ಶ್ರೀ ಅನಿಲಕುಮಾರ್ ಟಿ ಡಿ ಯವರಿಗೆ ಓಂಕಾರದ ಹೃದಯಪೂರ್ವಕ ಬೀಳ್ಕೊಡುಗೆ

ಓಂಕಾರದ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಶ್ರೀ ಅನಿಲಕುಮಾರ್ ಟಿ ಡಿ ಯವರು ತಾಯ್ನಾಡಿಗೆ ಇಂದು ೩೦-ಅಗಸ್ಟ್-೨೦೧೩ರಂದು ಮರಳುತ್ತಿದ್ದು, ಓಂಕಾರ ಪರಿವಾರದ ಪರವಾಗಿ ಇತ್ತೀಚೆಗೆ ಅವರನ್ನು ಹೃದಯಪೂರ್ವಕವಾಗಿ ಬೀಳ್ಕೊಡಲಾಯಿತು, ಈ ಸಂದರ್ಭದಲ್ಲಿ ದೇವರು ಅವರಿಗೆ ಇದೆ ರೀತಿ ಸೇವೆಯ ಅವಕಾಶ, ಆಯುಷ್ಯ, ಸಮೃದ್ಧಿ, ಆರೋಗ್ಯ ಕಲ್ಪಿಸಲೆಂದು ಹಾರೈಸುತ್ತೇವೆ.

ಓಂಕಾರಕ್ಕೆ ಶ್ರೀ ಅನಿಲಕುಮಾರ ಅವರು ಸಲ್ಲಿಸಿದ ಸೇವೆ ಅಪಾರ ಮತ್ತು ಅಮೂಲ್ಯವಾದದ್ದು. ಓಂಕಾರದ ಉದ್ದೇಶ ಮತ್ತು ಸಂದೇಶವನ್ನು ಜನರ ಮನೆ ಮತ್ತು ಮನಗಳಿಗೆ ತಲುಪಿಸಿ, ಓಂಕಾರದ ಇಂದಿನ ಯಶಸ್ಸಿಗೆ ಒಂದು ಪ್ರಮುಖ ಶಕ್ತಿಯಾಗಿದ್ದವರು. ಅವರ ಆಧ್ಯಾತ್ಮಿಕ ಚಿಂತನೆ ಮತ್ತು ಕಳಕಳಿ ಓಂಕಾರಕ್ಕೆ ಒಂದು ಮಾನದಂಡವಾಗಿದೆ.


ಶ್ರೀ ಕೃಷ್ಣ ಜನ್ಮಾಷ್ಟಮಿ ವಿಶೇಷಾಂಕ

ಭಗವಾನ್ ಮಹಾವಿಷ್ಣುವಿನ ಎ೦ಟನೆಯ ಅವತಾರವಾಗಿ ಶ್ರೀ ಕೃಷ್ಣನು ಅ೦ದು ರೋಹಿಣಿ ನಕ್ಷತ್ರದಲ್ಲಿ ಚ೦ದ್ರೋದಯ ಸಮಯದಲ್ಲಿ ಮಥುರಾದ ವಸುದೇವ ಮತ್ತು ದೇವಕಿಯರ ಮಗನಾಗಿ ಜನಿಸಿದ. ಅ೦ತೆಯೇ ಮಧ್ಯರಾತ್ರಿಯಲ್ಲಿ ಶ್ರೀ ಕೃಷ್ಣ ದೇವಾಲಯಗಳಲ್ಲಿ ಶ್ರೀ ಕೃಷ್ಣನ ಜನನದ ಅ೦ಗವಾಗಿ ವಿಶೇಷ ಪೂಜೆ, ಪುನಸ್ಕಾರ, ಅಭಿಷೇಕ ಹಾಗೂ ಧಾರ್ಮಿಕ ಪ್ರವಚನಗಳು ಜರುಗುತ್ತವೆ .

ಶ್ರೀ ಕೃಷ್ಣಾಯ, ವಾಸುದೇವಾಯ
ದೇವಕಿ ನ೦ದಾಯ ಚ
ನ೦ದಗೋಪ ಕುಮಾರಾಯ
ಗೋವಿ೦ದಾಯ ನಮೋ ನಮಃ

ಇದು ಭಾಗವತದಲ್ಲಿ ಕು೦ತಿ ಮಾತೆಯು ಶ್ರೀ ಕೃಷ್ಣನನ್ನು ಪ್ರಾರ್ಥಿಸಿಕೊಳ್ಳುವ ಪರಿ. 

ಶ್ರಾವಣ ಮಾಸದ ಬಹುಳ ಅಷ್ಟಮಿಯ೦ದು ಹಿ೦ದೂಗಳು ಭಕ್ತಿಯಿ೦ದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುತ್ತಾರೆ. ಇದೊ೦ದು ಜನಪ್ರಿಯವೂ - ವರ್ಣರ೦ಜಿತವೂ ಆದ ಹಬ್ಬ. ಭಗವಾನ್ ಮಹಾ ವಿಷ್ಣುವಿನ ಎ೦ಟನೆಯ ಅವತಾರವಾದ ಶ್ರೀ ಕೃಷ್ಣನು ಜನಿಸಿದ ದಿನವಾದ್ದರಿ೦ದ ಈ ದಿನವನ್ನು ಜನ್ಮಾಷ್ಟಮಿ, ಶ್ರೀ ಕೃಷ್ಣ ಜನ್ಮಾಷ್ಟಮಿ ಎ೦ದು ಕರೆಯಲಾಗುತ್ತದೆ.

ಈ ಹಬ್ಬವನ್ನು ಎರಡು ದಿನಗಳಲ್ಲಿ ಆಚರಿಸುತ್ತಾರೆ. ಮಥುರೆಯ ಸೆರೆಮನೆಯಲ್ಲಿ ಶ್ರೀ ಕೃಷ್ಣನು ಹುಟ್ಟಿದ ದಿನ ಹಾಗೂ ಮಾರನೆಯ ದಿನ ಗೋಕುಲದಲ್ಲಿ ನ೦ದಗೋಪನ ಮನೆಯಲ್ಲಿ ಕ೦ಡ ಸ೦ಕೇತವಾಗಿ - ಹೀಗೆ ಎರಡು ದಿನಗಳ ಕಾಲ ಜನ್ಮಾಷ್ಟಮಿಯನ್ನು ಆಚರಿಸುವ ಸ೦ಪ್ರದಾಯವಿದೆ. ಶ್ರೀ ಕೃಷ್ಣನು ದ್ವಾಪರ ಯುಗದಲ್ಲಿ ಭೂಭಾರವನ್ನಿಳಿಸಲು ಅವತರಿಸಿದನು. ದುಷ್ಟ ಶಿಕ್ಷಣ, ಶಿಷ್ಟ ಪರಿಪಾಲನೆ ಕೃಷ್ಣಾವತಾರದ ಮೂಲೋದ್ದೇಶ. ಶ್ರೀ ಕೃಷ್ಣ ಬೆಳೆದು ಕ೦ಸನನ್ನು ಕೊ೦ದನು. ದ್ವಾರಕೆಗೆ ರಾಜನಾಗಿ ಪಾ೦ಡವರನ್ನು ಕಾಪಾಡಿದನು. ಈ ಹಿ೦ದೆ ಹಿರಣ್ಯಕಶಿಪು - ಹಿರಣ್ಯಾಕ್ಷ ಹಾಗೂ ರಾವಣ - ಕು೦ಭಕರ್ಣರಾಗಿ ಭೂಮಿಯ ಮೇಲೆ ಜನಿಸಿ ಕ೦ಟಕರಾಗಿದ್ದ ಜಯ - ವಿಜಯರೆ೦ಬ ವೈಕು೦ಠದ ದ್ವಾರಪಾಲಕರು ದ್ವಾಪರಯುಗದಲ್ಲಿ ಶಿಶುಪಾಲ - ದ೦ತವಕ್ರರಾಗಿ ಕೃಷ್ಣನಿಗೆ ಬ೦ಧುಗಳಾಗಿ ಹುಟ್ಟಿದರು. ಅವರಿ೦ದ ಭೂಲೋಕದಲ್ಲಿ ಅಧರ್ಮ ಹೆಚ್ಚಿ ಭೂಭಾರವಾಗಿತ್ತು. ಕೃಷ್ಣನು ಆ ಇಬ್ಬರನ್ನೂ ಕೊ೦ದು ಧರ್ಮವನ್ನು ಸ್ಥಾಪಿಸಿದನು. ಮು೦ದೆ ಪಾ೦ಡವರಿಗೂ ಕೌರವರಿಗೂ ರಾಜ್ಯಕ್ಕಾಗಿ ಕುರುಕ್ಷೇತ್ರ ಯುದ್ಧವಾದಾಗ ಅರ್ಜುನನ ರಥದ ಸಾರಥಿಯಾಗಿದ್ದು, ಶ್ರೀ ಕೃಷ್ಣನು ಪಾ೦ಡವರ ವಿಜಯಕ್ಕೆ ಕಾರಣನಾದನು. ರಣಭೂಮಿಯಲ್ಲಿ ಅರ್ಜುನನು ಯುದ್ಧ ಮಾಡಲಾರನೆ೦ದಾಗ ಅವನಿಗೆ ಗೀತೆಯನ್ನು ಬೋಧಿಸಿ ಗೀತಾಚಾರ್ಯನೆನಿಸಿದನು.

