Sri Aanjaneya Pooje - 2013

Dear Omkar Members,

Omkar celebrates its ONE YEAR completion and has been a year serving Kannadigas and Karnataka community.  Omkar takes this opportunity to thank all of its members who supported all these days. On this occasion, your valuable feedback is highly appreciable and helps us to serve and build the community in a better way. 

Please send your feedback to omkarsamithi@gmail.com

Omkar's debut program started with Sri Aanjaneys Pooja in Dec-2012 and with the blessings of Sri Lord Aanjaneya Swamy, Omkar could organize unique and outstanding programs since then and intend to continue in coming days.

Sri Aanjaneya Pooja -2013 is organized on coming 27-December-2013 at Sri Krishna Temple Hall, Darsait. Detailed program shall be sent to you later with the Invitation

In mean time, Omkar invites supporters and volunteers for the upcoming program from its members. Interested members are requested to send their names for any of the services to omkarsamithi@gmail.com.  

Or Send email using Contact us Section from this blog


Omkar Team

ತುಳಸಿ ವಿವಾಹ ವಿಶೇಷಾಂಕ - ೨೦೧೩

|| ಪ್ರಸೀದ ತುಲಸೀದೇವಿ ಪ್ರಸೀದ ಹರಿವಲ್ಲಭೇ ಕ್ಷೀರೋದಮಥನೋದ್ಭೂತೇ ತುಲಸಿ ತ್ವಾಂ ನಮಾಮ್ಯಹಮ್ ||

ಭಾರತೀಯ ಸಂಸ್ಕೃತಿಯಲ್ಲಿ ತುಳಸಿಗೆ ಅತ್ಯಂತ ಪೂಜನೀಯ ಹಾಗೂ ಗೌರವ ಸ್ಥಾನವಿದೆ. ಭಾರತದಲ್ಲಿ ಪ್ರತಿಯೊಂದು ಮನೆಯ ಮುಂಭಾಗ ಅಥವಾ ಹಿಂಭಾಗದಲ್ಲಿ ತುಳಸಿಕಟ್ಟೆ ಸ್ಥಾಪಿಸಿರುತ್ತಾರೆ. ಎಲ್ಲಾ ಧಾರ್ಮಿಕ  ಆಚರಣೆಗೂ ತುಳಸಿಯನ್ನು ಬಳಸುತ್ತಾರೆ.

ಉತ್ಥಾನ ದ್ವಾದಶಿ
ಕಾರ್ತಿಕ ಮಾಸದ ಹಬ್ಬಗಳಲ್ಲಿ ಅತ್ಯಂತ ಪ್ರಸಿದ್ಧವಾದುದು ಉತ್ಥಾನ ದ್ವಾದಶಿ. ಉತ್ಥಾನ ಎಂದರೆ ಏಳುವುದು ಎಂದರ್ಥ. ಅಂದರೆ, ಶ್ರೀಮನ್ನಾರಾಯಣನು ಪಾಲ್ಗಡಲಿನಲ್ಲಿ ತನ್ನ ಸುಖಶಯನದಿಂದ ಮೇಲಕ್ಕೆದ್ದು, ತನ್ನ ನಿದ್ರಾಮುದ್ರೆಯನ್ನು ಭಕ್ತರಿಗೆ ಸಾಕ್ಷಾತ್ಕರಿಸುವ ಈ ದಿನವನ್ನು  ಕ್ಷೀರಾಭಿವ್ರತವೆಂದು ಹಲವು ಕಡೆ ಆಚರಿಸುವರು. 

ತುಳಸೀ ಕಲ್ಯಾಣ
ದೀಪಾವಳಿ ಸಂಭ್ರಮ ಮುಗಿಯುತ್ತಿರುವ ಬೆನ್ನಲ್ಲೇ ಕಾರ್ತಿಕ ಮಾಸದ ವೈಭವ. ಈ ಮಾಸದಲ್ಲೂ ಹಬ್ಬಗಳ ಸರಮಾಲೆ. ಎಲ್ಲೆಲ್ಲೂ ಸಡಗರ. ಇದಕ್ಕೆ ಮುನ್ನುಡಿ ಬರೆದಿದೆ ಉತ್ಥಾನ ದ್ವಾದಶಿ ಪರ್ವ ಅರ್ಥಾತ್ತುಳಸಿ ವಿವಾಹ.

ಸುಲಭಾ, ಸುರನಾ, ಬಹುಮಂಜರಿ, ಶೂಲಕ್ಷ್ಮೀ, ದೇವ ದುಂದುಬಿ, ಪಾವನೀ ವಿಷ್ಣು ಪ್ರಿಯಾ, ದಿವ್ಯ, ಭಾರತೀ ಹೀಗೆ ವಿಭಿನ್ನ ಹೆಸರುಗಳಿಂದ ಕರೆಸಿಕೊಳ್ಳುವ ತುಳಸಿಯ ವಿವಾಹಕ್ಕೆ ನಾಡಿನಾದ್ಯಂತ ಅದ್ದೂರಿಯ ತಯಾರಿ. ಕಾರ್ತಿಕಮಾಸ ಶುಕ್ಲಪಕ್ಷದ 12ನೇ ದಿನ, ಕಾರ್ತಿಕ ಶುದ್ಧ ದ್ವಾದಶಿಯಂದು ಆಕೆಯ ವಿವಾಹಕ್ಕೆ ಮುಹೂರ್ತ ನಿಗದಿಯಾಗಿದೆ (ಅಂದರೆ ೧೪ ನೇ ತಾರೀಖು ನವೆಂಬರ್ ೨೦೧೩)

