ ಪಡಿಸುವ ಶಕ್ತಿ ಸೂರ್ಯನ ಕಿರಣಗಳಲ್ಲಿವೆ. ಬೆಳಗಿನ ಹಾಗೂ ಸಂಜೆಯ ಸೂರ್ಯ ಕಿರಣಗಳಿಂದ ಆರೋಗ್ಯ ವರ್ಧನೆಯಾಗುತ್ತದೆ. ರೋಗದಿಂದ ನರಳುವವರು ಈ ದಿವಸ ಸೂರ್ಯಾರಾಧನೆಯನ್ನು ಮಾಡಿದರೆ ಬೇಗ ಗುಣಮುಖರಾಗುತ್ತಾರೆ.

ಯೋಗಾಸನಗಳಲ್ಲಿ ಮೊದಲ ಪ್ರಾಶಸ್ತ್ಯ ಸೂರ್ಯ ನಮಸ್ಕಾರಕ್ಕೆ ನೀಡಬಹುದು. ಏಕೆಂದರೆ ಈ ಅಭ್ಯಾಸವು ಮನಸು, ದೇಹ ಮತ್ತು ಉಸಿರಾಟ ವ್ಯವಸ್ಥೆಗಳಿಗೆ ಪರಿಣಾಮಕಾರಿಯಾಗಿದೆ. ಭೂಮಿಯಲ್ಲಿನ ಸಕಲ ಜೀವರಾಶಿಗಳ ಚಟುವಟಿಕೆಗಳು ಸೂರ್ಯನಿಂದ ನಡೆಯುತ್ತಿದೆ.

ರಥಸಪ್ತಮಿ ದಿನದಂದು ಸೂರ್ಯೋದಯಕ್ಕೆ ಸರಿಯಾಗಿ ನದಿ, ಸಮುದ್ರ, ಸರೋವರ, ಸಂಗಮ ಮುಂತಾದೆಡೆ ಸ್ನಾನ ಮಾಡಿ ಸೂರ್ಯನಿಗೆ 'ಅರ್ಘ್ಯ' ನೀಡಿದರೆ ಪೂರ್ವ ಜನ್ಮದ ಪಾಪಗಳು ಹಾಗೂ ಈ ಜನ್ಮದ ಸಕಲ ದುಃಖಗಳು ಪರಿಹಾರವಾಗುತ್ತವೆ. ಸೂರ್ಯೋದಯಕ್ಕೆ ಮಾಡುವ ಮಾಘಸ್ನಾನ ಪುಣ್ಯಪ್ರದವಾದುದು. ಆಯುಷ್ಯ, ಆರೋಗ್ಯ ಸಂಪತ್ತು ಲಭಿಸುವುದಲ್ಲದೆ, ಸೂರ್ಯನ ಅನುಗ್ರಹ ಪ್ರಾಪ್ತಿಯಾಗುತ್ತದೆಂದು ಪುರಾಣದಲ್ಲಿದೆ. ಸೂರ್ಯನ ಆರಾಧನೆ ಋಗ್ವೇದದ ಕಾಲದಿಂದಲೂ ಪ್ರಚಲಿತದಲ್ಲಿದೆ. ಪ್ರಾಚೀನ ವೈದಿಕ ಧರ್ಮದಲ್ಲಿ ಸೂರ್ಯನಿಗೆ ಅತ್ಯಂತ ಪ್ರಾಮುಖ್ಯತೆ ಇತ್ತು. ಆತನ ಆರಾಧನೆಯಿಂದಲೇ ಸೌರ ಪಂಥ ಹುಟ್ಟಿದ್ದು. ಕಾಲ ಗಣನೆಯಲ್ಲಿ ಸೌರಮಾನ ಎಣಿಕೆ ಇಂದಿಗೂ ಇದೆ.

ಗಾಯತ್ರಿ ಮಂತ್ರದಲ್ಲಿನ ಪ್ರತಿಶಬ್ದವು ಸೂರ್ಯನ ಸಾಮಥ್ಯಗಳನ್ನು ಕೊಂಡಾಡುವ ಉದ್ದೇಶದಿಂದಲೇ ಬಳಸಲಾಗಿದೆ.

ದ್ವಾಪರಾಯುಗದಲ್ಲಿ ಶ್ರೀ ಕೃಷ್ಣನು ಧರ್ಮರಾಜನಿಗೆ ರಥಸಪ್ತಮಿ ಬಗ್ಗೆ ಹೇಳಿದ ಕಥೆಯಿದೆ. ಯಶೋವರ್ಮನೆಂಬ ರಾಜನ ಮಗ ಹುಟ್ಟಿನಿಂದಲೇ ರೋಗಿಷ್ಠನಾಗಿದ್ದ. ಈ ಬಗ್ಗೆ ಜ್ಯೋತಿಷಿಗಳಿಂದ ವಿವರ ಪಡೆದು ಸಂಚಿತಕರ್ಮದಿಂದ ಬಂದಿರುವ ಈ ಕಾಯಿಲೆಗೆ ರಥಸಪ್ತಮಿ ವ್ರತ ಆಚರಿಸಲು ಹೇಳಿದ್ದರು. ಅದರಂತೆ ರಥಸಪ್ತಮಿಯ ದಿನ ಸೂರ್ಯಾರಾದನೆ ಮಾಡಲಾಗಿ ರಾಜ ಪುತ್ರನು ಆರೋಗ್ಯವಂತನೂ, ಪ್ರಭಾವಶಾಲಿಯೂ ಆದ. ಅಲ್ಲದೆ ಪಾಂಡವರು ವನವಾಸದ ಅವಧಿಯಲ್ಲಿ ಕೃಷ್ಣನ ಆದೇಶದಂತೆ ಸೂರ್ಯಾರಾಧನೆ ಮಾಡಿ ಸೂರ್ಯನಿಂದ ಅಕ್ಷಯ ಪಾತ್ರೆ ಪಡೆದಿದ್ದರು.

ಅಲ್ಲದೆ ರಾವಣನ್ನು ಗೆಲ್ಲಬೇಕಾದರೆ ಶ್ರೀರಾಮನು ಕೂಡ ಅಗಸ್ತ್ಯರ ಉಪದೇಶದಂತೆ 'ಆದಿತ್ಯ ಹೃದಯ' ದ ಮೂಲಕ ಸೂರ್ಯನ ಆರಾಧನೆ ಮಾಡಿದನೆಂದು ರಾಮಾಯಣದಲ್ಲಿ ಹೇಳಿದೆ. ಸೂರ್ಯಾರಾಧನೆ ಮಾಡಿ, ಚಿನ್ನ ನೀಡುವ 'ಶಮಂಥಕಮಣಿ' ಪಡೆದ ಸತ್ರಾಜಿತ ಕಥೆ ಹರಿವಂಶದಲ್ಲಿ ಬಂದಿದೆ. ಮಯೂರನೆಂಬ ಕವಿ 'ಸೂರ್ಯಶತಕ'ವೆಂಬ ಗ್ರಂಥ ಬರೆದು ಕಳೆದುಕೊಂಡ ಕಣ್ಣನ್ನು ಮತ್ತೆ ಪಡೆದನೆಂದು ಹೇಳುತ್ತಾರೆ.

ಶ್ರೀರಾಮ ಸೂರ್ಯವಂಶದವನಾದರೆ ಕರ್ಣ, ಸುಗ್ರೀವ, ನವಗ್ರಹಗಳಲ್ಲಿ ಶನಿ ಹಾಗೂ ಯಮ ಸೂರ್ಯನ ಪುತ್ರರಾಗಿದ್ದಾರೆ.

ವ್ಯಕ್ತಿಯ ಜನ್ಮ ಕುಂಡಲಿಯಲ್ಲಿ ಸೂರ್ಯನು ಬಲಹೀನನಾಗಿದ್ದರೆ ಅಥವಾ ಷಡ್ಬಲವಿರದಿದ್ದರೆ ರಥಸಪ್ತಮಿಯಂದು ಸೂರ್ಯಾರಾಧನೆ ಮಾಡಿದರೆ ದೋಷ ಪರಿಹಾರವಾಗುತ್ತದೆ. ಮಾಣಿಕ್ಯದ ಹರಳು ಧರಿಸಲು ಶುಭ ದಿನವಾಗಿದೆ.

ರಥ ಸಪ್ತಮೀಯು ಯಾವಾಗಲೂ ಅರುಣುದೋಯವ್ಯಾಪಿನಿಯಾಗಿರುವುದರಿಂದ ಸರಿಯಾಗಿ ಸೂರ್ಯೋದಯಕ್ಕೆ ಆಚರಣೆ ಮಾಡಬೇಕು. ರಥ ಸಪ್ತಮಿಯಂದು ಸೂರ್ಯೋದಯ ಕಾಲಕ್ಕೆ ಸ್ನಾನ ಮಾಡಬೇಕು. ಎಕ್ಕೆ ಎಲೆಯನ್ನು ತಲೆ ಮತ್ತು ಹೆಗಲ ಮೇಲೆ ಇಟ್ಟುಕೊಂಡು ಸ್ನಾನಮಾಡುವುದು ವಿಶೇಷ. ಸ್ನಾನಕಾಲಕ್ಕೆ ಪಠಿಸಬೇಕಾದ ಮಂತ್ರಗಳು -

ಯದ್ಯಜ್ಜನ್ಮಕೃತಂ ಪಾಪಂ ಮಯಾ ಸಪ್ತಸು ಜನ್ಮಸು | 
ತನ್ಮೇ ರೋಗಂ ಚ ಶೋಕಂ ಚ ಮಾಕರೀ ಹಂತು ಸಪ್ತಮೀ || ೧ || 
ಏತಜ್ಜನ್ಮಕೃತಂ ಪಾಪಂ ಯಚ್ಚ ಜನ್ಮಾಂತರಾರ್ಜಿತಮ್ | 
ಮನೋವಾಕ್ಕಾಯಜಂ ಯಚ್ಚ ಜ್ಞಾತಾಜ್ಞಾತೇ ಚ ಯೇ ಪುನಃ || ೨ || 
ಇತಿ ಸಪ್ತವಿಧಂ ಪಾಪಂ ಸ್ನಾನಾನ್ಮೇ ಸಪ್ತಸಪ್ತಿಕೇ | 
ಸಪ್ತವ್ಯಾಧಿಸಮಾಯುಕ್ತಂ ಹರ ಮಾಕರಿ ಸಪ್ತಮೀ || ೩ || 

ಹೀಗೆ ಯಾರು ಈ ಮೂರು ಮಂತ್ರೋಚ್ಚಾರಣ ಪೂರಕ ಸ್ನಾನ ಮಾಡಿ ಸೂರ್ಯ ಮತ್ತು ಕೇಶವನ ದರ್ಶನವನ್ನು ಮಾಡುತ್ತಾರೋ, ಅವರು ಕ್ಷಣಮಾತ್ರದಲ್ಲಿ ಪಾಪಗಳಿಂದ ಮುಕ್ತರಾಗುವರು. (ನಿರ್ಣಯಸಿಂಧು)

ಸ್ನಾನಾನಂತರ ಸೂರ್ಯ ಮತ್ತು ಸಪ್ತಮಿತಿಥಿಗೆ ಅರ್ಘ್ಯ -
ಒಂದು ತಾಮ್ರದ ಕಲಶದಲ್ಲಿ (ತಂಬಿಗೆ) ಶುದ್ಧವಾದ ಜಲ, ಅಕ್ಷತೆ, ಚಂದನ, ಬಿಳಿಬಣ್ಣದ ಹೂವುಗಳು, ಗರಿಕೆ, ಎಕ್ಕೆಯ ಎಲೆಗಳನ್ನು ತುಂಬಿಸಿ, ಮುಂದಿನ ಮಂತ್ರಗಳಿಂದ ಸೂರ್ಯ ಮತ್ತು ಸೂರ್ಯಜನನೀಯಾದ ಸಪ್ತಮೀ ತಿಥಿಗೂ ಸಹ ಅರ್ಘ್ಯವನ್ನು ಕೊಡಬೇಕು.

ಸೂರ್ಯಾರ್ಘ್ಯ ಮಂತ್ರ -
ಸಪ್ತಸಪ್ತಿವಹ ಪ್ರೀತ ಸಪ್ತಲೋಕಪ್ರದೀಪನ | 
ಸಪ್ತಮೀ ಸಹಿತೋ ದೇವ ಗೃಹಾಣಾರ್ಘ್ಯಂ ದಿವಾಕರ || 
ಎಂದು ಸೂರ್ಯನಿಗೆ ಅರ್ಘ್ಯವನ್ನು ಕೊಡಬೇಕು.

ಸಪ್ತಮೀ ಅರ್ಘ್ಯಮಂತ್ರ -
ಜನನೀ ಸರ್ವಲೋಕಾನಾಂ ಸಪ್ತಮೀ ಸಪ್ತಸಪ್ತಿಕೇ | 
ಸಪ್ತವ್ಯಾಹೃತಿಕೇ ದೇವಿ ನಮಸ್ತೇ ಸೂರ್ಯಮಂಡಲೇ || 
ಎಂದು ಸಪ್ತಮೀ ತಿಥಿಯ ಕುರಿತು ಅರ್ಘ್ಯ ಕೊಡಬೇಕು.

ರಥಸಪ್ತಮಿಯ ಪರ್ವ ಎಲ್ಲ ರಾಶಿಯವರಿಗೂ ವಿಶೇಷ ಫಲಪ್ರದ. ಸೂರ್ಯನು ಯಾವುದೇ ಜಾತಕದಲ್ಲಿ ಆತ್ಮರೂಪಿಯಾಗಿ ಇರುತ್ತಾನೆ, ಆದ್ದರಿಂದ ಅವನ ಪ್ರೀತ್ಯರ್ಥ ಪೂಜಾಕಾರ್ಯ ಆರೋಗ್ಯ, ಸಂಪತ್ತು ಮತ್ತು ಆನಂದಪ್ರದ.

ಮಕರ ಸಂಕ್ರಾಂತಿಯ ಶುಭಾಷಯಗಳು

ಉತ್ತರಾಯಣ ಪುಣ್ಯಕಾಲದ ಶುಭದಿನ- ಮಕರ ಸಂಕ್ರಾಂತಿ

ಅನಾದಿ ಕಾಲದಿಂದ ನಡೆದುಕೊಂಡು ಬರುತ್ತಿರುವ ಶಾಸ್ತ್ರ ಸಂಪ್ರದಾಯಗಳ ಪ್ರಕಾರ ಸೂರ್ಯನು ಧನು ರಾಶಿಯಿಂದ ಮಕರ ರಾಶಿಯನ್ನು ಪ್ರವೇಶಿಸುವುದನ್ನೇ ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಈ ಹಬ್ಬದ ಸಮಯದಲ್ಲಿ ಶುಭಕಾರ್ಯಗಳನ್ನು ಕೈಗೊಳ್ಳುವುದು ಶ್ರೇಯಸ್ಕರ.

ಮಕರ ಸಂಕ್ರಾಂತಿಯು ಪ್ರಧಾನವಾಗಿ ಸೂರ್ಯನು ತನ್ನ ಪಥವನ್ನು ಬದಲಾಯಿಸುವುದನ್ನು ಸೂಚಿಸುವುದು ಮಾತ್ರವಲ್ಲದೆ ಉತ್ತರಾಯಣ ಪುಣ್ಯ ಕಾಲದ ಆರಂಭವೂ ಇದಾಗಿದೆ. ಮಕರ ಸಂಕ್ರಾಂತಿ ಅಥವಾ ಸಂಕ್ರಮಣದ ಅರ್ಥವು ಮಕರ ರಾಶಿಯನ್ನು ಹಾದು ಹೋಗುವುದು ಅಥವಾ ಮಕರ ರಾಶಿಗೆ ಬದಲಾಗುವುದು ಎಂಬುದಾಗಿದೆ. ಈ ಆಚರಣೆಯು ಸೂರ್ಯದೇವನ ಸಂಚಾರವನ್ನು ಗಣನೆಗೆ ತೆಗೆದುಕೊಂಡು ಆಚರಿಸಲಾಗುತ್ತಿದ್ದು ಸೂರ್ಯದೇವನು ತನ್ನ ಏಳು ಕುದುರೆಗಳಿಂದ ಎಳೆಯಲ್ಪಡುವ ಭವ್ಯ ರಥದಲ್ಲಿ ಮಕರ ರಾಶಿಗೆ ಪ್ರವೇಶಿಸುತ್ತಾನೆ ಎಂದು ಪುರಾತನ ಕಾಲದಿಂದಲೇ ಭಾರತೀಯರಲ್ಲಿ ನೆಲೆವೂರಿರುವ ವಿಶ್ವಾಸವಾಗಿದ್ದು, ಪ್ರಸ್ತುತ ರಥದ ಏಳು ಕುದುರೆಗಳು ಕಾಮನ ಬಿಲ್ಲಿನ ಏಳು ಬಣ್ಣಗಳನ್ನು ಪ್ರತಿನಿಧೀಕರಿಸುತ್ತವೆ.

ಮಕರ ರಾಶಿಗೆ ಸೂರ್ಯನ ಪ್ರವೇಶವು ಇರುಳನ್ನು ಹೋಗಲಾಡಿಸುವುದು ಮಾತ್ರವಲ್ಲದೆ ಈ ಕಾಲದಲ್ಲಿ ಸಸ್ಯಗಳ ಬೆಳವಣಿಗೆಗೂ ಸಹಕರಿಸುತ್ತದೆ. ವೇದಶಾಸ್ತ್ರದ ಪ್ರಕಾರ ಇದು ಮನಸ್ಸಿನ ಕಾರಿರುಳನ್ನು ಹೋಗಲಾಡಿಸಿ ಸ್ವ ಪ್ರಜ್ಞೆಯ ದಾರಿಯಾದ ಮೋಕ್ಷವನ್ನು ಹೊಂದಲು ಸಹಕಾರಿಯಾಗುತ್ತದೆ. ಆದುದರಿಂದಲೇ ಇದನ್ನು ಪುಣ್ಯ ಕಾಲವೆಂದು ಕರೆಯಲಾಗುತ್ತದೆ. ಈ ಕಾಲವು ಸ್ವರ್ಗದ ಬಾಗಿಲು ತೆರೆದಿರುವ ಕಾಲವೆಂದು ಚಾಲ್ತಿಯಲ್ಲಿದ್ದು, ಈ ಅವಧಿಯಲ್ಲಿ ಮರಣ ಹೊಂದುವವರು ಸ್ವರ್ಗವನ್ನು ಪಡೆಯುತ್ತಾರೆ ಎಂಬ ಐತಿಹ್ಯವಿದೆ. ಆದುದರಿಂದಲೇ ಮಹಾಭಾರತದ ಕಥೆಯಲ್ಲಿ ಭೀಷ್ಮ ಇಹಲೋಕ ತ್ಯಜಿಸಲು ಈ ಕಾಲದ ನಿರೀಕ್ಷೆಯಲ್ಲಿದ್ದದ್ದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದು. ಈ ಕಾಲದಲ್ಲಿ ಇರುಳಿನ ಅವಧಿಯು ಕಡಿಮೆಯಿದ್ದು ಸೂರ್ಯನ ಬೆಳಕು ಸದಾ ಭೂಮಿ ಮೇಲಿರುತ್ತದೆ.

ಗಡಗಡ ನಡುಗಿಸುವ ಚಳಿಯು ದೂರವಾಗಿ, ವಸಂತನ ಆಗಮನವಾಗುತ್ತಲೇ, ಪ್ರಕೃತಿ ದೇವಿಯ ಕಣ್ಣಲ್ಲಿ ಹೊಸ ಕಳೆ, ಹೊಸ ಹೊಳಹು. ಗಿಡಮರಗಳೆಲ್ಲಾ ಹೂಬಿಟ್ಟು ತನ್ನನ್ನು ನೆಚ್ಚಿಕೊಂಡಿರುವ ಸಮಸ್ತ ಜೀವರಾಶಿಗೆ ಫಲ-ಪುಷ್ಪಗಳೊಂದಿಗೆ ಪೋಷಣೆ ನೀಡುವ ಕಾಯಕಕ್ಕೆ ಅಡಿಯಿಡುವ, ಹಚ್ಚ ಹಸಿರಿನೊಂದಿಗೆ ದಷ್ಟಪುಷ್ಟಗೊಳ್ಳುವ ಪ್ರಕೃತಿದೇವಿಯನ್ನು ಆದರಿಸುವ ಸಂಕ್ರಾಂತಿಯ ಸಡಗರವಿದು. ಹೊಸ ವರ್ಷದ ಆಚರಣೆಯ ನಂತರ ದೇಶವು ಸಂಭ್ರಮ ಪಡುವ ಸುಗ್ಗಿಯ ಪರ್ವವೇ ಈ ಮಕರ ಸಂಕ್ರಮಣ. ಭೂಮಿಯನ್ನು ಹಸನಾಗಿಸಿ ನಮ್ಮ ಜೀವನವನ್ನೂ ಹಸನಾಗಿಸುವ ಪ್ರಕೃತಿ ಮಾತೆಗೆ ನಮಿಸಿ ಸಂಭ್ರಮಿಸುವ ಪರ್ವವಿದು. ಮನೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ, ಹೊಸ ಬಟ್ಟೆಯುಟ್ಟು, ಮೈಮನಗಳ ಕೊಳೆ ನಿವಾರಿಸಿಕೊಳ್ಳುವ ಸಂಕೇತವೂ ಅಹುದು.

ವಾಸ್ತವಿಕವಾಗಿ, ಸೂರ್ಯನ ಚಲನೆಯ ಆಧಾರದಲ್ಲಿರುವ ಮೇಷ-ಮೀನಾದಿ ತಿಂಗಳುಗಳನ್ನು ಸೂರ್ಯನು ಯಾವ ರಾಶಿಗೆ ಪ್ರವೇಶಿಸುತ್ತಾನೆ ಎಂಬುದರ ಆಧಾರದಲ್ಲಿ ಗುರುತಿಸಲಾಗುತ್ತದೆಯಾದರೂ, ಸೂರ್ಯನು ಮಕರ ರಾಶಿಗೆ ಕಾಲಿಡುವ ದಿನಕ್ಕೆ ಅದೇನೋ ವಿಶೇಷತೆ, ಸಡಗರ, ಸಂಭ್ರಮ. ಇತರ ೧೧ ರಾಶಿಗಳಿಗೂ ಸೂರ್ಯ ಪ್ರವೇಶಿಸುತ್ತಾನೆ. ಹೀಗಿರುವಾಗ ಧನುವಿನ ಮನೆಯನ್ನು ತೊರೆದು ಆತನ ಮಕರ ರಾಶಿ ಪ್ರವೇಶವೇ ವಿಶೇಷವಾಗುವುದೇಕೆ ಎಂಬ ಪ್ರಶ್ನೆ ಉದ್ಭವವಾಗುವುದು ಸಹಜ. ಇದು ಮುಂಬರುವ ಪ್ರಖರ ಬೆಳಕಿನ ಬೆಚ್ಚಗಿನ ವಾತಾವರಣದ ಆರಂಭಕ್ಕೆ ಮುನ್ನುಡಿಯಿಡುವ ದಿನ. ನಮಗೆ ಹೆಚ್ಚು ಸಮಯ ದೊರೆಯುತ್ತದೆ, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂಬ ಸಂದೇಶದೊಡನೆ ಅಂದಿನಿಂದ ಹಗಲು ದೀರ್ಘವಾಗುತ್ತದೆ.