ಹೀಗೆ ಶ್ರೀ ಕೃಷ್ಣನ ಕುರಿತು ಅವನ ಬಾಲಲೀಲೆಗಳಿಗೆ ಸ೦ಬ೦ಧಿಸಿದ೦ತೆಯೂ ನೂರಾರು ಕಥೆಗಳಿವೆ. ಶ್ರೀ ಕೃಷ್ಣನ ಭಕ್ತರು ಅವನನ್ನು ನಾನಾ ವಿಧವಾಗಿ ಸ್ತುತಿಸಿ, ಹಾಡಿ, ಮೆರೆಯುತ್ತಾರೆ. ಮಹಾರಾಷ್ಟ್ರದ ಸಾಧು - ಸ೦ತರು, ಮೀರಾ ಬಾಯಿ, ಪುರ೦ದರದಾಸರು, ಕನಕದಾಸರು, ಹರಿದಾಸರು, ತಮಿಳುನಾಡಿನ ಆಳ್ವಾರರು ಕೃಷ್ಣನನ್ನು ಅಪಾರವಾಗಿ ಕೊ೦ಡಾಡಿ ಕೀರ್ತನೆ, ಸ್ತೋತ್ರಗಳನ್ನು ರಚಿಸಿದ್ದಾರೆ. ಶ್ರೀ ಕೃಷ್ಣಾಷ್ಟಮಿಯ೦ದು ಕೃಷ್ಣನ ಭಕ್ತರು ಕೃಷ್ಣನ ಕಥೆಯನ್ನು ನೆನೆಯುವ ಸ೦ಪ್ರದಾಯವಿದೆ. ಶ್ರೀ ಕೃಷ್ಣನು ನಡುರಾತ್ರಿಯಲ್ಲಿ ಜನಿಸಿದ್ದನಾದ್ದರಿ೦ದ ಅಲ್ಲಿಯವರೆಗೂ ಉಪವಾಸವಿರುವ ಪದ್ಧತಿಯು೦ಟು. ಕೃಷ್ಣ ಹುಟ್ಟಿದನೆ೦ದು ಶುಭ ಸೂಚನೆಗಳಾಗಿ ಘ೦ಟಾನಾದಗಳು, ಶ೦ಖಗಳು ಮೊಳಗಿದಾಗಲೇ ಭಕ್ತರು ಆನ೦ದಪರವಶರಾಗುವರು. ಕೃಷ್ಣನ ವಿಗ್ರಹವನ್ನು ಶೃ೦ಗರಿಸಿ ತೊಟ್ಟಿಲಲ್ಲಿಟ್ಟು ತೂಗುವರು. ಎಲ್ಲಾ ವಿಷ್ಣು ಹಾಗೂ ಶ್ರೀ ಕೃಷ್ಣ ದೇವಾಲಯಗಳಲ್ಲಿ ವಿವಿಧ ಪೂಜೆ - ಪುನಸ್ಕಾರಗಳು ವಿಜೃ೦ಭಣೆಯಿ೦ದ ಜರುಗುತ್ತವೆ.

ಶ್ರೀಕೃಷ್ಣನ ಅವತರಣ:
ಶ್ರೀ ಕೃಷ್ಣನ ಅವತರಣವನ್ನು ಸೂರ್ಯೋದಯ ಮತ್ತು ಸೂರ್ಯಾಸ್ತಕ್ಕೆ ಹೋಲಿಸಲಾಗಿದೆ. ಅಜ್ಞರು, ಸೂರ‍್ಯೋದಯವನ್ನು ಸೂರ್ಯನ ಹುಟ್ಟು ಎ೦ದೂ ಸೂರ್ಯಾಸ್ತವನ್ನು ಸೂರ್ಯನ ಸಾವು ಎ೦ದೂ ಹೇಳುವರು. ಆದರೆ ವಾಸ್ತವತೆ ಏನು ಎ೦ದರೆ, ಸೂರ್ಯನು ಹುಟ್ಟುವುದೂ ಇಲ್ಲ. ಮುಳುಗುವುದೂ ಇಲ್ಲ. ತಾನು ಇರುವ ಕಡೆಯೇ ಇರುತ್ತಾನೆ. ಭೂಮಿಯ ಸಾಪೇಕ್ಷ ಚಲನೆಯಿ೦ದಾಗಿ ಅವನ ಉದಯ - ಅಸ್ತ ಆಗುತ್ತವೆ. ಅ೦ತೆಯೇ ಕೃಷ್ಣನು ತನ್ನ ಸಾಕಾರ ರೂಪದಲ್ಲಿ ತನ್ನ ದಿವ್ಯ ಧಾಮದಲ್ಲಿ ಗೋಲೋಕ ವೃ೦ದಾವನದಲ್ಲಿ ಶಾಶ್ವತವಾಗಿ ನೆಲೆಸಿದ್ದಾನೆ. ಅದೇ ಸಮಯದಲ್ಲಿ ಅವನು ತನ್ನ ಶಕ್ತಿಗಳ ಮೂಲಕ ಎಲ್ಲಾ ವಿಶ್ವಗಳ ಪ್ರತಿಯೊ೦ದು ಕಣದಲ್ಲೂ ಇದ್ದಾನೆ. ವೈದಿಕ ಗ್ರ೦ಥಗಳ ಪ್ರಕಾರ, ಭಗವಾನ್ ಕೃಷ್ಣನು ತನ್ನ ದಿವ್ಯಧಾಮದಿ೦ದ ಈ ನಶ್ವರ ಭೌತ ಜಗತ್ತಿಗೆ ಅವತರಿಸಿ, ತನ್ನ ಅದ್ಭುತವಾದ ಲೀಲೆಗಳನ್ನು ಮಾಡುತ್ತಾನೆ ಮತ್ತು ಇಹಲೋಕದವರಿಗೆ ಜನನ ಮರಣಗಳ ಚಕ್ರದಿ೦ದ ಬಿಡುಗಡೆ ದೊರಕಿಸಿಕೊಡಲು ಭಗವದ್ಗೀತೆಯ ಮೂಲಕ ಸಚಿದೇಶ ನೀಡುತ್ತಾನೆ.
ಆದ್ದರಿ೦ದ ಅವನು ಈ ಭೌತ ಜಗತ್ತಿನಲ್ಲಿ ಬ್ರಹ್ಮನ ಒ೦ದು ದಿನಕ್ಕೊಮ್ಮೆ (ಬ್ರಹ್ಮನ ಒ೦ದು ದಿನ ಎ೦ದರೆ ೪೩, ೨೦, ೦೦೦ ಘಿ ೧೦೦೦ ಅಥವಾ ೪, ೩೨, ೦೦, ೦೦೦ ವರ್ಷಗಳು) ದ್ವಾಪರ ಯುಗದ ಏಳನೇ ಮನ್ವ೦ತರವಾದ ವೈವಸ್ವತ ಮನ್ವ೦ತರದಲ್ಲಿ, ಶ್ರಾವಣ ಮಾಸದ ಕೃಷ್ಣಪಕ್ಷದ, ರೋಹಿಣಿ ನಕ್ಷತ್ರದ ಅಷ್ಟಮೀ ತಿಥಿಯಲ್ಲಿ ಹುಟ್ಟುತ್ತಾನೆ. ಹೀಗೆ ಶ್ರೀ ಕೃಷ್ಣನು ಅವತರಿಸುವ ಮುನ್ನ ಬ್ರಹ್ಮನ ೧, ೯೭, ೫೩, ೨೦, ೦೦೦ ವರ್ಷಗಳು ಕಳೆಯುತ್ತವೆ. ಈ ಪವಿತ್ರವಾದ ಘಟನೆ ಕೇವಲ ೫೦೦೦ ವರ್ಷಗಳ ಹಿ೦ದೆ ನಡೆಯಿತು. ಆಗ ಅವನು ಉತ್ತರ ಪ್ರದೇಶದ ಮಥುರೆಯಲ್ಲಿ ವಸುದೇವ ಮತ್ತು ದೇವಕಿಯರ ಮಗನಾಗಿ ಹುಟ್ಟಿದನು.

ಶ್ರೀ ಮದ್ಭಾಗವತದಲ್ಲಿ ಶ್ರೀ ಕೃಷ್ಣ ಜನನ ವೃತ್ತಾ೦ತ:
ಶ್ರೀ ಕೃಷ್ಣನ ಜನ್ಮ ವೃತ್ತಾ೦ತವನ್ನು ಶ್ರೀ ಮದ್ಭಾಗವತದಲ್ಲಿ ಹೀಗೆ ಕೊಡಲಾಗಿದೆ. ಯದುರಾಜ ಶೂರಸೇನನ ಮಗ ವಸುದೇವನು ಉಗ್ರಸೇನನ ಸು೦ದರಪುತ್ರಿ ದೇವಕಿಯನ್ನು ವಿವಾಹವಾದನು. ವಿವಾಹದ ನ೦ತರ ದೇವಕಿಯ ಅಣ್ಣನಾದ ಕ೦ಸನು ಅವರನ್ನು ಅದ್ಭುತವಾದ ಸುವರ್ಣ ರಥದಲ್ಲಿ ಕೊ೦ಡೊಯ್ದನು. ಆಗ ಕ೦ಸನಿಗೆ ಇದ್ದಕ್ಕಿದ್ದ೦ತೆಯೇ "ಈ ಸೋದರಿಯ ಎ೦ಟನೆಯ ಮಗನು ನಿನ್ನನ್ನು ಕೊಲ್ಲುತ್ತಾನೆ" ಎ೦ಬ ಅಶರೀರವಾಣಿಯೊ೦ದು ಕೇಳಿಸಿತು. ತಕ್ಷಣ ಅವನು ದೇವಕಿಯ ತಲೆಗೂದಲನ್ನು ಹಿಡಿದು ಅವಳನ್ನು ಕೊಲ್ಲಲು ತನ್ನ ಖಡ್ಗವನ್ನು ಎತ್ತಿದನು. ಆಕೆಯ ನವವಿವಾಹಿತ ಪತಿಯಾದ ವಸುದೇವನು ಆಕೆಯ ಹೊಟ್ಟೆಯಲ್ಲಿ ಹುಟ್ಟಿದ ಎಲ್ಲಾ ಮಕ್ಕಳನ್ನೂ ನಿನಗೆ ಕೊಟ್ಟು ಬಿಡುವುದಾಗಿ ಹೇಳಿ ಕ೦ಸನನ್ನು ತಡೆದನು.

ನ೦ತರ ಕ೦ಸನು ವಸುದೇವ, ದೇವಕಿ ಹಾಗೂ ತ೦ದೆ ಉಗ್ರಸೇನರನ್ನು ಕಾರಾಗೃಹದಲ್ಲಿ ಬ೦ಧಿಸಿದನು. ಆಮೇಲೆ ತಾನೇ ರಾಜನೆ೦ದು ಘೋಷಿಸಿಕೊ೦ಡು, ಇಡೀ ಯದುಕುಲಕ್ಕೆ ಶಾ೦ತಿಭ೦ಗವು೦ಟು ಮಾಡಿ ದೇವಕಿ ಮತ್ತು ವಸುದೇವರಿಗೆ ಹುಟ್ಟಿದ ಗ೦ಡು ಮಕ್ಕಳನ್ನು ಒ೦ದಾದ ಮೇಲೊಂದರಂತೆ ಕೊ೦ದು ಹಾಕಿದನು. ಯೋಗಮಾಯೆಯು ದೇವಕಿಯ ಏಳನೇ ಗ೦ಡು ಮಗುವಾದ ಬಲರಾಮನನ್ನು ಎತ್ತಿಕೊ೦ಡು ಹೋಗಿ ನ೦ದ ಮತ್ತು ಯಶೋಧೆಯರ ಮನೆಯಲ್ಲಿ ರೋಹಿಣಿಯ ವಶಕ್ಕೆ ಒಪ್ಪಿಸಿದಳು. ಆಮೇಲೆ ಕ೦ಸನು ಯಾರನ್ನು ಕ೦ಡರೆ ಭಯದಿ೦ದ ತತ್ತರಿಸುತ್ತಿದ್ದನೋ, ಆ ಕೃಷ್ಣನು ದೇವಕಿಯ ಹೊಟ್ಟೆಯಲ್ಲಿ ಎ೦ಟನೆಯ ಮಗನಾಗಿ ಹುಟ್ಟಲು ಸಿದ್ಧವಾಗಿದ್ದನು.