ಕೇವಲ ಹಬ್ಬವಲ್ಲ. ಹಬ್ಬದ ಹೆಸರಿನಲ್ಲಿ ಆರೋಗ್ಯ ಕಾಪಾಡುವುದು ಈ ಪರ್ವದ ವಿಶೇಷ. ಈಕೆ ಹಿಂದು ಧರ್ಮೀಯರಿಗೆ ದೈವ ಸ್ವರೂಪಿಯಾಗಿದ್ದರೆ, ಉಳಿದ ಧರ್ಮೀಯರಿಗೆ ವಿವಿಧ ಕಾಯಿಲೆ ವಾಸಿಮಾಡಿ ಜೀವ ನೀಡಬಲ್ಲ ಸಂಜೀವಿನಿಯೂ ಹೌದು. ಇದಕ್ಕಾಗಿಯೇ ಆಯುರ್ವೇದದಲ್ಲಿ ತುಳಸಿಗೆ ಪ್ರಥಮ ಸ್ಥಾನ. ಎಲೆ, ಬೇರು, ಬೀಜ ಸೇರಿದಂತೆ ಸಂಪೂರ್ಣ ಗಿಡವೇ ಔಷಧಯುಕ್ತ. ತುಳಸಿಯ ವಿಶಿಷ್ಟ ಸುವಾಸನೆಯು ಕ್ರಿಮಿ ಕೀಟ, ರೋಗಾಣುಗಳನ್ನು ದೂರವಿಡುತ್ತದೆ.

ತುಳಸಿ ಎಲೆಗಳನ್ನು ನೀರಿನಲ್ಲಿ ಹಾಕಿಟ್ಟರೆ ಸೂಕ್ಷ್ಮ ರೋಗಾಣುಗಳು ನಾಶವಾಗುತ್ತದೆ. ಸೂರ್ಯೋದಯಕ್ಕೆ ಮುನ್ನ, ಅಂದರೆ ಬ್ರಾಹ್ಮಿ ಮುಹೂರ್ತದಲ್ಲಿ ಇದರ ಸೇವನೆಯಿಂದ ಸಾಕಷ್ಟು ರೋಗ ನಿವಾರಣೆಯಾಗುತ್ತದೆ. ಇದರ ಎಲೆಗಳ ಸೇವನೆಯಿಂದ ಸ್ವಸ್ಥ ಹಾಗೂ ಸುಂದರವಾದ ಮೈಕಟ್ಟನ್ನು ಹೊಂದಬಹುದು. ಅಜೀರ್ಣ, ಮಲಬದ್ಧತೆ, ಗ್ಯಾಸ್, ಹುಳಿ ಇತ್ಯಾದಿಗಳಿಗೆ ಇದು ರಾಮಬಾಣ.

ಅದಕ್ಕಾಗಿಯೇ ಈ ಹಬ್ಬದ ನೆಪ ಅಷ್ಟೇ. ಕಾರ್ತಿಕ ಮಾಸದಲ್ಲಿ ಪ್ರತಿದಿನ ತುಳಸಿಯನ್ನು ಪೂಜಿಸಿ ನಮಸ್ಕರಿಸಿದರೆ ಒಂದು ಯುಗದಲ್ಲಿ ಮಾಡಿದ ಪಾಪದಿಂದ ಮುಕ್ತಿ ದೊರೆಯುತ್ತದೆ ಎಂಬ ನಂಬಿಕೆ ಹುಟ್ಟುಹಾಕಿರುವುದೂ ಇದಕ್ಕಾಗಿಯೇ. ಉತ್ಥಾನ ದ್ವಾದಶಿಯಂದು ತುಳಸೀ ವೃಂದಾವನಕ್ಕೆ ಧೂಪ-ದೀಪ-ನೈವೇದ್ಯಗಳಿಂದ ಪೂಜಿಸುತ್ತಾರೆ.  ವಿಶೇಷವಾಗಿ ಶಂಖದಿಂದ ಹಾಲಿನ ಅಭಿಷೇಕ ಮಾಡಬೇಕು. ಅಂದು ತುಳಸಿಯನ್ನು ಅಗಸೆ ಹಾಗೂ ನೆಲ್ಲಿ ಟೊಂಗೆಯೊಂದಿಗೆ ಕಟ್ಟಿ ವೈಭವದಿಂದ ಪೂಜಿಸಿ, ಆರತಿ ಮಾಡಿ, ದಾನಾದಿಗಳನ್ನು ಮಾಡಬೇಕು.  ಅಗಸೆ, ನೆಲ್ಲಿ ಮತ್ತು ತುಳಸಿ ಇವು ಮೂರು ಬಹಳ ಪವಿತ್ರವಾದುವು. ವೃಂದಾದೇವಿಯ ಅನುಗ್ರಹಕ್ಕೆ ಪಾತ್ರರಾಗಲು ತ್ರಿಮೂರ್ತಿಗಳೂ ಅವರ ಪತ್ನಿಯರಾದ ಶಕ್ತಿದೇವಿಯರೂ ಮತ್ತು ಇತರೆ ದೇವತೆಗಳೂ ಉತ್ಥಾನ ದ್ವಾದಶಿಯಂದು ಒಟ್ಟಾಗಿ ಸೇರುತ್ತಾರೆಂದೂ, ಇಷ್ಟಾರ್ಥಗಳನ್ನು ಪೂರೈಸುತ್ತಾರೆಂದು, ಭಕ್ತಿಯಿಂದ ತುಳಸಿಗೆ ನಮಿಸಿ ಕೃತಾರ್ಥರಾಗುತ್ತಾರೆ.