ತಂದೆ-ಮಕ್ಕಳ ಬಂಧದ ಕುರುಹು
ಪುರಾಣಗಳನ್ನು ಓದುತ್ತಾ ಹೋದರೆ, ಸೂರ್ಯನಿಗೆ ಛಾಯಾ ದೇವಿಯ ಗರ್ಭದಲ್ಲಿ ಜನಿಸಿದ ಮಗ ಶನಿ. ಶನಿ ಮತ್ತು ಸೂರ್ಯ ಇಬ್ಬರ ಗುಣಗಳು ತದ್ವಿರುದ್ಧವಾದರೂ, ಸೂರ್ಯನು ವರ್ಷಕ್ಕೊಂದು ಬಾರಿ ತನ್ನ ಪುತ್ರನಾದ ಶನಿಯ ಮನೆಯಾಗಿರುವ ಮಕರ ರಾಶಿಗೆ ಬಂದೇ ಬರುತ್ತಾನೆ. ಒಂದು ರೀತಿಯಲ್ಲಿ ತಂದೆ-ಮಕ್ಕಳ ಬಾಂಧವ್ಯದ ಸಂಕೇತವಾಗಿಯೂ ಭಕ್ತಿಯ ಸಂಕೇತವಾಗಿಯೂ ಮಕರ ಸಂಕ್ರಾಂತಿಯು ಮಾನವ ಜೀವನದ ಬಾಂಧವ್ಯದ ಬೆಸುಗೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ.

ಮೂರು ದಿನಗಳ ಸಂಕ್ರಾಂತಿ ಸಡಗರ
ಸಂಕ್ರಾಂತಿ ಎಂದ ತಕ್ಷಣ ಕರ್ನಾಟಕದಲ್ಲಿ ನೆನಪಿಗೆ ಬರುವುದು ಎಳ್ಳು-ಬೆಲ್ಲ ಮತ್ತು ಕಬ್ಬು. ವಾಸ್ತವದಲ್ಲಿ ಮಕರ ಸಂಕ್ರಮಣ ಹಬ್ಬವು ನಾಲ್ಕು ದಿನಗಳ ಪರ್ಯಂತ ನಡೆಯುತ್ತದೆ. ಭೋಗಿ ಹಬ್ಬ, ಸಂಕ್ರಾಂತಿ ಮತ್ತು ಕರೀಹಬ್ಬ . ಇದರ ಆಚರಣೆ ಭಿನ್ನವಾಗಿರುತ್ತದೆ.

ಮೊದಲನೆಯ ದಿನ ಭೋಗಿ ಹಬ್ಬ, ಅಂದು ಮನೆ-ಮನಸಿನ ಕತ್ತಲು-ಕಲ್ಮಶ ತೊಳೆಯುವ ದಿನ. ಮನೆಯನ್ನು ಶುಭ್ರವಾಗಿಸಿ, ಮನಸ್ಸನ್ನೂ ಶುಚಿಗೊಳಿಸಿ, ಇಳೆಯಲ್ಲಿ ಬೆಳೆಯ ಸಮೃದ್ಧಿಗೆ ಮಳೆ ಸುರಿಸುವ ಹೊಣೆ ಹೊತ್ತಿರುವ ಇಂದ್ರನಿಗೆ ನಮಿಸುವ ದಿನ. ಕೆಲವೆಡೆ, ಮನೆಯ ಹೊರಗೆ ಕಟ್ಟಿಗೆ-ಬೆರಣಿಯಿಂದ ಅಗ್ನಿ ರಚಿಸಿ, ಅದರಲ್ಲಿ ಬೇಡವಾದ (ಮುರಿದ ಕುರ್ಚಿ ಇತ್ಯಾದಿ ಪೀಠೋಪಕರಣ ಮತ್ತಿತರ ಹಳೆಯ, ಬೇಡವಾದ ಸಾಮಗ್ರಿ) ವಸ್ತುಗಳನ್ನು ಸುಟ್ಟುಹಾಕಿ, ಒಳ್ಳೆಯ ಅಂಶಗಳನ್ನು ಉಳಿಸಿಕೊಳ್ಳುವ ಪ್ರತೀಕವಾಗಿ ಆಚರಣೆ ನಡೆಯುತ್ತದೆ.

ಎರಡನೇ ದಿನ ಮಕರ ಸಂಕ್ರಾಂತಿ. ಬಾಳು ಬೆಳಗುವ ಸೂರ್ಯನ ಆರಾಧನೆಯ ದಿನ. ಮನೆಯ ಹೊರಗೆ ಒಲೆ ಹಾಕಿ ಸಿಹಿ ಪೊಂಗಲ್ ಅಥವಾ ಹುಗ್ಗಿ ತಯಾರಿಸಿ ಸೂರ್ಯನಿಗೆ ಅರ್ಪಿಸುವುದು, ಮನೆಯೆದುರು ರಂಗವಲ್ಲಿ ಹಾಕುವುದು ಕಂಡುಬರುತ್ತದೆ. ಸುಖ ಸಮೃದ್ಧಿ, ಸದಾಶಯಗಳು ಜೀವನದಲ್ಲಿ ಉಕ್ಕಿ ಬರಲಿ ಎಂಬುದನ್ನು ಪ್ರತಿನಿಧೀಕರಿಸುವ ನಿಟ್ಟಿನಲ್ಲಿ ಈ ಸಿಹಿ ಪೊಂಗಲ್ ಅಥವಾ ಹುಗ್ಗಿಯನ್ನು ಒಲೆಯಲ್ಲಿ ಉಕ್ಕಿಸಲಾಗುತ್ತದೆ. ಇದನ್ನು ಪರಸ್ಪರ ಹಂಚಿ ತಿಂದು ಸಂಭ್ರಮಿಸುವ ದಿನವೂ ಇದೇ. ಇಂದು ಮನೆ ಮನೆಗೆ ತೆರಳಿ "ಎಳ್ಳುಬೆಲ್ಲ ಬೀರಿ ಒಳ್ಳೆಯ ಮಾತನಾಡಿ" ಎಂದು ಹಾರೈಸುತ್ತಾ, ಎಳ್ಳು, ಬೆಲ್ಲ, ಸಕ್ಕರೆಯಚ್ಚು, ಕೊಬ್ಬರಿ, ಸಕ್ಕರೆಬೊಂಬೆ, ಜತೆಗೆ ಹುರಿಗಡಲೆ, ನೆಲಗಡಲೆ ಸೇರಿಸಿ, ಕಬ್ಬು ಕೂಡ ಪರಸ್ಪರ ವಿನಿಮಯ ಮಾಡುತ್ತಾ, ನೆರೆಕರೆಯ ಬಾಂಧವ್ಯ ವೃದ್ಧಿಯಾಗಿಸಿಕೊಳ್ಳುವ ಆಚರಣೆ. ಇದಕ್ಕೆ ಎಳ್ಳುಬೀರುವುದು ಎನ್ನುತ್ತಾರೆ. ಇಲ್ಲಿ ಎಳ್ಳು ಶನಿಯ ಪ್ರತೀಕ ಮತ್ತು ಬೆಲ್ಲ ಸೂರ್ಯನ ಪ್ರತೀಕ. ಶನಿ-ಸೂರ್ಯನ ಅಂದರೆ ತಂದೆ-ಮಕ್ಕಳ ಬಾಂಧವ್ಯದ ಸಂಕೇತವೂ ಹೌದು. ಆದರೆ, ಇತ್ತೀಚೆಗಿನ ಅವಸರದ ಯುಗದಲ್ಲಿ ಎಲ್ಲ ಆಚರಣೆಗಳೂ ಒಂದೇ ದಿನಕ್ಕೆ ಸೀಮಿತವಾಗುತ್ತಿರುವುದು ನಾವು ಕಾಣುತ್ತಿರುವ ಸತ್ಯ.

ಸಂಕ್ರಾಂತಿಯ ಮೂರನೇ ದಿನ ಗೋವುಗಳನ್ನು ಆರಾಧಿಸುವ ದಿನ. ಗದ್ದೆ ಉಳುಮೆಗೆ ನೆರವಾಗುವ ಎತ್ತುಗಳು, ಕೃಷಿಕನಿಗೆ ನೆರವಾಗುವ ಹಸುಗಳನ್ನು ಸಿಂಗರಿಸಿ, ಆರತಿ ಮಾಡಿ, ಕಿಚ್ಚು ಹಾಯಿಸುವ ಸಂಪ್ರದಾಯಗಳನ್ನು ಹಲವೆಡೆ ನಾವು ಕಾಣಬಹುದು. ಅಂದು ತಾವು ಸಾಕಿರುವ ಜಾನುವಾರುಗಳಿಗೆ ರೈತರು ಬೆಚ್ಚನೆ ನೀರಿನ ಸ್ನಾನ ಮಾಡಿಸಿ, ಶೃಂಗಾರ ಮಾಡುತ್ತಾರೆ. ಸ್ವಲ್ಪ ಸಿರಿವಂತರಾದರೆ ಅವುಗಳಿಗೆ ಸುಗಂಧ ದ್ರವ್ಯ ಲೇಪನ ಮಾಡಿ, ಕಣ್ಣಿಗೆ ಕಾಡಿಗೆ ಹಚ್ಚಿ, ಹೂವಿನ ಹಾರಗಳನ್ನು ಹಾಕಿ ಶೃಂಗರಿಸುತ್ತಾರೆ. ಬೇಕಾದಷ್ಟು ಮೇವು ಕೊಟ್ಟು ಸಾಧು ಪ್ರಾಣಿಗಳನ್ನು ತಮ್ಮ ಬಂಧುಗಳಂತೆ ನೋಡಿಕೊಳ್ಳುತ್ತಾರೆ. ಪ್ರಾಣಿಗಳಿಗೆ ನೋವು ನೀಡಬಾರದೆಂಬ ಕಾರಣದಿಂದ ಆ ದಿನದಂದು ಪ್ರಾಣಿಗಳಿಗೆ ಕೆಲಸವಿಲ್ಲ. 

ವಿವಿಧತೆಯಲ್ಲಿ ಏಕತೆ 
ಬೇರೆ ಬೇರೆ ರಾಜ್ಯಗಳಲ್ಲಿ ವಿಭಿನ್ನ ಆಚರಣೆಯಿದೆ. ತಮಿಳುನಾಡಿನಲ್ಲಿ ಪೊಂಗಲ್ ಹಬ್ಬವೆಂದು ಕರೆಸಿಕೊಳ್ಳುವ ಇದು ಈ ವರ್ಷದಿಂದ ತಮಿಳು ಹೊಸ ವರ್ಷಾರಂಭ ದಿನವಾಗಿಯೂ ಅಧಿಕೃತವಾಗಿ ಮಾನ್ಯವಾಗಿದೆ. ಸಿಹಿ ಪೊಂಗಲ್ ಈ ದಿನದ ವಿಶೇಷ. ಕೇರಳ, ಕರ್ನಾಟಕದಲ್ಲಿ ಮಕರ ಸಂಕ್ರಾಂತಿಯಾಗಿ, ಮಹಾರಾಷ್ಟ್ರದಲ್ಲಿ ತಿಲ-ಗುಳ್ (ಎಳ್ಳುಂಡೆ) ಹಬ್ಬವಾಗಿ, ಆಂಧ್ರ ಪ್ರದೇಶದಲ್ಲಿ ಪೆದ್ದ ಪಂಡುಗ (ದೊಡ್ಡ ಹಬ್ಬ), ಅಸ್ಸಾಂನಲ್ಲಿ ಭೋಗಲಿ ಬಿಹು/ಮಾಘ ಬಿಹು, ಬಿಹಾರದಲ್ಲಿ ತಿಲ ಸಂಕ್ರಾಂತಿ, ಗುಜರಾತಿನಲ್ಲಿ ಗಾಳಿಪಟ ಉತ್ಸವವನ್ನೊಳಗೊಂಡ ಉತ್ತರಾಯಣ, ಮಧ್ಯಪ್ರದೇಶದಲ್ಲಿ ಸುಕಾರತ್/ಸಕಾರತ್, ಪಂಜಾಬ್ ಮತ್ತು ಹರ್ಯಾಣದಲ್ಲಿ ಲೋಹ್ರಿ, ಉತ್ತರ ಪ್ರದೇಶದಲ್ಲಿ ಕಿಚಿಡಿ/ಕಿಚಿರಿ ಮತ್ತು ಪಶ್ಚಿಮ ಬಂಗಾಳದಲ್ಲಿ ಗಂಗಾಸಾಗರ ಮೇಳದ ಮೂಲಕ ಸಂಕ್ರಾಂತಿಯನ್ನು ಸಡಗರದಿಂದ ಆಚರಿಸಲಾಗುತ್ತದೆ.

ಉತ್ತರಾಯಣ ಪುಣ್ಯಕಾಲವೇ ಇದು? 
ಉತ್ತರಾಯಣ ಪುಣ್ಯಕಾಲಕ್ಕೂ ಮಕರ ಸಂಕ್ರಾಂತಿಗೂ ಸಂಬಂಧ ಕಲ್ಪಿಸಲಾಗುತ್ತದೆಯಾದರೂ, ಅದರ ಬಗೆಗಿನ್ನೂ ವಾದ-ವಿವಾದಗಳಿವೆ. ನಮ್ಮ ದೇಶದಲ್ಲಿ ಚಾಂದ್ರಮಾನ (ಚಂದ್ರನ ಚಲನೆ ಆಧರಿಸಿದ) ಮತ್ತು ಸೌರಮಾನ (ಸೂರ್ಯನ ಚಲನೆ ಆಧರಿಸಿದ) ಎರಡು ಪಂಚಾಂಗಗಳನ್ನು ಅನುಸರಿಸಲಾಗುತ್ತದೆ. ಹೆಚ್ಚಾಗಿ ಹಬ್ಬ ಹರಿದಿನಗಳ ದಿನಗಳನ್ನು ನಿರ್ಣಯಿಸುವುದು ಚಾಂದ್ರಮಾನ ಅಥವಾ ನಿರಯನ ಪಂಚಾಂಗದ ಪ್ರಕಾರ. ಆದರೆ, ಮಕರ ಸಂಕ್ರಾಂತಿ ಮಾತ್ರ ಇದಕ್ಕೆ ಹೊರತಾಗಿದೆ. ಅದು ಸೂರ್ಯನ ಪರಿಭ್ರಮಣೆಯ ಆಧಾರದ ಸೌರಮಾನ ಅಥವಾ ಸಾಯನ ಪಂಚಾಗ ಆಧರಿತವಾಗಿದೆ. ಯಾಕೆಂದರೆ ಚಂದ್ರನ ಚಲನೆಯನ್ನು ಆಧರಿಸಿ (ಚಾಂದ್ರಮಾನ ಪದ್ಧತಿ ಪ್ರಕಾರದ ಪಂಚಾಂಗ ಅನುಸರಿಸಿ) ನೋಡಿದರೆ, ಉತ್ತರಾಯನ ಅಂದರೆ ಸೂರ್ಯನ ಉತ್ತರಾಭಿಮುಖ ಚಲನೆ ಆರಂಭವಾಗುವುದು ಡಿಸೆಂಬರ್ ೨೨ರ ಆಸುಪಾಸಿನಲ್ಲಿ ಬರುವ ವೈಕುಂಠ ಏಕಾದಶಿಯಂದು. ಅಂದು ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ಕಾರಣಕ್ಕೇ ಶರಶಯ್ಯೆಯಲ್ಲಿದ್ದ ’ಇಚ್ಛಾಮರಣಿ’ ಭೀಷ್ಮಾಚಾರ್ಯರು ಉತ್ತರಾಯಣ ಪುಣ್ಯಕಾಲದಲ್ಲಿ ದೇಹತ್ಯಾಗಕ್ಕಾಗಿ ಕಾದರು.

ಸೂರ್ಯನು ಉತ್ತರಾಭಿಮುಖವಾಗಿ ಪರಿಭ್ರಮಣ ನಡೆಸುವ ಈ ಉತ್ತರಾಯಣದ ಆರು ತಿಂಗಳ ಕಾಲವು ಅತ್ಯಂತ ಶ್ರೇಷ್ಠವಾದ ಶುಭ ದಿನಗಳನ್ನು ಹೊಂದಿರುತ್ತವೆ. ಈ ಅವಧಿಯಲ್ಲಿ ಮದುವೆ, ಗೃಹಪ್ರವೇಶ, ವಿವಾಹವೇ ಮೊದಲಾದ ಮಂಗಳ ಕಾರ್ಯಗಳು ಜರುಗುತ್ತವೆ.

ನಮಗೆ ಹಿರಿಯರು ಹೇಳಿದ್ದಿದೆ- ಮಗೂ... ನಮಗೆ ಒಂದು ವರ್ಷ ಎಂದರೆ, ದೇವ ದೇವತೆಗಳಿಗೆ ಒಂದು ದಿನ ಇದ್ದ ಹಾಗೆ ಎಂಬುದಾಗಿ. ಅದನ್ನೇ ನೆನಪಿಸಿಕೊಂಡು ಹೇಳಬಹುದಾದರೆ, ಆ ದೇವ ದೇವತೆಗಳ ಒಂದು ದಿನದಲ್ಲಿ ಆರು ತಿಂಗಳ ಹಗಲು ಆರಂಭವಾಗುವುದು ಉತ್ತರಾಯನ (ಉತ್ತರಾಯಣ) ಪುಣ್ಯಕಾಲದಲ್ಲಿ. ಕೊನೆಗೊಳ್ಳುವುದು ದಕ್ಷಿಣಾಯನದಲ್ಲಿ (ಸೂರ್ಯನು ಕರ್ಕ ರಾಶಿಗೆ ಪ್ರವೇಶಿಸಿದಾಗ - ಕರ್ಕ ಸಂಕ್ರಮಣ). ಉತ್ತರಾಯಣದಲ್ಲಿ ಹಗಲು ಹೆಚ್ಚಾಗಿ ರಾತ್ರಿ ಕಡಿಮೆ ಇದ್ದರೆ, ದಕ್ಷಿಣಾಯನದಲ್ಲಿ ರಾತ್ರಿ ಹೆಚ್ಚು, ಹಗಲಿನ ಅವಧಿ ಕಡಿಮೆ. ಸೌರಮಾನವೋ, ಚಾಂದ್ರಮಾನವೋ, ಸಾಯನವೋ... ನಿರಯನವೋ...ಒಟ್ಟಿನಲ್ಲಿ ಸೂರ್ಯ ಉತ್ತರಾಭಿಮುಖ ಚಲನೆ ಆರಂಭಿಸಿದ ಬಳಿಕ ಮೊದಲು ಬರುವ ಸಂಕ್ರಮಣವಿದು. ದೇವಾನುದೇವತೆಗಳ ರಾತ್ರಿ ಕಳೆದು ಹಗಲಾಗುವ ದಿನ ಈ ಮಕರ ಸಂಕ್ರಮಣ. ಅದೇ ರೀತಿ ನಮ್ಮ ಜೀವನದಲ್ಲೂ ಕತ್ತಲು ಕಳೆಯಲಿ, ಬೆಳಕು ಮೆರೆಯಲಿ... ಎಳ್ಳು ಬೆಲ್ಲವ ತಿಂದು ನಾಲ್ಕು ಒಳ್ಳೆಯ ಮಾತಾಡುವಂತಾಗಲಿ.

ಶ್ರೀ ದತ್ತಾತ್ರೇಯ ಜಯಂತಿ -೨೦೧೩

ಶ್ರೀ ದತ್ತಜಯಂತಿ ಒಂದು ಸಾಂಪ್ರದಾಯಿಕ ಜನ್ಮೋತ್ಸವ. ಮಾರ್ಗಶಿರ ಹುಣ್ಣಿಮೆಯಂದು ಮೃಗ ನಕ್ಷತ್ರದಲ್ಲಿ ಸಾಯಂಕಾಲ ದತ್ತನ ಜನ್ಮವಾಯಿತು, ಆದುದರಿಂದ ಆ ದಿನ ದತ್ತನ ಜನ್ಮೋತ್ಸವವನ್ನು ಎಲ್ಲ ದತ್ತಕ್ಷೇತ್ರಗಳಲ್ಲಿ ಆಚರಿಸಲಾಗುತ್ತದೆ ಈ ಬಾರಿ ಇಂದು ೧೭-ಡಿಸೆಂಬರ್-೨೦೧೩ ರಂದು ದತ್ತಾತ್ರೇಯ ಜಯಂತಿಯನ್ನು ನಾಡಿನಲ್ಲಿ ಎಲ್ಲೆಡೆ ಆಚರಿಸಲಾಗುತ್ತಿದೆ.

ದತ್ತಜಯಂತಿಯಂದು ಪೃಥ್ವಿಯ ಮೇಲೆ ದತ್ತತತ್ತ್ವವು ನಿತ್ಯದ ತುಲನೆಯಲ್ಲಿ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಈ ದಿನ ಮನಃಪೂರ್ವಕ ದತ್ತನ ನಾಮಜಪಾದಿ ಉಪಾಸನೆಯನ್ನು ಮಾಡಿದರೆ ದತ್ತತತ್ತ್ವದ ಆದಷ್ಟು ಹೆಚ್ಚು ಲಾಭವಾಗಲು ಸಹಾಯವಾಗುತ್ತದೆ. 

ದತ್ತನೆಂದರೆ (ನಿರ್ಗುಣದ ಅನುಭೂತಿಯನ್ನು) ಪಡೆದವನು. ‘ನಾನು ಬ್ರಹ್ಮನೇ ಆಗಿದ್ದೇನೆ, ಮುಕ್ತನೇ ಆಗಿದ್ದೇನೆ, ಆತ್ಮನೇ ಆಗಿದ್ದೇನೆ’ ಎಂಬ ನಿರ್ಗುಣದ ಅನುಭೂತಿಯನ್ನು ಯಾರಿಗೆ ಕೊಡಲಾಗಿದೆಯೋ ಅವನೇ ದತ್ತ. ಜನ್ಮದಿಂದಲೇ ದತ್ತನಿಗೆ ನಿರ್ಗುಣದ ಅನುಭೂತಿ ಇತ್ತು, ಸಾಧಕರಿಗೆ ಇಂತಹ ಅನುಭೂತಿ ಬರಲು ಎಷ್ಟೋ ಜನ್ಮಗಳವರೆಗೆ ಸಾಧನೆಯನ್ನು ಮಾಡಬೇಕಾಗುತ್ತದೆ. ಇದರಿಂದ ದತ್ತನ ಮಹತ್ವವು ಗಮನಕ್ಕೆ ಬರುತ್ತದೆ.

ಇತರ ಕೆಲವು ಹೆಸರುಗಳು

ಅವಧೂತ: 
೧. ‘ಅವಧೂತ ಚಿಂತನ ಶ್ರೀ ಗುರುದೇವ ದತ್ತ|’ ಎಂಬ ಜಯಘೋಷವನ್ನು ದತ್ತಭಕ್ತರು ಮಾಡುತ್ತಾರೆ. ಇದರ ಅರ್ಥವು ಹೀಗಿದೆ - ಅವಧೂತನೆಂದರೆ ಭಕ್ತ. ಭಕ್ತರ ಚಿಂತನೆಯನ್ನು ಮಾಡುವವನು, ಅಂದರೆ ಭಕ್ತರ ಹಿತಚಿಂತಕ, ಶ್ರೀ ಗುರುದೇವ ದತ್ತ.