ಕೃಷ್ಣ ಜನನದ ಸಮಯದಲ್ಲಿ ಎಲ್ಲೆಡೆ ಶುಭ ಸೂಚನೆಗಳಾದವು. ಆಕಾಶದಲ್ಲಿ ಗ್ರಹತಾರೆಗಳು ಶುಭಸ್ಥಾನಗಳಿಗೆ ಚಲಿಸಿದವು. ನದಿಗಳು ನಿರ್ಮಲ ಜಲದಿ೦ದ ತು೦ಬಿ ಹರಿಯುತ್ತಿದ್ದವು. ಸರೋವರಗಳು ಕಮಲಗಳಿ೦ದ ತು೦ಬಿದ್ದವು. ಮೇಲ್ಗಾಳಿ ಸವಿಯಾದ ಹೂಗಳ ಕ೦ಪಿನಿ೦ದ ಕೂಡಿದ್ದಿತು. ರಾತ್ರಿಯ ಕಗ್ಗತ್ತಲೆಯಲ್ಲಿ, ಬಿರುಗಾಳಿಯಿ೦ದ ಕೂಡಿದ ಭಾರೀ ಮಳೆ ಬರುತ್ತಿರುವಾಗ ದೇವೋತ್ತಮ ಪರಮಪುರುಷನಾದ ವಿಷ್ಣುವು ದೇವಕಿಯ ಮು೦ದೆ ಕಾಣಿಸಿಕೊ೦ಡನು. ವಸುದೇವನು ಶ೦ಖ, ಚಕ್ರ, ಗದಾ, ಪದ್ಮಗಳನ್ನು ನಾಲ್ಕು ಕೈಗಳಲ್ಲಿ ಹಿಡಿದು, ಕೋಣೆಯನ್ನೆಲ್ಲಾ ತನ್ನ ತೇಜ ಪು೦ಜದಿ೦ದ ಬೆಳಗುತ್ತಿರುವ ತನ್ನ ಮಗನನ್ನು ನೋಡಿದನು. ಆಗ ಅವನು ಕರಜೋಡಿಸಿ ನಮಸ್ಕಾರ ಮಾಡಿ ಸ್ತೋತ್ರ ಮಾಡಿದನು.

ನ೦ತರ ಭಗವ೦ತನು ಒ೦ದು ಪುಟ್ಟ ಶಿಶುವಾಗಿ ಮಾರ್ಪಾಟಾದನು. ವಸುದೇವನು ನಿಶ್ಯಬ್ಧವಾಗಿ ತನ್ನ ಪುಟಾಣಿ ಶಿಶುವನ್ನು ಸೆರೆಮನೆಯಿ೦ದ ಆಚೆಗೆ ಒಯ್ದನು. ಅದು ಹೇಗೋ, ಕ೦ಸನ ಅರಮನೆಯಲ್ಲಿ ಎಲ್ಲರೂ, ಅದರಲ್ಲೂ ಮುಖ್ಯವಾಗಿ ದ್ವಾರಪಾಲಕರು, ಗಾಢವಾಗಿ ಮಲಗಿ ಬಿಟ್ಟಿದ್ದರು. ಬಾಗಿಲುಗಳೆಲ್ಲಾ ತೆರೆದಿದ್ದವು. ಆ ರಾತ್ರಿ ಗಾಢಾ೦ಧಕಾರಮಯವಾಗಿತ್ತು. ಗುಡುಗು - ಸಿಡಿಲು - ಮಳೆ; ವಸುದೇವನು ಪುಟ್ಟ ಕೃಷ್ಣನನ್ನು ಎತ್ತಿಕೊ೦ಡಿರುವಾಗ, ವಸುದೇವನ ತಲೆಯ ಮೇಲೆ ಛತ್ರಿಯ೦ತೆ ಅನ೦ತಶೇಷನು ತನ್ನ ಹೆಡೆಯನ್ನು ಬಿಚ್ಚಿದನು. ಅವರು ಯಮುನಾ ನದಿಯ ಬಳಿ ಬ೦ದಾಗ, ನದಿಯು ಭಾರೀ ಅಲೆಗಳಿ೦ದ ಭೋರ್ಗರೆಯುತ್ತಿತ್ತು. ಆದರೆ ನದಿಯು ಭಗವ೦ತನಿಗೆ ಆ ದಡಕ್ಕೆ ಹೋಗಲು ಎಡೆ ಮಾಡಿ ಕೊಟ್ಟಿತು. ಆಚೆಯ ದಡದಲ್ಲಿ ವೃ೦ದಾವನದಲ್ಲಿ ಎಲ್ಲರೂ ನಿದ್ದೆ ಮಾಡುತ್ತಿದ್ದಾಗ ನ೦ದ ಮಹಾರಾಜನ ಮನೆಗೆ ಹೋದನು. ಅವನು ಮನೆಯೊಳಕ್ಕೆ ಶಬ್ದ ಮಾಡದೇ ಹೋಗಿ ಕೃಷ್ಣನನ್ನು ತಾಯಿ ಯಶೋಧೆಯ ಪಕ್ಕ ಬಿಟ್ಟನು. ಆಮೇಲೆ ಯಶೋಧೆಯ ಹೊಟ್ಟೆಯಲ್ಲಿ ಅದೇ ಸಮಯಕ್ಕೆ ಹುಟ್ಟಿದ ಹೆಣ್ಣು ಮಗುವನ್ನು ಎತ್ತಿಕೊ೦ಡು ಬ೦ದು ಕ೦ಸನ ಕಾರಾಗೃಹದಲ್ಲಿದ್ದ ದೇವಕಿಯ ಪಕ್ಕದಲ್ಲಿ ಮಲಗಿಸಿದನು. ಅವನು ಎಲ್ಲಾ ಬಾಗಿಲುಗಳನ್ನೂ ಭದ್ರ ಮಾಡಿದ್ದನು. ಆದ್ದರಿಂದ ಕ೦ಸನಿಗೆ ಆ ರಾತ್ರಿ ಅಷ್ಟೊ೦ದು ಘಟನೆಗಳು ಆಗಿರುವುದು ತಿಳಿಯಲಿಲ್ಲ. ವೃ೦ದಾವನದಲ್ಲಿ, ಯಶೋಧೆಗೆ ಒ೦ದು ಗ೦ಡು ಮಗು ಆಯಿತು ಎ೦ದು ಘೋಷಿಸಲಾಯಿತು. ಗೋಪ - ಗೋಪಿಯರೆಲ್ಲರೂ ಚೆನ್ನಾಗಿ ಸಿ೦ಗರಿಸಿಕೊ೦ಡು, ನವಜಾತ ಮಗುವಿಗೆ ಉಡುಗೊರೆಗಳನ್ನು ಕೊಟ್ಟರು. ನ೦ದ ಮಹಾರಾಜ ಮತ್ತು ಯಶೋಧೆಯರ ಮನೆಗೆ ಹೋಗಿ ಗೋಪಿಯರು ಅರಿಶಿನ, ಮೊಸರು, ಹಾಲು ಮತ್ತು ನೀರನ್ನು ಬೆರೆಸಿ ಮುದ್ದು ಕೃಷ್ಣನ ಮತ್ತು ಇತರರ ಮೇಲೆ ಹಾಕಿ ಹರಸಿದರು.

ಶ್ರೀ ಕೃಷ್ಣನ ಲೀಲಾ ಪ್ರದರ್ಶನಗಳು:
ಭಾರತದ ವಿವಿಧ ಕಡೆಗಳಲ್ಲಿ ಶ್ರೀ ಕೃಷ್ಣನ ಜೀವಿತಕಾಲದಲ್ಲಿ ನಡೆದ ಘಟನೆಗಳನ್ನು ಬಿಂಬಿಸುವ ಪ್ರದರ್ಶನಗಳನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಗುತ್ತದೆ. ಸಣ್ಣ ಪುಟ್ಟ ಹುಡುಗರು ತಮ್ಮನ್ನು "ಗೋವಿಂದ" ಅಥವಾ "ಗೋಪಾಲ" ಎಂದು ಹೇಳಿಕೊಂಡು ರಸ್ತೆ ಬೀದಿಗಳಲ್ಲಿ ಓಡಾಡುತ್ತಾ ಮೊಸರು - ಹಾಲು ತುಂಬಿದ ಮಣ್ಣಿನ ಗಡಿಗೆಗಳನ್ನು ಒಡೆಯುವರು. ಈ ಮಣ್ಣಿನ ಗಡಿಗೆಗಳನ್ನು ಎತ್ತರದ ಕಟ್ಟಡಗಳ ನಡುವೆ ಕಟ್ಟಿದ ಹಗ್ಗಕ್ಕೆ ನೇತು ಬಿಟ್ಟಿರುವರು. ಹುಡುಗರು ಪಿರಮಿಡ್ ಆಕಾರಕ್ಕೆ ಒಬ್ಬರ ಮೇಲೊಬ್ಬರು ನಿಂತು ಬಾಲಕೃಷ್ಣನು ಮಡಿಕೆಯನ್ನು ಮುಟ್ಟಿದ ರೀತಿಯಲ್ಲಿ ಮುಟ್ಟಿ ಒಡೆಯುವರು. ಮಡಿಕೆಗೆ ಕಾಣಿಕೆ ಹಣವನ್ನು ಕಟ್ಟಿರಲಾಗಿರುವುದರಿಂದ ಗೋವಿಂದನಂತೆ ವೇಷ ಧರಿಸಿದ ಹುಡುಗರು ಮಡಿಕೆಯನ್ನು ಒಡೆದು, ಆ ಹಣವನ್ನು ತಮ್ಮಲ್ಲಿ ಹಂಚಿಕೊಳ್ಳುವರು. ಇನ್ನು ಕೆಲವೆಡೆಗಳಲ್ಲಿ ಕಂಬವೊಂದರ ತುದಿಗೆ ಮಡಿಕೆಯನ್ನು ಕಟ್ಟಿದ್ದು, ಆ ಕಂಬಕ್ಕೆ ಎಣ್ಣೆಯನ್ನು ಸವರಿರಲಾಗುತ್ತದೆ. ಹುಡುಗರು ಮಡಿಕೆಯನ್ನು ಮುಟ್ಟಲು ಯತ್ನಿಸುತ್ತಿರುವಾಗ ಆ ಕೆಲಸ ಕಷ್ಟಕರವಾಗಲೆಂದು ಪ್ರೇಕ್ಷಕರು ಅವರ ಮೇಲೆ ನೀರೆರಚುವರು. ಈ ವಿನೋದದಿಂದ ಎಲ್ಲರೂ ಸಂತೋಷಗೊಳ್ಳುವರು.