ತುಳಸಿಯ ಪೌರಾಣಿಕ ಹಿನ್ನೆಲೆ
ಹಿಂದೆ ಸಮುದ್ರ ಮಥನ ಮಾಡುವಾಗ ಬಂದಂತಹ ಅಮೃತ ಕಳಶವನ್ನು ಮಹಾವಿಷ್ಣು  ಪಡದುಕೊಳ್ಳುತ್ತಾನೆ. ಆ ಸಂದರ್ಭದಲ್ಲಿ ಆತನ ಕಣ್ಣಿನಿಂದ ಆನಂದಭಾಷ್ಪ ಉಕ್ಕಿ ಬರುತ್ತದೆ. ಇದರ ಒಂದು ಹನಿ ಕಳಶದಲ್ಲಿ ಬಿದ್ದಾಗ ಅದು ತುಳಸಿಗಿಡವಾಯಿತು. ಅಮೃತದಿಂದ ಜನಿಸಿದಂತಹ ತುಳಸಿಯನ್ನು ಯಾವ ವಿಧವಾಗಿ ಉಪಯೋಗಿಸಿದರೂ ಅದು ಅಮೃತಮಯವಾಗುತ್ತದೆ. ಇಷ್ಟು ಪವಿತ್ರವಾದ ತುಳಸಿ ಶ್ರೀಮನ್ನಾರಾಯಣನಿಗೆ ಲಕ್ಷ್ಮಿಯಷ್ಟೇ ಪ್ರಿಯಳು. ಆದುದರಿಂದಲೇ ಮೂರೂ ಲೋಕಗಳಲ್ಲಿ ತುಳಸಿಗೆ ಸಮಾನವಾದುದು ಯಾವುದೂ ಇಲ್ಲ ಎಂದು ತಿಳಿಯಲಾಗಿದೆ.  ತುಳಸಿ ಇಲ್ಲದೇ ಮಾಡಿದ ಪೂಜೆ ನಿಷ್ಫಲವಾಗುವುದು. ತುಳಸಿದಳಗಳು ದೊರೆಯದಿದ್ದರೆ, ತುಳಸೀ ಕಾಷ್ಠದಿಂದ ಪೂಜೆ ಮಾಡಬಹುದು ಅಥವಾ ಹಿಂದಿನ ದಿನ ಉಪಯೋಗಿಸಿದ ತುಳಸೀ ದಳಗಳನ್ನೇ ತೊಳೆದು ಪುನಃ ದೇವರಿಗೆ ಸಮರ್ಪಿಸಬಹುದು. ತುಳಸೀಕಾಷ್ಠಗಳೂ ದೊರೆಯದಿದ್ದರೆ, ಪೂಜಾಸಮಯದಲ್ಲಿ ತುಳಸೀನಾಮದ ಸಂಕೀರ್ತನೆ ಮಾಡಬೇಕು.  

ಪೂಜೆ ಹೀಗೆ
ಪುರಾಣ ಕಥೆ ಏನೇ ಇದ್ದರೂ, ಅದಕ್ಕೆ ಇಂಬುಕೊಡಲು ಎಂಬಂತೆ ತುಳಸಿ ಜೊತೆ ಅಂದು ಶ್ರೀಕೃಷ್ಣನ ವಿವಾಹ ನೆರವೇರಿಸಲಾಗುತ್ತದೆ. ತುಳಸಿ ಗಿಡಕ್ಕೆ ಮಂಟಪ ಕಟ್ಟಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ತುಳಸಿ ಕಟ್ಟೆಯನ್ನು ರಂಗೋಲಿ, ಹೂವು ಹಾಗೂ ಮಾವಿನ ಎಲೆಗಳ ಮಂಟಪದಿಂದ ಅಲಂಕರಿಸಿ, ತುಳಸಿ ಗಿಡದ ಪಕ್ಕದಲ್ಲಿ ಬೆಟ್ಟದ ನೆಲ್ಲಿಕಾಯಿ ಗಿಡವನ್ನು ನೆಟ್ಟು ಪೂಜಿಸಲಾಗುತ್ತದೆ. ತುಳಸಿಯಂತೆ ನೆಲ್ಲಿಕಾಯಿ ಕೂಡ ಅನೇಕ ರೋಗ ನಿರೋಧಕ ಶಕ್ತಿ ಹೊಂದಿದೆ. ಮಲೆನಾಡು ಸೇರಿದಂತೆ ಕೆಲವೆಡೆಗಳಲ್ಲಿ ತುಳಸಿಯ ವಿವಾಹ ನಡೆದ ಮೇಲಷ್ಟೇ ಎಲ್ಲರ ಮನೆಗಳಲ್ಲಿ ಮದುವೆ ಕಾರ್ಯ ನಡೆಯುತ್ತವೆ. ತುಳಸಿ ಮದುವೆಗೆ ಮೊದಲು ಸಂಪ್ರದಾಯಸ್ಥರು ಈಗಲೂ ಮದುವೆ ಕಾರ್ಯವನ್ನು ನೆರವೇರಿಸುವುದಿಲ್ಲ. ಒಟ್ಟಿನಲ್ಲಿ ತುಳಸಿ ಮನುಷ್ಯನ ಬದುಕಿನೊಂದಿಗೆ, ಪ್ರಕೃತಿಯೊಂದಿಗೆ ಬೆಸೆದುಕೊಂಡಿದೆ.