೨. ಎಲ್ಲ ಸಂಕಲ್ಪ-ವಿಕಲ್ಪರಹಿತದ ವಿಭೂತಿಯನ್ನು ಅವನು ಸಂಪೂರ್ಣ ಶರೀರಕ್ಕೆ ಹಚ್ಚಿಕೊಂಡಿದ್ದನು. ಆದುದರಿಂದಲೇ ಅವನಿಗೆ ‘ಅವಧೂತ’ ಎಂದು ಕರೆಯಲಾಗುತ್ತಿತ್ತು; ಅನ್ಯಥಾ ಅವನು ಬ್ರಾಹ್ಮಣನೇ ಆಗಿದ್ದನು. ಸುತ್ತಲಿನ ಪ್ರಪಂಚವನ್ನು ಅವನು ಆತ್ಮಜ್ಞಾನದಿಂದ ತೊಳೆದಿದ್ದನು; ಆದುದರಿಂದಲೂ ಅವನಿಗೆ ‘ಅವಧೂತ’ ಎನ್ನಬೇಕು. ಅನ್ಯಥಾ ಅವನು ಓರ್ವ ವಿಖ್ಯಾತ ಬ್ರಾಹ್ಮಣನಾಗಿದ್ದನು. ಯಾವನು ‘ಅಹಂ’ ವನ್ನು ತೊಳೆಯುತ್ತಾನೆಯೋ ಅವನೇ ಅವಧೂತ, ಅವನೇ ಯೋಗಿ ಮತ್ತು ಅವನೇ ಪುನೀತನಾಗಿದ್ದಾನೆ. ಯಾವನು ಅಹಂಕಾರಪೀಡಿತನಾಗಿರು ತ್ತಾನೆಯೋ ಅವನೇ ಜನ್ಮಕರ್ಮಗಳಲ್ಲಿ ಪಾಪಿಯಾಗಿರುತ್ತಾನೆ ಎಂದು ತಿಳಿಯಬೇಕು. - ಏಕನಾಥೀ ಭಾಗವತ ಅಧ್ಯಾಯ ೭, ದ್ವಿಪದಿ ೨೭೦-೨೭೨

ದಿಗಂಬರ
‘ದಿಕ್ ಏವ ಅಂಬರಃ|’ ದಿಕ್ ಅಂದರೆ ದಿಕ್ಕುಗಳೇ ಯಾವನ ಅಂಬರವಾಗಿವೆಯೋ, ಅಂದರೆ ವಸ್ತ್ರವಾಗಿವೆಯೋ, ಅವನೇ ದಿಗಂಬರ; ಅಂದರೆ ಅವನು ಇಷ್ಟು ದೊಡ್ಡವನಾಗಿದ್ದಾನೆ, ಸರ್ವವ್ಯಾಪಿಯಾಗಿದ್ದಾನೆ.

ದತ್ತಾತ್ರೇಯ ಶಬ್ದವು ದತ್ತ + ಆತ್ರೇಯ ಹೀಗೆ ರೂಪುಗೊಂಡಿದೆ. ದತ್ತನ ಅರ್ಥವನ್ನು ವಿಷಯ ಪ್ರಾರಂಭದಲ್ಲಿ ನೀಡಲಾಗಿದೆ. ಆತ್ರೇಯ ಎಂದರೆ ಅತ್ರಿಋಷಿಗಳ ಮಗ.

ಜನ್ಮದ ಇತಿಹಾಸ

ದತ್ತನ ಜನ್ಮವು ಪ್ರಸ್ತುತ ಮನ್ವಂತರದ ಆರಂಭದಲ್ಲಿ ಪ್ರಥಮ ಪರ್ಯಾಯದಲ್ಲಿನ ತ್ರೇತಾಯುಗದಲ್ಲಿ ಆಗಿದೆ, ಎಂಬ ವರ್ಣನೆಯು ಪುರಾಣಗಳಲ್ಲಿ ಸಿಗುತ್ತದೆ. ಪುರಾಣಗಳಿಗನುಸಾರವಾಗಿ ಅತ್ರಿಋಷಿಗಳ ಪತ್ನಿ ಅನಸೂಯಾಳು ಮಹಾಪತಿವ್ರತೆಯಾಗಿದ್ದಳು. ಅವಳ ಪಾತಿವ್ರತ್ಯದ ಪರೀಕ್ಷೆ ತೆಗೆದುಕೊಳ್ಳಲು ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರು ನಿರ್ಧರಿಸಿದರು. ಒಮ್ಮೆ ಅತ್ರಿಋಷಿಗಳು ಅನುಷ್ಠಾನಕ್ಕಾಗಿ ಹೊರಗೆ ಹೋದಾಗ ತ್ರಿಮೂರ್ತಿಗಳು (ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರು) ಅತಿಥಿಗಳ ವೇಷದಲ್ಲಿ ಬಂದರು ಮತ್ತು ಅನಸೂಯಾಳ ಬಳಿ ಭೋಜನವನ್ನು ಬೇಡಿದರು. ಅದಕ್ಕೆ ಅನಸೂಯಾಳು, ‘ಋಷಿಗಳು ಅನುಷ್ಠಾನಕ್ಕಾಗಿ ಹೊರಗೆ ಹೋಗಿದ್ದಾರೆ ಅವರು ಬರುವ ತನಕ ತಡೆಯಿರಿ’ ಎಂದಳು. ಆಗ ತ್ರಿಮೂರ್ತಿಗಳು ಅನಸೂಯಾಳಿಗೆ, ‘ಋಷಿಗಳಿಗೆ ಹಿಂದಿರುಗಲು ತಡವಾಗಬಹುದು; ನಮಗೆ ತುಂಬಾ ಹಸಿವಾಗಿದೆ; ತಕ್ಷಣ ಆಹಾರವನ್ನು ನೀಡು, ಇಲ್ಲವಾದರೆ ನಾವು ಬೇರೆ ಕಡೆ ಹೋಗುತ್ತೇವೆ’. ‘ಆಶ್ರಮಕ್ಕೆ ಬಂದ ಅತಿಥಿಗಳಿಗೆ ನೀವು ಇಚ್ಛಾಭೋಜನವನ್ನು ನೀಡುತ್ತೀರಿ,’ ಎಂದು ನಾವು ಕೇಳಿದ್ದೇವೆ; ಆದುದರಿಂದ ನಾವು ಇಚ್ಛಾಭೋಜನವನ್ನು ಮಾಡಲು ಬಂದಿದ್ದೇವೆ’ ಎಂದು ಹೇಳಿದರು. ನಂತರ ಅನಸೂಯಾಳು ಅವರನ್ನು ಸ್ವಾಗತಿಸಿದಳು ಮತ್ತು ಭೋಜನಕ್ಕೆ ಕುಳಿತುಕೊಳ್ಳಲು ವಿನಂತಿಸಿದಳು. ಅದರಂತೆಯೇ ಅವರು ಭೋಜನಕ್ಕೆ ಕುಳಿತುಕೊಂಡರು. ಅವಳು ಊಟಕ್ಕೆ ಬಡಿಸಲು ಬಂದಾಗ ಅವರು, ‘ನೀನು ವಿವಸ್ತ್ರಳಾಗಿ ನಮಗೆ ಬಡಿಸಬೇಕು ಎಂಬುದು ನಮ್ಮ ಇಚ್ಛೆಯಾಗಿದೆ’ ಎಂದರು. ‘ಅತಿಥಿಗಳನ್ನು ಹಿಂದಿರುಗಿಸಿ ಕಳುಹಿಸುವುದು ಅಯೋಗ್ಯವಾಗುತ್ತದೆ. ನನ್ನ ಮನಸ್ಸು ನಿರ್ಮಲವಾಗಿದೆ. ನನ್ನ ಪತಿಯ ತಪಸ್ಸಿನ ಫಲವು ನನ್ನನ್ನು ಕಾಪಾಡುವುದು,’ ಎಂದು ವಿಚಾರ ಮಾಡಿ ಅವಳು ಅತಿಥಿಗಳಿಗೆ ‘ಸರಿ, ನೀವು ಭೋಜನಕ್ಕೆ ಕುಳಿತುಕೊಳ್ಳಿರಿ’ ಎಂದಳು. ನಂತರ ಅಡುಗೆಮನೆಗೆ ಹೋಗಿ ಪತಿಯ ಸ್ಮರಣೆಯನ್ನು ಮಾಡಿದಳು, ಮನಸ್ಸಿನಲ್ಲಿ ‘ಅತಿಥಿಗಳು ನನ್ನ ಮಕ್ಕಳೇ ಆಗಿದ್ದಾರೆ’ ಎಂಬ ಭಾವವನ್ನಿಟ್ಟುಕೊಂಡಳು. ನಂತರ ನೋಡಿದರೆ ಅಲ್ಲಿ ಅತಿಥಿಗಳ ಜಾಗದಲ್ಲಿ ಅಳುತ್ತಿರುವ ಮೂರು ಮಕ್ಕಳಿದ್ದರು! ಅವರನ್ನು ಮಡಿಲಲ್ಲಿ ತೆಗೆದುಕೊಂಡು ಅವಳು ಸ್ತನಪಾನವನ್ನು ಮಾಡಿಸಿದಳು. ಮಕ್ಕಳು ಅಳುವುದನ್ನು ನಿಲ್ಲಿಸಿದರು.

ಅಷ್ಟರಲ್ಲಿಯೇ ಅತ್ರಿಋಷಿಗಳು ಬಂದರು. ಅವಳು ಅವರಿಗೆ ಎಲ್ಲ ವೃತ್ತಾಂತವನ್ನು ತಿಳಿಸಿದಳು. ಅವಳು, ‘ಸ್ವಾಮಿನ್ ದೇವೇನ ದತ್ತಮ್|’ ಎಂದು ಹೇಳಿದಳು. ಇದರ ಅರ್ಥ - ‘ಹೇ ಸ್ವಾಮಿ, ದೇವರು ನೀಡಿದ (ಮಕ್ಕಳು).’ ಇದರಿಂದ ಅತ್ರಿಯವರು ಆ ಮಕ್ಕಳ ನಾಮಕರಣವನ್ನು ‘ದತ್ತ’ ಎಂದು ಮಾಡಿದರು. ನಂತರ ಅತ್ರಿಋಷಿಗಳು ಅಂತರ್‌ಜ್ಞಾನದಿಂದ ಆ ಮಕ್ಕಳ ನಿಜ ಸ್ವರೂಪವನ್ನು ತಿಳಿದುಕೊಂಡು ಅವರಿಗೆ ನಮಸ್ಕಾರ ಮಾಡಿದರು. ಮಕ್ಕಳು ತೊಟ್ಟಿಲಲ್ಲಿ ಉಳಿದವು ಹಾಗೂ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ಅವರೆದುರು ಪ್ರಕಟರಾದರು ಮತ್ತು ಪ್ರಸನ್ನರಾಗಿ ‘ವರ ಬೇಡಿರಿ’, ಎಂದರು. ಅತ್ರಿ ಮತ್ತು ಅನಸೂಯರು ‘ಬಾಲಕರು ನಮ್ಮ ಮನೆಯಲ್ಲಿಯೇ ಇರಲಿ’, ಎಂಬ ವರವನ್ನು ಕೇಳಿದರು. ಆ ವರವನ್ನು ನೀಡಿ ದೇವರು ತಮ್ಮತಮ್ಮ ಲೋಕಗಳಿಗೆ ತೆರಳಿದರು. ಮುಂದೆ ಬ್ರಹ್ಮದೇವನಿಂದ ಚಂದ್ರ, ಶ್ರೀವಿಷ್ಣುವಿನಿಂದ ದತ್ತ ಮತ್ತು ಶಂಕರನಿಂದ ದೂರ್ವಾಸರಾದರು. ಮೂವರಲ್ಲಿ ಚಂದ್ರ ಮತ್ತು ದೂರ್ವಾಸರು ತಪಸ್ಸಿಗೆ ಹೋಗಲು ಅನುಮತಿಯನ್ನು ಪಡೆದು ಕ್ರಮವಾಗಿ ಚಂದ್ರಲೋಕ ಮತ್ತು ತೀರ್ಥಕ್ಷೇತ್ರಗಳಿಗೆ ಹೋದರು. ಮೂರನೆಯ ದತ್ತನು ವಿಷ್ಣುವಿನ ಕಾರ್ಯಕ್ಕಾಗಿ ಭೂಮಿಯ ಮೇಲೆ ಉಳಿದನು.

ಇಂದಿನ ದತ್ತ ಜಯಂತಿ ನಿಮಿತ್ತ ಈ ಬರಹ ನಿಮಗಾಗಿ ಓಂಕಾರ ಸಮಿತಿ ಸಂಗ್ರಹಿಸಿ ಕೊಡಲಾಗಿದೆ.

ನಾರದ ಮುನಿ ವಿರಚಿತ ಶ್ರೀ ದತ್ತಾತ್ರೇಯ ಸ್ತೋತ್ರ :

ಜಟಾಧರಂ ಪಾಂಡುರಂಗಂ ಶೂಲಹಸ್ತಂ ಕೃಪಾನಿಧಿಮ್ |
ಸರ್ವರೋಗಹರಂ ದೇವಂ ದತ್ತಾತ್ರೇಯಮಹಂ ಭಜೇ ||೧||

ಅಸ್ಯ ಶ್ರೀದತ್ತಾತ್ರೇಯಸ್ತೋತ್ರಮಂತ್ರಸ್ಯ ಭಗವಾನ್ ನಾರದಋಷಿಃ |
ಅನುಷ್ಟುಪ್ ಛಂದಃ | ಶ್ರೀದತ್ತಪರಮಾತ್ಮಾ ದೇವತಾ |
ಶ್ರೀದತ್ತಪ್ರೀತ್ಯರ್ಥೇ ಜಪೇ ವಿನಿಯೋಗಃ ||

ಜಗದುತ್ಪತ್ತಿಕರ್ತ್ರೇ ಚ ಸ್ಥಿತಿಸಂಹಾರ ಹೇತವೇ |
ಭವಪಾಶವಿಮುಕ್ತಾಯ ದತ್ತಾತ್ರೇಯ ನಮೋಸ್ತುತೇ ||೧||

ಜರಾಜನ್ಮವಿನಾಶಾಯ ದೇಹಶುದ್ಧಿಕರಾಯ ಚ |
ದಿಗಂಬರದಯಾಮೂರ್ತೇ ದತ್ತಾತ್ರೇಯ ನಮೋಸ್ತುತೇ ||೨||

ಕರ್ಪೂರಕಾಂತಿದೇಹಾಯ ಬ್ರಹ್ಮಮೂರ್ತಿಧರಾಯ ಚ |
ವೇದಶಾಸ್ತ್ರಪರಿಜ್ಞಾಯ ದತ್ತಾತ್ರೇಯ ನಮೋಸ್ತುತೇ ||೩||

ಹ್ರಸ್ವದೀರ್ಘಕೃಶಸ್ಥೂಲ-ನಾಮಗೋತ್ರ-ವಿವರ್ಜಿತ |
ಪಂಚಭೂತೈಕದೀಪ್ತಾಯ ದತ್ತಾತ್ರೇಯ ನಮೋಸ್ತುತೇ ||೪||

ಯಜ್ಞಭೋಕ್ತೇ ಚ ಯಜ್ಞಾಯ ಯಜ್ಞರೂಪಧರಾಯ ಚ |
ಯಜ್ಞಪ್ರಿಯಾಯ ಸಿದ್ಧಾಯ ದತ್ತಾತ್ರೇಯ ನಮೋಸ್ತುತೇ ||೫||

ಆದೌ ಬ್ರಹ್ಮಾ ಮಧ್ಯ ವಿಷ್ಣುರಂತೇ ದೇವಃ ಸದಾಶಿವಃ |
ಮೂರ್ತಿತ್ರಯಸ್ವರೂಪಾಯ ದತ್ತಾತ್ರೇಯ ನಮೋಸ್ತುತೇ ||೬||

ಭೋಗಾಲಯಾಯ ಭೋಗಾಯ ಯೋಗಯೋಗ್ಯಾಯ ಧಾರಿಣೇ |
ಜಿತೇಂದ್ರ್ರಿಯಜಿತಜ್ಞಾಯ ದತ್ತಾತ್ರೇಯ ನಮೋಸ್ತುತೇ ||೭||

ದಿಗಂಬರಾಯ ದಿವ್ಯಾಯ ದಿವ್ಯರೂಪಧ್ರಾಯ ಚ |
ಸದೋದಿತಪರಬ್ರಹ್ಮ ದತ್ತಾತ್ರೇಯ ನಮೋಸ್ತುತೇ ||೮||

ಜಂಬುದ್ವೀಪಮಹಾಕ್ಷೇತ್ರಮಾತಾಪುರನಿವಾಸಿನೇ |
ಜಯಮಾನಸತಾಂ ದೇವ ದತ್ತಾತ್ರೇಯ ನಮೋಸ್ತುತೇ ||೯||

ಭಿಕ್ಷಾಟನಂ ಗೃಹೇ ಗ್ರಾಮೇ ಪಾತ್ರಂ ಹೇಮಮಯಂ ಕರೇ |
ನಾನಾಸ್ವಾದಮಯೀ ಭಿಕ್ಷಾ ದತ್ತಾತ್ರೇಯ ನಮೋಸ್ತುತೇ ||೧೦||

ಬ್ರಹ್ಮಜ್ಞಾನಮಯೀ ಮುದ್ರಾ ವಸ್ತ್ರೇ ಚಾಕಾಶಭೂತಲೇ |
ಪ್ರಜ್ಞಾನಘನಬೋಧಾಯ ದತ್ತಾತ್ರೇಯ ನಮೋಸ್ತುತೇ ||೧೧||

ಅವಧೂತಸದಾನಂದಪರಬ್ರಹ್ಮಸ್ವರೂಪಿಣೇ |
ವಿದೇಹದೇಹರೂಪಾಯ ದತ್ತಾತ್ರೇಯ ನಮೋಸ್ತುತೇ ||೧೨||

ಸತ್ಯಂರೂಪಸದಾಚಾರಸತ್ಯಧರ್ಮಪರಾಯಣ |
ಸತ್ಯಾಶ್ರಯಪರೋಕ್ಷಾಯ ದತ್ತಾತ್ರೇಯ ನಮೋಸ್ತುತೇ ||೧೩||

ಶೂಲಹಸ್ತಗದಾಪಾಣೇ ವನಮಾಲಾಸುಕಂಧರ |
ಯಜ್ಞಸೂತ್ರಧರಬ್ರಹ್ಮನ್ ದತ್ತಾತ್ರೇಯ ನಮೋಸ್ತುತೇ ||೧೪||

ಕ್ಷರಾಕ್ಷರಸ್ವರೂಪಾಯ ಪರಾತ್ಪರತರಾಯ ಚ |
ದತ್ತಮುಕ್ತಿಪರಸ್ತೋತ್ರ ದತ್ತಾತ್ರೇಯ ನಮೋಸ್ತುತೇ ||೧೫||

ದತ್ತ ವಿದ್ಯಾಢ್ಯಲಕ್ಷ್ಮೀಶ ದತ್ತ ಸ್ವಾತ್ಮಸ್ವರೂಪಿಣೇ |
ಗುಣನಿರ್ಗುಣರೂಪಾಯ ದತ್ತಾತ್ರೇಯ ನಮೋಸ್ತುತೇ ||೧೬||

ಶತ್ರುನಾಶಕರಂ ಸ್ತೋತ್ರಂ ಜ್ಞಾನವಿಜ್ಞಾನದಾಯಕಮ್ |
ಸರ್ವಪಾಪಂ ಶಮಂ ಯಾತಿ ದತ್ತಾತ್ರೇಯ ನಮೋಸ್ತುತೇ ||೧೭||

ಇದಂ ಸ್ತೋತ್ರಂ ಮಹಾದ್ದಿವ್ಯಂ ದತ್ತಪ್ರತ್ಯಕ್ಷಕಾರಕಮ್ |
ದತ್ತಾತ್ರೇಯಪ್ರಸಾದಾಚ್ಚ ನಾರದೇನ ಪ್ರಕೀರ್ತಿತಮ್ ||೧೮|| ||

ಇತಿ ಶ್ರೀನಾರದಪುರಾಣೇ ನಾರದವಿರಚಿತಂ ದತ್ತಾತ್ರೇಯಸ್ತೋತ್ರಂ ಸಂಪೂರ್ಣಮ್ || 

ಗೀತಾ ಜಯಂತಿ - ೨೦೧೩

ಮಾರ್ಗಶಿರಮಾಸದ ಶುಕ್ಲ ದಶಮಿ ಮತ್ತು ಏಕಾದಶಿ ಸೇರಿದ ದಿನ (ಅಂದರೆ ಈ ಬಾರಿ ೧೩-ಡಿಸೆಂಬರ್ ೨೦೧೪), ಶ್ರೀ ಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು ಬೋಧಿಸಿದನೆಂಬುದು ನಂಬುಗೆ. ಅಂದು, ಪಾಂಡವರಿಗೂ ಕೌರವರಿಗೂ ಕುರುಕ್ಷೇತ್ರದಲ್ಲಿ ನಡೆದ ಮಹಾಭಾರತ ಯುದ್ಧದ ಆರಂಭದ ದಿನ. 

ಭಗವದ್ಗೀತೆಯು ನಮ್ಮ ಪಂಚಾಂಗಗಳ ಪ್ರಕಾರ ಕಲಿಯುಗಾದಿ ಲೆಕ್ಕದಲ್ಲಿ ೫೧೦೦ ವರ್ಷಗಳ ಹಿಂದೆ ನಡೆದ ಉಪದೇಶ.ಇತಿಹಾಸ ಸಂಶೋಧಕರು ಇದನ್ನು ೩೫೦೦ ವರ್ಷಗಳಷ್ಟು ಹಿಂದೆ ನೆಡೆದದ್ದೆಂದು ಸಾಧಿಸುತ್ತಾರೆ. ಭಗವದ್ಗೀತೆಯ ಬೋಧನೆಯ ಸನ್ನಿವೇಶವು ಬಹಳ ವಿಚಿತ್ರವಾಗಿದೆ. ಒಂದು ಕಡೆ ಪಾಂಡವರ ಏಳು ಅಕ್ಷೋಹಿಣಿ ಸೇನೆ; ಎದುರಿಗೆ ಕೌರವರ ಹನ್ನೊಂದು ಅಕ್ಷೋಹಿಣಿ ಸೇನೆ. ಇವೆರಡರ ಮದ್ಯೆ ಅರ್ಜುನನ ರಥ; ಶ್ರೀಕೃಷ್ಣ ಸಾರಥಿ. ಈ ಘಟ್ಟದಲ್ಲಿಅರ್ಜುನನಿಗೆ ಬಂಧುಗಳನ್ನು ಕೊಲ್ಲಬೇಕಾದ ದುಗುಡ. ಈ ಬಂಧು ಬಾಂಧವರನ್ನು ಕೊಂದು ಪಡೆವ ರಾಜ್ಯವೇ ಬೇಡ; ಭಿಕ್ಷಬೇಡಿ ಜೀವಿಸುವುದೇ ಲೇಸು ಎಂಬ ಭಾವನೆ. ಸಂದಿಗ್ಧ ಸ್ಥಿತಿಯಲ್ಲಿದ್ದ ಅರ್ಜನ ಶ್ರೀ ಕೃಷ್ಣನನ್ನು ಕುರಿತು, ನಾನು ನಿನ್ನ ಶಿಷ್ಯ, ಯುದ್ಧ ಮಾಡುವುದೋ ಬಿಡುವುದೋ, ಧರ್ಮಸಂಕಟದಲ್ಲಿದ್ದೇನೆ, ಯಾವುದು ಶ್ರೇಯಸ್ಸು? ನಿಶ್ಚಿತವಾಗಿ ಹೇಳು. ಎಂದ. ಶ್ರೀ ಕೃಷ್ಣನನ್ನು ಈ ಗೀತೋಪದೇಶದ ಸಂದರ್ಭದಲ್ಲಿ ಮಾತ್ರ ಭಗವಂತನು ಹೇಳಿದನು ಎಂದಿದೆ. ಅದರಿಂದಲೇ ಶ್ರೀಕೃಷ್ಣನು ಅರ್ಜುನನಿಗೆ ಉಪದೇಶ ಮಾಡಿದ ಗೀತಾ ರೂಪದಲ್ಲಿರುವ ಸಂಭಾಷಣೆಗಳು ಭಗವದ್ಗೀತೆ ಎಂದು ಹೆಸರಾಗಿದೆ.