ಶ್ರೀ ಕೃಷ್ಣನ ಭಕ್ತಿಗೀತೆಗಳನ್ನು ಕೇಳಲು ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ:
ಕೃಷ್ಣ ನೀ ಬೇಗನೆ ಬಾರೋ
ಬಾರೋ ಕೃಷ್ಣಯ್ಯ
ಸ್ಮರಣೆ ಒಂದೇ ಸಾಲದೇ
ನಾರಾಯಣ
ನಾರಾಯಣ ಹರಿ ಗೋವಿಂದ
ಯಾರೇ ರಂಗನ
ಜಗದೋದ್ಧಾರನ
ಸಕಲ ಗ್ರಹ ಬಲ
ಗುಮ್ಮನ ಕರೆಯದಿರೆ ಅಮ್ಮ
ಕಂಡು ಕಂಡು ನೀ ಎನ್ನ
ಪಿಳ್ಳಂಗೋವಿಯ ಚೆಲುವ ಕೃಷ್ಣ
ಕಂಡೆನಾ ಗೋವಿಂದನ
ಕಲ್ಲು ಸಕ್ಕರೆ ಕೊಳ್ಳಿರೋ
ತೂಗಿರೆ ರಂಗನ ತೂಗಿರೆ ಕೃಷ್ಣನ

ಉಪಾಕರ್ಮ ಮತ್ತು ರಕ್ಷಾಬಂಧನ ವಿಶೇಷ

ಉಪಾಕರ್ಮ
ಗುರುಗಳಿಂದ ದೀಕ್ಷೆ ಪಡೆದನಂತರ ಸಂತ ಶಿಶುನಾಳ ಷರೀಫರು ಹಾಡುತ್ತಾರೆ. ' ಹಾಕಿದ ಜನಿವಾರವ ... ಸದ್ಗುರುನಾಥ ಕಳೆದನು ಭವ ಭಾರವ...." ಭವ ರೋಗ ಎಂದರೆ ಹುಟ್ಟು - ಸಾವೆಂಬ ಬೇನೆ. ಇದರಿಂದ ತಪ್ಪಿಸಿಕೊಳ್ಳುವವರು ಯಾರೂ ಇಲ್ಲ. ಆದರೂ ಗುರು ದೀಕ್ಷೆಯಿಂದ ಮುಕ್ತಿ ಮಾರ್ಗವನ್ನು ಕಂಡುಕೊಂಡು ಭಗವತ್ಪಾದ ಸೇರಿ ಮುಂದಿನ ಜನ್ಮದಿಂದ ಮುಕ್ತಿ ಪಡೆಯುವ ಈ ಕ್ರಿಯೆಗೆ ಉಪನಯನವೊಂದೇ ಮಂತ್ರ ಎಂದು ಹೇಳುತ್ತಾರೆ. ಉಪನಯನಾ ನಂತರ ಶ್ರದ್ಧಾ ಭಕ್ತಿಯಿಂದ ತ್ರಿಕಾಲ ಸಂಧ್ಯಾವಂದನೆ, ಜಪ, ತಪಾದಿಗಳನ್ನು ಆಚರಿಸಿ ಪರಲೋಕದಲ್ಲಿ ಸ್ಥಾನ ಪಡೆಯಬಹುದಂತೆ. 

ಇದಕ್ಕಾಗೇ ಉಪನಯನವನ್ನು ಸೂಕ್ತ ಕಾಲದಲ್ಲಿ ಮಾಡುತ್ತಾರೆ. ಒಂದು ಮಾತಿದೆ. ಮದುವೆಗೆ ಮುಹೂರ್ತ ಸಿಕ್ಕರೂ ಸಿಗಬಹುದು. ಆದರೆ ಉಪನಯನಕ್ಕೆ ಮುಹೂರ್ತ ದೊರಕುವುದೇ ಕಷ್ಟ ಎಂದು. ತಾಯಿಯ ಗರ್ಭದಿಂದ 8 ವರ್ಷ ಲೆಕ್ಕ ಹಾಕಿದ ಸಂದರ್ಭದಲ್ಲಿ ಯಾವುದೇ ಬ್ರಾಹ್ಮಣ ಬಾಲಕನಿಗೂ ಯಾವುದೇ ಗುರುಬಲ ನೋಡದೆ ಉಪನಯನ ಮಾಡಬಹುದಂತೆ. ಆದರೆ 8 ತುಂಬಿದ ನಂತರ ಉಪನಯನ ಮಾಡುವುದಾದರೆ, ವಟುವಿಗೆ ಗುರುಬಲ ಇರುವುದು ಅತಿ ಮುಖ್ಯ ಎನ್ನುತ್ತಾರೆ ಶಾಸ್ತ್ರವೇತ್ತರು. 

ಉಪಾಕರ್ಮ ಆಚರಣೆ 
ಉಪನಯನಾ ನಂತರ ಪ್ರತಿ ವರ್ಷವೂ ಉಪಾಕರ್ಮ ಆಚರಿಸಬೇಕು. ಶ್ರಾವಣದಲ್ಲಿ ಬರುವ ಉಪಾಕರ್ಮ ಯಜ್ಞೋಪವೀತ ಧರಿಸಿದವರಿಗೆ ಅತಿ ಮುಖ್ಯವಾದದ್ದು. ಈ ಉಪಾಕರ್ಮವನ್ನು ಋಗ್ವೇದಿಗಳು ಹಾಗೂ ಯಜುರ್ವೇದಿಗಳು ಸಾಮಾನ್ಯವಾಗಿ ಬೇರೆ ಬೇರೆ ದಿನಗಳಂದು ಆಚರಿಸುತ್ತಾರೆ. 

ಉಪನಯನ ಆದ ಮೇಲೆ (ಕೆಲವರಾದರೂ) ನಿತ್ಯ ತ್ರಿಕಾಲ ಸಂಧ್ಯಾವಂದನೆ ಮಾಡುತ್ತಾರೆ. ಸಮಯ ಮೀರಿದ್ದ ಸಂದರ್ಭದಲ್ಲಿ ಕಾಲಾತಿದೋಷ ಪರಿಹಾರ್ಥವಾಗಿ ಪುನರರ್ಘ್ಯ ಕೊಟ್ಟು ಪರಿಹಾರವನ್ನೂ ಮಾಡಿಕೊಳ್ಳುತ್ತಾರೆ. ಇಷ್ಟೆಲ್ಲಾ ಮಾಡಿದ ಮೇಲೆ ವರ್ಷಕ್ಕೊಮ್ಮೆ ಏಕೆ ಉಪಾಕರ್ಮ ಮಾಡಿಕೊಳ್ಳಬೇಕು. ಇದೇ ಪ್ರಶ್ನೆ ನಮಗೂ ಎದುರಾಗಿತ್ತು. ಬಲ್ಲವರನ್ನು ಕೇಳಿದಾಗ , ಅವರಿಂದ ನಾವು ತಿಳಿದದ್ದನ್ನು ನಿಮಗೂ ತಿಳಿಸುತ್ತಿದ್ದೇವೆ. 

ಉಪಾಕರ್ಮ ಆಚರಣೆ ಶಾಸ್ತ್ರೀಯ ಕಟ್ಟುಪಾಡಿನಲ್ಲಿ ನಡೆಯುವ ವಾರ್ಷಿಕ ವಿಧಿ. ಸಂವತ್ಸರ ಕೃತ ದೋಷ ಪರಿಹಾರಾರ್ಥ ಅಂದರೆ ವರ್ಷವಿಡೀ ತಿಳಿದೋ, ತಿಳಿಯದೆಯೋ ಆದ ತಪ್ಪಿಗೆ ದೇವರ ಕ್ಷಮೆ ಕೋರಿ, ಅದರಿಂದ ಕಟ್ಟಿಕೊಂಡ ಪಾಪ ನಿವಾರಣೆಗಾಗಿ ವರ್ಷಕ್ಕೊಮ್ಮೆ ಈ ಆಚರಣೆ ಮಾಡಲಾಗುತ್ತದಂತೆ. 

ಉಪಾಕರ್ಮದ ದಿನ ಅಭ್ಯಂಜನ ಮಾಡಿ, ಪುಣ್ಯಾಹ, ನಾಂದಿ ನಂತರ ಉತ್ಸರ್ಜನ ಹೋಮ ಮಾಡಿ, ಗುರು ಕಾಣಿಕೆ ನೀಡಿ, ಕನಿಷ್ಠ 5 ಜನ ವಟುಗಳಿಗೆ ಜನಿವಾರ ಅರ್ಥಾತ್‌ ಯಜ್ಞೋಪವೀತ ಹಾಗೂ ವಸ್ತ್ರವನ್ನು ದಾನವಾಗಿ ನೀಡಿ, ನವ ಯಜ್ಞೋಪವೀತ ಧಾರಣೆಯನ್ನು ಮಾಡಿಕೊಳ್ಳುವುದು ಸಂಪ್ರದಾಯ. 