ತುಳಸಿ ಮಹಿಮೆ 
ತುಳಸಿ ಬಹುಪಯೋಗಿ ಸಸ್ಯ. ತುಳಸಿ ಮೃತ್ತಿಕೆ, ತೀರ್ಥ, ದಳ, ತೆನೆ ಎಲ್ಲವೂ ಪವಿತ್ರ. ಹಾಲಿನ ಸಮುದ್ರದಲ್ಲಿ ಹುಟ್ಟಿದ ತುಳಸಿಯನ್ನು, ಹಾಲಿನಿಂದಲೇ ಪೂಜಿಸಿದರೆ, ಬೇಗನೆ ಪ್ರಸನ್ನಳಾಗಿ ಸಂಪತ್ತು ಅನುಗ್ರಹಿಸುತ್ತಾಳೆಂಬ ವಾಡಿಕೆ ಬಹಳ ಹಿಂದಿನದು. ಶಿವನಿಗೆ ಬಿಲ್ವಪತ್ರೆ ಪ್ರಿಯವಾದಂತೆ, ವಿಷ್ಣುವಿಗೆ ತುಳಸಿ ಬಹುಪ್ರಿಯ. ತುಳಸಿಯಲ್ಲಿ ಬಿಳಿಸುಳಸಿ, ಕಪ್ಪುತುಳಸಿ (ಕೃಷ್ಣತುಳಸಿ) ಮುಂತಾದ ಬಗೆಗಳಿವೆ.  ವೈದ್ಯಶಾಸ್ತ್ರದಲ್ಲಿ ತುಳಸಿಗೆ ಹೆಚ್ಚು ಪ್ರಾಧಾನ್ಯತೆಯಿದೆ. ಸೂಕ್ಷ್ಮ ಜೀವಾಣುನಾಶಕ ಗುಣಗಳಿರುವ ತುಳಸಿ ಎಲೆ ವಿಷಮಶೀತ ಜ್ವರದಂತಹ ಕಾಯಿಲೆಗಳನ್ನು ನಿವಾರಿಸುವ ಶಕ್ತಿ ಹೊಂದಿದೆ. 

ತುಳಸಿಯಿರುವೆಡೆ ಸೊಳ್ಳೆಗಳ ಕಾಟವಿರುವುದಿಲ್ಲ. ಮಕ್ಕಳ ನೆಗಡಿ-ಕೆಮ್ಮು ಶೀತಕ್ಕೆ, ಚರ್ಮರೋಗಕ್ಕೆ ಇದು ರಾಮಬಾಣ. ತುಳಸೀರಸದ ನಿಯಮಿತ ಸೇವನೆಯಿಂದ ನಿದ್ರಾಹೀನತೆಯನ್ನು ಹೊಡೆದೊಡಿಸಬಹುದು.  ಮಕ್ಕಳಿರುವ ಮನೆಗೆ ತುಳಸಿ ಅವಶ್ಯಕ ಮಾತ್ರವಲ್ಲ, ಅನಿವಾರ್ಯವೂ ಹೌದು. ಅದಕ್ಕೆಂದೇ ಸ್ತ್ರೀಯರಿಗೆ ತುಳಸೀ ಪ್ರದಕ್ಷಿಣಾ, ಪುರುಷರಿಗೆ ತುಲಸೀ ಮಾಲಾಧಾರಣವೆಂದು ಹಿಂದಿನಿಂದಲೂ ಪ್ರತೀತಿಯಿದೆ.