ಭಗವದ್ಗೀತೆಯು ಹದಿನೆಂಟು ಅಧ್ಯಾಯಗಳಿಂದ ಕೂಡಿದ್ದರೂ, ಶ್ರೀಕೃಷ್ಣನ ಉಪದೇಶ, ಎರಡನೆಯ ಅಧ್ಯಾಯದ ಹನ್ನೊಂದನೇ ಶ್ಲೋಕದಿಂದ ಆರಂಭವಾಗಿದೆ. ಮುಂದೆ ಅದೇ ಅಧ್ಯಾಯದ ಐವತ್ಮೂರನೇ ಶ್ಲೋಕದವರೆಗೆ, ಎಂದರೆ ನಲವತ್ಮೂರು ಶ್ಲೋಕಗಳಲ್ಲಿ ಅರ್ಜುನನಿಗೆ ಹೇಳಬೇಕಾದುದನ್ನೆಲ್ಲಾ ಹೇಳಿಯಾಯಿತು. ಆದರೆ ಸಂದೇಹ ನಿವಾರಣೆಗಾಗಿ, ಅವನ ಪ್ರಶ್ನೆಗಳಿಗೆ ಉತ್ತರ ರೂಪವಾಗಿ ಉಳಿದ ಆರುನೂರು ಶ್ಲೋಕಗಳು ಬಂದಿವೆ. ಅರ್ಜುನನ ವಿಷಾದದ ಸಂದರ್ಭದ ಶ್ಲೋಕಗಳೂ ಸೇರಿ ಭಗವದ್ಗೀತೆಯ ಹದಿನೆಂಟು ಅಧ್ಯಾಯಗಳಲ್ಲಿ ಒಟ್ಟು ಏಳು ನೂರು ಶ್ಲೋಕಗಳಾಗತ್ತವೆ.

ಗೀತೆ ಚಿಕ್ಕದಾದರೂ ಹಿಂದೂ ಧರ್ಮದ ಮಹಾ ಗ್ರಂಥವೆಂದು ಹೆಸರು ಪಡೆದಿದೆ. ಅದನ್ನು ಉಪನಿಷತ್ತುಗಳ ಸಾರವೆಂದು ಹೇಳುತ್ತಾರೆ. ಅದರಲ್ಲಿ ಅನೇಕ ಬಗೆಯ ಯೋಗಗಳನ್ನು ಹೇಳಿದ್ದರೂ, ಅದರಲ್ಲಿ ಹೇಳಿದ ಕರ್ಮಯೋಗ, ಜ್ಞಾನಯೋಗಗಳೇ ಬಹಳ ಪ್ರಸಿದ್ಧವಾಗಿವೆ. ಅದನ್ನು ಅರ್ಥ ಮಾಡಿಕೊಳ್ಳುವುದು ಸಮುದ್ರದಿಂದ ಬೊಗಸೆ ನೀರನ್ನು ತಂದಂತೆ. ಆದನ್ನು ಓದಿದವರು, ಅನುಷ್ಠಾನ ಮಾಡುವವರು ಗೀತೆಯನ್ನು ಪೂರ್ಣ ಅರಿತಿದ್ದೇವೆಂದು ಹೇಳುವಂತಿಲ್ಲ. ಇದನ್ನು ಕೇಳಿದ ಮಾತ್ರದಿಂದ ಅರಿಯಲಾರರು, ಎಂಬುದು ಅದರಲ್ಲಿರುವ ಎಚ್ಚರಿಕೆ. ಅದರಲ್ಲಿರುವ ಎಲ್ಲಾ ಉಪದೇಶಗಳೂ ಎಲ್ಲರಿಗೂ ಅನ್ವಯಿಸಲಾರದೆಂದು ನನ್ನ ಭಾವನೆ. ಅವರವರ ಗುಣ ಸ್ವಭಾವ, ನಂಬುಗೆಗಳಿಗೆ ತಕ್ಕಂತೆ ಬೇಕಾದ ಯೋಗ ವನ್ಮ್ನ ಆರಿಸಿಕೊಳ್ಳಬಹ್ಮದು. ಸದ್ಧರ್ವ್ಮದ ದುಡಿಮೆಯುಳ್ಳ ಸಜ್ಜನಿಕೆಯ ಪರೋಪಕಾರಿ ಗೃಹಸ್ಥ ಜೀವನ, ಕರ್ಮಯೋಗದ ಆದರ್ಶ ಜೇವನವಾಗಬಹುದೆಂದು ನನ್ನಭಾವನೆ. ಈ ಮಹಾನ್ ಗ್ರಂಥವನ್ನು ಪ್ರತಿಯೊಬ್ಬರೂ ಒಮ್ಮೆಯಾದರೂ ಓದಬೇಕು. ಕಾಲ ಧರ್ಮಕ್ಕನುಸರಿಸಿ ತಮಗೆಬೇಕಾದದ್ದನ್ನು ಆಯ್ದುಕೊಳ್ಳಬಹುದು. ಅದರಲ್ಲಿರುವ ಸರ್ವಕಾಲಿಕ ಸತ್ಯಗಳು ಮಾನವರೆಲ್ಲರಿಗೂ ಅನ್ವಯವಾಗುವಂತಿವೆ.

ಶ್ರೀ ಆಂಜನೇಯ ಪೂಜೆ - ೨೦೧೩

|| ಮನೋಜವಂ ಮಾರುತತುಲ್ಯವೇಗಂ, ಜಿತೇಂದ್ರಿಯಂ ಬುದ್ಧಿಮತಾಂವರಿಷ್ಟಂ ||
|| ವಾತಾತ್ಮಜಂ ವಾನರಯೋಧಮುಖ್ಯಂ, ಶ್ರೀರಾಮಧೂತಂ ಶಿರಸಾ ನಮಾಮಿ ||

ನಾವೆಲ್ಲರೂ ನಮ್ಮ ಚೈತನ್ಯಮಯವಾದ ದೇಹ, ಮನಸ್ಸು, ವಾಕ್ ಇತ್ಯಾದಿ ಶಕ್ತಿಗಳನ್ನು ದೇವರಿಂದ ವರಪ್ರಸಾದವಾಗಿ ಪಡೆದುಕೊಂಡು ಬಂದಿದ್ದೇವೆ. ಆದರೆ ಇವುಗಳನ್ನು ಬೇಡದಿರುವ ವಿಚಾರಗಳಲ್ಲಿ ತೊಡಗಿಸುತ್ತ ನಮ್ಮ ಶಕ್ತಿಗಳನ್ನು ಕ್ಷೀಣಗೊಳಿಸುತ್ತಿದ್ದೇವೆ. ತೀವ್ರವಾಗಿ ಇದರ ಬಗ್ಗೆ ವಿಚಾರ ಮಾಡಿದಾಗ ನಮಗೆ ಅರಿವಾಗುತ್ತದೆ, ನನ್ನಲ್ಲಿ ಆ ದೈವೀಕ ಅಂಶ ದಿನೇ ದಿನೇ ಕಡಿಮೆಯಾಗುತ್ತಿದೆ ಎಂದು. ಆಗಿದ್ದು ಹೇಗೆ ಅಂದರೆ ದಿನ ನಿತ್ಯವೂ ನಾನಾ ಕಾರಣಗಳಿಂದ ನಾವು ಮನಸ್ಸಿಗೆ ಧ್ಯಾನದ ಆಹಾರ ಕೊಡುವುದಿಲ್ಲ. 

ಮನಸ್ಸು ಅಂದರೆ ಹೇಗೆ ಇಟ್ಟುಕೊಳ್ಳಬೇಕು, ಅದನ್ನು ಹತೋಟಿಗೆ ಹೇಗೆ ತರಬೇಕೆಂದು ನಮಗೆ ತಿಳಿಸಿಕೊಟ್ಟವನು ಆಂಜನೇಯ. ಶ್ರೀರಾಮನಿಗೆ ಆಂಜನೇಯ ತನ್ನ ದೇಹ ಮಾತ್ರ ಅಲ್ಲ, ನಿರಂತರವಾಗಿ ಕೊಟ್ಟದ್ದು ತನ್ನ ಮನಸ್ಸನ್ನು. ಅವನ ಎದೆಯಲ್ಲಿ, ಮನಸ್ಸಿನಲ್ಲಿ, ಹೃದಯ ಕಮಲದಲ್ಲಿ ನಿರಂತರವಾಗಿ ಇದ್ದದ್ದು ರಾಮ, ಲಕ್ಷ್ಮಣ, ಸೀತೆಯರು ಮಾತ್ರ. ಶ್ರೀರಾಮ ಅವನ ಭಕ್ತಿಗೆ ಮೆಚ್ಚಿ ವರವನ್ನು ಕರುಣಿಸಿದಾಗ, ಆಂಜನೇಯ ಮುಕ್ತಿಯನ್ನು ಬಯಸಲಿಲ್ಲ- ಸದಾ ನನ್ನ ಮನಸ್ಸಿನಲ್ಲಿ ನೀನೇ ನೆಲೆಸಬೇಕು, ಏಳೇಳು ಲೋಕಗಳಲ್ಲಿ ಸಂಚರಿಸುತ್ತ ನಿನ್ನ ಗುಣಗಾನವನ್ನು ನಾನು ಮಾಡಬೇಕು' ಎಂದನು. ಆದ್ದರಿಂದ ಶ್ರೀರಾಮನು ಆಂಜನೇಯನಿಗೆ ಚಿರಂಜೀವತ್ವವನ್ನು ಕರುಣಿಸಿದನು.

ಕಲಿಯುಗದಲ್ಲಿ ಜನರು ಭಕ್ತಿ ಎಂದರೇನು, ಮನಸ್ಸನ್ನು ಹೇಗೆ ತಿಳಿಯಾಗಿ ಇಟ್ಟುಕೊಳ್ಳಬಹುದು ಎನ್ನುವ ವಿಚಾರ ಆಂಜನೇಯನಿಂದ ತಿಳಿದುಕೊಳ್ಳಲಿ ಎನ್ನುವುದೇ ಈ ಪೂಜೆಯ ಉದ್ದೇಶ. ತನ್ನ ಮನಸ್ಸನ್ನೇ ಅಲ್ಲದೆ ಆಂಜನೇಯ ತನ್ನ ದೇಹದ ಕಣಕಣವನ್ನು, ನರನಾಡಿಗಳೆಲ್ಲವನ್ನೂ ಶ್ರೀರಾಮನಿಗಾಗಿ ಅರ್ಪಿಸಿಬಿಟ್ಟ. ಆಗ ಅವನ ದೇಹಕ್ಕೆ ಪುಷ್ಟಿ, ಮನಸ್ಸಿಗೆ ಧೈರ್ಯ ಬಂತು. ತಾನೇ ಒಂದು ಶಕ್ತಿಯಾಗಿ ನಿಂತ.

ಬರುವ ೨೭ ನೇ ಡಿಸೆಂಬರ್ ೨೦೧೩ ರಂದು ಓಂಕಾರ ಸಮಿತಿಯು ಶ್ರೀ ಆಂಜನೇಯ ಸ್ವಾಮಿಯ ಪೂಜೆಯನ್ನು ಹಮ್ಮಿಕೊಂಡಿರುತ್ತದೆ. ಎಲ್ಲರೂ ತಮ್ಮ ಪರಿವಾರ, ಬಂಧು-ಬಾಂಧವರೊಂದಿಗೆ ಆಗಮಿಸಿ ಶ್ರೀ ಆಂಜನೇಯ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ. 

Sri Aanjaneya Pooje - 2013

Dear Omkar Members,

Omkar celebrates its ONE YEAR completion and has been a year serving Kannadigas and Karnataka community.  Omkar takes this opportunity to thank all of its members who supported all these days. On this occasion, your valuable feedback is highly appreciable and helps us to serve and build the community in a better way. 

Please send your feedback to omkarsamithi@gmail.com

Omkar's debut program started with Sri Aanjaneys Pooja in Dec-2012 and with the blessings of Sri Lord Aanjaneya Swamy, Omkar could organize unique and outstanding programs since then and intend to continue in coming days.

Sri Aanjaneya Pooja -2013 is organized on coming 27-December-2013 at Sri Krishna Temple Hall, Darsait. Detailed program shall be sent to you later with the Invitation

In mean time, Omkar invites supporters and volunteers for the upcoming program from its members. Interested members are requested to send their names for any of the services to omkarsamithi@gmail.com.  

Or Send email using Contact us Section from this blog


Omkar Team

ತುಳಸಿ ವಿವಾಹ ವಿಶೇಷಾಂಕ - ೨೦೧೩

|| ಪ್ರಸೀದ ತುಲಸೀದೇವಿ ಪ್ರಸೀದ ಹರಿವಲ್ಲಭೇ ಕ್ಷೀರೋದಮಥನೋದ್ಭೂತೇ ತುಲಸಿ ತ್ವಾಂ ನಮಾಮ್ಯಹಮ್ ||

ಭಾರತೀಯ ಸಂಸ್ಕೃತಿಯಲ್ಲಿ ತುಳಸಿಗೆ ಅತ್ಯಂತ ಪೂಜನೀಯ ಹಾಗೂ ಗೌರವ ಸ್ಥಾನವಿದೆ. ಭಾರತದಲ್ಲಿ ಪ್ರತಿಯೊಂದು ಮನೆಯ ಮುಂಭಾಗ ಅಥವಾ ಹಿಂಭಾಗದಲ್ಲಿ ತುಳಸಿಕಟ್ಟೆ ಸ್ಥಾಪಿಸಿರುತ್ತಾರೆ. ಎಲ್ಲಾ ಧಾರ್ಮಿಕ  ಆಚರಣೆಗೂ ತುಳಸಿಯನ್ನು ಬಳಸುತ್ತಾರೆ.

ಉತ್ಥಾನ ದ್ವಾದಶಿ
ಕಾರ್ತಿಕ ಮಾಸದ ಹಬ್ಬಗಳಲ್ಲಿ ಅತ್ಯಂತ ಪ್ರಸಿದ್ಧವಾದುದು ಉತ್ಥಾನ ದ್ವಾದಶಿ. ಉತ್ಥಾನ ಎಂದರೆ ಏಳುವುದು ಎಂದರ್ಥ. ಅಂದರೆ, ಶ್ರೀಮನ್ನಾರಾಯಣನು ಪಾಲ್ಗಡಲಿನಲ್ಲಿ ತನ್ನ ಸುಖಶಯನದಿಂದ ಮೇಲಕ್ಕೆದ್ದು, ತನ್ನ ನಿದ್ರಾಮುದ್ರೆಯನ್ನು ಭಕ್ತರಿಗೆ ಸಾಕ್ಷಾತ್ಕರಿಸುವ ಈ ದಿನವನ್ನು  ಕ್ಷೀರಾಭಿವ್ರತವೆಂದು ಹಲವು ಕಡೆ ಆಚರಿಸುವರು. 

ತುಳಸೀ ಕಲ್ಯಾಣ
ದೀಪಾವಳಿ ಸಂಭ್ರಮ ಮುಗಿಯುತ್ತಿರುವ ಬೆನ್ನಲ್ಲೇ ಕಾರ್ತಿಕ ಮಾಸದ ವೈಭವ. ಈ ಮಾಸದಲ್ಲೂ ಹಬ್ಬಗಳ ಸರಮಾಲೆ. ಎಲ್ಲೆಲ್ಲೂ ಸಡಗರ. ಇದಕ್ಕೆ ಮುನ್ನುಡಿ ಬರೆದಿದೆ ಉತ್ಥಾನ ದ್ವಾದಶಿ ಪರ್ವ ಅರ್ಥಾತ್ತುಳಸಿ ವಿವಾಹ.

ಸುಲಭಾ, ಸುರನಾ, ಬಹುಮಂಜರಿ, ಶೂಲಕ್ಷ್ಮೀ, ದೇವ ದುಂದುಬಿ, ಪಾವನೀ ವಿಷ್ಣು ಪ್ರಿಯಾ, ದಿವ್ಯ, ಭಾರತೀ ಹೀಗೆ ವಿಭಿನ್ನ ಹೆಸರುಗಳಿಂದ ಕರೆಸಿಕೊಳ್ಳುವ ತುಳಸಿಯ ವಿವಾಹಕ್ಕೆ ನಾಡಿನಾದ್ಯಂತ ಅದ್ದೂರಿಯ ತಯಾರಿ. ಕಾರ್ತಿಕಮಾಸ ಶುಕ್ಲಪಕ್ಷದ 12ನೇ ದಿನ, ಕಾರ್ತಿಕ ಶುದ್ಧ ದ್ವಾದಶಿಯಂದು ಆಕೆಯ ವಿವಾಹಕ್ಕೆ ಮುಹೂರ್ತ ನಿಗದಿಯಾಗಿದೆ (ಅಂದರೆ ೧೪ ನೇ ತಾರೀಖು ನವೆಂಬರ್ ೨೦೧೩)

ಕೇವಲ ಹಬ್ಬವಲ್ಲ. ಹಬ್ಬದ ಹೆಸರಿನಲ್ಲಿ ಆರೋಗ್ಯ ಕಾಪಾಡುವುದು ಈ ಪರ್ವದ ವಿಶೇಷ. ಈಕೆ ಹಿಂದು ಧರ್ಮೀಯರಿಗೆ ದೈವ ಸ್ವರೂಪಿಯಾಗಿದ್ದರೆ, ಉಳಿದ ಧರ್ಮೀಯರಿಗೆ ವಿವಿಧ ಕಾಯಿಲೆ ವಾಸಿಮಾಡಿ ಜೀವ ನೀಡಬಲ್ಲ ಸಂಜೀವಿನಿಯೂ ಹೌದು. ಇದಕ್ಕಾಗಿಯೇ ಆಯುರ್ವೇದದಲ್ಲಿ ತುಳಸಿಗೆ ಪ್ರಥಮ ಸ್ಥಾನ. ಎಲೆ, ಬೇರು, ಬೀಜ ಸೇರಿದಂತೆ ಸಂಪೂರ್ಣ ಗಿಡವೇ ಔಷಧಯುಕ್ತ. ತುಳಸಿಯ ವಿಶಿಷ್ಟ ಸುವಾಸನೆಯು ಕ್ರಿಮಿ ಕೀಟ, ರೋಗಾಣುಗಳನ್ನು ದೂರವಿಡುತ್ತದೆ.

ತುಳಸಿ ಎಲೆಗಳನ್ನು ನೀರಿನಲ್ಲಿ ಹಾಕಿಟ್ಟರೆ ಸೂಕ್ಷ್ಮ ರೋಗಾಣುಗಳು ನಾಶವಾಗುತ್ತದೆ. ಸೂರ್ಯೋದಯಕ್ಕೆ ಮುನ್ನ, ಅಂದರೆ ಬ್ರಾಹ್ಮಿ ಮುಹೂರ್ತದಲ್ಲಿ ಇದರ ಸೇವನೆಯಿಂದ ಸಾಕಷ್ಟು ರೋಗ ನಿವಾರಣೆಯಾಗುತ್ತದೆ. ಇದರ ಎಲೆಗಳ ಸೇವನೆಯಿಂದ ಸ್ವಸ್ಥ ಹಾಗೂ ಸುಂದರವಾದ ಮೈಕಟ್ಟನ್ನು ಹೊಂದಬಹುದು. ಅಜೀರ್ಣ, ಮಲಬದ್ಧತೆ, ಗ್ಯಾಸ್, ಹುಳಿ ಇತ್ಯಾದಿಗಳಿಗೆ ಇದು ರಾಮಬಾಣ.

ಅದಕ್ಕಾಗಿಯೇ ಈ ಹಬ್ಬದ ನೆಪ ಅಷ್ಟೇ. ಕಾರ್ತಿಕ ಮಾಸದಲ್ಲಿ ಪ್ರತಿದಿನ ತುಳಸಿಯನ್ನು ಪೂಜಿಸಿ ನಮಸ್ಕರಿಸಿದರೆ ಒಂದು ಯುಗದಲ್ಲಿ ಮಾಡಿದ ಪಾಪದಿಂದ ಮುಕ್ತಿ ದೊರೆಯುತ್ತದೆ ಎಂಬ ನಂಬಿಕೆ ಹುಟ್ಟುಹಾಕಿರುವುದೂ ಇದಕ್ಕಾಗಿಯೇ. ಉತ್ಥಾನ ದ್ವಾದಶಿಯಂದು ತುಳಸೀ ವೃಂದಾವನಕ್ಕೆ ಧೂಪ-ದೀಪ-ನೈವೇದ್ಯಗಳಿಂದ ಪೂಜಿಸುತ್ತಾರೆ.  ವಿಶೇಷವಾಗಿ ಶಂಖದಿಂದ ಹಾಲಿನ ಅಭಿಷೇಕ ಮಾಡಬೇಕು. ಅಂದು ತುಳಸಿಯನ್ನು ಅಗಸೆ ಹಾಗೂ ನೆಲ್ಲಿ ಟೊಂಗೆಯೊಂದಿಗೆ ಕಟ್ಟಿ ವೈಭವದಿಂದ ಪೂಜಿಸಿ, ಆರತಿ ಮಾಡಿ, ದಾನಾದಿಗಳನ್ನು ಮಾಡಬೇಕು.  ಅಗಸೆ, ನೆಲ್ಲಿ ಮತ್ತು ತುಳಸಿ ಇವು ಮೂರು ಬಹಳ ಪವಿತ್ರವಾದುವು. ವೃಂದಾದೇವಿಯ ಅನುಗ್ರಹಕ್ಕೆ ಪಾತ್ರರಾಗಲು ತ್ರಿಮೂರ್ತಿಗಳೂ ಅವರ ಪತ್ನಿಯರಾದ ಶಕ್ತಿದೇವಿಯರೂ ಮತ್ತು ಇತರೆ ದೇವತೆಗಳೂ ಉತ್ಥಾನ ದ್ವಾದಶಿಯಂದು ಒಟ್ಟಾಗಿ ಸೇರುತ್ತಾರೆಂದೂ, ಇಷ್ಟಾರ್ಥಗಳನ್ನು ಪೂರೈಸುತ್ತಾರೆಂದು, ಭಕ್ತಿಯಿಂದ ತುಳಸಿಗೆ ನಮಿಸಿ ಕೃತಾರ್ಥರಾಗುತ್ತಾರೆ.

ತುಳಸಿಯ ಪೌರಾಣಿಕ ಹಿನ್ನೆಲೆ
ಹಿಂದೆ ಸಮುದ್ರ ಮಥನ ಮಾಡುವಾಗ ಬಂದಂತಹ ಅಮೃತ ಕಳಶವನ್ನು ಮಹಾವಿಷ್ಣು  ಪಡದುಕೊಳ್ಳುತ್ತಾನೆ. ಆ ಸಂದರ್ಭದಲ್ಲಿ ಆತನ ಕಣ್ಣಿನಿಂದ ಆನಂದಭಾಷ್ಪ ಉಕ್ಕಿ ಬರುತ್ತದೆ. ಇದರ ಒಂದು ಹನಿ ಕಳಶದಲ್ಲಿ ಬಿದ್ದಾಗ ಅದು ತುಳಸಿಗಿಡವಾಯಿತು. ಅಮೃತದಿಂದ ಜನಿಸಿದಂತಹ ತುಳಸಿಯನ್ನು ಯಾವ ವಿಧವಾಗಿ ಉಪಯೋಗಿಸಿದರೂ ಅದು ಅಮೃತಮಯವಾಗುತ್ತದೆ. ಇಷ್ಟು ಪವಿತ್ರವಾದ ತುಳಸಿ ಶ್ರೀಮನ್ನಾರಾಯಣನಿಗೆ ಲಕ್ಷ್ಮಿಯಷ್ಟೇ ಪ್ರಿಯಳು. ಆದುದರಿಂದಲೇ ಮೂರೂ ಲೋಕಗಳಲ್ಲಿ ತುಳಸಿಗೆ ಸಮಾನವಾದುದು ಯಾವುದೂ ಇಲ್ಲ ಎಂದು ತಿಳಿಯಲಾಗಿದೆ.  ತುಳಸಿ ಇಲ್ಲದೇ ಮಾಡಿದ ಪೂಜೆ ನಿಷ್ಫಲವಾಗುವುದು. ತುಳಸಿದಳಗಳು ದೊರೆಯದಿದ್ದರೆ, ತುಳಸೀ ಕಾಷ್ಠದಿಂದ ಪೂಜೆ ಮಾಡಬಹುದು ಅಥವಾ ಹಿಂದಿನ ದಿನ ಉಪಯೋಗಿಸಿದ ತುಳಸೀ ದಳಗಳನ್ನೇ ತೊಳೆದು ಪುನಃ ದೇವರಿಗೆ ಸಮರ್ಪಿಸಬಹುದು. ತುಳಸೀಕಾಷ್ಠಗಳೂ ದೊರೆಯದಿದ್ದರೆ, ಪೂಜಾಸಮಯದಲ್ಲಿ ತುಳಸೀನಾಮದ ಸಂಕೀರ್ತನೆ ಮಾಡಬೇಕು.  