ಉತ್ಸರ್ಜನ ಎಂದರೆ, ದೇಶ ಶುದ್ಧಿ ಎಂದರ್ಥವಂತೆ. ಅಂದರೆ ದೇಹ ಶುದ್ಧಿಗಾಗಿ ಮಾಡುವ ಹೋಮ ಉತ್ಸರ್ಜನ. ಈ ಹೋಮ ಅಥವಾ ಯಾಗ ಮಾಡುವುದರಿಂದ ವರ್ಷವಿಡೀ ಮಾಡಿದ ಗಾಯಿತ್ರಿ ಮಂತ್ರ ಜಪ, ಪೂಜೆ, ಸಂಧ್ಯಾವಂದನೆಗೆ ಬಲ ಬರುತ್ತದಂತೆ. ಋಗ್ವೇದಿಗಳು ಸಾಮಾನ್ಯವಾಗಿ ಉಪಾಕರ್ಮದ ದಿನ ಉತ್ಸರ್ಜನ ಹೋಮವನ್ನು ಮಾತ್ರ ಮಾಡುತ್ತಾರೆ. 

ಆದರೆ, ಯಜುರ್ವೇದಿಗಳು ಉತ್ಸರ್ಜನ ಹಾಗೂ ವಿರಿಜಾ ಎಂಬ ಎರಡು ಹೋಮಗಳನ್ನು ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಜನ್ಮತಃ ಬ್ರಾಹ್ಮಣರಾದರೂ ಮಂತ್ರ, ವೇದಾದ್ಯಯನ ಮಾಡುವವರ ಸಂಖ್ಯೆ ಕ್ಷೀಣಿಸಿರುವ ಹಿನ್ನೆಲೆಯಲ್ಲಿ ಅಂದು ವೇದಶಾಸ್ತ್ರ ಪಾರಂಗತರ ಮನೆಯಲ್ಲಿ ಹತ್ತಾರು ಜನ ಬ್ರಾಹ್ಮಣರು ಸೇರಿ, ಸಾಮೂಹಿಕ ಯಾಗ ಕಾರ್ಯದಲ್ಲಿ ಭಾಗವಹಿಸಿ ನವ ಯಜ್ಞೋಪವೀತ ಧಾರಣೆ ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ದೇವಾಲಯಗಳಿಗೆ ಹೋಗಿ ಅರ್ಚಕರಿಗೇ ದಕ್ಷಿಣೆ ಹಾಗೂ ಯಜ್ಞೋಪವೀತವನ್ನು ದಾನವಾಗಿ ನೀಡಿ, ಅವರ ಸಮ್ಮುಖದಲ್ಲಿ ಶಾಸ್ತ್ರಾನುಸಾರ ಉಪಾಕರ್ಮವನ್ನು ಮಾಡಿಕೊಳ್ಳುತ್ತಾರೆ. 

ರಕ್ಷಾಬಂಧನ 
'ತನ್ನ ಶೀಲವನ್ನು ರಕ್ಷಣೆ ಮಾಡುವ ಅಣ್ಣ ನೀನು' ಎಂದು ತಂಗಿಯಾದವಳು ಅಣ್ಣನಿಗೆ ರಕ್ಷಾದಾರವನ್ನು ಕಟ್ಟುವ ಒಂದುಕ್ರಮವಾದರೆ ಇನ್ನೊಂದೆಡೆ ಹೊಲದಲ್ಲಿ ಬೆಳೆಯುತ್ತಿರುವ ಪೈರಿಗೆ ಕಾಡಿನಿಂದ ಮೊಲ, ನರಿ, ಜಿಂಕೆ, ಕಡವೆ, ಹಂದಿ ಹೀಗೇ ಹಲವು ಹತ್ತು ಪ್ರಾಣಿಗಳು ನಾಡಿಗೆ ಅಥವಾ ಕೃಷಿಕರ ಹೊಲಗದ್ದೆಗಳಿಗೆ ನುಗ್ಗಿ ತಿಂದು ಹಾಳ್ಗೆಡವದಂತೆ ರಕ್ಷೆಗಾಗಿ ಬೆಚ್ಚು ಅಥವಾ ಬೆದರುಬೊಂಬೆಯನ್ನು ಹೊಲಗದ್ದೆಗಳಲ್ಲಿ ನಿಲ್ಲಿಸುವ ಕಾರ್ಯಕ್ರಮಕೂಡ ಈಗ ನಡೆಯುತ್ತದೆ. ಹಾಗೆ ನೆಟ್ಟ ಬೆದರು ಬೊಂಬೆಗೆ ರಾತ್ರಿ ಹೊತ್ತಿನಲ್ಲಿ ಹೆದರಿಕೊಂಡು ಆ ಪ್ರಾಣಿಗಳು ಬರುತ್ತಿರಲಿಲ್ಲವಂತೆ ಎಂಬುದು ಈಗ ಕಥೆ! 


ಭಾರತ ಸಂಸ್ಕೃತಿಯ ತವರು ಇಲ್ಲಿನ ಪ್ರತಿಯೊಂದು ಆಚರಣೆಗೂ ಅದರದೆ ಆದ ವಿಶೇಷತೆಯಿದೆ. ಅಲ್ಲದೆ ಸಂಭಂದಗಳಿಗೆ ಮಹತ್ವಕೊಡೋ ಈ ನಾಡಲ್ಲಿ ಸಂಬಂಧವನ್ನು ಗಟ್ಟಿಯಾಗಿರಿಸಲು ಅನೇಕ ಹಿನ್ನಲೆಯನ್ನು ಆಧಾರವಾಗಿಟ್ಟುಕೊಂಡು ಹಬ್ಬವನ್ನು ಆಚರಿಸಲಾಗುತ್ತದೆ. ಅದೇ ರೀತಿ ಒಡಹುಟ್ಟಿದವರ ಹಬ್ಬವಾದ ರಕ್ಷಾಬಂಧನವು ಸಹ ಐತಿಹಾಸಿಕ ಕಥೆಗಳನ್ನೊಳಗೊಂಡಿದೆ. ಅಂದು ಯುದ್ಧದಲ್ಲಿ ಇಂದ್ರನು ರಾಕ್ಷಸರ ಜೊತೆ ಸೋಲುವ ಕ್ಷಣ ಬಂದಾಗ ಇಂದ್ರನು ಬೃಹಸ್ಪತಿಯ ಮೊರೆ ಹೋಗುತ್ತಾನಂತೆ ಬೃಹಸ್ಪತಿಯ ಸಲಹೆಯ ಮೇರೆಗೆ ಶ್ರಾವಣ ಹುಣ್ಣಿಮೆಯಂದು ರೇಷ್ಮೆ ದಾರವನ್ನು ಇಂದ್ರಾಣಿಯು ಇಂದ್ರನ ಕೈಗೆ ಕಟ್ಟುತ್ತಾಳೆ. ಇದರ ಪರಿಣಾಮವೋ ಏನೋ ಇಂದ್ರನು ಯುದ್ಧದಲ್ಲಿ ಜಯ ಹೊಂದುತ್ತಾನಂತೆ. ಇದು ಪೌರಾಣಿಕ ಕಥೆ ಈ ಹಿನ್ನಲೆಯಿಂದಲೇ ಈ ಹಬ್ಬವನ್ನು ಆಚರಿಸಲಾಗುತ್ತದೆ ಎಂಬುವುದು ಪ್ರತೀತಿ.

ತಂಗಿ ತನ್ನ ಅಣ್ಣನ ಯಶಸ್ಸು, ಶ್ರೇಯೋಭಿವೃದ್ದಿ ಹಾಗೇನೇ ಅವನ ಬಾಳಲ್ಲಿ ನೆಮ್ಮದಿಯನ್ನು ಕರುಣಿಸಿ ರಕ್ಷಿಸು ಎಂದು ಹಾರೈಸುವ ಮುಖಾಂತರ ರಾಖಿಯನ್ನು ಕಟ್ಟುವುದು ವಾಡಿಕೆ. ಶ್ರಾವಣ ಹುಣ್ಣಿಮೆಯಂದು ಬರೋ ಈ ಹಬ್ಬ ಅಣ್ಣ-ತಂಗಿಯ ಸಂಭಂದಕ್ಕೆ ಅರ್ಥ ಕಲ್ಪಿಸೋ ಪವಿತ್ರವಾದ ದಿನ. ಹಿಂದೆ ಉತ್ತರ ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದ ಈ ಹಬ್ಬವನ್ನು ಇತ್ತೀಚೆಗೆ ದಕ್ಷಿಣ ಭಾರತದಲ್ಲಿಯೂ ಆಚರಿಸಲಾಗುತ್ತಿದೆ. ಭಾರತದೆಲ್ಲೆಡೆ ಯಾವುದೇ ಜಾತಿ ಭೇದವಿಲ್ಲದೆ ಎಲ್ಲಾ ಜನಾಂಗದವರು ಈ ಹಬ್ಬವನ್ನು ಅತೀ ಸಂಭ್ರಮದಿಂದ ಆಚರಿಸೋದೇ ಈ ದಿನದ ವಿಶೇಷ. ತಂಗಿಯಾದವಳು ಅಣ್ಣನ ಹಣೆಗೆ ಕುಂಕುಮದ ತಿಲಕವನ್ನಿಟ್ಟು ಬಲಗೈಗೆ ರಾಖಿಯನ್ನು ಕಟ್ಟಿ ಆರತಿ ಬೆಳಗಿ ಸಿಹಿಯನ್ನು ಬಾಯಿಗೆ ನೀಡಿ ಅಣ್ಣನಿಂದ ಉಡುಗೊರೆ ಪಡೆಯುವ ಮೂಲಕ ಅತೀ ಸಂತಸದಿಂದ ಆಚರಿಸೋ ಹಬ್ಬಾನೇ ರಕ್ಷಾಬಂಧನ.

ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿ ಅಣ್ಣ-ತಂಗಿಯರ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಲಿ ಎಂದು ಹಾರೈಸುತ್ತಾ ಎಲ್ಲರಿಗೂ ಓಂಕಾರದ ಪರವಾಗಿ ರಕ್ಷಾಬಂಧನ ಹಬ್ಬದ ಶುಭಾಶಯಗಳು.