ತುಳಸಿ ಗಿಡದ ಹತ್ತಿರ ಓದುವುದು, ಸಚ್ಚಿಂತನೆ ಮಾಡುವುದರಿಂದ, ದೀಪವನ್ನು ಹಚ್ಚುವುದರಿಂದ ಹಾಗೂ ತುಳಸಿ ಗಿಡದ ಸುತ್ತ ಪ್ರದಕ್ಷಿಣೆ ಹಾಕುವುದರಿಂದ ಐದು ಇಂದ್ರಿಯಗಳ ವಿಕಾರಗಳು ದೂರವಾಗುತ್ತವೆ. ಇನ್ನೂ ಹಲವು ಅದ್ಭುತ ಔಷಧೀಯ ಗುಣ ಇದರಲ್ಲಿವೆ. ತಾಯಿಯಂತೆ ನಮ್ಮೆಲ್ಲರನ್ನೂ ಸಲಹುವ ಈ ‘ಮಾತೆ’ಗೂ ಒಂದು ವಿಶೇಷ ದಿನ ಇರಲೇಬೇಕಲ್ಲವೇ? ಹಾಗೆಯೇ ಆ ವಿಶೇಷ ದಿನದಲ್ಲಾದರೂ ಆಕೆಯ ಉಪಕಾರವನ್ನು ಸ್ಮರಿಸುವ ಗುಣ ನಮ್ಮದಾಗಬೇಕಲ್ಲವೇ? ಆಕೆಯ ಸಾನಿಧ್ಯಕ್ಕೆ ಆ ಒಂದು ದಿನವಾದರೂ ಪ್ರದಕ್ಷಿಣೆ ಹಾಕಿ ನಮ್ಮಲ್ಲಿರುವ ವಿಕಾರಗಳನ್ನು ದೂರ ಮಾಡಿಕೊಳ್ಳಬೇಕಲ್ಲವೇ?

ಬನ್ನಿ ಎಲ್ಲರೂ ಸೇರಿ ತುಳಸಿ ವಿವಾಹದ ಪದ್ದತಿಯನ್ನು ಮತ್ತು ಅದರ ಸಂಸ್ಕೃತಿಯನ್ನು ಮುಂದಿನ ಜನಾಂಗಕ್ಕೆ ಉಳಿಸಿಕೊಂಡು ಹೋಗೋಣ.

ದೀಪಾವಳಿ ವಿಶೇಷಾಂಕ - 2013

ಅಸತೋಮ ಸದ್ಗಮಯ, ತಮಸೋಮಾ ಜ್ಯೋತಿರ್ಗಮಯ,
ಮೃತ್ಯೋರ್ಮಾ ಅಮೃತಂಗಮಯ...
  ಓಂ ಶಾಂತಿ, ಶಾಂತಿ ಶಾಂತಿಃ

ಅಜ್ಞಾನವೆಂಬ ಕತ್ತಲನ್ನು ಕಳೆದು ಬದುಕಲ್ಲಿ ಸುಜ್ಞಾನವೆಂಬ ಜ್ಯೋತಿಯನ್ನು ಬೆಳಗಿಸುವ ಹಬ್ಬ ದೀಪಾವಳಿ. ಮಕ್ಕಳಿಗಂತೂ ದೀಪಾವಳಿ ಎಂದರೆ ಬಲು ಅಚ್ಚು ಮೆಚ್ಚು. ಪಟಾಕಿ ದೀಪಾವಳಿಯ ಪ್ರಧಾನ ಆಕರ್ಷಣೆ.  ದೀಪ +ಅವಳಿ ಎಂದರೆ ಜೋಡಿ ದೀಪ ಅಥವಾ ದೀಪಗಳ ಸಾಲು ಎಂದರ್ಥ. ಸಾಲು ಸಾಲು ದೀಪ ಹಚ್ಚುವ ಈ ಹಬ್ಬಕ್ಕೆ ದೀಪಾವಳಿ ಎಂದೇ ಹೆಸರು ಬಂದಿದೆ.

ಇದು ಕಾರ್ತೀಕ ಮಾಸದ ಹಬ್ಬವೇ ಆದರೂ ಅಶ್ವೀಜ ಕೃಷ್ಣ ತ್ರಯೋದಶಿಯ ಸಂಜೆಯಿಂದಲೇ ದೀಪಾವಳಿಯ ಸಂಭ್ರಮ. ದೀಪಾವಳಿ ಮೂರು ದಿನಗಳ ಹಬ್ಬವಾದರೂ, ಸತತ ೫ ದಿನಗಳ ಸಡಗರ. ತ್ರಯೋದಶಿಯ ಸಂಜೆ ಸ್ನಾನದ ಮನೆಯನ್ನು ಚೆನ್ನಾಗಿ ಶುದ್ಧಮಾಡಿ, ಹಂಡೆಗೆ (ಇಂದು ಬಾಯ್ಲರ್, ಗೀಝರ್) ಸುಣ್ಣ ಹಾಗೂ ಕೆಮ್ಮಣ್ಣು ಬಳಿದು , ರಂಗವಲ್ಲಿ ಹಾಕಿ ಶುಚಿಯಾದ ನೀರು ತುಂಬುತ್ತಾರೆ. ಇದಕ್ಕೇ ಈ ಹಬ್ಬಕ್ಕೆ ನೀರು ತುಂಬವ ಹಬ್ಬ ಎಂದೇ ಹೆಸರು ಬಂದಿದೆ. ಮಾರನೇ ದಿನ ನರಕ ಚತುರ್ದಶಿ. ಅಂದು ಎಲ್ಲರೂ ನಸುಕಿನಲ್ಲೇ ಎದ್ದು ತೈಲಾಭ್ಯಂಜನ ಮಾಡಿ, ಹೊಸ ಬಟ್ಟೆ ತೊಟ್ಟು ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ಅಂದು ಸೂರ್ಯೋದಯ ಕಾಲದಲ್ಲಿ ಮಾಡುವ ಅಂಗಾಂಗ ಸ್ನಾನ ಗಂಗಾಸ್ನಾನಕ್ಕೆ ಸಮ ಎಂಬುದು ಹಿರಿಯರ ನಂಬಿಕೆ.