ಪೂಜೆ ಹೀಗೆ
ಪುರಾಣ ಕಥೆ ಏನೇ ಇದ್ದರೂ, ಅದಕ್ಕೆ ಇಂಬುಕೊಡಲು ಎಂಬಂತೆ ತುಳಸಿ ಜೊತೆ ಅಂದು ಶ್ರೀಕೃಷ್ಣನ ವಿವಾಹ ನೆರವೇರಿಸಲಾಗುತ್ತದೆ. ತುಳಸಿ ಗಿಡಕ್ಕೆ ಮಂಟಪ ಕಟ್ಟಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ತುಳಸಿ ಕಟ್ಟೆಯನ್ನು ರಂಗೋಲಿ, ಹೂವು ಹಾಗೂ ಮಾವಿನ ಎಲೆಗಳ ಮಂಟಪದಿಂದ ಅಲಂಕರಿಸಿ, ತುಳಸಿ ಗಿಡದ ಪಕ್ಕದಲ್ಲಿ ಬೆಟ್ಟದ ನೆಲ್ಲಿಕಾಯಿ ಗಿಡವನ್ನು ನೆಟ್ಟು ಪೂಜಿಸಲಾಗುತ್ತದೆ. ತುಳಸಿಯಂತೆ ನೆಲ್ಲಿಕಾಯಿ ಕೂಡ ಅನೇಕ ರೋಗ ನಿರೋಧಕ ಶಕ್ತಿ ಹೊಂದಿದೆ. ಮಲೆನಾಡು ಸೇರಿದಂತೆ ಕೆಲವೆಡೆಗಳಲ್ಲಿ ತುಳಸಿಯ ವಿವಾಹ ನಡೆದ ಮೇಲಷ್ಟೇ ಎಲ್ಲರ ಮನೆಗಳಲ್ಲಿ ಮದುವೆ ಕಾರ್ಯ ನಡೆಯುತ್ತವೆ. ತುಳಸಿ ಮದುವೆಗೆ ಮೊದಲು ಸಂಪ್ರದಾಯಸ್ಥರು ಈಗಲೂ ಮದುವೆ ಕಾರ್ಯವನ್ನು ನೆರವೇರಿಸುವುದಿಲ್ಲ. ಒಟ್ಟಿನಲ್ಲಿ ತುಳಸಿ ಮನುಷ್ಯನ ಬದುಕಿನೊಂದಿಗೆ, ಪ್ರಕೃತಿಯೊಂದಿಗೆ ಬೆಸೆದುಕೊಂಡಿದೆ.

ತುಳಸಿ ಮಹಿಮೆ 
ತುಳಸಿ ಬಹುಪಯೋಗಿ ಸಸ್ಯ. ತುಳಸಿ ಮೃತ್ತಿಕೆ, ತೀರ್ಥ, ದಳ, ತೆನೆ ಎಲ್ಲವೂ ಪವಿತ್ರ. ಹಾಲಿನ ಸಮುದ್ರದಲ್ಲಿ ಹುಟ್ಟಿದ ತುಳಸಿಯನ್ನು, ಹಾಲಿನಿಂದಲೇ ಪೂಜಿಸಿದರೆ, ಬೇಗನೆ ಪ್ರಸನ್ನಳಾಗಿ ಸಂಪತ್ತು ಅನುಗ್ರಹಿಸುತ್ತಾಳೆಂಬ ವಾಡಿಕೆ ಬಹಳ ಹಿಂದಿನದು. ಶಿವನಿಗೆ ಬಿಲ್ವಪತ್ರೆ ಪ್ರಿಯವಾದಂತೆ, ವಿಷ್ಣುವಿಗೆ ತುಳಸಿ ಬಹುಪ್ರಿಯ. ತುಳಸಿಯಲ್ಲಿ ಬಿಳಿಸುಳಸಿ, ಕಪ್ಪುತುಳಸಿ (ಕೃಷ್ಣತುಳಸಿ) ಮುಂತಾದ ಬಗೆಗಳಿವೆ.  ವೈದ್ಯಶಾಸ್ತ್ರದಲ್ಲಿ ತುಳಸಿಗೆ ಹೆಚ್ಚು ಪ್ರಾಧಾನ್ಯತೆಯಿದೆ. ಸೂಕ್ಷ್ಮ ಜೀವಾಣುನಾಶಕ ಗುಣಗಳಿರುವ ತುಳಸಿ ಎಲೆ ವಿಷಮಶೀತ ಜ್ವರದಂತಹ ಕಾಯಿಲೆಗಳನ್ನು ನಿವಾರಿಸುವ ಶಕ್ತಿ ಹೊಂದಿದೆ. 

ತುಳಸಿಯಿರುವೆಡೆ ಸೊಳ್ಳೆಗಳ ಕಾಟವಿರುವುದಿಲ್ಲ. ಮಕ್ಕಳ ನೆಗಡಿ-ಕೆಮ್ಮು ಶೀತಕ್ಕೆ, ಚರ್ಮರೋಗಕ್ಕೆ ಇದು ರಾಮಬಾಣ. ತುಳಸೀರಸದ ನಿಯಮಿತ ಸೇವನೆಯಿಂದ ನಿದ್ರಾಹೀನತೆಯನ್ನು ಹೊಡೆದೊಡಿಸಬಹುದು.  ಮಕ್ಕಳಿರುವ ಮನೆಗೆ ತುಳಸಿ ಅವಶ್ಯಕ ಮಾತ್ರವಲ್ಲ, ಅನಿವಾರ್ಯವೂ ಹೌದು. ಅದಕ್ಕೆಂದೇ ಸ್ತ್ರೀಯರಿಗೆ ತುಳಸೀ ಪ್ರದಕ್ಷಿಣಾ, ಪುರುಷರಿಗೆ ತುಲಸೀ ಮಾಲಾಧಾರಣವೆಂದು ಹಿಂದಿನಿಂದಲೂ ಪ್ರತೀತಿಯಿದೆ.

ತುಳಸಿ ಗಿಡದ ಹತ್ತಿರ ಓದುವುದು, ಸಚ್ಚಿಂತನೆ ಮಾಡುವುದರಿಂದ, ದೀಪವನ್ನು ಹಚ್ಚುವುದರಿಂದ ಹಾಗೂ ತುಳಸಿ ಗಿಡದ ಸುತ್ತ ಪ್ರದಕ್ಷಿಣೆ ಹಾಕುವುದರಿಂದ ಐದು ಇಂದ್ರಿಯಗಳ ವಿಕಾರಗಳು ದೂರವಾಗುತ್ತವೆ. ಇನ್ನೂ ಹಲವು ಅದ್ಭುತ ಔಷಧೀಯ ಗುಣ ಇದರಲ್ಲಿವೆ. ತಾಯಿಯಂತೆ ನಮ್ಮೆಲ್ಲರನ್ನೂ ಸಲಹುವ ಈ ‘ಮಾತೆ’ಗೂ ಒಂದು ವಿಶೇಷ ದಿನ ಇರಲೇಬೇಕಲ್ಲವೇ? ಹಾಗೆಯೇ ಆ ವಿಶೇಷ ದಿನದಲ್ಲಾದರೂ ಆಕೆಯ ಉಪಕಾರವನ್ನು ಸ್ಮರಿಸುವ ಗುಣ ನಮ್ಮದಾಗಬೇಕಲ್ಲವೇ? ಆಕೆಯ ಸಾನಿಧ್ಯಕ್ಕೆ ಆ ಒಂದು ದಿನವಾದರೂ ಪ್ರದಕ್ಷಿಣೆ ಹಾಕಿ ನಮ್ಮಲ್ಲಿರುವ ವಿಕಾರಗಳನ್ನು ದೂರ ಮಾಡಿಕೊಳ್ಳಬೇಕಲ್ಲವೇ?

ಬನ್ನಿ ಎಲ್ಲರೂ ಸೇರಿ ತುಳಸಿ ವಿವಾಹದ ಪದ್ದತಿಯನ್ನು ಮತ್ತು ಅದರ ಸಂಸ್ಕೃತಿಯನ್ನು ಮುಂದಿನ ಜನಾಂಗಕ್ಕೆ ಉಳಿಸಿಕೊಂಡು ಹೋಗೋಣ.

ದೀಪಾವಳಿ ವಿಶೇಷಾಂಕ - 2013

ಅಸತೋಮ ಸದ್ಗಮಯ, ತಮಸೋಮಾ ಜ್ಯೋತಿರ್ಗಮಯ,
ಮೃತ್ಯೋರ್ಮಾ ಅಮೃತಂಗಮಯ...
  ಓಂ ಶಾಂತಿ, ಶಾಂತಿ ಶಾಂತಿಃ

ಅಜ್ಞಾನವೆಂಬ ಕತ್ತಲನ್ನು ಕಳೆದು ಬದುಕಲ್ಲಿ ಸುಜ್ಞಾನವೆಂಬ ಜ್ಯೋತಿಯನ್ನು ಬೆಳಗಿಸುವ ಹಬ್ಬ ದೀಪಾವಳಿ. ಮಕ್ಕಳಿಗಂತೂ ದೀಪಾವಳಿ ಎಂದರೆ ಬಲು ಅಚ್ಚು ಮೆಚ್ಚು. ಪಟಾಕಿ ದೀಪಾವಳಿಯ ಪ್ರಧಾನ ಆಕರ್ಷಣೆ.  ದೀಪ +ಅವಳಿ ಎಂದರೆ ಜೋಡಿ ದೀಪ ಅಥವಾ ದೀಪಗಳ ಸಾಲು ಎಂದರ್ಥ. ಸಾಲು ಸಾಲು ದೀಪ ಹಚ್ಚುವ ಈ ಹಬ್ಬಕ್ಕೆ ದೀಪಾವಳಿ ಎಂದೇ ಹೆಸರು ಬಂದಿದೆ.

ಇದು ಕಾರ್ತೀಕ ಮಾಸದ ಹಬ್ಬವೇ ಆದರೂ ಅಶ್ವೀಜ ಕೃಷ್ಣ ತ್ರಯೋದಶಿಯ ಸಂಜೆಯಿಂದಲೇ ದೀಪಾವಳಿಯ ಸಂಭ್ರಮ. ದೀಪಾವಳಿ ಮೂರು ದಿನಗಳ ಹಬ್ಬವಾದರೂ, ಸತತ ೫ ದಿನಗಳ ಸಡಗರ. ತ್ರಯೋದಶಿಯ ಸಂಜೆ ಸ್ನಾನದ ಮನೆಯನ್ನು ಚೆನ್ನಾಗಿ ಶುದ್ಧಮಾಡಿ, ಹಂಡೆಗೆ (ಇಂದು ಬಾಯ್ಲರ್, ಗೀಝರ್) ಸುಣ್ಣ ಹಾಗೂ ಕೆಮ್ಮಣ್ಣು ಬಳಿದು , ರಂಗವಲ್ಲಿ ಹಾಕಿ ಶುಚಿಯಾದ ನೀರು ತುಂಬುತ್ತಾರೆ. ಇದಕ್ಕೇ ಈ ಹಬ್ಬಕ್ಕೆ ನೀರು ತುಂಬವ ಹಬ್ಬ ಎಂದೇ ಹೆಸರು ಬಂದಿದೆ. ಮಾರನೇ ದಿನ ನರಕ ಚತುರ್ದಶಿ. ಅಂದು ಎಲ್ಲರೂ ನಸುಕಿನಲ್ಲೇ ಎದ್ದು ತೈಲಾಭ್ಯಂಜನ ಮಾಡಿ, ಹೊಸ ಬಟ್ಟೆ ತೊಟ್ಟು ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ಅಂದು ಸೂರ್ಯೋದಯ ಕಾಲದಲ್ಲಿ ಮಾಡುವ ಅಂಗಾಂಗ ಸ್ನಾನ ಗಂಗಾಸ್ನಾನಕ್ಕೆ ಸಮ ಎಂಬುದು ಹಿರಿಯರ ನಂಬಿಕೆ.

ಪುರಾಣಗಳ ರೀತ್ಯ ನರಕಾಸುರನೆಂಬ ರಕ್ಕಸನು ಲೋಕಕಂಟಕನಾದಾಗ, ಭೂಮಾತೆ ಕೃಷ್ಣನನ್ನು ಪ್ರಾರ್ಥಿಸಿ ನರಕಾಸುರನ ಸಂಹಾರಕ್ಕೆ ಕಾರಣಳಾಗುತ್ತಾಳೆ. ಕೃಷ್ಣ ಕೂಡ ನರಕಾಸುರನ ಸಂಹಾರಕ್ಕೆ ಮುನ್ನ ಅಶ್ವೀಜ ಕೃಷ್ಣ ಚತುರ್ದಶಿಯ ದಿನ ತೈಲಾಭ್ಯಂಜನ ಮಾಡಿ, ನರಕಾಸುರನ ವಧಿಸಿ, ಆ ರಕ್ಕಸ ಬಂಧಿಸಿಟ್ಟಿದ್ದ ೧೬ ಸಾವಿರ ಕನ್ಯೆಯರನ್ನು ಬಿಡುಗಡೆಗೊಳಿಸುತ್ತಾನೆ. ಆ ನೆನಪಿಗಾಗಿ ದೀಪಾವಳಿಯ ಆಚರಣೆ.

ಈ ವಿಜಯೋತ್ಸವದ ಸಂಕೇತವಾಗಿ ಆಚರಿಸಲಾಗುವ ಹಬ್ಬವೇ ದೀಪಾವಳಿ. ಹೀಗಾಗೇ ಅಂದು ಹಬ್ಬದೂಟ ಮಾಡಿ, ಬಾಣ, ಬಿರುಸು ಹಚ್ಚಿ ನಲಿಯುವುದು ವಾಡಿಕೆ. ತಮ್ಮ ಬಿಡುಗಡೆಯ ಬಳಿಕ ಕೃಷ್ಣನಿಗೆ ಕೃತಜ್ಞತೆ ಅರ್ಪಿಸಲು ೧೬ ಸಾವಿರ ಕನ್ಯೆಯರು ಭಕ್ತಿಯಿಂದ ಸಾಲು ಸಾಲು ಆರತಿ ಬೆಳಗಿದರೆಂದು ಪುರಾಣಗಳು ಹೇಳುತ್ತವೆ. ಹೀಗಾಗಿ ಅಂದಿನಿಂದ ಮಹಿಳೆಯರು ಆರತಿ ಬೆಳಗುವ, ಸಾಲು ದೀಪ ಹಚ್ಚುವ, ತೈಲಾಭ್ಯಂಜನ ಮಾಡುವ ಪದ್ಧತಿ ರೂಢಿಗೆ ಬಂತು.   ಮಾರನೆಯ ದಿನ ಅಮಾವಾಸ್ಯೆ. ಅಂದು ಸಂಜೆ ಎಲ್ಲರೂ ಧನದೇವತೆಯಾದ ಲಕ್ಷ್ಮೀಯನ್ನು ಪೂಜಿಸುತ್ತಾರೆ. ಸಾಮಾನ್ಯವಾಗಿ ಅಮಾವಾಸ್ಯೆ ಅಶುಭ ಎಂದು ಹೇಳುತ್ತಾರಾದರೂ, ಭಾರತೀಯ ಸಂಪ್ರದಾಯದಲ್ಲಿ ಅಮಾವಾಸ್ಯೆಗೆ ಮಹತ್ವ ಇದೆ. ಭೀಮನ ಅಮಾವಾಸ್ಯೆಯಂದು ಸುಮಂಗಲಿಯರು ತಮ್ಮ ಮಾಂಗಲ್ಯ ರಕ್ಷಣೆಗಾಗಿ ಪೂಜಿಸುತ್ತಾರೆ.  ಇನ್ನು ಮಹಾಲಯ ಅಮಾವಾಸ್ಯೆಯ ದಿನ ಪಿತೃಗಳನ್ನು ಪೂಜಿಸಲಾಗುತ್ತದೆ. ದೀಪಾವಳಿ ಅಮಾವಾಸ್ಯೆಯಲ್ಲಿ ಧನದೇವತೆ ಲಕ್ಷ್ಮೀ ಪೂಜೆ ನಡೆಯುತ್ತದೆ. ಅಂದು ಮನೆಯಲ್ಲಿರುವ ಹಣವನ್ನೂ, ಸುವರ್ಣವನ್ನೂ ಕಳಶದ ಜೊತೆ ಇಟ್ಟು, ಧನದೇವತೆಯಾದ ಲಕ್ಷ್ಮೀಯನ್ನು ಪೂಜಿಸಿ, ಉತ್ತರೋತ್ತರ ಅಭಿವೃದ್ಧಿ ಮಾಡುವಂತೆ ಪ್ರಾರ್ಥಿಸುತ್ತಾರೆ. ಅಂಗಡಿಗಳಲ್ಲೂ ಲಕ್ಷ್ಮೀಪೂಜೆ ವಿಜೃಂಭಣೆಯಿಂದ ನಡೆಯುತ್ತದೆ. 24ನೇ ತೀರ್ಥಂಕರನಾದ ಮಹಾವೀರನು ನಿರ್ವಾಣಹೊಂದಿದ ದಿನವಾದ ದೀಪಾವಳಿ ಅಮಾವಾಸ್ಯೆಯನ್ನು, ರಾಜಸ್ಥಾನದ ಜೈನ ಸಮುದಾಯದವರು ಹೊಸವರ್ಷವೆಂತಲೂ ಆಚರಿಸುತ್ತಾರೆ. ಕಾರ್ತಿಕದ ಮೊದಲ ದಿನವೇ ಪಾಡ್ಯ. ಅಂದು ಬಲಿ ಪಾಡ್ಯಮಿ. ಬಲಿ ಚಕ್ರವರ್ತಿಯು ತನ್ನ ತಪೋಬಲ ಹಾಗೂ ಭುಜಬಲದಿಂದ ದೇವೇಂದ್ರನನ್ನು ಸೋಲಿಸಿ ಸುರಲೋಕವನ್ನು ವಶಪಡಿಸಿಕೊಂಡು, ಗರ್ವಿಷ್ಠನಾಗಿ ಮೆರೆಯುತ್ತಿದ್ದಾಗ, ಶ್ರೀಮನ್ನಾರಾಯಣನು ವಾಮನನಾಗಿ ಅವತರಿಸಿ, ಮೂರಡಿ ಜಾಗವನ್ನು ಬಲಿಯಿಂದ ದಾನವಾಗಿ ಪಡೆದು, ತ್ರಿವಿಕ್ರಮನಾಗಿ ಬೆಳೆದು ಆಕಾಶ - ಭೂಮಿಗಳನ್ನು ಎರಡಡಿಯಲ್ಲಿ ಅಳೆದು ಮತ್ತೊಂಡಿಯನ್ನು ಬಲಿಯ ತಲೆಯ ಮೇಲೆ ಇಟ್ಟು ಪಾತಾಳಕ್ಕೆ ತುಳಿಯುತ್ತಾನೆ. ಆದರೆ, ಕೇಳಿದೊಡನೆಯೇ ಸುರಗುರು ಶುಕ್ರಾಚಾರ್ಯರ ಮಾತನ್ನೂ ಮೀರಿ ದಾನ ಮಾಡುವ   ದಾನಶೂರನಾದ ಬಲಿ, ಶ್ರೀಮನ್ನಾರಾಯಣನ ಕೃಪೆಗೂ ಪಾತ್ರನಾಗುತ್ತಾನೆ. ಪ್ರತಿವರ್ಷ ಕಾರ್ತಿಕ ಮಾಸದ ಮೊದಲ ದಿನ ಸಂಜೆ ಬಲೀಂದ್ರ ಭೂಲೋಕಕ್ಕೆ ಬಂದು ಮೂರೂ ಮುಕ್ಕಾಲು ಗಳಿಗೆ ಇರುತ್ತಾನೆ ಎಂಬುದು ಪ್ರತೀತಿ.

ಹೀಗಾಗೆ ಅಂದು ಸಂಧ್ಯಾಕಾಲದಲ್ಲಿ ಬಲೀಂದ್ರನ ಪೂಜೆ ಮಾಡಲಾಗುತ್ತದೆ. ವಾಮನರೂಪಿಯಾಗಿ ಬಲಿಯನ್ನು ತುಳಿದ ಬಳಿಕ ಪಾತಾಳದ ಪ್ರವೇಶ ದ್ವಾರವನ್ನು ಸ್ವತಃ ತಾನೇ ಕಾಯುವುದಾಗಿ ನಾರಾಯಣ ವರನೀಡುತ್ತಾನೆ. ಹೀಗಾಗಿ ಅಂದು ಸಗಣಿಯಲ್ಲಿ ಕೋಟೆ ಕಟ್ಟಿ, ಅದಕ್ಕೆ ಸಮೃದ್ಧಿಯ ಸಂಕೇತವಾಗಿ ರಾಗಿಯ ತೆನೆ, ಹುಚ್ಚಳ್ಳುಹೂವು ಸಿಕ್ಕಿಸಿ, ಹೊಸಿಲಿನ ಬಳಿ ಹಾಗೂ ದೇವರ ಮನೆಯ ಮುಂದೆ ಬೆನಕ ರೂಪಿ ಎಂದು ಸಗಣಿಯ ಕೋನಗಳನ್ನೂ ಇಡುತ್ತಾರೆ. (ಈ ಪದ್ಧತಿ ಪಾಂಡವರಿಂದ ನಡೆದು ಬಂದದ್ದೆಂದು ಹೇಳಲಾಗುತ್ತದೆ) ಕಾರ್ತೀಕ ಪಾಡ್ಯದಿಂದ ಹಿಂದೂಗಳು ಮನೆಯ ಬಾಗಿಲಲ್ಲಿ ಹಾಗೂ ತುಳಸಿಯ ಮುಂದೆ ಒಂದು ತಿಂಗಳು ಪೂರ್ತಿ ದೀಪವನ್ನು ಹಚ್ಚಿಡುತ್ತಾರೆ. ಕೆಲವರು ದಿನಕ್ಕೆರಡರಂತೆ ದೀಪವನ್ನು ಹೆಚ್ಚಿಸಿ ಹಚ್ಚಿಡುತ್ತಾರೆ. ಕಾರ್ತಿಕದಲ್ಲಿ ಈ ರೀತಿ ದೀಪ ಹಚ್ಚುವುದರಿಂದ, ಸತ್ತ ನಂತರ ಆತ್ಮ ಸ್ವರ್ಗಕ್ಕೆ ಅಥವಾ ನರಕಕ್ಕೆ ಹೋಗುವಾಗ ಕಾರ್ತೀಕದಲ್ಲಿ ಹಚ್ಚಿಟ್ಟ ಜ್ಯೋತಿ ಬೆಳಕು ತೋರುತ್ತದೆ ಎಂಬುದು ಜನಪದರ ನಂಬಿಕೆ.   ಸ್ಥಿತಿವಂತರು ಮನೆಯ ಮುಂದೆ ಆಕಾಶಬುಟ್ಟಿಗಳನ್ನು ಕಟ್ಟುತ್ತಾರೆ. ಕಾರ್ತಿಕ ಪಾಡ್ಯದಂದೆ ಶ್ರೀಕೃಷ್ಣನು ಕುಂಭದ್ರೋಣದಿಂದ ಗೋಕುಲವನ್ನೂ, ಗೋಪಾಲಕರನ್ನು ರಕ್ಷಿಸಲು ಗೋವರ್ಧನ ಗಿರಿಯನ್ನು ಎತ್ತಿದ್ದು. ಹೀಗಾಗಿ ಅಂದು ಗೋಪಾಲನಿಗೆ ಕೃತಜ್ಞತೆ ಸಲ್ಲಿಸಲು ಗೋವುಗಳ ಪೂಜೆ ನಡೆಯುತ್ತದೆ.  ದೀಪಾವಳಿಯ ಕೊನೆಯ ದಿನವೇ ಯಮ ದ್ವಿತೀಯ. ಅಥವಾ ಭ್ರಾತೃ ದ್ವಿತೀಯ. ಆ ದಿನ ಯಮದೇವನು ತನ್ನ ತಂಗಿಯಾದ ಯಮುನೆಯ ಮನೆಗೆ ಹೋಗಿ ಅವಳಿಂದ ಆತಿಥ್ಯ ಪಡೆದು ಬಂದ ದಿನವೆಂದು ಹೇಳಲಾಗುತ್ತದೆ. ಅಂದು ಸೋದರರು ಎಲ್ಲಿದ್ದರೂ ಸೋದರಿಯರ ಮನೆಗೆ ಹೋಗುತ್ತಾರೆ.