ನಾಗಪಂಚಮಿ ವಿಶೇಷ

ನಾಗರ ಪಂಚಮಿ ಮತ್ತೆ ಬಂದಿದೆ. ಶ್ರಾವಣದ ಹಬ್ಬಗಳ ಸಾಲಿಗೆ ಮುನ್ನುಡಿ. ಸಾಲು ಹಬ್ಬಗಳ ಪೈಕಿ ಮೊದಲನೆಯದು ನಾಗಪಂಚಮಿ. ಶ್ರಾವಣ  ಮಾಸದ  ಶುಕ್ಲ ಪಕ್ಷದ ಪಂಚಮಿ ದಿನ ಆಚರಿಸುತ್ತಾರೆ. ಈ ಹಬ್ಬವನ್ನು ಪಂಚಮಿ ಹಬ್ಬ, ಒಡಹುಟ್ಟಿದವರ ಹಬ್ಬ ಎಂದೂ ಕರೆಯುತ್ತಾರೆ. ಈ ಹಬ್ಬದಲ್ಲಿ ನಾಗಪ್ಪ ಅಥವಾ ಸುಬ್ರಹ್ಮಣ್ಯ ಸ್ವಾಮಿಗೆ ಪೂಜೆ ನಡೆಯುತ್ತದೆ. ಈ ಹಬ್ಬವನ್ನು ಬಹಳ ನೇಮ, ನಿಷ್ಠೆಯಿಂದ  ಆಚರಿಸುತ್ತಾರೆ.

ಮಣ್ಣನ್ನು ನಂಬಿ ಮಣ್ಣಿಂದ ಬದುಕೇನ
ಮಣ್ಣೆನಗೆ ಮುಂದೆ ಹೊನ್ನು-ಅಣ್ಣಯ್ಯ
ಮಣ್ಣೆ ಲೋಕದಲಿ ಬೆಲೆಯಾದ್ದು 

ಎಂಬ ನಾನ್ನುಡಿಯಂತೆ ಮಣ್ಣು ಬದುಕಿನ ಮೂಲವೆಂಬ ಸಂಗತಿಯನ್ನು ಎತ್ತಿ ತೋರಲಾಗಿದೆ. ಮಣ್ಣಿನ ಮಗನೆಂದು ಕರೆಯಿಸಿಕೊಳ್ಳುವ ರೈತನ ದೃಷ್ಟಿಯಲ್ಲಿ ಮಣ್ಣು ಎಂದೂ ಕೀಳಾದ ವಸ್ತುವಲ್ಲ. ಭೂ ತಾಯಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿ, ಗೌರವಿಸಿ, ಪೂಜಿಸುವ ಉತ್ತರ ಕರ್ನಾಟಕದ ರೈತ ಸಮೂಹದ ಪಾಲಿಗೆ ಮಹತ್ವದ ಹಬ್ಬವೆಂದೇ ಕರೆಯಲ್ಪಸುವ ನಾಗರ ಪಂಚಮಿ ಸಂಭ್ರಮಾಚರಣೆಗೆ ಬರದ ಕಾರ್ಮೋಡ ಕವಿದಿದೆ.


ಮಣ್ಣು ಪೂಜೆಯ ಹೆಸರಿನಲ್ಲಿ ವ್ಯಕ್ತವಾಗುವ ದೇವತೆ ಹುತ್ತಪ್ಪ. ಶ್ರಾವಣ ನಾಗಪ್ಪನ ಪೂಜೆಯ ಕಾಲ ದ್ರಾವಿಡರಿಂದ ಪ್ರಾರಂಭವಾದ ಪದ್ಧತಿ ಇದಾಗಿದ್ದರೂ ಆರ್ಯ ದ್ರಾವಿಡ ಸಂಸ್ಕೃತಿ ಸಂಕರಗೊಂಡ ಮೇಲೆ ಈ ನಾಗಪೂಜೆ ಸಾರ್ವತ್ರಿಕವೆನಿಸಿದೆ. ನಮ್ಮಲ್ಲಿ ಪ್ರಾಚೀನ ಕಾಲದಿಂದಲ್ಲೂ ನಾಗಪೂಜೆಗೆ ವಿಶೇಷ ಮಹತ್ವ ಕೊಡುತ್ತ ಬಂದಿದ್ದಾರೆ. ಕಾರಣ ಶ್ರೀ ವಿಷ್ಟು ಶೇಷತಾಯಿ, ಶಿವ ಸರ್ಪ ಭೂಷಣ, ಭೂಮಿಯನ್ನು ನೆತ್ತಿಯ ಮೇಲೆ ಹ್ತೊತವ ಆದಿಶೇಷ. ಗಣಪತಿಯ ಹೊಟ್ಟೆಯ ನಡುಕಟ್ಟು ನಾಗದೇವ.

ನಾಗರ ಪಂಚಮಿ ಹಬ್ಬವನ್ನು ಬಹಳ ನೇಮ, ನಿಷ್ಠೆಯಿಂದ ಆಚರಿಸುತ್ತಾರೆ. ಬೆಳಿಗ್ಗೆ ಮಂಗಳ ಸ್ನಾನ ಮಾಡಬೇಕು. ಮಡಿ ಬಟ್ಟೆಗಳನ್ನು ತೊಟ್ಟು ಪೂಜೆ ಮಾಡಬೇಕು. ದೇವರ ಮನೆಯಲ್ಲಿ ಹುತ್ತದ ಮಣ್ಣಿನಿಂದ ಹಾವಿನ ಆಕಾರ ಮಾಡಿಇಟ್ಟುಕೊಳ್ಳಬಹುದು ಅಥವಾ ಬೆಳ್ಳಿ ನಾಗಪ್ಪನ ವಿಗ್ರಹ ಇಟ್ಟುಕೊಳ್ಳಬಹುದು. ದೇವಸ್ಥಾನದಲ್ಲಿರುವ ನಾಗರ ಕಲ್ಲುಗಳಿಗೆ ಪೂಜೆ ಮಾಡುತ್ತಾರೆ. ಮನೆಯ ಹತ್ತಿರ ಹುತ್ತ ಇದ್ದರೆ, ಅದಕ್ಕೆ ಅರಿಶಿನ ಕುಂಕುಮ ಹಾಕಿ, ಹಾಲು ಎರೆಯುತ್ತಾರೆ. ಒಟ್ಟಿನಲ್ಲಿ ನಾಗಪ್ಪನಿಗೆ ಹಾಲೆರೆದು ಸಂತೃಪ್ತಿ ಪಡಿಸಬೇಕೆಂಬ ನಂಬಿಕೆ. ಕೆಲವರು ಹಾವಿನಾಕಾರದ ರಂಗೋಲಿಯನ್ನು ಬರೆಯುತ್ತಾರೆ. ನಾಗಪ್ಪನಿಗೆ ಹಾಲು, ನೀರಿನಿಂದ ತನಿ ಎರೆಯುತ್ತಾರೆ. ಮಂತ್ರಾಕ್ಷತೆ ಉಪಯೋಗಿಸುವುದಿಲ್ಲ . ಅದರ ಬದಲು ಅಕ್ಕಿ ಹಿಟ್ಟು, ಕಡಲೆ ಕಾಳು ಸೇರಿಸಿದ ಮಿಶ್ರಣ ಉಪಯೋಗಿಸುತ್ತಾರೆ. ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಷೋಡಶೋಪಚಾರದಿಂದ ಪೂಜೆಮಾಡಬೇಕು. ಪೂಜೆಯ ನಂತರ ದೇವರ ಮುಂದೆ ಒಡಹುಟ್ಟಿದವರಿಗೆ ಹಾಲು ತನಿ ಎರೆಯುತ್ತಾರೆ. ಅಣ್ಣ , ಅಕ್ಕನಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆಯುತ್ತಾರೆ. ನಾಗರ ಪಂಚಮಿ ಹಬ್ಬದ ವಿಶೇಷತೆ ಒಡಹುಟ್ಟಿದವರಿಗೆ ಹಾಲು ತನಿ ಎರೆಯುವುದು. ಅಕ್ಕ, ತಂಗಿ, ಅಣ್ಣ ತಮ್ಮ ಒಬ್ಬರಿಗೊಬ್ಬರು ತನಿ ಎರೆಯುತ್ತಾರೆ. ಹಾಲನ್ನು ಹೊಟ್ಟೆ ಬೆನ್ನಿಗೆ ಸವರಿ , ಹೊಟ್ಟೆ ಬೆನ್ನು ತಂಪಾಗಿರಲಿ ಅಂತ ಹಾರೈಸುತ್ತಾರೆ. ಹೊಟ್ಟೆ ಎಂದರೆ - ಮುಂದೆ ಬರುವ ಪೀಳಿಗೆ, ಹೊಟ್ಟೆಯಲ್ಲಿ ಹುಟ್ಟುವ ಮಕ್ಕಳು ಎಂಬ ಸಂಕೇತ , ಬೆನ್ನು ಎಂದರೆ ಹಿಂದಿನಪೀಳಿಗೆ ಅಂದ್ರೆ ನಮ್ಮ ಹಿರಿಯರು ಎಂಬ ಸಂಕೇತ. ಒಡಹುಟ್ಟಿದವರು ಮತ್ತು ಅವರ ಮಕ್ಕಳು ಎಲ್ಲರು ಚೆನ್ನಾಗಿರಲಿ ಎಂದು ಹಾರೈಸುತ್ತಾರೆ. ಹೀಗಾಗಿ ಇದನ್ನು ಒಡಹುಟ್ಟಿದವರ ಹಬ್ಬ ಎಂದೂ ಕರೆಯುತ್ತಾರೆ. ಊಟಕ್ಕೆ ಕಾಯಿ ಕಡುಬು, ಉದ್ದಿನ ಕಡುಬು ಮಾಡುತ್ತಾರೆ. ನಾಗಪ್ಪನಿಗೆ ಘಾಟು ಆಗಬಾರದೆಂದು ಯಾವುದೇ ಕರಿದ ತಿಂಡಿ ಮಾಡುವುದಿಲ್ಲ, ಅಡಿಗೆಗೆ ಒಗ್ಗರಣೆ ಹಾಕುವುದಿಲ್ಲ.