ಪುರಾಣಗಳ ರೀತ್ಯ ನರಕಾಸುರನೆಂಬ ರಕ್ಕಸನು ಲೋಕಕಂಟಕನಾದಾಗ, ಭೂಮಾತೆ ಕೃಷ್ಣನನ್ನು ಪ್ರಾರ್ಥಿಸಿ ನರಕಾಸುರನ ಸಂಹಾರಕ್ಕೆ ಕಾರಣಳಾಗುತ್ತಾಳೆ. ಕೃಷ್ಣ ಕೂಡ ನರಕಾಸುರನ ಸಂಹಾರಕ್ಕೆ ಮುನ್ನ ಅಶ್ವೀಜ ಕೃಷ್ಣ ಚತುರ್ದಶಿಯ ದಿನ ತೈಲಾಭ್ಯಂಜನ ಮಾಡಿ, ನರಕಾಸುರನ ವಧಿಸಿ, ಆ ರಕ್ಕಸ ಬಂಧಿಸಿಟ್ಟಿದ್ದ ೧೬ ಸಾವಿರ ಕನ್ಯೆಯರನ್ನು ಬಿಡುಗಡೆಗೊಳಿಸುತ್ತಾನೆ. ಆ ನೆನಪಿಗಾಗಿ ದೀಪಾವಳಿಯ ಆಚರಣೆ.