ಉತ್ತರ ಕರ್ನಾಟಕದ ಕಡೆ ಈ ಹಬ್ಬ ವಿಶೇಷವಾಗಿ ಆಚರಿಸಲ್ಪಡುತ್ತದೆ. ಯಮದ್ವಿತೀಯ ಭ್ರಾತೃತ್ವದ ಭಾವನೆಗಳನ್ನು ವೃದ್ಧಿಸಿ, ಮಧುರ ಭಾವನೆಗಳನ್ನು ಬೆಸೆಯಲು, ಬಲಗೊಳಿಸಲು ಪೂರಕವಾಗಿದೆ. ತಾನೇ ಉರಿದರೂ ಊರಿಗೆ ಬೆಳಕು ನೀಡುವ ಪರಂಜ್ಯೋತಿಯನ್ನು ನೋಡುತ್ತಾ, ಮನುಷ್ಯ ಸ್ವಾರ್ಥವನ್ನು ಮರೆತು ತಾನೂ ಜ್ಯೋತಿಯಂತೆ ಇತರರಿಗೆ ನೆರವಾಗಲಿ ಎಂಬುದು ಕಾರ್ತೀಕದ ಮಹತ್ವದ ಉದ್ದೇಶ. ಇದುವೆ ಈ ಹಬ್ಬದ ಅಂತರಾರ್ಥ. ಕಾರ್ತೀಕ ಮಾಸದಲ್ಲಿ ಹಲವು ದೇವಾಲಯಗಳಲ್ಲಿ, ಕ್ಷೇತ್ರಗಳಲ್ಲಿ ಲಕ್ಷ ದೀಪೋತ್ಸವ ನಡೆಯುತ್ತದೆ.

ಕರ್ನಾಟಕ ರಾಜ್ಯೋತ್ಸವ ವಿಶೇಷ


ನವೆಂಬರ್ ೧, ಕರ್ನಾಟಕ ರಾಜ್ಯೋತ್ಸವ - ಈ ದಿನವು ಕನ್ನಡಿಗರಿಗೆ ವಿಶೇಷವಾದ ದಿನ. ಕನ್ನಡ ನಾಡು, ಸಂಸ್ಕೃತಿಯನ್ನು ಹೊಗಳಿ ಗೌರವಿಸುವ ದಿನವಿದು. 

ಕನ್ನಡದ ವೀರ ಪುತ್ರಪುತ್ರಿಯರೇ, ಭರತ ಮಣ್ಣಿನ ವೀರಪ್ರಜೆಗಳೇ, ಬನ್ನಿ ನಾವೆಲ್ಲರೂ ಸೇರಿ ಹಾಡೋಣ "ಕರ್ನಾಟಕ ರಾಜ್ಯೋತ್ಸವ." ಕಾಡು, ಜಲ ಸಂಪತ್ತು ಬೆಳೆಸಿರುವ ನಾಡಿದು, ಮಲೆನಾಡು, ಆಗುಂಬೆಗಳಂತಹ ಭವ್ಯ ತಾಣವಿದು, ಕನ್ನಡ ಮಾತೆಯ ಪೂಜಿಸಿ ಆರಾಧಿಸುವ ದೇಗುಲವಿದು, ಭರತ ಲೋಕದ ಪ್ರಕೃತಿಯ ಪ್ರೀತಿಯ ಕಣ್ಮಣಿಯಿದು. ಬೇಲೂರು, ಹಳೇಬೀಡುಗಳಂತಹ ಶಿಲ್ಪಗಳ ದೇಗುಲವಿದು, ಸಮುದ್ರಗಳ ಅಲೆಗಳ ಮೇಲೆ ಜೀವನ ನಡೆಸುವ ಬೆಸ್ತರ ನಾಡಿದು, ಕವಿ ಋಷಿಗಳು ಬೆಳೆಸಿ, ನೆಲೆಸಿರುವ ಪುಣ್ಯಕೋಟಿ ಕವನದ, ಕನ್ನಡಿಗರ ಹೋರಾಟದ ಫಲವಿದು "ಕರ್ನಾಟಕ ರಾಜ್ಯೋತ್ಸವ."

ಕನ್ನಡ ನಾಡದೇವಿ ಭುವನೇಶ್ವರಿ. ಕನ್ನಡಿಗರೆಲ್ಲರೂ ಆರಾಧಿಸುವ ಭುವನೇಶ್ವರಿ ದೇವಾಲಯ ಕರ್ನಾಟಕದಲ್ಲಿ ಪ್ರಮುಖವಾಗಿ ಮೂರು ಐತಿಹಾಸಿಕ ಸ್ಥಳದಲ್ಲಿದೆ. ಒಂದು ಕನ್ನಡ ಸಾಮ್ರಾಜ್ಯ ಹಂಪೆಯ ವಿರೂಪಾಕ್ಷ ಸನ್ನಿಧಿಯಲ್ಲಿ. ಮತ್ತೊಂದು ಕನ್ನಡ ಸಿಂಹಾಸನ ಪ್ರತಿಷ್ಠಾಪನಾಚಾರ್ಯರ ಮಠವಿರುವ ಶೃಂಗೇರಿಯಲ್ಲಿ ಹಾಗೂ ಉತ್ತರ ಕನ್ನಡ ಜಿಲ್ಲೆ ಭುವನಗಿರಿಯಲ್ಲಿ. 

ಕನ್ನಡ ತಾಯಿ ಭುವನೇಶ್ವರಿ ದೇವಾಲಯವಿರುವುದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಭುವನಗಿರಿಯಲ್ಲಿ. ನಿಸರ್ಗ ರಮಣೀಯತೆಗೆ ಹೆಸರಾದ ಉತ್ತರ ಕನ್ನಡದ ಮಲೆನಾಡಿನಲ್ಲಿ ಇರುವ ಈ ದೇವಾಲಯ ನಮ್ಮ ನಾಡಿನ ಏಕೈಕ ಭುವನೇಶ್ವರಿ ಮಾತೆಯ ದೇವಾಲಯ.

“ಜಯ್ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ!” ಕುವೆಂಪು ಅವರ ಈ ಸಾಲುಗಳನ್ನು ನೆನೆಯುತ್ತಾ ಕನ್ನಡಾಂಬೆಯ ದೇಗುಲದ ಬಗ್ಗೆ ಬರೆಯುತ್ತಿದ್ದೇನೆ. ಹೌದು, ಮಾತೆ ಭುವನೇಶ್ವರಿ ಕನ್ನಡ ಮತ್ತು ಕರ್ನಾಟಕದ ಆರಾಧ್ಯ ದೈವ. ವೈವಿಧ್ಯಗಳ ತವರಾದ ಕರ್ನಾಟಕದ ನೆಲದಲ್ಲಿರುವ ಏಕೈಕ ಕನ್ನಡಾಂಬೆಯ ದೇಗುಲ ಇರುವುದು ನಿಸರ್ಗದ ಸಿರಿ ಸಂಪತ್ತಿನಿಂದ ಕೂಡಿರುವ ಬಯಲುಸೀಮೆ, ಮಲೆನಾಡು ಮತ್ತು ಕರಾವಳಿಯನ್ನು ತನ್ನೊಡಲಲ್ಲಿ ಲಾಲಿಸುತ್ತಿರುವ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಭುವನಗಿರಿಯಲ್ಲಿ.

ಬೆಂಗಳೂರಿನಿಂದ ಸಿದ್ದಾಪುರಕ್ಕಿರುವ ಸರಿಸುಮಾರು ೩೯೦ ಕಿ. ಮೀ. ಅಲ್ಲಿಂದ ಕುಮಟಾಕ್ಕೆ ಹೋಗುವ ಮಾರ್ಗದಲ್ಲಿ ಸುಮಾರು ೮ ಕಿ. ಮೀ.ಬಲ ಬದಿಯಲ್ಲಿ ಒಂದು ವಿಶಾಲವಾದ ಕೆರೆ ಕಂಡುಬರುತ್ತದೆ. ಅದರ ಸಮೀಪದಲ್ಲಿ ಬೆಟ್ಟವೇರಲು ಮೆಟ್ಟಿಲುಗಳಿವೆ. ಕೆರೆಯಿಂದ ಸುಮಾರು ೩೦೦ ಅಡಿಗಳ ಎತ್ತರದಲ್ಲಿ ಭುವನಗಿರಿಯ ಮೇಲೆ ಮಾತೆ ಭುವನೇಶ್ವರಿಯ ದೇವಾಲಯವಿದೆ. ಬೆಟ್ಟವೇರಲು ವಾಹನಗಳಿಗೆ ಕಿರಿದಾದ ರಸ್ತೆಯೂ ಇದೆ.

ಕನ್ನಡಾಂಬೆ ಭುವನೇಶ್ವರಿ ದೇವಾಲಯದ ಬಗ್ಗೆ ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆಯಿದೆ.

ಪೌರಾಣಿಕ ಹಿನ್ನೆಲೆ: ಇಲ್ಲಿನ ದಟ್ಟ ಕಾನನದಲ್ಲಿ ಭುವನಾಸುರನೆಂಬ ಒಬ್ಬ ರಾಕ್ಷಸನಿದ್ದನಂತೆ. ಆತನ ಮಿತಿಮೀರಿದ ಉಪಟಳದಿಂದ ಜನರು ನೆಮ್ಮದಿಯಿಂದ ಬಾಳಲು ಆಗುತ್ತಿರಲಿಲ್ಲವಂತೆ. ಜನರ ಪ್ರಾರ್ಥನೆಯನ್ನು ಕೇಳಿದ ದುರ್ಗಾಮಾತೆ ಪ್ರತ್ಯಕ್ಷಳಾಗಿ ಆತನನ್ನು ವಧಿಸಲು ಅಣಿಯಾದ ಸಮಯದಲ್ಲಿ ತಾನು ಸದಾಕಾಲ ಜನರಿಗೆ ಪರಿಚಿತನಾಗಿರುವಂತಹ ವರವನ್ನು ದಯಪಾಲಿಸು ಎಂದು ಕೇಳಿದನಂತೆ. ತಥಾಸ್ತು ಎಂದ ದುರ್ಗಾ ಮಾತೆಯು ಈ ಸ್ಥಳವು ಭುವನಗಿರಿಯೆಂದು ಕರೆಯಲ್ಪಡುವುದು ಮತ್ತು ನಾನು ಈ ಕ್ಷೇತ್ರದಲ್ಲಿ ಭುವನೇಶ್ವರಿಯಾಗಿ ನೆಲೆಸಿ ನಾಡನ್ನು ಕಾಯುತ್ತೇನೆ ಎಂದಳಂತೆ.

ಐತಿಹಾಸಿಕ ಹಿನ್ನೆಲೆ: ವಿವಿಧ ಮೂಲಗಳ ಪ್ರಕಾರ ಬಿಳಗಿಯ ಅರಸರು ಕನ್ನಡ ನುಡಿಯ ಹಾಗೂ ನಾಡಿನ ಬಗ್ಗೆ ಅಪಾರ ಅಭಿಮಾನ ಉಳ್ಳವರಾಗಿದ್ದರು. ಅವರಿಗೆ ಕನ್ನಡಮಾತೆಗಾಗಿ ಒಂದು ಗುಡಿ ಕಟ್ಟಿಸುವ ಬಯಕೆ ಇತ್ತು. ಬಿಳಗಿಯ ಅರಸರಲ್ಲಿ ಕೊನೆಯವರಾದ ಬಸವೇಂದ್ರ ಈ ದೇವಾಲಯನ್ನು ೧೬೯೨ರಲ್ಲಿ ಕಟ್ಟಿಸಿದರು ಎಂದು ತಿಳಿದು ಬರುತ್ತದೆ. 

ವಿಜಯನಗರದ ಅರಸರು ಸಹ ಮಾತೆ ಭುವನೇಶ್ವರಿಗೆ ವಂದಿಸಿಯೇ ತಮ್ಮ ಕೆಲಸ ಕಾರ್ಯಗಳನ್ನು ಆರಂಭಿಸುತ್ತಿದ್ದರು. ಈ ಕಾರಣಕ್ಕಾಗಿ ಹಂಪಿಯ ವಿರೂಪಾಕ್ಷ ದೇವಾಲಯದಲ್ಲಿ ಭುವನೇಶ್ವರಿ ವಿಗ್ರಹವ‌ನ್ನು ಕಾಣಬಹುದು.

ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ
ಜಯ ಸುಂದರ ನದಿವನಗಳ ನಾಡೇ, ಜಯ ಹೇ ರಸ ಋಷಿಗಳ ಬೀಡೇ
ಭೂದೇವಿಯ ಮಕುಟದ ನವಮಣಿಯೆ, ಗಂಧದ ಚಂದದ ಹೊನ್ನಿನ ಗಣಿಯೆ
ರಾಘವ ಮಧುಸೂಧನರವತರಿಸಿದ ಭಾರತ ಜನನಿಯ ತನುಜಾತೆ !

ಜನನಿಯ ಜೋಗುಳ ವೇದದ ಘೋಷ, ಜನನಿಗೆ ಜೀವವು ನಿನ್ನಾವೇಶ,
ಹಸುರಿನ ಗಿರಿಗಳ ಸಾಲೇ, ನಿನ್ನಯ ಕೊರಳಿನ ಮಾಲೆ,
ಕಪಿಲ ಪತಂಜಲ ಗೌತಮ ಜಿನನುತ, ಭಾರತ ಜನನಿಯ ತನುಜಾತೆ !

ಶಂಕರ ರಾಮಾನುಜ ವಿದ್ಯಾರಣ್ಯ, ಬಸವೇಶ್ವರರಿಹ ದಿವ್ಯಾರಣ್ಯ
ರನ್ನ ಷಡಕ್ಷರಿ ಪೊನ್ನ, ಪಂಪ ಲಕುಮಿಪತಿ ಜನ್ನ
ಕಬ್ಬಿಗರುದಿಸಿದ ಮಂಗಳ ಧಾಮ, ಕವಿ ಕೋಗಿಲೆಗಳ ಪುಣ್ಯಾರಾಮ
ನಾನಕ ರಾಮಾನಂದ ಕಬೀರರ ಭಾರತ ಜನನಿಯ ತನುಜಾತೆ !

ತೈಲಪ ಹೊಯ್ಸಳರಾಳಿದ ನಾಡೇ, ಡಂಕಣ ಜಕಣರ ನೆಚ್ಚಿನ ಬೀಡೆ
ಕೃಷ್ಣ ಶರಾವತಿ ತುಂಗ, ಕಾವೇರಿಯ ವರ ರಂಗ
ಚೈತನ್ಯ ಪರಮಹಂಸ ವಿವೇಕರ, ಭಾರತ ಜನನಿಯ ತನುಜಾತೆ !

ಸರ್ವ ಜನಾಂಗದ ಶಾಂತಿಯ ತೋಟ, ರಸಿಕರ ಕಂಗಳ ಸೆಳೆಯುವ ನೋಟ
ಹಿಂದೂ ಕ್ರೈಸ್ತ ಮುಸಲ್ಮಾನ, ಪಾರಸಿಕ ಜೈನರುದ್ಯಾನ
ಜನಕನ ಹೋಲುವ ದೊರೆಗಳ ಧಾಮ, ಗಾಯಕ ವೈಣಿಕರಾರಾಮ
ಕನ್ನಡ ನುಡಿ ಕುಣಿದಾಡುವ ದೇಹ, ಕನ್ನಡ ತಾಯಿಯ ಮಕ್ಕಳ ಗೇಹ
ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ

ಜಯ ಭಾರತ ಜನನಿಯ ತನುಜಾತೆ, ರಾಷ್ಟ್ರಕವಿ ಕುವೆಂಪು

ವಿಜಯ ದಶಮಿ ವಿಶೇಷಾಂಕ - ನಾಡಹಬ್ಬ

"ಓಂಕಾರದ ಎಲ್ಲ ಸದಸ್ಯರಿಗೂ ವಿಜಯ ದಶಮಿಯ ಹಾರ್ದಿಕ ಶುಭಾಷಯಗಳು"

ಹಬ್ಬಗಳ ಆಚರಣೆ ನಮ್ಮ ನಾಡಿನ ಸಂಸ್ಕೃತಿಯನ್ನು ಬಿಂಬಿಸುತ್ತದೆ, ಸಂಸ್ಕೃತಿ ಐಕ್ಯತೆಯನ್ನು ಮೂಡಿಸುವ ಒಂದು ಸರಳ ಸೂತ್ರವಾಗಿದೆ. ಶ್ರೀಮಾನ್ಯ ಬಾಲ ಗಂಗಾಧರ ತಿಲಕರು ನಮ್ಮ ಹಬ್ಬಗಳ ಆಚರಣೆಗೆ ಸಾರ್ವಜನಿಕ ರೂಪ ಕೊಟ್ಟು ಒಗ್ಗಟ್ಟಿನ ಮಂತ್ರ ಹೇಳಿಕೊಟ್ಟರು. ಇಂತಹ ಸಂಸ್ಕೃತಿಯ ಪರಿಚಯ ತಮಗೆಲ್ಲರಿಗೂ ಮಾಡಿಕೊಡುವದು ಓಂಕಾರದ ಮುಖ್ಯ ಉದ್ದೇಶ. ಹಾಗಾಗಿ ಪ್ರತಿ ಹಬ್ಬದ ಮೂಲ, ಅಚಾರ ಮತ್ತು ಪದ್ಧತಿಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿ ತಮಗಾಗಿ ಇಲ್ಲಿ ಕೊಡಲಾಗುತ್ತಿದೆ.
 
ವಿಜಯ ದಶಮಿಯು ಯಾವಾಗಲೂ ಮಂಗಳಕರವಾದುದು. ಇಂಥ ದಶಮಿ ದಿನ ಮಾಡಿದ ದಾನವು ಕೋಟಿ ಪಾಲು ಪುಣ್ಯವನ್ನು ಕೊಡುತ್ತದೆ. ಪುಣ್ಯವಾದ ದಶಮಿಯು ಮಾನವರಿಗೆ ಜಯ ಕೊಡುವುದರಿಂದ ವಿಜಯದಶಮಿ ಎಂದೇ ಪ್ರಸಿದ್ಧವಾಗಿದೆ.
 
ವಿಜಯ ದಶಮಿಯನ್ನು ಕರ್ನಾಟಕದಲ್ಲಿ ನಾಡಹಬ್ಬ ಎಂದೂ ಕರೆಯುತ್ತಾರೆ, ಇದರರ್ಥ ವಿಜಯದಶಮಿ ನಮ್ಮ ನಾಡಿನ ಸಂಸ್ಕೃತಿಯ ಪ್ರತೀಕವಾಗಿದೆ. ಆದ ಕಾರಣ ಇದನ್ನು ಪ್ರತಿಯೊಬ್ಬ ಕನ್ನಡಿಗನೂ ಈ ಹಬ್ಬದ ಸಾಂಸ್ಕೃತಿಕ ಪರಂಪರೆ ಮತ್ತು ಜನಪದ ಸಾಹಿತ್ಯವನ್ನು ಅರ್ಥ ಮಾಡಿಕೊಂಡರೆ ಈ ನಾಡಹಬ್ಬದ ಆಚರಣೆಗೆ ನಿಜವಾದ ಅರ್ಥ ಬರುತ್ತದೆ.  

 

ಜಾನಪದ ಸಾಹಿತ್ಯ ದರ್ಶನ :  

ಬನ್ನಿಯ ಹಬ್ಬ ಹಬ್ಬ ಹರಿದಿನಗಳಲ್ಲಿಯೇಬನ್ನಿ ಹಬ್ಬ’ ಅತ್ಯಂತ ಪ್ರಮುಖ ಹಾಗೂ ಪವಿತ್ರವಾದುದು. ಭಾರತದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯಿಂದ ಆಚರಿಸಲ್ಪಡುವ ಹಬ್ಬವನ್ನು ನವರಾತ್ರಿ, ಮಹಾನವಮಿ, ದಸರಾ, ವಿಜಯದಶಮಿ, ನಾಡಹಬ್ಬವೆಂದೂ, ಉತ್ತರ ಭಾರತದ ಕೆಲವೆಡೆ ಶ್ರೀ ರಾಮ ನವರಾತ್ರಿಯೆಂದೂ ಕರೆಯುತ್ತಾರೆ. ಕರ್ನಾಟಕದಲ್ಲಂತೂ ಹಬ್ಬ ವಿಶೇಷ ಮಹತ್ವ ಪಡೆದಿದೆ. ಬನ್ನಿ ಹಬ್ಬವನ್ನಾಚರಿಸದ ಕನ್ನಡಿಗನಿಲ್ಲವೆಂದೂ ನಡೆದೀತು. ಅರಮನೆಗುರುಮನೆಮಹಾಮನೆಗುಡಿ ಗುಡಿಸಲುಗಳಲ್ಲೆಲ್ಲಾ ಸಡಗರದಿಂದ ಇದನ್ನು ಆಚರಿಸುತ್ತಾರೆ. ಈಗಲೂ ಬನ್ನಿ ಮುಡಿಯಲು ಊರೂರಿಗೊಂದುಬನ್ನಿಗಿಡದ ಕಟ್ಟೆ’ ಗಳಿರುವುದನ್ನು ಕಾಣಬಹುದಾಗಿದೆ. ವಿಜಯನಗರದ ಅರಸರ ಕಾಲಕ್ಕೆ ಇದು ರಾಷ್ಟ್ರೀಯ ಹಬ್ಬವಾಗಿದ್ದುದಕ್ಕೆ ಹಂಪೆಯಲ್ಲುಳಿದಿರುವಮಹಾನವಮಿ ದಿಬ್ಬ’ವೇ ಸಾಕ್ಷಿ. ಮೈಸೂರಿನ ಅರಸರು ಆಚರಿಸುತ್ತಿದ್ದದಸರಾ’ ಹಬ್ಬ ದೇಶವಿದೇಶಗಳಿಂದ ಜನರನ್ನು ಆಕರ್ಷಿಸುವಷ್ಟು ಅದ್ಭುತ ವೈಭವದಿಂದೊಡಗೂಡಿರುತ್ತಿತ್ತು. ಈಗಲೂ ಕರ್ನಾಟಕದಲ್ಲಿವಿಜಯದಶಮಿ’ ಯನ್ನು ಅತ್ಯುತ್ಸಾಹದಿಂದ ಆಚರಿಸಲಾಗುತ್ತದೆ.
 
ಪೌರಾಣಿಕ ಹಿನ್ನೆಲೆ :
ಯಾವುದೇ ಒಂದು ಹಬ್ಬದ ಆಚರಣೆಗೆ ಪೌರಾಣಿಕಐತಿಹಾಸಿಕ ಸಾಂಪ್ರದಾಯಿಕ ನಂಬಿಕೆಗಳೂ ಕಾರಣವಾಗಿದ್ದು ಅಲ್ಲೆಲ್ಲಾ ನಮ್ಮ ಸಾಂಸ್ಕೃತಿಕ ಪರಂಪರೆ ಅಡಕವಾಗಿರುತ್ತದೆ. ಬನ್ನಿ ಹಬ್ಬಕ್ಕಾದರೂ ಪೌರಾಣಿಕ ಹಿನ್ನಲೆಯಿದ್ದು ಅದನ್ನು ಜಾನಪದ ಬದುಕಿನ ನಿಟ್ಟಿನಲ್ಲಿ ನೋಡೋಣ.
 