ಇಂದು ನಾಗಪೂಜೆ ಸಂಪ್ರದಾಯದಲ್ಲಿ ವಿಭಿನ್ನತೆ ಕಂಡು ಬಂದರೂ ನಾಗಪೂಜೆಗೆ ಪ್ರಾಮುಖ್ಯತೆ ಇದೆ. ಪ್ರಾಚೀನ ಅರಸು ಮನೆತನಗಳು ನಾಗನಿಗೆ ಗೌರವ ನೀಡಿವೆ. ಕ್ರಿ.ಶ 2ನೆಯ ಶತಮಾನದಲ್ಲಿ ಚಟುವಂಶದ ಶಿವಸ್ಕಂದ ನಾಗಶ್ರೀಯಿಂದ ರಚಿತವಾದ ನಾಗಪ್ರತಿಮೆ ಅಂದಿನ ಕಾಲದ ನಾಗದೇವನ ಮಹತ್ವಕ್ಕೆ ಸಾಕ್ಷಿಯೆನಿಸಿದೆ. ನಾಗನಿಕಾ, ನಾಗಮಲಿಕಾ, ನಾಗಶ್ರೀ ಎಂಬ ಸ್ತ್ರೀ ನಾಮಗಳು ಅಂದಿನ ನಾಗೋಪಾಸನೆಯನ್ನು ಸೂಚಿಸುವವಂತಿವೆ. ಇಂದು ಸಂಪ್ರದಾಯದಲ್ಲಿ ವಿಭಿನ್ನತೆ ಕಂಡು ಬಂದರೂ ನಾಗಪೂಜೆಗೆ ಪ್ರಾಮುಖತೆಯಿದೆ. ಶ್ರಾವಣ ಶುದ್ಧ ಪಂಚಮಿಯ ದಿನವೇ ಈ ಹುಟ್ಟು ಕೈಕೊಳ್ಳುವುದಕ್ಕೆ ನಿರ್ದಿಷ್ಟವಾದ ಕಾರಣ ತಿಳಿಯದೆ ಹೋದರೂ ನಾಗಪೂಜೆಗೆ ಪ್ರಾಮುಖ್ಯತೆ ಇದೆ. ಶ್ರಾವಣ ಶುದ್ಧ ಪಂಚಮಿಯ ದಿನವೇ ಈ ಹಬ್ಬ ಕೈಕೊಳ್ಳುವುದಕ್ಕೆ ನಿರ್ದಿಷ್ಟವಾದ ಕಾರಣ ತಿಳಿಯದೆ ಹೋದರೂ ಜನಪದ ಕಥೆಯೊಂದು ಈ ಬಗೆಗೆ ಹೇಳುತ್ತದೆ.

ಹಿನ್ನಲೆ: ಒಕ್ಕಲಿಗನೊಬ್ಬ ರಂಟೆ ಹೊಡೆಯುತ್ತಿದ್ದಾಗ ಅದರ ಕುಡಕ್ಕೆ ಸಿಕ್ಕು ಹಾವಿನ ಮರಿಗಳೆಲ್ಲ ಸತ್ತು ಹೋದದ್ದರಿಂದ ತಾಯಿ ಹಾವು ರೊಚ್ಚಿಗೆದ್ದು ಅಂದಿನ ರಾತ್ರಿ ಆ ಒಕ್ಕಲಿಗನ ಮನೆಯ ಮಂದಿಯನ್ನೆಲ್ಲ ಕಚ್ಚಿಕೊಂದು ಹಾಕಿದರೂ ಅದರ ರೋಷ ಶಮನವಾಗದೆ ಹೋದಲ್ಲಿ ಅತ್ತೆಯ ಮನೆಯಲ್ಲಿದ್ದ ಆ ಒಕ್ಕಲಿಗನ ಮಗಳನ್ನು ಕೊಲ್ಲಲ್ಲು ಅತ್ತ ಹೊರಟಿತು. ಅದೇ ಹೊತ್ತಿಗೆ ಅತ್ತೆಯ ಮನೆಯಲ್ಲಿದ್ದ ಆ ಒಕ್ಕಲಿಗನ ಮಗಳು ಮಣ್ಣಿನ ಹಾವನ್ನು ಮಾಡಿ ಹಾಲೆರೆಯುತ್ತಿದ್ದುದನ್ನು ಕಂಡ ನಾಗಿಣಿಯ ರೊಚ್ಚು ತಕ್ಕಮಟ್ಟಿಗೆ ಶಾಂತವಾಯಿತು. ಅದು ತಾನು ಒಕ್ಕಲಿಗನ ಮನೆಯಲ್ಲಿ ಮಾಡಿದ ಕೇಡನ್ನು ಹೇಳಲು, ಆಕೆ ಬೋರಾಡಿ ಅತ್ತು ತನ್ನ ತವರವರನ್ನೆಲ್ಲ ಬದುಕಿಸೆಂದು ಬೇಡಿಕೊಂಡಳು. ಆ ನಾಗಿಣಿಗೆ ಕರುಣೆ ಹುಟ್ಟಿ ಒಕ್ಕಲಿಗನ ಮನೆಗೆ ಬಂದು ಎಲ್ಲರ ವಿಷವನ್ನು ಮರಳಿ ಹೀರಿ ಬದುಕಿಸಿದ್ದರಿಂದ ಅವರೆಲ್ಲ ನಾಗಿಣಿಯನ್ನು ಪೂಜಿಸುತ್ತ ಬಂದರೆಂಬ ಕಥೆಯಿದೆ. ಅಂದು ಶ್ರಾವಣ ಶುದ್ಧ ಚೌತಿಯಾದ್ದರಿಂದ ಅಂದಿನ ದಿನವನ್ನು ನಾಗ ಚೌತಿ ಎಂಬ ಹೆಸರಿನಿಂದ ಕರೆಯುತ್ತ ಬಂದುದೇ ನಾಗಪೂಜೆಗೆ ಕಾರಣವೆನಿಸಿತು. ಮಗಳ ಈ ಉಪಕಾರದ ದ್ಯೋತಕವಾಗಿಯೇ ಇಂದಿಗೂ ನಾಗಪಂಚಮಿ ಹಬ್ಬಕ್ಕೆ ಮಗಳನ್ನು ತವರಿನವರು ಕರೆತರುವರೆಂದು ಜಾನಪದರು ಹೇಳಿತ್ತಾರೆ.

ಮೂರು ದಿನದ ಹಬ್ಬ: ಮನೆ ಮನೆಗಳಲ್ಲಿ ಹಬ್ಬಕ್ಕೆ ಮೊದಲೇ ನಾಗದೇವನ ನೈವೇದ್ಯಕ್ಕೆ ಅರಳು, ಅರಳಿಟ್ಟು, ತಂಬಿಟ್ಟು, ವಿಧವಿಧ ಉಂಡಿ, ಎಳ್ಳುಚಿಗಳಿಗಳನ್ನು ತಯಾರಿಸುತ್ತಾರೆ. ಈ ನಾಗಪಂಚಮಿ ಮೂರು ದಿವಸದ ಹಬ್ಬ. ಮೊದಲನೆಯದಿನ ನಾಗರ ಅಮವಾಸ್ಯೆ ಅಂದರೆ ರೊಟ್ಟಿ ಪಂಚಮಿ, ಎರಡನೆಯ ದಿನ ನಾಗಚೌತಿ, ಮೂರನೆಯ ದಿನ ನಾಗರ ಪಂಚಮಿ. ನಾಗರ ಅಮವಾಸ್ಯೆಯ ದಿನ ಹೆಣ್ಣು ಮಕ್ಕಳು ತಮ್ಮ ಸಮಸ್ತ ಬಳಗದೊಂದಿಗೆ ಹಣತೆ ಪೂಜೆ ಮಾಡುವುದುಂಟು. ಮನೆ ಮಂದಿಯೆಲ್ಲ ಕರಕಿ ಪತ್ರಿಯಿಂದ ನಾಗದೇವನಿಗೆ ಹಾಲನೆರೆಯುತ್ತ ದೇವರ ಪಾಲು, ದಿಂಡರ ಪಾಲು, ಸಮಸ್ತ ಬಳಗದವರ ಪಾಲನ್ನು ಸಮರ್ಪಣೆ ಮಾಡುವರು. ನಾಗದೇವನಿಗೆ ಹಿಡಿದ ಎಡೆಯನ್ನು ಹೆಣ್ಣುಮಕ್ಕಳು ಉಣ್ಣ ಬಾರದೆಂಬ ಪ್ರತೀತಿ ಜನಪದರಲ್ಲಿದೆ. ನಾಗರ ಪಂಚಮಿ ಹಬ್ಬದಂದು ಚಿಕ್ಕ ಮಕ್ಕಳಿಗೆ ಸಿಹಿ, ಹೊಸ ಬಟ್ಟೆ, ಜೋಕಾಲಿಯಾಟದ ಹರ್ಷವಾದರೆ ವಾರಿಗೆಯ ಗೆಳತಿಯರಿಗೆ ಸಂಪೂರ್ಣ  ಸ್ವಾತಂತ್ರ್ಯ ಒಟ್ಟುಗೂಡಿ ನಾಗಪ್ಪನಿಗೆ ಹಾಲನೆರೆಯುವುದು, ತಮ್ಮ ಸುಖ ದುಖ:ಗಳನ್ನು ಗೆಳತಿಯರಲ್ಲಿ ವಿನಿಯೋಗಿಸಿಕೊಳ್ಳವಲ್ಲಿ ಇದೊಂದು ಉತ್ತಮ ಅವಕಾಶ.

ನಾಗರ ಪಂಚಮಿ ಹಬ್ಬ ಮುಗಿಸಿ ಹೆಣ್ಣು ಮಕ್ಕಳು ಗಂಡನ ಮನೆಗೆ ತೆರಳಬೇಕೆಂದರೆ ಮನಸ್ಸಿಲ್ಲ. ಗೆಳತಿಯರು ಅವಳನ್ನು `ಸಣ್ಣ ಸೋಮವಾರ ತನಕ ಅಣ್ಣ ಹೇಳಿದಂಗ ಕೇಳು~ ಎಂದು ಬುದ್ದವಾದ ಹೇಳಿದರೆ, ಗಂಡನ ಮನೆಯ ಕಟ್ಟುಕರಾರಿನ ಮೂಲಕ ಹಬ್ಬಕ್ಕಾಗಿ ತಂಗಿಯನ್ನು ಕೆರೆತಂದ ಅಣ್ಣ ಅವಳನ್ನು ಸಕಾಲಕ್ಕೆ ಮರಳಿ ಕಳಿಸಬೇಕಲ್ಲವೆ. ತವರಿಗೆ ಬಂದ ಹೆಣ್ಣು ಮಕ್ಕಳಿಗೆ ಕೊಡುಗೆಯಾಗಿ ಸೀರೆ ಮುಂತಾದವುಗಳನ್ನು ಉಡುಗೊರೆಯಾಗಿ ಕೊಟ್ಟು ಅಣ್ಣ ಅವಳನ್ನು ಮರಳಿ ಕಳಿಸಿ ಬರುವ ಸಂಪ್ರದಾಯವಿದೆ. ನಾಗಪೂಜೆ ಮಾಡಿದರೆ ಮಕ್ಕಳಾಗುತ್ತವೆ ಎಂಬ ಭಾವನೆ ಇಂದಿಗೂ ಜನಮನದಲ್ಲಿ ಜೀವಂತವಾಗಿದೆ. ಹೀಗೆ ಜಾನಪದ ಹಬ್ಬಗಳು ಹಳ್ಳಿಗರ ಬದುಕಿಗೆ ಹೊಸ ಪ್ರೇರಣೆಯನ್ನೋದಗಿಸುವ ಶಕ್ತಿಗಳಾಗಿವೆ.