ಈ ವಿಜಯೋತ್ಸವದ ಸಂಕೇತವಾಗಿ ಆಚರಿಸಲಾಗುವ ಹಬ್ಬವೇ ದೀಪಾವಳಿ. ಹೀಗಾಗೇ ಅಂದು ಹಬ್ಬದೂಟ ಮಾಡಿ, ಬಾಣ, ಬಿರುಸು ಹಚ್ಚಿ ನಲಿಯುವುದು ವಾಡಿಕೆ. ತಮ್ಮ ಬಿಡುಗಡೆಯ ಬಳಿಕ ಕೃಷ್ಣನಿಗೆ ಕೃತಜ್ಞತೆ ಅರ್ಪಿಸಲು ೧೬ ಸಾವಿರ ಕನ್ಯೆಯರು ಭಕ್ತಿಯಿಂದ ಸಾಲು ಸಾಲು ಆರತಿ ಬೆಳಗಿದರೆಂದು ಪುರಾಣಗಳು ಹೇಳುತ್ತವೆ. ಹೀಗಾಗಿ ಅಂದಿನಿಂದ ಮಹಿಳೆಯರು ಆರತಿ ಬೆಳಗುವ, ಸಾಲು ದೀಪ ಹಚ್ಚುವ, ತೈಲಾಭ್ಯಂಜನ ಮಾಡುವ ಪದ್ಧತಿ ರೂಢಿಗೆ ಬಂತು.   ಮಾರನೆಯ ದಿನ ಅಮಾವಾಸ್ಯೆ. ಅಂದು ಸಂಜೆ ಎಲ್ಲರೂ ಧನದೇವತೆಯಾದ ಲಕ್ಷ್ಮೀಯನ್ನು ಪೂಜಿಸುತ್ತಾರೆ. ಸಾಮಾನ್ಯವಾಗಿ ಅಮಾವಾಸ್ಯೆ ಅಶುಭ ಎಂದು ಹೇಳುತ್ತಾರಾದರೂ, ಭಾರತೀಯ ಸಂಪ್ರದಾಯದಲ್ಲಿ ಅಮಾವಾಸ್ಯೆಗೆ ಮಹತ್ವ ಇದೆ. ಭೀಮನ ಅಮಾವಾಸ್ಯೆಯಂದು ಸುಮಂಗಲಿಯರು ತಮ್ಮ ಮಾಂಗಲ್ಯ ರಕ್ಷಣೆಗಾಗಿ ಪೂಜಿಸುತ್ತಾರೆ.  ಇನ್ನು ಮಹಾಲಯ ಅಮಾವಾಸ್ಯೆಯ ದಿನ ಪಿತೃಗಳನ್ನು ಪೂಜಿಸಲಾಗುತ್ತದೆ. ದೀಪಾವಳಿ ಅಮಾವಾಸ್ಯೆಯಲ್ಲಿ ಧನದೇವತೆ ಲಕ್ಷ್ಮೀ ಪೂಜೆ ನಡೆಯುತ್ತದೆ. ಅಂದು ಮನೆಯಲ್ಲಿರುವ ಹಣವನ್ನೂ, ಸುವರ್ಣವನ್ನೂ ಕಳಶದ ಜೊತೆ ಇಟ್ಟು, ಧನದೇವತೆಯಾದ ಲಕ್ಷ್ಮೀಯನ್ನು ಪೂಜಿಸಿ, ಉತ್ತರೋತ್ತರ ಅಭಿವೃದ್ಧಿ ಮಾಡುವಂತೆ ಪ್ರಾರ್ಥಿಸುತ್ತಾರೆ. ಅಂಗಡಿಗಳಲ್ಲೂ ಲಕ್ಷ್ಮೀಪೂಜೆ ವಿಜೃಂಭಣೆಯಿಂದ ನಡೆಯುತ್ತದೆ. 24ನೇ ತೀರ್ಥಂಕರನಾದ ಮಹಾವೀರನು ನಿರ್ವಾಣಹೊಂದಿದ ದಿನವಾದ ದೀಪಾವಳಿ ಅಮಾವಾಸ್ಯೆಯನ್ನು, ರಾಜಸ್ಥಾನದ ಜೈನ ಸಮುದಾಯದವರು ಹೊಸವರ್ಷವೆಂತಲೂ ಆಚರಿಸುತ್ತಾರೆ. ಕಾರ್ತಿಕದ ಮೊದಲ ದಿನವೇ ಪಾಡ್ಯ. ಅಂದು ಬಲಿ ಪಾಡ್ಯಮಿ. ಬಲಿ ಚಕ್ರವರ್ತಿಯು ತನ್ನ ತಪೋಬಲ ಹಾಗೂ ಭುಜಬಲದಿಂದ ದೇವೇಂದ್ರನನ್ನು ಸೋಲಿಸಿ ಸುರಲೋಕವನ್ನು ವಶಪಡಿಸಿಕೊಂಡು, ಗರ್ವಿಷ್ಠನಾಗಿ ಮೆರೆಯುತ್ತಿದ್ದಾಗ, ಶ್ರೀಮನ್ನಾರಾಯಣನು ವಾಮನನಾಗಿ ಅವತರಿಸಿ, ಮೂರಡಿ ಜಾಗವನ್ನು ಬಲಿಯಿಂದ ದಾನವಾಗಿ ಪಡೆದು, ತ್ರಿವಿಕ್ರಮನಾಗಿ ಬೆಳೆದು ಆಕಾಶ - ಭೂಮಿಗಳನ್ನು ಎರಡಡಿಯಲ್ಲಿ ಅಳೆದು ಮತ್ತೊಂಡಿಯನ್ನು ಬಲಿಯ ತಲೆಯ ಮೇಲೆ ಇಟ್ಟು ಪಾತಾಳಕ್ಕೆ ತುಳಿಯುತ್ತಾನೆ. ಆದರೆ, ಕೇಳಿದೊಡನೆಯೇ ಸುರಗುರು ಶುಕ್ರಾಚಾರ್ಯರ ಮಾತನ್ನೂ ಮೀರಿ ದಾನ ಮಾಡುವ   ದಾನಶೂರನಾದ ಬಲಿ, ಶ್ರೀಮನ್ನಾರಾಯಣನ ಕೃಪೆಗೂ ಪಾತ್ರನಾಗುತ್ತಾನೆ. ಪ್ರತಿವರ್ಷ ಕಾರ್ತಿಕ ಮಾಸದ ಮೊದಲ ದಿನ ಸಂಜೆ ಬಲೀಂದ್ರ ಭೂಲೋಕಕ್ಕೆ ಬಂದು ಮೂರೂ ಮುಕ್ಕಾಲು ಗಳಿಗೆ ಇರುತ್ತಾನೆ ಎಂಬುದು ಪ್ರತೀತಿ.