) ಪಾಂಡವರು ಪಗಡ್ಯಾಡಿ ಧರ್ಮದಜೂಜಾಡಿ’ ಸೋತು ವನವಾಸಕ್ಕೆ ಹೋಗಬೇಕಾಗುವುದು. ಹೋಗುವ ಪೂರ್ವದಲ್ಲಿ ತಮ್ಮ ಶಸ್ತ್ರಾಸ್ತ್ರಗಳನ್ನು ಬನ್ನಿ ಗಿಡಕ್ಕೆ ತೂಗು ಹಾಕಿ ಹೋಗುವರು. ಬನ್ನಿಗಿಡದಲ್ಲಿ ಮಹಾಕಾಳಿ ವಾಸವಾಗಿದ್ದು ಆಕೆ ಅವುಗಳ ರಕ್ಷಕಗಳಾಗಿರುವಳು.
ಬನ್ನಿಯ ಗಿಡದಾಗ ಬಾಣ ಇಟ್ಟೀವಿ ತಾಯಿ
ಯಾರೂ ಬಂದರೂ ಕೊಡಬೇಡ |
ಹಡದಮ್ಮ ಅರ್ಜುನ ಬಂದರ ಕೊಡಬೇಕ
 
ಹೀಗೆಬನ್ನಿಮಹಾಕಾಳಿ’ ಯನ್ನು ಪಾಂಡವರು ಪ್ರಾರ್ಥಿಸಿರುವರು. ಅವರು ವನವಾಸದಲ್ಲಿ ಕಷ್ಟವನ್ನು ಅನುಭವಿಸದರೆಂಬುದಕ್ಕೆ ಕೆಳಗಿನ ತ್ರಿಪದಿಯೇ ಸಾಕು.
 
ಕಲ್ಲ ಕಡಬ ಮಾಡಿ ಮುಳ್ಳ ಶ್ಯಾವಿಗಿ ಮಾಡಿ
ಬನ್ನಿಯ ಎಲಿಯ ಎಡಿಮಾಡಿ | ಪಾಂಡವರು
ಉಂಡು ಹೋಗ್ಯಾರೋ ವನವಾಸೊ.
 
ಕೇವಲ ಮೂರು ಶಬ್ದಗಳಲ್ಲಿ ಅವರ ವನವಾಸದ ತಾಪತ್ರಯ ಅರ್ಥಪೂರ್ಣವಾಗಿ ಚಿತ್ರಿತಗೊಂಡಿದೆ. ಹಾಗೆ ಊಟ ಮಾಡಿದ ಪಾಂಡವರು ಊಟದ ನಂತರ ತಲಬನ್ನು ಮಾಡಲು ಮರೆಯಲಿಲ್ಲ.
 
ಬನ್ನಿಯ ಗಿಡದಾಗ ಬೆಳ್ಳಿಯ ಗುಡಗಡಿ
ಬಂಗಾರ ಚಿಲುಮಿ ನವರತನೊ | ಪಾಂಡವರು
ಸೇದಿ ಹೋಗ್ಯಾರೋ ವನವಾಸೊ.
 
ಜಾನಪದ ಕವಿ ತಾನು ಅನುಭವಿಸುವ ನೈಜ ಬದುಕಿನಲ್ಲಿಯೇ ಪಾಂಡವರನು ಕಂಡಿದ್ದು ಸಮರ್ಥನೀಯವಾಗಿದೆ. ಮುಂದೆ ಪಾಂಡವರು ತಮ್ಮ ವನವಾಸ-ಅಜ್ಞಾತವಾಸಗಳನ್ನು ಹೆಚ್ಚಾಗಿ ವೀರಾಟರಾಜ್ಯದಲ್ಲಿಯೇ ಕಳೆದರಂತೆ, ಅಂದಿನ ವಿರಾಟನಗರವೇ ಇಂದಿನ ನಮ್ಮ ಹಾನಗಲ್, ಹಾವೇರಿ ಜಿಲ್ಲೆ " ಅವರು ಇದ್ದು ಹೋದ ಗುಹೆಗಳು ಮಿಂದು ಹೋದ ಕೊಳಗಳು ಕರ್ನಾಟಕದಲ್ಲಿಯೇ ಹೆಚ್ಚಾಗಿವೆ. ಆದುದರಿಂದಲೇ ಪಾಂಡವರು ಕನ್ನಡಿಗರಿಗೆ ಅಪರಿಚಿತರಲ್ಲ. ಅತಿಪರಿಚಿತರಾಗಿದ್ದು ಈಗಲೂ ಅವರ ಮೇಲಿನ ಅಭಿಮಾನ ಕಡಿಮೆಯಾಗಿಲ್ಲ. ಮುಂದೆ ಪಾಂಡವರು ತಮ್ಮ ವನವಾಸ ಮುಗಿಸಿ ಮರಳಿ ತಾವು ತಮ್ಮ ಶಸ್ತ್ರಾಸ್ತ್ರವಿಟ್ಟಿದ್ದ ಬನ್ನಿಗಿಡಕ್ಕೆ ಬಂದು ಮಹಾಕಾಳಿಯನ್ನು ಪೂಜಿಸಿ ತಮ್ಮ ವಸ್ತುಗಳನ್ನು ಪಡೆದು ದಿಗ್ವಿಜಯ ಸಾಧಿಸಿದ ದಿನವೇವಿಜಯದಶಮಿ’ ದಿನವೆಂದು ಕರೆಯಲಾಗಿದೆ. ಅಂದಿನಿಂದಲೂ ಇಂದಿನ ತನಕ ಪಾಂಡವರ ವನವಾಸದ ಹಿನ್ನಲೆಯಲ್ಲಿವಿಜಯದಶಮಿ’ ಆಚರಣೆಗೊಳ್ಳುತ್ತ ಬಂದಿದೆ.
 
) ಶಮೀವೃಕ್ಷ ಎಂದರೆ ಬನ್ನಿಗಿಡ. ಬನ್ನಿಗಿಡದ ಎಲೆಗಳು ಬಂಗಾರಕ್ಕೆ ಸಮವೆಂದೂ, ವಿಜಯದ ಸಂಕೇತವೆಂದೂ, ಪುರಾಣಗಳು ಸಾರುವವಾದ್ದರಿಂದ ಬನ್ನಿ ಮರವನ್ನು ಪೂಜಿಸಿ ಅದರ ಎಲೆಗಳನ್ನು ಮುಡಿಯುವದು ಪವಿತ್ರಕಾರ್ಯವೆಂದು ಭಾವಿಸಿದುದರಿಂದ ಬನ್ನಿ ಹಬ್ಬದಾಚರಣೆ ರೂಢಿಯಲ್ಲಿ ಬಂದಿದೆ. ಪಾಂಡವರಂತೆ ಶ್ರೀರಾಮನು ರಾವಣನನ್ನು ಸಂಹರಿಸಿ ಬನ್ನಿಮರಕ್ಕೆ ಪೂಜೆಗೈದನಂತೆ, ಜಾನಪದರಂತೂ ಬನ್ನಿಗಿಡದ ಬಗೆಗೆ ವಿಶೇಷ ಗೌರವ ತಾಳಿದ್ದಾರೆ. ಅವರು ಬನ್ನಿಗಿಡವನ್ನು ಕಡಿಯುವದಿಲ್ಲ. ಕಡಿದರೂ ಉರುವಲನ್ನಾಗಿ ಉಪಯೋಗಿಸುವದಿಲ್ಲ. ಗಿಡದಿಂದ ಗೋದಲಿಗಂಬವನ್ನಾಗಿಯೋ, ದೇವರಕಂಬವನ್ನಾಗಿಯೋ ಹೊಲದಲ್ಲಿ ಕೂರಿಗೆಯನ್ನಾಗಿಯೊ, ಕಣದಲ್ಲಿ ಮೇಟಿಯನ್ನಾಗಿಯೋ, ಮಾಡುವರು. ಯಾಕೆಂದರೆ ವಸ್ತುಗಳನ್ನು ಯಾರೂ ಕಾಲುಮೆಟ್ಟಿ ಕಾರ್ಯ ನಡೆಸುವಂತಿಲ್ಲ.
 
ಬನ್ನಿಯ ಗಿಡ ಕಡಿದು ಬಣ್ಣದ ಕೂರಿಗಿ ಹಾಸಿ
ಮಂಡಿ ಕಟ್ಟಿಸಿದೆ ಬಿಗಬಿಗದು | ಮುತ್ತೈದಿಯ
ಉಡಿಯ ತುಂಬಿಸಿದೆ ಕೂರಿಗ್ಯೊ
ಬನ್ನಿಯ ಗಿಡ ಕಡಿದು ಬಣ್ಣದ ಕೂರಿಗಿ ಮಾಡಿ
ಸಣ್ಣ ಸೆಲ್ಲೆದಲೆ ಉಡಿತುಂಬಿ | ಪಾಂಡವರು
ಹೊನ್ನ ಬಿತ್ತ್ಯಾರೊ ಹೊಳಿಸಾಲ
ಬನ್ನಿ ಮೇಟಿಯ ಹೊಡೆದು ಮುನ್ನೂರು ಬಸವಾನೆಕಟ್ಟಿ
ಹಾಜ್ಯಾಡಿ ಹಂತಿ ಹೊಡದೇವೂ | ಬಸವಣ್ಣ
ಕಣದಾನ ಕಂಕಿ ಉಳದಾವ.
 
ಇದಲ್ಲದೇ ಬನ್ನಿಕಂಟಿ ಹೊಲದಲ್ಲಿ ಬೆಳದಿದ್ದರೆ ಹೊನ್ನು ಹುಟ್ಟಿತೆಂದು ಭಾವಿಸಿ ಅದನ್ನು ಸವರಿ ಸರಿಯಾಗಿ ಬೆಳೆಸುವರು. ಹಿರಿಯರ ಸಮಾಧಿ ಮೇಲೆಯೂ ಗಿಡವನ್ನು ಬೆಳೆಸುವರು. ಇಷ್ಟೊಂದು ಪೂಜ್ಯಭಾವನೆ ಬನ್ನಿಗಿಡದ ಬಗೆಗೆ ಅನಾದಿ ಕಾಲದಿಂದಲೂ ಬೆಳೆದು ಬಂದಿದ್ದು ಅದರ ಪತ್ರಿಯನ್ನು ವಿಜಯದಶಮಿಯ ದಿನ ಪರಸ್ಪರ ಮುಡಿಯುವರಾದ್ದರಿಂದಬನ್ನಿ ಹಬ್ಬ’ ಎಂದು ಹೆಸರು ಬಂದಿರುವದಲ್ಲದೆ ಹಬ್ಬದ ಆಚರಣೆಗೆ ಹಿನ್ನಲೆ ಇದೆಲ್ಲಾಗಿದೆ.
 
) ಉತ್ತು-ಬಿತ್ತುವ ಕೆಲಸ ಮುಗಿದು ಬೆಳೆದ ಬೆಳೆ ಮನೆ ಸೇರುವ ಶುಭ ಸಂದರ್ಭಕ್ಕೆ ಮುನ್ನ ರೈತನಿಗೆ ಸ್ವಲ್ಪಕಾಲ ಬಿಡುವಿದ್ದು ಆವಾಗ ಆಚರಿಸುವಮಾನೋಮಿ’ ಜಾನಪದರ ಬದುಕಿನಲ್ಲಿ ಪ್ರಕೃತಿ ಹಾಗೂ ದೈವ ಕುರಿತಾದ ನಂಬಿಕೆಯ ಸಂಪ್ರದಾಯ ಅನುಸರಿಸಿ ಬಂದದ್ದಾಗಿದೆ.
 
) "ದುಷ್ಟನಾದ ಮಹಿಷಾಸುರ ಹಾಗೂ ಅವನ ಕಡೆಯವರ ಚಂಡ ಮುಂಡ ರಕ್ತಬೀಜಾದಿ ದುರುಳ ರಾಕ್ಷಸರನ್ನೆಲ್ಲಾ ಜಗನ್ಮಾತೆಯು ಅಗತ್ಯಕ್ಕೆ ಅನುಸಾರವಾಗಿ ಮಹಾಕಾಳಿ, ದುರ್ಗಾದೇವಿ, ಚಾಮುಂಡೇಶ್ವರಿ ಎಂಬಿತ್ಯಾದಿ ರೂಪಗಳನ್ನು ತಳೆದು ಸಂಹಾರ ಮಾಡಿದ" ಕಾರಣಕ್ಕಾಗಿ ಜನರು ವಿಜಯ ಹೊಂದಿದಂತೆ ದೇವಿಯ ಆರಾಧನೆಯನ್ನು ವಿಜಯದಶಮಿ ಎಂದು ಮಾಡುವರು. ಸಂಗತಿ ಪುರಾಣೋಕ್ತವಾಗಿದೆ.
 
ಹೀಗೆ ಹಲವಾರು "ಹಿನ್ನಲೆಗಳಲ್ಲಿ" ವಿಜಯದಶಮಿಯನ್ನು ವಿವಿಧ ಕಾರಣಗಳಿಂದಾಗಿ ತಾವು ನಂಬಿದಂತೆ ಆಯಾ ಪ್ರಾದೇಶಿಕತೆಗನುಗುಣವಾಗಿ ಆಚರಿಸುವ ಸಂಪ್ರದಾಯ ಬಹು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
 
ಆಶಯ:
ಇಡೀ ಪ್ರಪಂಚವೇ ಶಕ್ತಿ ಪೂಜೆಯನ್ನು ಮಾಡುತ್ತದೆ. ಗ್ರೀಕ್, ರೋಮ, ಚೀನಾ, ಬೆಬಿಲೊನಿಯಾ, ಈಜಿಪ್ತ ಮುಂತಾದ ಹೊರದೇಶಗಳಲ್ಲಿಯೂ ಅವರದೇ ಆದ ಶಕ್ತಿ ದೇವತೆಯ ಪೂಜೆ ನಡೆಯುತ್ತದೆ. ನಮ್ಮ ಹಿಂದೂ ಧರ್ಮದಲ್ಲಂತೂ ಶಕ್ತಿಯ ಆರಾಧನೆ ಆನಾದಿ ಕಾಲದಿಂದಲೂ ನಡೆದು ಬಂದಿದೆ. ವೇದ-ಉಪನಿಷತ್ತುಗಳು ಶಕ್ತಿಯ ಪೂಜೆಯನ್ನು ಸಾರುತ್ತವೆ. ಶಕ್ತಿದೇವತೆಯಲ್ಲಿ ಎರಡು ವಿಧ. ಒಂದು ದುಷ್ಟ ಶಕ್ತಿ: ಇನ್ನೊಂದು ಶಿಷ್ಟ ಶಕ್ತಿ. ದುಷ್ಟಶಕ್ತಿಯ ಕಾಟ ತಾಳಲಾರದೇ ಶಿಷ್ಟ ಶಕ್ತಿಯ ಮೊರೆ ಹೋಗುವದು ತೀರಾ ಅನಿವಾರ. ಅದಕ್ಕಾಗಿಯೇ ವಿಜಯದಶಮಿಯಂದು ಶಕ್ತಿದೇವತೆ ಪೂಜೆಗೊಳ್ಳುತ್ತಿದ್ದಾಳೆ "ವಿಜಯದಶಮಿಯು ದುಷ್ಟ ಶಕ್ತಿಯ ಸಂಹಾರ ಆರ್ಥಾತ್ ಶಿಷ್ಟ ಶಕ್ತಿಯ ವಿಜಯದ ಕುರಿತಾದ ಸಂಕೇತಾತ್ಮಕವಾದ ಹಾಗೂ ಸಂತೋಷಾತ್ಮಕವಾದ ಸಡಗರದ ಆಚರಣೆಗಳಿಂದ ಕೂಡಿರುವ ಹಬ್ಬವಾಗಿರುತ್ತದೆ." ಶಕ್ತಿದೇವತೆಯ ಪೂಜೆಯಿಂದ ಪಾಪ ಪರಿಹಾರ, ಕಾರ್ಯಸಿದ್ಧಿ, ಕಲ್ಯಾಣ ಪ್ರಾಪ್ತಿಯುಂಟಾಗುವ ನಂಬಿಕೆ ಹಾಗೂ ಪರಸ್ಪರವಾದ ಪ್ರೀತಿ-ವಿಶ್ವಾಸ ಸ್ನೇಹಗಳು ವೃದ್ಧಿಯಾಗಲೆಂಬಆಶಯ’ಗಳು ಹಬ್ಬದ ಆಚರಣೆಯಲ್ಲಿ ಅಡಕವಾಗಿವೆ.
 
ಆಚರಣೆಯ ವಿಧಿ-ವಿಧಾನಗಳು:
ಆಶ್ವಯುಜ ಶುಕ್ಲ ಪ್ರತಿಪದೆ (ಪಾಡ್ಯ) ಯಿಂದ ಹಿಡಿದು ದಶಮಿಯ ತನಕ ಆಚರಿಸುವ ಹಬ್ಬದಲ್ಲಿ ನಾಲ್ಕು ಹಂತಗಳಿವೆ. ಮೊದಲನೆಯದಾಗಿ ಮಹಾನವಮಿ ಅಮವಾಸ್ಯೆಯ ನಂತರ ಪ್ರತಿಪದೆ, ದ್ವಿತೀಯಾ, ತೃತೀಯಾಗಳೆಂದು ಮೂರು ದಿನ ರೋಗಾದಾರಿದ್ರ್ಯ-ದುಃಖ ದುಮ್ಮಾನಗಳ ನಿವಾರಣೆಗಾಗಿ ದುರ್ಗಾಪೂಜೆಯನ್ನು ಕೈಕೊಳ್ಳುವರು. ಎರಡನೆಯದಾಗಿ ಚತುರ್ಥಿ, ಪಂಚಮಿ, ಷಷ್ಠಿ ಮೂರು ದಿನ ಸುಖ-ಸಂಪತ್ತು ಅಭಿವೃದ್ಧಿಗೊಳ್ಳಲು ಮಹಾಲಕ್ಷ್ಮೀಯನ್ನು ಪೂಜಿಸುವರು. ಮೂರನೆಯದಾಗಿ ಸಪ್ತಮಿ, ಅಷ್ಟಮಿ, ನವಮಿ, ಮೂರು ದಿನ ವಿದ್ಯೆ-ಬುದ್ಧಿ ಜ್ಞಾನಗಳು ವೃದ್ಧಿಯಾಗಲೆಂದು ಸರಸ್ವತಿಯನ್ನು ಪೂಜಿಸುವರು. ಹೀಗೆ ಮೂರು ಹಂತಗಳಲ್ಲಿ ಶಕ್ತಿ ಪೂಜೆ ಒಂಬತ್ತು ದಿನಗಳವರೆಗೆ ನಡೆಯುವದರಿಂದ ಹಬ್ಬಕ್ಕೆ ನವರಾತ್ರಿ-ಮಹಾನವಮಿ ಎಂದೂ ಕರೆಯುವರು. ನಾಲ್ಕನೆಯದಾಗಿ ಹಬ್ಬದ ಪರಿಸಮಾಪ್ತಿಯೆಂಬಂತೆ ಬರುವ ಹತ್ತನೆಯ ದಿನವೇ ದಶಮಿ. ಅದೇವಿಜಯದಶಮಿ’ ದಿನ ದಶಹರ್ ಎಂದರೆ ಹತ್ತು ರಾತ್ರಿಗಳು ಹಬ್ಬದಾಚರಣೆಯಾಗಿದ್ದುದಸರಾ’ ಎಂಬ ಹೆಸರು ಇದರಿಂದಲೇ ಬಂದಿದೆ. ಅಂದು ದೇವಿಯ ಮೆರವಣೆಗೆ, ಉತ್ಸವ. ಬನ್ನಿಪೂಜೆ ಮುಂತಾದವುಗಳೂ ಜರುಗುವುದರೊಂದಿಗೆ ಹಬ್ಬ ಮುಕ್ತಾಯಗೊಳ್ಳುವುದು. ಕೆಲವು ಕಡೆ ಹತ್ತು ದಿನಗಳಂದು ಮನೆ-ಮಠ-ಮಂದಿರಗಳಲ್ಲಿ "ದೇವಿಯ ಮಹಾತ್ಮೆ" ಕುರಿತಾದ ಪುರಾಣ ಪಠಣ-ಪ್ರವಚನಗಳೂ, ಭಜನೆಗಳೂ ನಡೆಯುತ್ತವೆ.
 
ಹಣ ಇದ್ದುಳ್ಳವರು ಇದನ್ನು ದುಂದಾಗಿಯೂ, ಬಡವರು ಹಿಡಿತದಲ್ಲಿಯೂ, ಕೆಲವೆಡೆ ಸಾಮೂಹಿಕವಾಗಿಯೂ ನವರಾತ್ರಿ ಪೂಜೆಯನ್ನು ಏರ್ಪಡಿಸುವರು. ಪ್ರತಿ ಪದೆಯಿಂದ ದಶಮಿಯ ವರೆಗೂ ಕ್ರಮವಾಗಿ ಆಚರಿಸಲು ಸಾಧ್ಯವಿಲ್ಲದವರು ನವಮಿಯೆಂದು ದೇವಿಪೂಜೆಯನ್ನು, ದಶಮಿಯೆಂದು ಬನ್ನಿಪೂಜೆಯನ್ನು ಮಾಡಿ ಮುಗಿಸುವರು. ಇದನ್ನೆ ನಮ್ಮ ಹಳ್ಳಿಯ ಬದುಕಿನ ಹಿನ್ನೆಲೆಯಲ್ಲಿ ನೋಡೋಣ. " ವಿಜಯದಶಮಿ’ ಯನ್ನು ಹಳ್ಳಿಗರು ಹೆಚ್ಚಾಗಿಮನೋವಿ’ಬನ್ನಿ ಹಬ್ಬ’ ವೆಂದೇ ಕರೆಯುವರು. ಹಬ್ಬ ಬರುತ್ತಿದ್ದಂತೆ ಮಹಾನವಮಿ ಅಮವಾಸ್ಯೆಯ ಮುನ್ನವೇ ಹಬ್ಬದ ತಯಾರಿ ನಡೆದಿರುತ್ತದೆ. ಮನೆಯ ಹೆಣ್ಣುಮಕ್ಕಳನ್ನು ಗಂಡನ ಮನೆಯಿಂದ ಕರೆಸಿಕೊಳ್ಳುತ್ತಾರೆ.
 
ಮಾನೋವಿ ಬಂತಂತ ಹೇಳಿ ನಾ ಕಳಿವೇನಿ
ಕ್ಯಾದಿಗಿ ದಂಡಿ ಹೆಣದೀಣಿ | ಕಂದವ್ವ
ದಸರೇಕ ಹೊಂಟಾರ ಧನಿಯಾರು.
 
ತಂದೆ-ಅಣ್ಣ-ತಮ್ಮ ಯಾರಾಗಲಿ ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಕರೆ ತರುವರು. ಮಗಳು ಮನೆ ತುಂಬಿದ ಮೇಲೆ ಮನೆಯ ಅಲಂಕಾರಕ್ಕೆ ತೊಡಗುವರು. ಇಡೀ ಮನೆಯನ್ನೆಲ್ಲಾ ಸುಣ್ಣ-ಕೆಮ್ಮಣ್ಣುಗಳಿಂದ ಸಾರಿಸಿ. ಎಣ್ಣೆ-ಬಣ್ಣಗಳನ್ನು ಬಳಿಯುವರು. ತಟ್ಟೆ-ಬುಟ್ಟಿಗಳನ್ನು ತೊಳೆದಿಡುವರು. ಹಾಸಿಗೆ-ಹೊದಿಕೆ-ಮೈಲಿಗೆ ಬಟ್ಟಿಗಳೆಲ್ಲಾ ಮಡಿಗೊಳಿಸುವರು.
 