ತುಳುನಾಡಿನ ನಾಗಾರಾಧನೆ. ತುಳುನಾಡಿನಲ್ಲಿ ನಾಗನಿಗೆ ತನ್ನದೇ ಆದ ವಿಶೇಷ ಸ್ಥಾನವಿದೆ. ಇಲ್ಲಿ ತಿಂಗಳಿಗೊಮ್ಮೆ, ಪಂಚಮಿ ದಿವಸದಂದು ತಂಬಿಲ ಸೇವೆ ನಡೆಸುತ್ತಾರೆ. ಅಂತೆಯೇ ವರ್ಷಕ್ಕೊಮ್ಮೆ ನಾಗರಪಂಚಮಿಯ ದಿನದಂದು ಬಹಳ ವಿಜೃಂಬಣೆಯಿಂದ ಆಚರಿಸುವುದು ಇಲ್ಲಿನ ರೂಡಿ. ಅಂತೆಯೇ ಇಲ್ಲಿ ಪ್ರತೀ ಮನೆ/ಕುಟುಂಬಕ್ಕೊಂದು ನಾಗನ ಗುಡಿ (ನಾಗನ ಕಟ್ಟೆ)ಗಳಿರುವುದನ್ನು ಕಾಣಬಹುದು. ಪಂಚಮಿಯ ದಿನದಂದು ಕಟ್ಟೆಯನ್ನು ಶೃಂಗರಿಸಿ ನಾಗನ ಮೂರ್ತಿಯನ್ನು ಶುಚಿಗೊಳಿಸಿ, ಇದಕ್ಕೆ ಹಾಲಾಭಿಷೇಕ, ಸೀಯಾಳಾಭಿಷೇಕ, ಅರಶಿನಾಭಿಷೇಕ, ಕೊನೆಗೆ ಕಳಸಾಭಿಷೇಕ ಮಾಡುತ್ತಾರೆ. ಬಳಿಕ ನಾಗಪ್ರಿಯವಾದ ಹಿಂಗಾರವನ್ನಿಟ್ಟು ಜೊತೆಗೆ ಅರಶಿನದ ಉಂಡೆಯನ್ನು ನಾಗ ಪ್ರತಿಮೆಯ ಹೆಡೆಯ ಮೇಲಿರಿಸಿ ಪೂಜಿಸುವುದು ಇಲ್ಲಿನ ಪ್ರತೀತಿ. ಪೂಜೆಯ ಬಳಿಕ ಮನೆಯಲ್ಲಿ ವಿವಿಧ ಖಾಧ್ಯದೊಂದಿಗೆ, ತುಳುನಾಡ ಮಂಜಲ್ದ ಇರೆತ್ತ ಅಡ್ಯೆ(ಅರಶಿನ ಗಟ್ಟಿ) ತುಂಬಾನೇ ಫೇಮಸ್. ಈ ವೇಳೆ ಜೀವಂತ ನಾಗ ಕಾಣಿಸಿಕೊಡರೆ, ಸಾಕ್ಷಾತ್ ನಾಗ ದೇವರು ಭಕ್ತಿಗೆ ಪ್ರತ್ಯಕ್ಷರಾದರೆಂದು ನಂಬುತ್ತಾರೆ. ಈ ನಿಟ್ಟಿನಲ್ಲಿ ತುಳುನಾಡು ನಾಗಾರಾಧನೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸುತ್ತದೆ. ನಾಗದೋಷಗಳ ನಂಬಿಕೆ ನಾಗ ಸಂತತಿಗಳ ನಾಶ ಮಾಡಿದರೆ, ಅವುಗಳ ಶಾಪದಿಂದ ನಾಶಗೈದ ವ್ಯಕ್ತಿಗೆ ಸಂತಾನ ಪ್ರಾಪ್ತಿಯಾಗದು. ಸಂತಾನ ವೃದ್ಧಿಸಿದರೂ ಅವರು ಸರಿ ಇಲ್ಲದಿರುವರು. ಕೌಟುಂಬಿಕ ಕಲಹದಿಂದ ನೆಮ್ಮದಿ ಶಾಂತಿ ಲಭಿಸದು. ಇದನ್ನು ಕಾಳಸರ್ಪದೋಷವೆನ್ನುತ್ತಾರೆ. ಇದು ನಾಗ ಕುಟುಂಬಕ್ಕೆ ಕೊಟ್ಟ ತೊಂದರೆಯಿಂದ, ನಮ್ಮ ಕುಟುಂಬಕ್ಕೆ ತಗಲುವ ಶಾಪ. ಇನ್ನೂ ಚರ್ಮ ಸಂಬಂಧಿ ಖಾಯಿಲೆಗಳು ಈ ದೋಷದಿಂದ ಬರುವುದು.


ಉತ್ತರ ಕರ್ನಾಟಕದಲ್ಲಿ ನಾಗರ ಪಂಚಮಿಗೆ ಹೆಚ್ಚಿನ ಆದ್ಯತೆ ಹಾಗೂ ಈ ಹಬ್ಬವನ್ನು ಪಂಚಮಿ ಹಬ್ಬ ಎನ್ನುತ್ತಾರೆ. ಇದನ್ನು ಅದ್ಧೂರಿಯಿಂದ ೩ - ೫ ದಿನಗಳ ಹಬ್ಬ ನಡೆಸುತ್ತಾರೆ. ಹೊಸದಾಗಿ ಮದುವೆಯಾದ ಹೆಣ್ಣು ಮಗಳನ್ನು ಅಣ್ಣ/ತಮ್ಮ ಅತ್ತೆ ಮನೆಯಿಂದ ತವರು ಮನೆಗೆ ಕರೆದುಕೊಂಡು ಹೋಗಲು ಬರುತ್ತಾರೆ. ಇದೇ ಪದ್ಧತಿ ಬಗ್ಗೆ ಒಂದು ಜನಪ್ರಿಯವಾದ ಭಾವಗೀತೆ ಕೂಡ ಇದೆ. ಕವಿಯಾದ ಬೆಟಗೇರಿ ಕೃಷ್ಣ ಶರ್ಮ (ಆನಂದಕಂದರು) ರಚಿಸಿರುವ "ಪಂಚಮಿ ಹಬ್ಬಕ್ ಉಳಿದಾವು ದಿನ ನಾಕ ಅಣ್ಣ ಬರಲಿಲ್ಲ ಯಾಕೋ ಕರಿಯಾಕ " ಹಾಡನ್ನು ಇಲ್ಲಿ ಕೇಳಬಹುದು. ಹೆಣ್ಣು ಮಕ್ಕಳು ಪಂಚಮಿ ಹಬ್ಬವನ್ನು ತವರು ಮನೆಗೆ ಹೋಗಿ ಆಚರಿಸುತ್ತಾರೆ. ಒಡಹುಟ್ಟಿದವರಿಗೆ ಹಾಲು ಎರೆದು ಉಡುಗೊರೆ ಕೊಡುತ್ತಾರೆ. ಇದಕ್ಕೆ ಉಂಡಿ /ಉಂಡೆ ಹಬ್ಬ ಎಂದೂ ಹೆಸರು. ವಿವಿಧವಾದ ಉಂಡೆಗಳನ್ನು ಮಾಡುತ್ತಾರೆ . ಜೋಕಾಲಿ ಕಟ್ಟಿ ಆಟ ಆಡುತ್ತಾರೆ. ಹೀಗೆ ಸಂಬ್ರಮದಿಂದ ಹಬ್ಬ ಮಾಡುತ್ತಾರೆ. ಇನ್ನು ಹಬ್ಬವೆಂದರೆ ಭಕ್ಷ್ಯ, ಭೋಜನಕ್ಕೇನು ಕಡಿಮೆಯೇ. ರೊಟ್ಟಿಗೆ ಹೆಸರುವಾಸಿಯಾದ ಉತ್ತರ ಕರ್ನಾಟಕದ ಜನ ಹಬ್ಬಕ್ಕೆಂದು ಹಿಂದಿನ ದಿನವೇ ವಿಶೇಷವಾಗಿ ಸಜ್ಜೆ ಹಾಗೂ ಕಡಕ್ ರೊಟ್ಟಿಗಳನ್ನು ಮಾಡುತ್ತಾರೆ (ಹಬ್ಬದ ದಿನ ರೊಟ್ಟಿ ಸುಡುವಂತಿಲ್ಲ). ಜತೆಗೆ ಬದನೆ ಎಣಗಾಯಿ, ಕಾಳು ಪಲ್ಯ, ಉಸುಳಿ, ಪಂಚಮಿ ಉಂಡೆ, ಬಾಣದೊಂದಿಗೆ ವಿವಿಧ ಬಗೆಯ ಚಟ್ಟಿಗಳ ಸಾಲೇ ತಯಾರು. ತಂಬಿಟ್ಟು, ಶೇಂಗಾ, ಎಳ್ಳು, ಪುಠಾಣಿ, ಚುರುಮುರಿ ಉಂಡಿ, ದಾಣಿ, ಗುಳ್ಳಅಡಕಿ, ರವಾ, ಬೇಸನ್, ಲಡಗಿ, ಹೆಸರು, ಅಂಟಿನ, ಖರ್ಜಿಕಾಯಿ, ಶಂಕರಪೊಳೆ, ಬಾದುಷಾ, ಮಾದ್ಲಿ, ಮಂಡಗಿ ಹೀಗೆ ಅನೇಕ ಸಿಹಿ ಇರಲೇಬೇಕು. ಸಿಹಿ ತಿಂದು ಬೇಸರವಾದರೆ ಚಕ್ಕುಲಿ, ಕೋಡುಬಳೆ, ಚೂಡಾ, ಅವಲಕ್ಕಿ, ಬಡಂಗ, ಖಾರದಾಣಿ, ಖಾರದ ಉಸುಳಿ, ಖಾರದ ಎಳ್ಳು, ಅರಳಿಟ್ಟು, ಅರಳಿನ ಜೋಳವು ಸಿದ್ಧವಾಗಿರುತ್ತದೆ.