ಹೀಗಾಗೆ ಅಂದು ಸಂಧ್ಯಾಕಾಲದಲ್ಲಿ ಬಲೀಂದ್ರನ ಪೂಜೆ ಮಾಡಲಾಗುತ್ತದೆ. ವಾಮನರೂಪಿಯಾಗಿ ಬಲಿಯನ್ನು ತುಳಿದ ಬಳಿಕ ಪಾತಾಳದ ಪ್ರವೇಶ ದ್ವಾರವನ್ನು ಸ್ವತಃ ತಾನೇ ಕಾಯುವುದಾಗಿ ನಾರಾಯಣ ವರನೀಡುತ್ತಾನೆ. ಹೀಗಾಗಿ ಅಂದು ಸಗಣಿಯಲ್ಲಿ ಕೋಟೆ ಕಟ್ಟಿ, ಅದಕ್ಕೆ ಸಮೃದ್ಧಿಯ ಸಂಕೇತವಾಗಿ ರಾಗಿಯ ತೆನೆ, ಹುಚ್ಚಳ್ಳುಹೂವು ಸಿಕ್ಕಿಸಿ, ಹೊಸಿಲಿನ ಬಳಿ ಹಾಗೂ ದೇವರ ಮನೆಯ ಮುಂದೆ ಬೆನಕ ರೂಪಿ ಎಂದು ಸಗಣಿಯ ಕೋನಗಳನ್ನೂ ಇಡುತ್ತಾರೆ. (ಈ ಪದ್ಧತಿ ಪಾಂಡವರಿಂದ ನಡೆದು ಬಂದದ್ದೆಂದು ಹೇಳಲಾಗುತ್ತದೆ) ಕಾರ್ತೀಕ ಪಾಡ್ಯದಿಂದ ಹಿಂದೂಗಳು ಮನೆಯ ಬಾಗಿಲಲ್ಲಿ ಹಾಗೂ ತುಳಸಿಯ ಮುಂದೆ ಒಂದು ತಿಂಗಳು ಪೂರ್ತಿ ದೀಪವನ್ನು ಹಚ್ಚಿಡುತ್ತಾರೆ. ಕೆಲವರು ದಿನಕ್ಕೆರಡರಂತೆ ದೀಪವನ್ನು ಹೆಚ್ಚಿಸಿ ಹಚ್ಚಿಡುತ್ತಾರೆ. ಕಾರ್ತಿಕದಲ್ಲಿ ಈ ರೀತಿ ದೀಪ ಹಚ್ಚುವುದರಿಂದ, ಸತ್ತ ನಂತರ ಆತ್ಮ ಸ್ವರ್ಗಕ್ಕೆ ಅಥವಾ ನರಕಕ್ಕೆ ಹೋಗುವಾಗ ಕಾರ್ತೀಕದಲ್ಲಿ ಹಚ್ಚಿಟ್ಟ ಜ್ಯೋತಿ ಬೆಳಕು ತೋರುತ್ತದೆ ಎಂಬುದು ಜನಪದರ ನಂಬಿಕೆ.   ಸ್ಥಿತಿವಂತರು ಮನೆಯ ಮುಂದೆ ಆಕಾಶಬುಟ್ಟಿಗಳನ್ನು ಕಟ್ಟುತ್ತಾರೆ. ಕಾರ್ತಿಕ ಪಾಡ್ಯದಂದೆ ಶ್ರೀಕೃಷ್ಣನು ಕುಂಭದ್ರೋಣದಿಂದ ಗೋಕುಲವನ್ನೂ, ಗೋಪಾಲಕರನ್ನು ರಕ್ಷಿಸಲು ಗೋವರ್ಧನ ಗಿರಿಯನ್ನು ಎತ್ತಿದ್ದು. ಹೀಗಾಗಿ ಅಂದು ಗೋಪಾಲನಿಗೆ ಕೃತಜ್ಞತೆ ಸಲ್ಲಿಸಲು ಗೋವುಗಳ ಪೂಜೆ ನಡೆಯುತ್ತದೆ.  ದೀಪಾವಳಿಯ ಕೊನೆಯ ದಿನವೇ ಯಮ ದ್ವಿತೀಯ. ಅಥವಾ ಭ್ರಾತೃ ದ್ವಿತೀಯ. ಆ ದಿನ ಯಮದೇವನು ತನ್ನ ತಂಗಿಯಾದ ಯಮುನೆಯ ಮನೆಗೆ ಹೋಗಿ ಅವಳಿಂದ ಆತಿಥ್ಯ ಪಡೆದು ಬಂದ ದಿನವೆಂದು ಹೇಳಲಾಗುತ್ತದೆ. ಅಂದು ಸೋದರರು ಎಲ್ಲಿದ್ದರೂ ಸೋದರಿಯರ ಮನೆಗೆ ಹೋಗುತ್ತಾರೆ.

ಉತ್ತರ ಕರ್ನಾಟಕದ ಕಡೆ ಈ ಹಬ್ಬ ವಿಶೇಷವಾಗಿ ಆಚರಿಸಲ್ಪಡುತ್ತದೆ. ಯಮದ್ವಿತೀಯ ಭ್ರಾತೃತ್ವದ ಭಾವನೆಗಳನ್ನು ವೃದ್ಧಿಸಿ, ಮಧುರ ಭಾವನೆಗಳನ್ನು ಬೆಸೆಯಲು, ಬಲಗೊಳಿಸಲು ಪೂರಕವಾಗಿದೆ. ತಾನೇ ಉರಿದರೂ ಊರಿಗೆ ಬೆಳಕು ನೀಡುವ ಪರಂಜ್ಯೋತಿಯನ್ನು ನೋಡುತ್ತಾ, ಮನುಷ್ಯ ಸ್ವಾರ್ಥವನ್ನು ಮರೆತು ತಾನೂ ಜ್ಯೋತಿಯಂತೆ ಇತರರಿಗೆ ನೆರವಾಗಲಿ ಎಂಬುದು ಕಾರ್ತೀಕದ ಮಹತ್ವದ ಉದ್ದೇಶ. ಇದುವೆ ಈ ಹಬ್ಬದ ಅಂತರಾರ್ಥ. ಕಾರ್ತೀಕ ಮಾಸದಲ್ಲಿ ಹಲವು ದೇವಾಲಯಗಳಲ್ಲಿ, ಕ್ಷೇತ್ರಗಳಲ್ಲಿ ಲಕ್ಷ ದೀಪೋತ್ಸವ ನಡೆಯುತ್ತದೆ.