ಮನೆಯ ದೇವರು ಮೈಲಾರಲಿಂಗವಾಗಿದ್ದ ಮನೆಯಲ್ಲಿ ಹೈನವಿದ್ದರೆ ಕೆಲವರು ಪಂಚಮಿಯಿಂದ ನವಮಿಯವರೆಗೆ, ಇನ್ನು ಕೆಲವರು ಸಪ್ತಮಿಯಿಂದ ನವಮಿಯವರೆಗೆ ಹಾಲನ್ನು ಕಾಯಿಸಿ ಹೆಪ್ಪು ಹಾಕಿ ದೇವರ ಮುಂದೆ ಮೀಸಲಿಡುವರು. ನವಮಿಯ ದಿನ ಮೀಸಲಿಟ್ಟ ಮೊಸರನ್ನೆಲ್ಲಾ ಕಡಿದು ಬೆಣ್ಣೆಮಾಡಿ, ಅದನ್ನು ಕಾಯಿಸಿ, ತುಪ್ಪ ಬಂದ ಮೇಲೆ ಮೀಸಲು ತುಪ್ಪದಲ್ಲಿಯೇ ಮೈಲಾರ ದೇವರ ದೀವಟಿಗೆ ಉರಿಸುವರು. ದೀವಟಿಗೆ ಹಿಡಿಯುವ ವ್ಯಕ್ತಿ ವಿವಾಹಿತನಾಗಿರಬೇಕು. ದಿನ ನಿರಾಹಾರಿಯಾಗಿದ್ದು. ಸಂಜೆಯಾಗುತ್ತಲೆ ಮಡಿವಂತನಾಗಿ, ಮಡಿ ಅರಿವೆಯನ್ನು ದೀವಟಿಗೆಗೆ ಸುತ್ತಿ ಮೀಸಲು ತುಪ್ಪವನ್ನು ಉಣಿಸಿ ದೀಪ ಹೊತ್ತಿಸುವರು. ಮನೆಯ ಜಗುಲಿಯಿಂದ ಗ್ರಾಮದೇವರವರೆಗೂ ದೀವಟಿಗೆಯನ್ನು ಉರಿಸುತ್ತ ಹೋಗಿ ಬರುವರು. ದೀವಟಿಗೆ ಹಿಡಿದ ವ್ಯಕ್ತಿ"ಏಳಕೋಟಿ ಏಳಕೋಟಿ.. ಏಳಕೋಟಿಗೊ" ಎಂಬ ಮೈಲಾರ ದೇವರ ಗರ್ಜನೆ ಹೇಳುತ್ತಿರುವನು. ಮನೆ-ಮಂದಿ ನುಡಿಯನ್ನು ಮಾರ‍್ನುಡಿಯುವರು. ದೀವಟಿಗೆಯ ಹಿಂದೆ ಸುಮಂಗಲೆಯ ಕಳಸದಾರತಿ ಇದ್ದೇ ಇರುವದು. ಆಕೆಯೇ ದೀವಟಿಗೆಗೆ ದಾರಿಯಲ್ಲಿ ತುಪ್ಪ ಹಾಕಿ ಉರಿಸುವದಲ್ಲದೇ ದೀವಟಿಗೆ ಹಿಡಿದವರನ್ನು ದೇವರ ಸಮಾನವೆಂದು ಪೂಜಿಸುವಳು. ಇದಕ್ಕೆ " ದೇವರನ್ನು ಹೊರಡಿಸುವದು" ಎಂದೂ ಕರೆಯುತ್ತಾರೆ.
 
ಅದೇ ದಿನ ಮಹಾಲಕ್ಷ್ಮೀಯ ಪೂಜೆಯನ್ನು ಕೆಲವರು ಕೈಕೊಳ್ಳುವರು. ಪೂರ್ಣಕುಂಭ ಕಳಸವನ್ನು ಮಾಡಿ. ಮನೆಯಲ್ಲಿ ತಾವೇ ನಿರ್ಮಿಸಿರುವದೇವರಕಂಬ’ ಅಥವಾಲಕ್ಷ್ಮೀಕಂಬ’ ಕ್ಕೆ ಅದನ್ನಿಟ್ಟು ಹಿಂದಿನ ಹಿರಿಯರ ಹೆಸರಿನಲ್ಲಿ ಹೊಸ ಸೀರೆ-ಕಣವನ್ನೊ ಧೋತರ-ಶಲೈಯನ್ನೊ ತಂದು, ಮಡಿಚಿ ಕುಂಭದ ಮುಂದಿಟ್ಟು, ಆಭರಣಗಳಿಂದ ಅಲಂಕರಿಸಿ ಪೂಜೆಗೈಯ್ಯುವರು. ಐದು ಜನ ಮುತ್ತೈದೆಯರು ದಿನ ನಿರಾಹಾರಿಯಾಗಿದ್ದು. ಸಂಜೆಯಾಗುತ್ತಲೇ ಮಡಿಯಿಂದ ಬಂದು ಕೈಗೆ ಕಂಕಣಕಟ್ಟಿಕೊಂಡು, ಉಡಿತುಂಬಿ, ದೇವರಿಗೆ ಆರತಿ ಮಾಡಿದ ಮೇಲೆ ಪ್ರಸಾದವನ್ನು ಸ್ವೀಕರಿಸುವರು. ಇದಕ್ಕೆಹಿರೇರ ಹಬ್ಬ’ ವೆಂದೂ ಕರೆಯುವರು.
 
ಅದೇ ದಿನ ಆಯುಧ ಪೂಜೆ ನಡೆಯುವದು. ಕೊಡ್ಲಿ- ಕುಡಗೋಲು, ಬರ್ಚಿ-ಬಂದೂಕ, ಖಡ್ಗ-ಕತ್ತಿಗಳನ್ನೆಲ್ಲಾ ಸ್ವಚ್ಛ ಮಾಡಿ ಜಗುಲಿಯ ಮೇಲಿಟ್ಟು ಪೂಜಿಸುವರು. ಹಿಟ್ಟಿನಗಿರಣಿ, ಟ್ರ್ಯಾಕ್ಟರ್ ಟ್ರಕ್, ಇಂಜಿನ್, ಪಂಪಶೆಟ್, ಸ್ಟ್ರೇಯರುಗಳೇ ಆಗಿರಲಿ. ವೃತ್ತಿ ಸಾಧನಗಳಾದ ಹೊಲಿಯುವ ರಾಟಿ, ಬಡಿಗರ ಸಲಕರಣೆಗಳು. ಹಜಾಮರ ಸಾಧನಗಳು, ಒಡ್ಡರ ಆಯುಧಗಳು, ಹರಿಜನರ ಹರಿತಾಯುಧಗಳು, ವ್ಯಾಪಾರಸ್ಥರ ತೂಕಮಾಪಕಗಳು ವೃತ್ತಿಗಾಗಿ ಅದೇನೆ ವಸ್ತುವಿದ್ದರೂ, ಜಾತಿ ಮತಗಳ ಭಿನ್ನತೆಯಿಲ್ಲದೇ ಎಲ್ಲರೂ ತಂತಮ್ಮ ಆಯುಧಗಳನ್ನು ಪೂಜೆಗೈಯ್ಯುವರಾದ್ದರಿಂದ ಇದಕ್ಕೆಆಯುಧ ಪೂಜೆ’ ಎಂಬ ಹೆಸರೂ ಬಂದಿದೆ. ಇದನ್ನುಖಂಡೆಯ’ ಪೂಜೆಯೆಂದೂ ಕರೆಯುವರು. ಮಾಂಸಾಹಾರಿಗಳು ದಿನ ಖಂಡೆ(ಮಾಂಸ) ಪೂಜೆ ಮಾಡುವದರಿಂಧಖಂಡೆ ಪೂಜೆ’ ಎಂಬ ಹೆಸರು ಬಂದಿರಬಹುದಾಗಿದೆ. ಖಂಡೆ ಪೂಜೆ’ ಯನ್ನು ರಾಜ ಮನೆತನದವರು ಬಲು ವೈಭವದಿಂದ ಆಚರಿಸುತ್ತಿದ್ದು ಅದರಲ್ಲೂ ಮೈಸೂರಿನ ಮಹಾರಾಜರು ಆಚರಿಸುವದಸರಾ’ ಕುರಿತಾದ ಹಬ್ಬದ ವಿವರಣೆಗೆ ಪ್ರತ್ಯೇಕ ಲೇಖನವೇ ಬೇಕಾಗುತ್ತದೆ.
 
ನವಮಿಯ ನಂತರ ಬರುವದೇ ದಶಮಿ. ಬರೀ ದಶಮಿಯಲ್ಲ. ವಿಜಯದಶಮಿ, ದಿನ ಮಧ್ಯಾಹ್ನ ಹಿಂದಿನ ಪೂಜೆ ಪೂಜೆಗೊಂಡ ದೇವರುಗಳು-ಆಯುಧಗಳು ಮತ್ತೆ ಪೂಜೆಗೊಳ್ಳುವವು. ಕಾಲಕ್ಕೆ ಮುಂಗಾರು ಬೆಳೆ ಹೊಡೆ ತೆರೆದು ನಿಂತಿರುವದು. ಅವುಗಳಲ್ಲಿ ಐದು ದಂಟುಗಳನ್ನು ಕಿತ್ತು ತಂದು ಜಗುಲಿಗೇರಿಸಿ ಪೂಜಿಸುವರು. ಇದು ಸಾಂಕೇತಿಕವಾಗಿ ರೈತ ತಾನು ಬೆಳೆದ ಮೊದಲ ಬೆಳೆಯನ್ನು ದೇವರಿಗೆ ಅರ್ಪಿಸುವುದಾಗಿದೆ. ಮನೆದೇವರ ಪೂಜೆಯಾದ ಮೇಲೆ ಊರದೇವರಿಗೆಲ್ಲಾ ತಾವು ಮಾಡಿದ ಅಡಿಗೆಯ ಎಡೆಯನ್ನು ಸಲ್ಲಿಸುವರು. ಹೊತ್ತು ಮುಳುಗಿದ ನಂತರ ಗ್ರಾಮ, ದೇವರ ಉತ್ಸವ ಮೂರ್ತಿಯನ್ನು ಅಲಂಕೃತ ಪಲ್ಲಕ್ಕಿಯಲ್ಲಿ ಕೂಡ್ರಿಸುವರು. ಪಲ್ಲಕ್ಕಿಯ ಹಿಂದೆ ಸುಮಂಗಲೆಯರು ಆರತಿ ಹಿಡಿದು ಹಾಡಲು ಸಿದ್ಧರಾಗಿರುವರು. ಊರು ಗೌಡರ ಹಿರಿತನದಲ್ಲಿ ವಾದ್ಯ-ವೈಭವಗಳೊಂದಿಗೆ ಬನ್ನಿ ಮುಡಿಯಲು ಜನ ಪಲ್ಲಕ್ಕಿಯನ್ನು ಹೊತ್ತು ಬನ್ನಿಮರದ ಕಟ್ಟೆಗೆ ಬರುವರು. ಇದರ ಜೊತೆಗೆ ತಮ್ಮ ಮನೆಯಲ್ಲಿ ಪೂಜಿಸಿದ್ದ ದಂಟುಗಳನ್ನು ಜನ ತಂದು ಬನ್ನಿಗಿಡದ ಸುತ್ತಲೂ ಏರಿಸಿಡುವರು. ವಾಲೀಕಾರರು ಆರಿಗಿಡದ ತಪ್ಪಲನ್ನು ತಂದು ಅಲ್ಲಿಯೇ ಇಟ್ಟಿರುವರು. ಗ್ರಾಮದೇವರ ಪೂಜಾರಿ ಬನ್ನಿ ಮಹಾಕಾಳಿಯನ್ನಲ್ಲದೇ ಉತ್ಸವ ಮೂರ್ತಿಯನ್ನು ಪೂಜಿಸುವನು. ಸುಮಂಗಲೆಯರು ಆರತಿ ಬೆಳಗುವರು. ಗೌಡರು ತಮ್ಮೂರಿನ ಸೌಖ್ಯ ಸಂಪತ್ತನ್ನು ಸಾರಿ ಅದು ಮುಂದಿನ ದಿನಗಳಲ್ಲಿಯೂ ನೆಲೆಸಿರುವಂತೆ ಅನುಗ್ರಹಿಸಲು ದೇವರನ್ನು ಪ್ರಾರ್ಥಿಸಿ, ದೈವದ ಪರವಾಗಿ ಮೊದಲು ದೇವರಿಗೆ ಬನ್ನಿ ಮುಡಿಸುವರು. ದೇವರು ಮರಳಿ ಅದೇ ವೈಭವದಿಂದ ಗುಡಿ ಸೇರುವದು. ನಂತರವೇ ಬನ್ನಿಕೊಡುವದು ವಿಧಿವತ್ತಾಗಿ ನಡೆಯುವದು.
 
ಇನ್ನು ಕೆಲಕಡೆ ಹೀಗೆ ದೇವರನ್ನು ಗುಡಿಯಿಂದ ಹೊರತಂದು ತಮ್ಮೂರಿನ ಸೀಮೆಯನ್ನು ನೆರೆಯೂರಿನ ಸೀಮೆಯನ್ನು ಪ್ರವೇಶಿಸಿ ಮರುಳುವ ಪದ್ದತಿಯೂ ಇದ್ದು ಇದಕ್ಕೆ "ಸೀಮೋಲ್ಲಂಘನ" ಎಂದು ಕರೆಯುವರು. ಹಿಂದೆ ಪಾಂಡವರು ತಮ್ಮ ವನವಾಸ ಮುಗಿಸಿ ಕೌರವ ರಾಜ್ಯದ ಸೀಮೆಯನ್ನು ಉಲ್ಲಂಘಿಸಿ ಅವರೊಂದಿಗೆ ಕಾದಾಡಿ, ವಿಜಯಿಗಳಾಗಿ ರಾಜ್ಯಗಳಿಸಿದುದರ ಸಂಕೇತವಾಗಿ ರೀತಿಯ ಆಚರಣೆ ರೂಢಿಯಲ್ಲಿ ಬಂದಿದೆ. ಒಂದೂರಿನವರು ವಿಜಯದಶಮಿಯ ದಿನ ಮತ್ತೊಂದೂರಿನ ಸೀಮೆ ತಲುಪಿ ಊರವರಿಂದ ಪಾರಾಗಿ ಬರುವದು ಸಾಹಸದ ಮಾತಾಗಿದ್ದು ಒಂದು ರೀತಿಯಲ್ಲಿ ಇದು ರಾಜಕೀಯ ವಿಜಯವೂ ಆಗಿದೆ. ದಿನ ಸೀಮೆಯ ಉಲ್ಲಂಘನ ಬಲು ಕುತೂಹಲಕರವಾಗಿ ಜರಗುತ್ತದೆ.
 
ಬನ್ನಿಗಿಡದ ಸುತ್ತಲೂ ಇಟ್ಟಿರುವ ಆರಿತಪ್ಪಲು ಹಾಗೂ ದಂಟುಗಳಿಗಾಗಿ ಜನರ ನೂಕು ನುಗ್ಗಾಟ ಪ್ರಾರಂಭವಾಗುವದು. ಆರಿತಪ್ಪಲನ್ನು ಬನ್ನಿಯೊಂದಿಗೆ ಸೇರಿಸಿ ಮುಡಿಯುವರು. ಬನ್ನಿಗಿಡದಡಿ ಪೂಜೆಗೊಂಡ ದಂಟನ್ನು ತಂದು ಬರಡು ಆಕಳು-ಎಮ್ಮೆಗಳ ಮೇಲೆ ಬಡಿಯುವದಲ್ಲದೇ ಅದನ್ನು ಅವುಗಳಿಗೆ ತಿನ್ನಿಸುವರು. ಹೀಗೆ ಮಾಡುವದರಿಂದ ಅವು ಗಬ್ಬಾಗುವ (ಗರ್ಭಧರಿಸುವ) ವೆಂಬ ನಂಬಿಕೆಯಿದೆ.
 
ಬನ್ನಿ ಹಾಗೂ ಆರಿತಪ್ಪಲನ್ನು ಸಂಪಾದಿಸಿ ಅವು ಬಂಗಾರಕ್ಕೆ ಸಮವೆಂದು ಭಾವಿಸಿ ಅವುಗಳ ಒಂದೆಲೆ ಸಹ ಕೆಳಗೆ ಬೀಳದಂತೆ ಕಾಳಜಿವಹಿಸಿ, ಮೊದಲು ಊರಿನ ಹಿರಿ-ಕಿರಿ-ಗಂಡು-ಹೆಣ್ಣು ದೇವರುಗಳಿಗೆಲ್ಲಾ ಅರ್ಪಿಸುವರು. ನಂತರ ಮಠದ ಸ್ವಾಮಿಗಳಿಗೆ, ಜಂಗಮರ ಮನೆಗಳಿಗೆ ತಿರುಗಿ. ಬನ್ನಿಯೊಂದಿಗೆ ಕಾಸಿನ ಕಾಣಿಕೆಯನ್ನು ಸಲ್ಲಿಸುವರು. ನಂತರ ಮನೆ ಮಂದಿಗೆ ಬನ್ನಿ ಸಲ್ಲಿಸುವರು. ತವರಿಗೆ ಬಂದ ತಂಗಿಯೊಬ್ಬಳು ತನ್ನಣ್ಣ ಬನ್ನಿ ಕೊಡಲು ಬಂದಾಗ ಮಧುರ ಬಾಂಧವ್ಯ ಬೆಳೆಸುವ ಮಹಾದಾಸೆಯುಳ್ಳವಳಾಗಿ ಹಾಡುವ ನುಡಿ ಬಲು ಸೊಗಸಾಗಿದೆ.
 
ಬನ್ನಿ ಮುಡಿಯುದು ಬಂತು ಬಂಗಾರ ಕೊಡುವುದು ಬಂತು
ಬಂದ ನನಕಾಲ ಹಿಡದಾನ | ನನ್ನಣ್ಣ
ಬಂಗಾರ ಮಾಲ ನನಗಿರಲಿ
 
ಆಮೇಲೆ ಕಂಡಕಂಡವರು ಕಂಡಕಂಡವರಿಗೆಲ್ಲ ಜಾತಿ-ಮತ-ವಯಸ್ಸು-ಲಿಂಗ ಭೇದವಿಲ್ಲದೆಯೇ ಬನ್ನಿಕೊಡುವ ಕಾರ್ಯ ಎಡೆಬಿಡದೆ ಮಧ್ಯರಾತ್ರಿವರೆಗೂ ಸಾಗುವದುನಾವು-ನೀವು ಬಂಗಾರದಾಂಗಿರೂನ್ರಿ’ ಎಂಬ ಸಮವಯಸ್ಕರ ಸ್ನೇಹಭಾವ, ‘ದೌಡ ಹತ್ತ ಮಕ್ಳ ಹಡಿ’ ಎಂಬ ಹಿರಿಯರ ಆಶೀರ್ವಾದ, ‘ ಇರ್ಲಿ ಇರ್ಲಿ’ ಎಂದು ಬಾಗಿದವರಿಗೆ ಹೇಳುವ ಗಣ್ಯರ ಸೌಜನ್ಯತೆ-ಒಟ್ಟಿನಲ್ಲಿ ದಿನ ಹಳ್ಳಿಗೆ ಹಳ್ಳಿಯೇ ಒಳ್ಳೆಯದಲ್ಲಿ ಹಾಡು-ಆಟಗಳೂ ನಡೆಯುವವು. ಬನ್ನಿ ಹಬ್ಬದ ಮಹತ್ವ ಕುರಿತಾದ ಯುವತಿಯರ ಕೋಲಾಟದ ಪದವೊಂದು ಇಂತಿದೆ.
 
ಬನ್ನಿ ಮುಡಿಯುನ ಬಾರ ಕೋಲು ಕೋಲ |
ಚಿನ್ನ ತರವುನ ಬಾರ ಕೋಲು ಕೋಲ || ||
 
ಊರ ಸೀಮೆಯ ದಾಟಿಮ ಕಾಡ ಗಡಿಯನು ಸೇರಿ
ಕಾಡ ಸಂಪತ್ತ ತರಬನ್ನಿ || ಕೋಲು ಕೋಲ || ||
 
ಬೆಳೆದ ಬೆಳಸಿಗೆ ಬನ್ನಿ, ಭೂಮಿ ತಾಯಿಗೆ ನಿನ್ನ
ನಾಡ ಸಂಪತ್ತ ಬೆರೆ ಬನ್ನಿ || ಕೋಲು ಕೋಲ || ||
 
ಅರಸನ ಅಂಗಳಕ, ಸರಸ ರಂಗ ಹೊಯ್ದು
ಹೊರಸಿ ತಂದಾರ ಸಿರಿ ಬನ್ನಿ || ಕೋಲು ಕೋಲ || ||
 
ದೇವ ದೇವರ ಬನ್ನಿ, ದೇವ ದೈವದ ಬನ್ನಿ
ನಾವು ಮುಡಿವೂದು ನಮ ಬನ್ನಿ || ಕೋಲು ಕೋಲ || ||
 
ಹಡೆದ ತಾಯಿಗೆ ಬನ್ನಿ, ಹಡೆದ ತಂದೆಗೆ ಬನ್ನಿ
ಪಡೆದ ಗಂಡನಿಗೆ ನಮಬನ್ನಿ || ಕೋಲು ಕೋಲ || ||
 
ಚಿನ್ನದ ಕೈಗಡಗ, ಚನ್ನೇರು ಇಟಗೊಂಡು
ಚಿನ್ನಧಾಭಾರಣ ನಡ ಬಾಗಿ || ಕೋಲು ಕೋಲ || ||
 
ಗೆಜ್ಜಿ ಹೆಜ್ಜೀ ಹಾಕಿ, ಗುಜ್ಜೇರು ಕುಣಿದಾರ
ವಜ್ಜರ ವಡ್ಯಾಣ ಘಿಲ ಘಿಲ || ಕೋಲ ಕೋಲ || ||
 
ನಾವು ಕುಣಿಯುಣ ಬನ್ನಿ, ಹ್ಯಾಂವ ಮರೆಯುಣ ಬನ್ನಿ
ಜೀವ ಒಂದಾಗಿ ಇರಬನ್ನಿ || ಕೋಲು ಕೋಲ || ||
 
ಇಂದ ಮುಡಿಯುವ ಬನ್ನಿ, ಮುಂದೆ ಮಗ ಹೊನ್ನಾಗಿ
ಕುಂದಣದಾರೂತಿ ಬೆಳಗೂದಕ || ಕೋಲು ಕೋಲ || ||
 
) ಬನ್ನಿ ಮುಡಿಯುವ ದಿನ ಪವಿತ್ರವಾದ ದಿನವಾಗಿದ್ದು ಅಂದು ಯಾವುದೇ ಕಾರ್ಯರಂಭಕ್ಕೂ ಶುಭ ದಿನವೆನಿಸಿದೆ. ಮನೆಕಟ್ಟಲು ತಳಪಾಯ, ಹೊಸಮನೆ ವೇಶ, ಹೊಲ-ಮನೆ ಖರೀದಿ, ವ್ಯಾಪಾರ- ವ್ಯವಹಾರ ಪ್ರಾರಂಭಕ್ಕೆ ದಿನವನ್ನೆ ವಿಶೇಷವಾಗಿ ಆಯ್ಕೆ ಮಾಡುವರು.
 
ಮೇಲಿನಂತೆ ಹಳ್ಳಿಗರು ಬನ್ನಿ ಹಬ್ಬವನ್ನು ಆಚರಿಸುವರಾದರು ಇನ್ನೂ ಕೆಲಕಡೆಗಳಲ್ಲಿ ಆಯಾ ಊರುಗಳ ಪರಿಸರ ಹಾಗೂ ಸಾಂಪ್ರದಾಯಿಕ ಪದ್ಧತಿಗಳನ್ನು ಸಾರವಾಗಿ ಕೆಲವೊಂದು ಬದಲಾವಣೆಗಳೊಂದಿಗೆ ಆಚರಿಸಲಾಗುತ್ತದೆ.